ಕೇರಳದ ಕೊಚ್ಚಿ ಬಂದರಿನಲ್ಲಿ ಲಂಗರು ಹಾಕಿರುವ ಇರಾನಿನ ಯುದ್ಧ ನೌಕೆಯ ವಿಡಿಯೋ ಸೆರೆಹಿಡಿಯಲು ಯತ್ನಿಸಿದ ಇಬ್ಬರು ರಿಪಬ್ಲಿಕ್ ಟಿವಿ ಪತ್ರಕರ್ತರು ಸೇರಿದಂತೆ ಮೂವರನ್ನು ಶನಿವಾರ (ಮಾ.7) ಬಂಧಿಸಲಾಗಿದೆ ಎಂದು thenewsminute.com ವರದಿ ಮಾಡಿದೆ.
ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ ಇರಾನ್ನ ಐರಿಸ್ ದೇನಾ ಯುದ್ಧ ನೌಕೆ ಮೇಲೆ ಅಮೆರಿಕದ ಜಲಾಂತರ್ಗಾಮಿ ದಾಳಿ ನಡೆಸಿದ ಹಿನ್ನೆಲೆ, ಮತ್ತೊಂದು ನೌಕೆ ಐರಿಸ್ ಲಾವನ್ ಕೊಚ್ಚಿ ಬಂದರಿನಲ್ಲಿ ಲಂಗರು ಹಾಕಿದೆ. ಈ ಪ್ರದೇಶ ಅತಿ ಭದ್ರತಾ ವಲಯವಾಗಿದ್ದು, ಹಾಗಾಗಿ ಅನಧಿಕೃತವಾಗಿ ಇಲ್ಲಿಗೆ ಪ್ರವೇಶಿಸಿದ ಇಬ್ಬರು ಪತ್ರಕರ್ತರು ಮತ್ತು ಅವರನ್ನು ಅಲ್ಲಿಗೆ ಕರೆದೊಯ್ದ ಬೋಟ್ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು onmanorama.com ವರದಿ ಉಲ್ಲೇಖಿಸಿದೆ.
ರಿಪಬ್ಲಿಕ್ ಟಿವಿಯ ವರದಿಗಾರ ಸಿಜಿ ಶಂಕರ್, ಕ್ಯಾಮಾರಾ ಮ್ಯಾನ್ ಎಸ್. ಮಣಿ ಮತ್ತು ಬೋಟ್ ನಡೆಸುವ ಪಿ. ವಿಜಯ್ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು thenewsminute.com ವರದಿ ಹೇಳಿದೆ.
ಬಂಧಿತರು ಕೊಚ್ಚಿ ಮೆರೈನ್ ಡ್ರೈವ್ನಿಂದ ಬೋಟ್ ಮೂಲಕ ಬಂದರು ಪ್ರದೇಶಕ್ಕೆ ತೆರಳಿ ಇರಾನ್ ನೌಕೆಯ ವಿಡಿಯೋ ಸೆರೆಹಿಡಿಯಲು ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಬಂದರಿನ ಭದ್ರತೆ ನೋಡಿಕೊಳ್ಳುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ಅನಧಿಕೃತವಾಗಿ ಬೋಟ್ ಪ್ರವೇಶಿಸಿರುವುದನ್ನು ಗಮನಿಸಿ ತಡೆದಿದ್ದಾರೆ. ಬಳಿಕ ಮೂವರನ್ನು ವಿಚಾರಣೆ ನಡೆಸಿ ಹಾರ್ಬರ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಬಂದರು ವಲಯದಲ್ಲಿ ಭದ್ರತಾ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರು ಮೂವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಔಪಚಾರಿಕ ಕಾರ್ಯವಿಧಾನಗಳು ಪೂರ್ಣಗೊಂಡ ನಂತರ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಣಾ ಹಡಗುಗಳು ಮತ್ತು ಕಾರ್ಯತಂತ್ರದ ಸಂಸ್ಥೆಗಳ ದೃಶ್ಯಗಳನ್ನು ಸೆರೆ ಹಿಡಿಯಲು ಅಥವಾ ಪ್ರಕಟಿಸಲು ಭದ್ರತಾ ಸಂಸ್ಥೆಗಳಿಂದ ಪೂರ್ವಾನುಮತಿ ಪಡೆಯಬೇಕು ಎಂದು ಅಧಿಕಾರಿಗಳು ಮಾಧ್ಯಮ ಸಂಸ್ಥೆಗಳಿಗೆ ಸೂಚಿಸಿದ್ದಾರೆ.
ಗೌಪ್ಯತಾ ಕಾಯ್ದೆಯ ಸೆಕ್ಷನ್ 3(1)(ಎ) ಮತ್ತು 5ರ ಅಡಿಯಲ್ಲಿ ಮತ್ತು ಬಿಎನ್ಎಸ್ ಕಾಯ್ದೆಯಡಿ ಕ್ರಿಮಿನಲ್ ಅತಿಕ್ರಮಣ ಸೆಕ್ಷನ್ ಅಡಿ ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣ ಎಫ್ಐಆರ್ ಪ್ರತಿಯನ್ನು ಪೊಲೀಸರು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದರು. ಬಳಿಕ, ಅದನ್ನು ತೆಗೆದು ಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕೊಚ್ಚಿ ನಗರ ಡಿಸಿಪಿ ಅಶ್ವತಿ ಜಿಜಿ, ಆಕಸ್ಮಿಕವಾಗಿ ಎಫ್ಐಆರ್ ಪ್ರತಿಯನ್ನು ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗಿತ್ತು. ಪ್ರಕರಣ ಸೂಕ್ಷ್ಮ ಸ್ವರೂಪದಿಂದ ಕೂಡಿರುವ ಹಿನ್ನೆಲೆ, ಅದನ್ನು ತೆಗೆದುಹಾಕಲಾಗಿದೆ ಎಂದು ಹೇಳಿರುವುದಾಗಿ ಆನ್ ಮನೋರಮಾ ವರದಿ ಉಲ್ಲೇಖಿಸಿದೆ.


