ಶಾಲಾ ಶೌಚಾಲಯ ತೊಳೆಯಲು ನಿರಾಕರಿಸಿದ ದಲಿತ ಬಾಲಕಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕಿ, ಆಕೆಯ ಹೆಸರನ್ನು ದಾಖಲಾತಿಯಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.
ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯ ಕರಸುವಾ ಗ್ರಾಮದ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 10 ವರ್ಷದ ದಲಿತ ಬಾಲಕಿಗೆ ಶಾಲಾ ಶೌಚಾಲಯ ತೊಳೆಯುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ದಾಖಲಾತಿಯಿಂದ ಆಕೆಯ ಹೆಸರನ್ನು ತೆಗೆದು ಹಾಕುವುದಾಗಿ ಬೆದರಿಸಿದ್ದಾರೆ. ಆದರೂ, ಅನಾರೋಗ್ಯ ಮತ್ತು ತಂದೆಯ ಆಕ್ಷೇಪಣೆಯನ್ನು ಉಲ್ಲೇಖಿಸಿ ಬಾಲಕಿ ಶೌಚಾಲಯ ತೊಳೆಯಲು ನಿರಾಕರಿಸಿದ್ದಾಳೆ. ಇದರಿಂದ ಕುಪಿತಗೊಂಡ ಶಿಕ್ಷಕಿ, ಆಕೆಗೆ ಥಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಶಿಕ್ಷಕಿಯ ದೌರ್ಜನ್ಯದ ಕುರಿತು ಬಾಲಕಿ ಹೇಳಿಕೊಂಡ ವಿಡಿಯೋವನ್ನು ಸ್ಥಳೀಯರೊಬ್ಬರು ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಶಿಕ್ಷಕಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಈ ಕುರಿತು ಪೊಲೀಸರಿಗೆ ಮಾಹಿತಿ ದೊರೆತಿದೆ ಎಂದು ವರದಿ ಉಲ್ಲೇಖಿಸಿದೆ.
“ಶಿಕ್ಷಕಿ ತನಗೆ ಶೌಚಾಲಯವನ್ನು ಸ್ವಚ್ಛಗೊಳಿಸಲು ಮತ್ತು ಬಕೆಟ್ಗಳಿಗೆ ನೀರು ತುಂಬಿಸಲು ಹೇಳಿದ್ದರು. ತಾನು ಅದಕ್ಕೆ ನಿರಾಕರಿಸಿದಾಗ ಆಕೆ ಕೋಪಗೊಂಡು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಶಿಕ್ಷಕರು ಶಾಲೆಯ ಇತರ ಮಕ್ಕಳಿಗೂ ನಿಯಮಿತವಾಗಿ ಪೀಠೋಪಕರಣಗಳನ್ನು ಸ್ವಚ್ಛಗೊಳಿಸಲು ಮತ್ತು ಇತರ ಕೆಲಸಗಳನ್ನು ಮಾಡಲು ಒತ್ತಾಯಿಸುತ್ತಾರೆ. ಕೆಲವೊಮ್ಮೆ ಶಿಕ್ಷಕರು ವಿದ್ಯಾರ್ಥಿಗಳಿಂದ ತಮ್ಮ ಕಾಲುಗಳನ್ನು ಒತ್ತಿಸಿಕೊಳ್ಳುತ್ತಾರೆ (ಮಸಾಜ್ ಮಾಡಿಸಿಕೊಳ್ಳುತ್ತಾರೆ)” ಎಂದು ವಿದ್ಯಾರ್ಥಿನಿ ಹೇಳಿರುವುದು ವಿಡಿಯೋ ಕ್ಲಿಪ್ನಲ್ಲಿ ಇದೆ ಎಂದು ವರದಿ ತಿಳಿಸಿದೆ.
ಮಗಳ ಮೇಲಿನ ದೌರ್ಜನ್ಯದ ಕುರಿತು, ದಿನಗೂಲಿ ನೌಕರರಾದ ಬಾಲಕಿಯ ತಂದೆ ಜೋಗಿಂದರ್ ಸಿಂಗ್ ಶಿಕ್ಷಕಿಯನ್ನು ಪ್ರಶ್ನಿಸಿದಾಗ, ಆಕೆ ತನ್ನ ಸಹೋದರನಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸಹೋದರ ಶಾಲೆಯ ಆವರಣದಲ್ಲೇ ಜೋಗಿಂದರ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
“ಶಿಕ್ಷಕಿ ನನ್ನ ಮಗಳಿಗೆ ಥಳಿಸಿದರು, ಆಕೆಯ ಸಹೋದರ ನನಗೆ ಥಳಿಸಿದ. ಆದ್ದರಿಂದ ನಾನು ಪೊಲೀಸರಿಗೆ ದೂರು ನೀಡಿದೆ. ನಂತರ ಗ್ರಾಮದ ಕೆಲ ಹಿರಿಯರು ದೂರು ಹಿಂಪಡೆಯಲು ಕೇಳಿಕೊಂಡಾಗ, ನಾನು ನನ್ನ ಮೇಲಿನ ಹಲ್ಲೆಯ ದೂರನ್ನು ಮಾತ್ರ ಹಿಂಪಡೆಯಲು ಒಪ್ಪಿಕೊಂಡೆ. ನನ್ನ ಮಗಳ ವಿಷಯದಲ್ಲಿ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ಶನಿವಾರ ನಮ್ಮ ಮನೆಗೆ ಸಬ್ ಇನ್ಸ್ಪೆಕ್ಟರ್ ಭೇಟಿ ನೀಡಿ ಹೊಸ ಪೊಲೀಸ್ ದೂರು ದಾಖಲಿಸುವಂತೆ ಕೇಳಿಕೊಂಡಿದ್ದಾರೆ”ಎಂದು ಬಾಲಕಿಯ ತಂದೆ ಜೋಗಿಂದರ್ ಸಿಂಗ್ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ವಿವರಿಸಿದೆ.
“ನಾವು ವಿಡಿಯೋವನ್ನು ಗಮನಿಸಿದ್ದೇವೆ ಮತ್ತು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕುಟುಂಬದೊಂದಿಗೆ ಪೊಲೀಸರು ಸಂಪರ್ಕದಲ್ಲಿದ್ದಾರೆ ಎಂದು ಡಿಎಸ್ಪಿ (ಗಭಾನ) ಧನಂಜಯ್ ಸಿಂಗ್ ಹೇಳಿದ್ದಾರೆ. ಈ ವಿಷಯದಲ್ಲಿ ನಾವು ಅಗತ್ಯವಾದ ಕಾನೂನು ಕ್ರಮಗಳನ್ನು ಅನ್ವೇಷಿಸುತ್ತಿದ್ದೇವೆ. ನಾವು ಶಿಕ್ಷಣ ಇಲಾಖೆಯೊಂದಿಗೆ ಸಹ ಪತ್ರವ್ಯವಹಾರ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಲಿಖಿತ ದೂರು ಸ್ವೀಕರಿಸಿದ ನಂತರ ಸಂಬಂಧಿತ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಸ್ಎಚ್ಒ (ಲೋಧಾ) ಹೇಮಂತ್ ಮಾವಿ ಮಾಹಿತಿ ನೀಡಿದ್ದಾರೆ.


