ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಮಾರು 10 ವರ್ಷಗಳ ಹಿಂದೆ ಇಬ್ಬರು ಸಹೋದರರನ್ನು ಹತ್ಯೆಗೈದ ಪ್ರಕರಣದಲ್ಲಿ ಒಂದೇ ಕುಟುಂಬದ 13 ಮಂದಿಗೆ ಉತ್ತರ ಪ್ರದೇಶದ ಸಹರಾನ್ಪುರದ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿಕಾಸ್ ಗುಪ್ತಾ ಅವರು ಸೋಮವಾರ (ಫೆ.23) ತೀರ್ಪು ಪ್ರಕಟಿಸಿದ್ದು, ಅಪರಾಧಿಗಳಿಗೆ ಒಟ್ಟು 10.73 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ (ಎಡಿಜಿಸಿ) ದೀಪಕ್ ಸೈನಿ ಅವರ ಮಾಹಿತಿಯನ್ನು ಉಲ್ಲೇಖಿಸಿ ಪಿಟಿಐ ಹೇಳಿದೆ.
ಸುಬ್ಹಾ ಎಂಬವರ ಮಕ್ಕಳಾದ ಮುನವ್ವರ್, ಮುಸ್ತಫಾ, ಸನಾವರ್ ಮತ್ತು ಸ್ತಕೀಂ, ಮುಸ್ತಫಾ ಅವರ ಮಕ್ಕಳಾದ ಶೌಕೀನ್ ಮತ್ತು ಮೊಹ್ಸಿನ್ ಹಾಗೂ ಅನ್ವರ್, ಇಸ್ಲಾಂ, ಗುಲ್ಝಾರ್, ಜಮ್ಶೀದ್, ಪರ್ವೇಝ್, ಅನ್ವರ್ ಹಾಗೂ ಶಕೀಬ್ ಶಿಕ್ಷೆಗೆ ಒಳಗಾದವರು ಎಂದು ವಕೀಲ ಸೈನಿ ವಿವರಿಸಿದ್ದಾರೆ.
ಸಹರಾನ್ಪುರದ ನಿವಾಸಿಗಳಾಗಿದ್ದ ಯಾಸಿನ್ ಮತ್ತು ತಾಸಿನ್ ಹತ್ಯೆಗೀಡಾದ ಸಹೋದರರು. ಇವರು ಮತ್ತು ಪ್ರಮುಖ ಅಪರಾಧಿ ಮುನವ್ವರ್ ಕುಟುಂಬದ ನಡುವೆ 20 ಬಿಫಾ ಜಮೀನಿನ ವಿಚಾರವಾಗಿ ಗಲಾಟೆ ನಡೆದಿತ್ತು. 2016ರ ನವೆಂಬರ್ 12ರಂದು ಯಾಸಿನ್ ಮತ್ತು ತಾಸಿನ್ ಅವರನ್ನು ಮುನವ್ವರ್ ಕುಟುಂಬ ಹತ್ಯೆಗೈದಿತ್ತು ಎಂದು ಆರೋಪಿಸಲಾಗಿದೆ.
ಕೊಲೆಯಾದ ಯಾಸಿನ್ ಅವರ ಮಗ ಇಸ್ರಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿ, ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು.


