ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ.
ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು (ಎನ್ಜಿಟಿ) ಸಂಪರ್ಕಿಸಲು ಸ್ವಾತಂತ್ರ್ಯವನ್ನು ನೀಡಿದ ಸುಪ್ರೀಂ ಕೋರ್ಟ್, ಅರ್ಜಿ ತಿರಸ್ಕಾರ ಮಾಡಿದೆ.
ವಿಚಾರಣೆಯ ಸಂದರ್ಭದಲ್ಲಿ, ಕೇರಳದ ಜನಸಂಖ್ಯೆ ಮತ್ತು ಭೂಸ್ವಾಧೀನದ ತೊಂದರೆಯಿಂದಾಗಿ ಅಲ್ಲಿನ ರಸ್ತೆಗಳಲ್ಲಿ ಉಂಟಾಗುತ್ತಿರುವ ವಿಪರೀತ ಸಂಚಾರ ದಟ್ಟಣೆಯನ್ನು ಗಮನಿಸಿದ ನ್ಯಾಯಾಲಯವು, ಈ ಯೋಜನೆಯು “ರಾಷ್ಟ್ರೀಯ ಮಹತ್ವ”ವನ್ನು ಹೊಂದಿದೆ ಮತ್ತು ಕೇರಳದ ಜನರಿಗೆ ಹೊಸ “ಜೀವನಾಡಿ”ಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ನಕ್ಷೆಯ ತಜ್ಞರು ಈ ವಿಷಯವನ್ನು ಪರಿಶೀಲಿಸಿದ್ದಾರೆ ಮತ್ತು ಪರಿಸರ ಕಾಳಜಿಗಳನ್ನು ನಿವಾರಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಪೀಠವು ಹೇಳಿದೆ.
ಕೋಝಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳ ನಡುವೆ ನೇರ ಸಂಪರ್ಕ ಕಲ್ಪಿಸುವ ಅನಾಕ್ಕಂಪೊಯಿಲ್ – ಕಲ್ಲಾಡಿ – ಮೇಪ್ಪಾಡಿ ನಡುವಿನ ಅವಳಿ ಕೊಳವೆ ಏಕಮುಖ ಸುರಂಗ ರಸ್ತೆ (2+2 ಪಥ) ಮತ್ತು ನಾಲ್ಕು ಪಥಗಳ ಸಂಪರ್ಕ ರಸ್ತೆಯ ನಿರ್ಮಾಣಕ್ಕಾಗಿ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಕೇರಳ ಸರ್ಕಾರದ ಲೋಕೋಪಯೋಗಿ ಇಲಾಖೆಗೆ ನೀಡಿದ್ದ ಪರಿಸರ ಅನುಮತಿಯನ್ನು ಪ್ರಶ್ನಿಸಿ ‘ವಯನಾಡ್ ಪ್ರಕೃತಿ ಸಂರಕ್ಷಣಾ ಸಮಿತಿ’ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ವಜಾಗೊಳಿಸಿದೆ.
ಈ ಯೋಜನೆಯು ಪಶ್ಚಿಮ ಘಟ್ಟಗಳ ಮೂಲಕ ಕೋಝಿಕ್ಕೋಡ್ ಮತ್ತು ವಯನಾಡ್ ಅನ್ನು ಸಂಪರ್ಕಿಸುವ 8.735 ಕಿ.ಮೀ ಉದ್ದದ ಅವಳಿ-ಕೊಳವೆ ಸುರಂಗ ರಸ್ತೆಯ ನಿರ್ಮಾಣವನ್ನು ಒಳಗೊಂಡಿದೆ.
2025ರ ಡಿಸೆಂಬರ್ನಲ್ಲಿ ಕೇರಳ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ವಯನಾಡ್ ಪ್ರಕೃತಿ ಸಂರಕ್ಷಣಾ ಸಮಿತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಕೂಡ ಸಮಿತಿಯ ಅರ್ಜಿಯನ್ನು ತಿರಸ್ಕರಿಸಿತ್ತು.


