ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ದೆಹಲಿ ಪೊಲೀಸರು ಮಂಗಳವಾರ (ಫೆ. 24) ಮುಂಜಾನೆ ಸುಮಾರು 4:30ಕ್ಕೆ ಬಂಧಿಸಿದ್ದಾರೆ.
ಕಳೆದ ವಾರ ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್’ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಅರೆನಗ್ನ ಪ್ರತಿಭಟನೆಗೆ ಸಂಬಂಧಿಸಿದಂತೆ ಚಿಬ್ ಅವರ ಬಂಧನವಾಗಿದೆ.
ಬಂಧನದ ನಂತರ ಅವರನ್ನು ಪೊಲೀಸರು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ವಿಚಾರಣೆಗಾಗಿ 7 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಪ್ರತಿಭಟನೆಯ ಹಿಂದೆ ಚಿಬ್ ಅವರೇ ‘ಮಾಸ್ಟರ್ ಮೈಂಡ್’ ಆಗಿದ್ದು, ಪಿತೂರಿ ಹೂಡಲು ಮತ್ತು ಅಗತ್ಯ ವಸ್ತುಗಳನ್ನು (ಟಿ-ಶರ್ಟ್ ಇತ್ಯಾದಿ) ಒದಗಿಸಲು ನೆರವಾಗಿದ್ದಾರೆ ಎಂದು ಪೊಲೀಸರು ವಾದಿಸಿದ್ದಾರೆ.
ತಾವು ತನಿಖೆಗೆ ಈಗಾಗಲೇ ಸಹಕರಿಸುತ್ತಿರುವುದಾಗಿ ಮತ್ತು ಕಸ್ಟಡಿಯ ಅಗತ್ಯವಿಲ್ಲ ಎಂದು ಚಿಬ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನ್ಯಾಯಾಲಯವು ಚಿಬ್ ಅವರ ಕಸ್ಟಡಿಗೆ ಸಂಬಂಧಿಸಿದ ಆದೇಶವನ್ನು ಪ್ರಸ್ತುತ ಕಾಯ್ದಿರಿಸಿದೆ ಎಂದು ವರದಿಯಾಗಿದೆ.
ಚಿಬ್ ಮೇಲೆ ಕ್ರಿಮಿನಲ್ ಪಿತೂರಿ (ಸೆಕ್ಷನ್ 61(2)) ಮತ್ತು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳನ್ನು ಹೊರಿಸಲಾಗಿದೆ.


