ಟರ್ಕಿ ದೇಶದಲ್ಲಿ ಕಾಂಗ್ರೆಸ್ ಪಕ್ಷವು ಅಂತಾರಾಷ್ಟ್ರೀಯ ಕಚೇರಿ ಹೊಂದಿದೆ ಎಂಬ ವರದಿಗೆ ಸಂಬಂಧಿಸಿದಂತೆ, ಅರ್ನಾಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಟಿವಿ ವಿರುದ್ಧ ಕಾಂಗ್ರೆಸ್ ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ಹೈಕೋರ್ಟ್ ಮಂಗಳವಾರ (ಮಾ.17) ಸಮನ್ಸ್ ಜಾರಿ ಮಾಡಿದೆ ಎಂದು livelaw.in ವರದಿ ಮಾಡಿದೆ.
ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು ಈ ವಿಷಯದಲ್ಲಿ ಯಾವುದೇ ಮಧ್ಯಂತರ ಪರಿಹಾರವನ್ನು ನೀಡಿಲ್ಲ. ತಾತ್ಕಾಲಿಕ ತಡೆಯಾಜ್ಞೆ ಅರ್ಜಿಯ ಮೇಲೆ ಕೇವಲ ನೋಟಿಸ್ ಮಾತ್ರ ಜಾರಿ ಮಾಡಿದ್ದಾರೆ ಎಂದು ವರದಿ ಹೇಳಿದೆ.
“ಆ ವರದಿಗೆ ತಡೆ ನೀಡುತ್ತೀರಾ ಎಂದು ನಾನು ಕೇಳುತ್ತಿದ್ದೇನೆ. ಯಾಕೆಂದರೆ, ಆ ಸುಳ್ಳು ಸುದ್ದಿಯಿಂದ ನಮಗೆ ನಿರಂತರವಾಗಿ ಕೆಟ್ಟ ಹೆಸರು ಬರುತ್ತಿದೆ. ಅದು ಸುಳ್ಳು ಸುದ್ದಿ ಎಂದು ಗೊತ್ತಿದ್ದರೂ ಸಹ, ಜನರು ಇನ್ನೂ ಅದರ ಬಗ್ಗೆಯೇ ಮಾತನಾಡುತ್ತಿದ್ದಾರೆ. ಇದರಿಂದ ನಮಗೆ ಹಾನಿಯಾಗುತ್ತಿದೆ” ಎಂದು ಕಾಂಗ್ರೆಸ್ ಪರ ವಕೀಲರಾದ ಮೊಹಮ್ಮದ್ ಅಲಿ ಖಾನ್ ಅವರು ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಆದರೆ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಲು ನಿರ್ಧರಿಸಿ, “ಇದನ್ನು ಅಧಿಕೃತವಾಗಿ ಸಿವಿಲ್ ಮೊಕದ್ದಮೆಯಾಗಿ ದಾಖಲಿಸಿಕೊಳ್ಳಿ. ಎಲ್ಲಾ ಮಾರ್ಗಗಳ ಮೂಲಕ ಪ್ರತಿವಾದಿಗಳಿಗೆ (ಅರ್ನಾಬ್ ಮತ್ತು ರಿಪಬ್ಲಿಕ್ ಟಿವಿ) ಸಮನ್ಸ್ ನೀಡಿ. ಅವರು 30 ದಿನಗಳ ಒಳಗೆ ಲಿಖಿತ ಉತ್ತರ ನೀಡಬೇಕು. ಹಾಗೆಯೇ, ವರದಿಗೆ ತಡೆ ನೀಡಬೇಕೆಂಬ (ಮಧ್ಯಂತರ ತಡೆಯಾಜ್ಞೆ) ಅರ್ಜಿಯ ಬಗ್ಗೆಯೂ ನೋಟಿಸ್ ನೀಡಿ. ಅದಕ್ಕೆ ಅವರು 4 ವಾರಗಳ ಒಳಗೆ ಪ್ರತಿಕ್ರಿಯಿಸಲಿ” ಎಂದಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 19ಕ್ಕೆ ನಿಗದಿಪಡಿಸಲಾಗಿದೆ
ವಿವಾದಿತ ವರದಿಯು ಕಳೆದ ವರ್ಷದ ಮೇ ತಿಂಗಳಿನಲ್ಲಿ ಪ್ರಸಾರವಾಗಿತ್ತು. ಅರ್ನಾಬ್ ಗೋಸ್ವಾಮಿ ಅವರು ತಮ್ಮ ಕಾರ್ಯಕ್ರಮದಲ್ಲಿ, ಟರ್ಕಿಯ ಇಸ್ತಾಂಬುಲ್ನಲ್ಲಿರುವ ‘ಇಸ್ತಾಂಬುಲ್ ಕಾಂಗ್ರೆಸ್ ಸೆಂಟರ್’ ಎಂಬ ಕಟ್ಟಡದ ದೃಶ್ಯಗಳನ್ನು ತೋರಿಸುತ್ತಾ, “ವೀಕ್ಷಕರೇ ನಿಮಗೆ ಗೊತ್ತೇ? ಕಾಂಗ್ರೆಸ್ ಪಕ್ಷವು ಟರ್ಕಿಯಲ್ಲಿ ತನ್ನ ಅಂತಾರಾಷ್ಟ್ರೀಯ ಕಚೇರಿಯನ್ನು ಹೊಂದಿದೆ” ಎಂದು ಹೇಳಿದ್ದರು.
ನಂತರ, ರಿಪಬ್ಲಿಕ್ ಟಿವಿ ಟರ್ಕಿಯಲ್ಲಿ ಕಾಂಗ್ರೆಸ್ ಕಚೇರಿ ಎಂದು ಒಂದು ಕಟ್ಟಡವನ್ನು ತಪ್ಪಾಗಿ ತೋರಿಸಿದ್ದಕ್ಕಾಗಿ ರಿಪಬ್ಲಿಕ್ ಟಿವಿ ಕ್ಷಮೆಯಾಚಿಸಿತ್ತು.
ಡಿಜಿಟಲ್ ಡೆಸ್ಕ್ನ ವಿಡಿಯೋ ಎಡಿಟರ್ ಒಬ್ಬರು ತಾಂತ್ರಿಕ ದೋಷದಿಂದ ತಪ್ಪಾದ ಚಿತ್ರವನ್ನು ಬಳಸಿದ್ದಾರೆ ಎಂದು ವಾಹಿನಿ ಸಮರ್ಥಿಸಿಕೊಂಡಿತ್ತು.
ಭಾರತೀಯ ಯುವ ಕಾಂಗ್ರೆಸ್ನ ಕಾನೂನು ಕೋಶದ ಮುಖ್ಯಸ್ಥ ಶ್ರೀಕಾಂತ್ ಸ್ವರೂಪ್ ಬಿ ಎನ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ದಾಖಲಾಗಿದ್ದ ಎಫ್ಐಆರ್ನಲ್ಲಿ ಹೆಚ್ಚಿನ ತನಿಖೆಗೆ ಕರ್ನಾಟಕ ಹೈಕೋರ್ಟ್ ಮೇ 22, 2025 ರಂದು ಮಧ್ಯಂತರ ಆದೇಶ ಹೊರಡಿಸಿತ್ತು.
ದೂರಿನಲ್ಲಿ, ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಮತ್ತು ಅರ್ನಾಬ್ ಗೋಸ್ವಾಮಿ ಅವರು ಸೇರಿಕೊಂಡು ಒಂದು ‘ಅಪರಾಧ ಮನೋಭಾವದ ಸಂಚು’ ರೂಪಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಟರ್ಕಿಯ ‘ಇಸ್ತಾಂಬುಲ್ ಕಾಂಗ್ರೆಸ್ ಸೆಂಟರ್’ ಅನ್ನು ಕಾಂಗ್ರೆಸ್ ಪಕ್ಷದ ಅಂತಾರಾಷ್ಟ್ರೀಯ ಕಚೇರಿ ಎಂದು ಬಿಂಬಿಸುವ ಮೂಲಕ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಹೇಳಲಾಗಿತ್ತು.
Courtesy :livelaw.in


