Homeಕರ್ನಾಟಕಬಳ್ಳಾರಿ | ಪ್ರಭಾವ, ಗೂಂಡಾಗಿರಿ ಮೂಲಕ ಬಡ ಜನರ ಭೂ ಕಬಳಿಕೆ : ಬುಡಾ ಮಾಜಿ...

ಬಳ್ಳಾರಿ | ಪ್ರಭಾವ, ಗೂಂಡಾಗಿರಿ ಮೂಲಕ ಬಡ ಜನರ ಭೂ ಕಬಳಿಕೆ : ಬುಡಾ ಮಾಜಿ ಅಧ್ಯಕ್ಷನ ವಿರುದ್ಧ ಗಂಭೀರ ಆರೋಪ

- Advertisement -
- Advertisement -

ಬಳ್ಳಾರಿ ನಗರಕ್ಕೆ ಹೊಂದಿಕೊಂಡಿರುವ ಕೌಲ್‌ ಬಜಾರಿನ ದಾನಪ್ಪಬೀದಿ ಮತ್ತು ಬಂಡಿಹಟ್ಟಿ ಏರಿಯಾಗಳ ಬಡ ಜನರಿಗೆ ಇನಾಂ ರದ್ದತಿಯ ಬಳಿಕ ನೀಡಲಾಗಿದ್ದ ಭೂಮಿಯನ್ನು ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ) ದ ಮಾಜಿ ಅಧ್ಯಕ್ಷ ಎನ್‌. ಪ್ರತಾಪ್‌ ರೆಡ್ಡಿ ಪ್ರಭಾವ ಬಳಸಿ, ಬೆದರಿಕೆ ಹಾಕಿ ಕಿತ್ತುಕೊಂಡಿರುವ ಆರೋಪ ಕೇಳಿ ಬಂದಿದೆ.

ಶುಕ್ರವಾರ (ಡಿ.26) ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಪ್ರತಾಪ್ ರೆಡ್ಡಿ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದೆ.

1970ರ ದಶಕದಲ್ಲಿ ಇನಾಂ ರದ್ದತಿಯ ಬಳಿಕ ಸರ್ವೆ ನಂಬರ್ 715ಎ ಕೌಲ್‌ ಬಜಾರಿನ 1080 ಎಕರೆ ಇನಾಂ ಭೂಮಿಯಲ್ಲಿ 134 ಎಕರೆ ಭೂಮಿಯನ್ನು, 7 ಮಾದಿಗ, 4 ಕುರುಬ, 5 ಮಡಿವಾಳ ಹಾಗೂ 1 ಈಡಿಗ ಸೇರಿ 17 ಕುಟುಂಬಗಳಿಗೆ ಆಗಿನ ಭೂ ನ್ಯಾಯ ಮಂಡಳಿ ಹಂಚಿಕೆ ಮಾಡಿತ್ತು. ಈ ಎಲ್ಲಾ ಕುಟುಂಬಗಳಿಗೆ ಮಂಡಳಿ ಫಾರಂ ನಂಬರ್ 10 ನೀಡಿತ್ತು, ಅಲ್ಲದೆ ಫಲಾನುಭವಿಗಳ ಹೆಸರಿಗೆ ಹಕ್ಕು ಬದಲಾಯಿಸಿತ್ತು. ಅಂದಿನಿಂದ ಈ ಎಲ್ಲಾ ಕುಟುಂಬಗಳು ತಮಗೆ ದೊರೆತ ಭೂಮಿಯನ್ನು ನಂಬಿ ಬದುಕುತ್ತಿದ್ದವು ಎಂದು ಸಮಿತಿ ಹೇಳಿದೆ.

ಮುಂದುವರಿದು, 2006ರಿಂದ ಪ್ರತಾಪ್‌ ರೆಡ್ಡಿಯ ಕಣ್ಣು ಈ ಭೂಮಿಯ ಮೇಲೆ ಬಿದ್ದಿದೆ. ಆ ಬಳಿಕ ಅವರು ಗೂಂಡಾಗಿರಿ ಮಾಡುತ್ತಾ, ಬೆದರಿಕೆ ಹಾಕುತ್ತಾ ಬಂದಿದ್ದಾರೆ. ಇವರ ಕಿರುಕುಳಕ್ಕೆ ಬಡ ಜನರ ಬದುಕು ದಿವಾಳಿಯಾಗುತ್ತಾ ಸಾಗಿದೆ. ಭೂ ಒಡೆಯರಾಗಿದ್ದ ಮಾದಿಗ ಸಮುದಾಯದ ಕುಟುಂಬಗಳು ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಸ ಗುಡಿಸುವ ಪೌರಕಾರ್ಮಿರಾಗಿ ಜೀವನ ಸಾಗಿಸುವಂತಾಗಿದೆ. ಮಡಿವಾಳರು ಜೀವ ಭಯದಿಂದ ಊರು ಬಿಟ್ಟಿದ್ದರೆ, ಈ ಭೂಮಿಯ ಸಹವಾಸವೇ ಬೇಡವೆಂದು ಜೀವ ಉಳಿಸಿಕೊಂಡು ಬದುಕುವ ಪರಿಸ್ಥಿತಿ ಕೆಲವರದ್ದಾಗಿದೆ. ಇನ್ನೂ ಕೆಲವರು ಜೀವ ಹೋದರೂ ಪರವಾಗಿಲ್ಲ, ನ್ಯಾಯ ಪಡೆದೇ ತೀರುತ್ತೇವೆಂದು ಕರ್ನಾಟಕ ಜನಶಕ್ತಿ ಮತ್ತು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬೀದಿಗಿಳಿದು ಹಲವಾರು ಬಾರಿ ಹೋರಾಟ ನಡೆಸಿದ್ದಾರೆ ಎಂದು ಸಮಿತಿ ವಿವರಿಸಿದೆ.

ಇನಾಂ ರದ್ದತಿಗೂ ಮೊದಲು ಈ ಭೂಮಿ ದಿವಂಗತ ರಾಜರಾಜೇಶ್ವರಿಶಾಸ್ತ್ರಿ ಮತ್ತು ಅವರ ಮಗ ಬ್ರಹ್ಮಶಾಸ್ತ್ರಿ ಅವರಿಗೆ ಸೇರಿತ್ತು. ಇದೇ ಭೂಮಿಯಲ್ಲಿ ಈಗಿನವರ ಎರಡು-ಮೂರು ತಲೆಮಾರುಗಳು ದುಡಿಯುತ್ತಾ ಬಂದಿದೆ. ಭೂಮಿಯ ಮಾಲೀಕರಾಗಿದ್ದ ಬ್ರಹ್ಮಶಾಸ್ತ್ರಿಯೇ ಈ ಭೂಮಿಯಲ್ಲಿ ದುಡಿಯುತ್ತಿದ್ದವರ ಕೂಲಿ, ಕೆಲಸ ಗೇಣಿ ಮಾಡುತ್ತಿದ್ದವರ ವಿವರಗಳನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ಅದರ ಪ್ರಕಾರವೇ ನ್ಯಾಯ ಮಂಡಳಿ 134 ಎಕರೆ ಸೇರಿದಂತೆ ನೂರಾರು ಎಕರೆ ಭೂಮಿಯನ್ನು ಹಂಚಿದೆ. ಫಾರಂ ನಂಬರ್ 10, ಮ್ಯೂಟೇಷನ್, ಪಹಣಿ ಎಲ್ಲವೂ ವರ್ಗಾವಣೆಯಾಗಿ ಇಂದಿನವರೆಗೂ ಕಂದಾಯ ಕಟ್ಟುತ್ತಾ ಬರುತ್ತಿದ್ದಾರೆ. ಭೂಮಿಯ ಮೇಲೆ ಬ್ಯಾಂಕ್ ಸಾಲ, ಬೆಳೆ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಕುಟುಂಬಗಳು ಬೆಳದಂತೆ ಭೂಮಿಯು ವಿಭಾಗಗಳಾಗಿ ಹಂಚಿಹೋಗಿವೆ. ಜನರು ಭಾವಿ, ಬೋರ್‌ವೆಲ್ ಕೊರೆದು, ವಿದ್ಯುತ್ ಸಂಪರ್ಕ ಪಡೆದು ತರಕಾರಿ ಹಾಗೂ ಇನ್ನಿತರೆ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದಾರೆ. ಗಮನಾರ್ಹವಾಗಿ, ಈ ಭೂಮಿಯಲ್ಲಿ ಜೀವ ಸವೆಸಿದ್ದ ಅವರ ತಾತ-ಮುತ್ತಾಂದಿರ ಸಮಾಧಿಗಳು ಕೂಡ ಇದೇ ಎಂದು ಸಮಿತಿ ತಿಳಿಸಿದೆ.

ಮಡಿವಾಳರು ಈ ಜಮೀನಿನಲ್ಲಿ ಅವರ ಕುಲ ಕಸುಬು ಮಾಡಿಕೊಂಡು ಬಂದಿರುವುದಕ್ಕೆ ಅವರವರ ಹೊಲಗಳಲ್ಲಿ ಕಟ್ಟಿರುವ ನೀರಿನ ಕಟ್ಟೆಗಳು, ಚಿಕ್ಕ ಚಿಕ್ಕ ಬಾವಿಗಳು ಪುರಾವೆಯಾಗಿವೆ. ಈಗ 2006ರಿಂದ ಪ್ರತಾಪ್ ರೆಡ್ಡಿ ಆ ಭೂಮಿ ನನ್ನದು ಎಂದು ಹೇಳುತ್ತಿದ್ದಾರೆ ಎಂದಿದೆ.

ಪ್ರತಾಪ್‌ ರೆಡ್ಡಿ ಮತ್ತು ಅವರ ಹೆಂಡತಿ ಶೈಲಜಾ ರೆಡ್ಡಿ ಹೆಸರಿಗೆ ಸರ್ವೆ ನಂಬರ್ 715ಎನಲ್ಲಿ 134 ಎಕರೆ ಭೂಮಿಯನ್ನು 2005-06ರಲ್ಲಿ ಟಿಎಸ್‌ ನಂಬರ್ (ಟೌನ್‌ ಸರ್ವೆ) ನೋಂದಣಿ ಮಾಡಿಕೊಂಡಿದ್ದಾರೆ. ಇದಾದ ನಂತರ ಸರ್ವೆ ನಂಬರ್ 715ಎನಲ್ಲಿ ಉಳುಮೆ ಮಾಡುತ್ತಿದ್ದ ಕುಟುಂಬಗಳನ್ನು ಒಕ್ಕಲೇಳುವಂತೆ ಮಾಡಿದ್ದಾರೆ. ಈ ವ್ಯಾಜ್ಯ ಪೊಲೀಸ್, ಕಂದಾಯ ಇಲಾಖೆ ಮತ್ತು ನ್ಯಾಯಾಲಯದ ಮೆಟ್ಟಿಲೇರಿದೆ. ಕೆಲ ಪೊಲೀಸ್ ಅಧಿಕಾರಿಗಳು ಪ್ರತಾಪ್ ರೆಡ್ಡಿಪರ ವಕಾಲತ್ ವಹಿಸಿ ಕೋರ್ಟ್ ವ್ಯಾಜ್ಯ ಇತ್ಯರ್ಥಪಡಿಸುವವರೆಗೆ ಯಾರೂ ಜಮೀನಿಗೆ ಹೋಗದಂತೆ ಫರ್ಮಾನು ಹೊರಡಿಸಿದ್ದಾರೆ. ಇದರಿಂದ ಭೂಮಿ ಉಳುಮೆ ಮಾಡದೆ ಬೀಳು ಬೀಳುವಂತಾಗಿದೆ. ಪ್ರತಾಪ್ ರೆಡ್ಡಿ ವಿರುದ್ದ ಧ್ವನಿ ಎತ್ತಿದ್ದಕ್ಕಾಗಿ ಫಲಾನುಭವಿಗಳ ಮೇಲೆ ಸುಳ್ಳು ಕೇಸ್‌ ದಾಖಲಿಸಿ ಕೋರ್ಟ್-ಕಚೇರಿ ಅಲೆಯುವಂತೆ ಮಾಡಲಾಗಿದೆ ಎಂದು ಸಮಿತಿ ಹೇಳಿದೆ.

ಪ್ರತಾಪ್‌ ರೆಡ್ಡಿ ತನ್ನ ಹೆಸರಿಗೆ 61.23 ಎಕರೆ ಭೂಮಿಗೆ 13,50,000 ರೂಪಾಯಿಗಳನ್ನು ಕೊಟ್ಟಿದ್ದರೆ, ಅವರ ಹೆಂಡತಿ ಶೈಲಜಾರೆಡ್ಡಿ 73 ಎಕರೆ ಭೂಮಿಗೆ 13,50,000 ರೂಪಾಯಿಗಳನ್ನು ಕೊಟ್ಟು ದಿನಾಂಕ : 17-10-2005 ನೋಂದಣಿ ಮಾಡಿಸಿಕೊಂಡಿದ್ದಾರೆಂದು ದಾಖಲೆಗಳು ಹೇಳುತ್ತಿವೆ. ಅಂದರೆ ಎಕರೆಗೆ ಕೇವಲ 20 ಸಾವಿರ ರೂಪಾಯಿ ಕೊಟ್ಟಂತಾಗಿದೆ. 134 ಎಕರೆ ಗಂಡ ಹೆಂಡತಿ ಹೆಸರಲ್ಲಿ ಒಂದೇ ದಿನ ನೋಂದಣಿ ಆಗಿರುವ ಈ ಭೂಮಿ ಬಳ್ಳಾರಿ ನಗರದಲ್ಲಿ ಇಷ್ಟು ಕಡಿಮೆ ದರದಲ್ಲಿ, ಅದೂ ಅವರ ಪ್ರಕಾರವೇ ಟೌನ್ ವ್ಯಾಪ್ತಿಗೊಳಪಟ್ಟ ಭೂಮಿ ಸಿಗುತ್ತದೆಂದರೆ ನಂಬಲು ಸಾಧ್ಯವೇ? ಎಂದು ಸಮಿತಿ ಪ್ರಶ್ನಿಸಿದೆ.

ಈ ರೀತಿಯ ದೊಡ್ಡ ಮಟ್ಟದ ಭೂಮಿಯ ನೋಂದಣಿ ಮಾಡಿರುವುದು ಕೂಡ ಕಾನೂನಿಗೆ ವಿರುದ್ಧವಾಗಿದೆ.
ಭೂಮಿಯು ಮೂಲತಃ ದಿವಂಗತ ರಾಜರಾಜೇಶ್ವರಿಶಾಸ್ತ್ರಿಯವರಿಗೆ ಸೇರಿದ್ದು ಇವರಿಗೆ ಬ್ರಹ್ಮಶಾಸ್ತ್ರಿ ಮತ್ತು ತಿಪ್ಪಾಶಾಸ್ತ್ರಿ ಇಬ್ಬರು ಮಕ್ಕಳು, ಬೃಹ್ಮಶಾಸ್ತ್ರಿಗೆ ಮಕ್ಕಳಿಲ್ಲ. ತಿಪ್ಪಶಾಸ್ತ್ರಿಗೆ 3 ಜನ ಮಕ್ಕಳೆಂದರೆ ವೆಂಕಟರಮಣಶಾಸ್ತ್ರಿ, ಕೃಷ್ಣಶಾಸ್ತ್ರಿ, ಮತ್ತು ದಕ್ಷಿಣಾಮೂರ್ತಿ, ಉಳಿದ ಭೂಮಿಯೆಲ್ಲವೂ ದಿವಂಗತವಾಗಿರುವ ವೆಂಕಟರಮಣಶಾಸ್ತ್ರಿಯ ಹೆಸರಿನಲ್ಲಿದೆ. ಕೃಷ್ಣಶಾಸ್ತ್ರಿ ಹೆಂಡತಿ ಲಲಿತಮ್ಮ ಮತ್ತು ಇವರ ಮಕ್ಕಳಿಂದ ಪ್ರತಾಪ್‌ರೆಡ್ಡಿಯವರು 27 ಲಕ್ಷ ಹಣ ಕೊಟ್ಟು ಭೂಮಿಯನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಾಸ್ತವದಲ್ಲಿ ಪ್ರತಾಪ್‌ರೆಡ್ಡಿಗೆ ಮಾರಾಟ ಮಾಡಿರುವ ವ್ಯಕ್ತಿಗಳ ಹೆಸರಿನಲ್ಲಿ ಭೂಮಿಯ ಹಕ್ಕು ಬದಲಾಗಿರುವ ಯಾವುದೇ ದಾಖಲೆಗಳಿಲ್ಲ. ಇದಕ್ಕೆ ಸಂಬಂಧಿಸಿದ ಲಿಂಕ್ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಕೇಳಿದರೆ, ಲಿಂಕ್ ದಾಖಲೆ ಪತ್ರಗಳನ್ನು ಸುಟ್ಟು ಹಾಕಲಾಗಿದೆ ಎಂದು ಲಿಖಿತವಾದ ಉತ್ತರವನ್ನು ಅಧಿಕಾರಿಗಳು ನೀಡಿದ್ದಾರೆ. ದಾಖಲೆಗಳನ್ನು ಸುಟ್ಟು ಹಾಕಲಾಗಿದೆ ಎಂದರೆ ವಾಸ್ತವವನ್ನು ಮರೆಮಾಚಿದಂತೆ ಆಗುವುದಿಲ್ಲವೇ? ಎಂದು ಸಮಿತಿ ಕೇಳಿದೆ. ಇದರ ಹಿಂದೆ ಭ್ರಷ್ಟ ಅಧಿಕಾರಿಗಳ ಕೈವಾಡ ಇರುವ ಇದೆ ಎನ್ನುವುದರಲ್ಲಿ ಸಂಶಯವಿಲ್ಲವೆಂದು ಹೇಳಬಹುದಾಗಿದೆ ಎಂದಿದೆ.

ಸರ್ಕಾರವೇ ಕೊಟ್ಟ ಎಲ್ಲಾ ದಾಖಲೆ ಪತ್ರಗಳು ಇದ್ದರೂ, ಜಿಲ್ಲಾಡಳಿತ ಬಡವರ ಪರವಾಗಿ ನಿಂತು ಗೊಂದಲವನ್ನು ಬಗೆ ಹರಿಸಬಹುದಾದ ವಿಷಯವಾಗಿದ್ದರೂ, ಕೆಲ ಅಧಿಕಾರಿಗಳು ಮಾಡಿದ ತಪ್ಪು ಮತ್ತು ಬೇಜವಾಬ್ದಾರಿತನಗಳು ವಿಷಯ ಕಗ್ಗಂಟಾಗಲು ಕಾರಣವಾಗಿದೆ. ಇದಕ್ಕೆ ಎನ್.ಪ್ರತಾಪ್‌ರೆಡ್ಡಿಯವರ ಅಧಿಕಾರ-ಹಣ ಕೆಲಸ ಮಾಡಿದೆ ಎಂದು ಯಾವುದೇ ಸಂಶಯವಿಲ್ಲದೇ ಹೇಳಬಹುದು ಎಂದು ಸಮಿತಿ ತಿಳಿಸಿದೆ.

ಭೂ ಫಲಾನುಭವಿಗಳು ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದ ಸಂದರ್ಭದಲ್ಲಿ ಇವರ ಬೆನ್ನಿಗೆ ನಿಲ್ಲಬೇಕಾಗಿದ್ದ ಕಾನೂನು ಪಾಲಕರು, ಕಂದಾಯ ಇಲಾಖೆಯಯವರು ಸರಿಯಾಗಿ ಮಾರ್ಗದರ್ಶನ ಕೂಡ ಮಾಡಿರುವುದಿಲ್ಲ. ಈ ಜನರಿಗೆ ಸರ್ಕಾರವೇ ಕೊಟ್ಟಿರುವ ಭೂಮಿಯ ದಾಖಲೆಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವರ್ತಿಸುತ್ತಾ ಬಂದಿರುವುದರಿಂದ ಪ್ರತಾಪ್‌ರೆಡ್ಡಿ ತೋಡಿದ ಮೋಸದ ಖೆಡ್ಡಾಕ್ಕೆ ಜಿಲ್ಲಾಡಳಿತವನ್ನು ಮತ್ತು ಶೋಷಿತ ಬಡ ಜನರನ್ನು ಬೀಳಿಸಿಕೊಂಡು, ಕಾನೂನು-ನ್ಯಾಯ, ನನ್ನ ಹಣ-ರಾಜಕೀಯ ಬಲಕ್ಕಿಂತ ದೊಡ್ಡದೇ? ಎಂದು ಸೆಡ್ಡು ಹೊಡೆದಿದ್ದಾರೆ ಎಂದಿದೆ.

ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವೇ ಆಗಿದೆ. ತಾಲ್ಲೂಕು ಸರ್ವೆಯರ್ ಹನುಮಂತಪ್ಪ ಎಂಬ ಅಧಿಕಾರಿಯನ್ನು ಕೋರ್ಟ್ ಕಮಿಷನ್ ವಾರಂಟ್ ಪ್ರಕಾರ ನೇಮಿಸಲಾಗಿದ್ದು, ಈ ಅಧಿಕಾರಿ ಕಾನೂನು ಪ್ರಕಾರ ಸರ್ವೆ ಮಾಡದೆ ರೈತರ ವಿರುದ್ಧ ಇರುವ ವಕೀಲರ ಮಾತಿನಂತೆ ಕೆಲಸ ಮಾಡುತ್ತೇನೆಂದು ಹೇಳಿ ಬಲಾಡ್ಯರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಅಧಿಕಾರಿಯ ವಿರುದ್ಧ ಮತ್ತು ಕಾನೂನು ಉಲ್ಲಂಘನೆ ಮಾಡುತ್ತಿರುವ ಎನ್. ಪ್ರತಾಪ್‌ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಹೈಕೋರ್ಟ್‌ನಲ್ಲಿ
ಪ್ರಕರಣ ಬಾಕಿಯಿದ್ದರೂ, ಪ್ರತಾಪ್‌ರೆಡ್ಡಿ ಬಡವರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಸಮಿತಿ ಆರೋಪಿಸಿದೆ.

ಈ ವಿಚಾರವಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶ ಮಾಡಿ ಪ್ರತಾಪ್‌ರೆಡ್ಡಿ ನಡೆಸುತ್ತಿರುವ ಉಪಟಳ ಮತ್ತು ಬಡ ಜನರ ಭೂಮಿಯ ವಂಚನೆ ನಡೆಸುತ್ತಿರುವುದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಮುಖಂಡರುಗಳಾದ ಕುಮಾರ್ ಸಮತಳ, ಮರಿಯಪ್ಪ, ಕಾವೇರಿ ಹಾಗೂ ಭೂಮಿಯಿಂದ ವಂಚನೆಗೊಳಗಾಗುತ್ತಿರುವ ಕೆ.ಮೋಹನ್ , ಕೆ.ಎಸ್‌ ರಘು, ಈ.ಈರೇಶ್ ಇದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...