Homeಮುಖಪುಟ"ನೀವು ಆರ್‌ಎಸ್‌ಎಸ್ ಸಂಬಂಧಿತ ಕಾರ್ಯಕ್ರಮಗಳಲ್ಲಿ 4 ಬಾರಿ ಭಾಗವಹಿಸಿದ್ದೀರಿ" : ನ್ಯಾಯಮೂರ್ತಿ ಶರ್ಮಾ ಪೀಠದ ಮುಂದೆ...

“ನೀವು ಆರ್‌ಎಸ್‌ಎಸ್ ಸಂಬಂಧಿತ ಕಾರ್ಯಕ್ರಮಗಳಲ್ಲಿ 4 ಬಾರಿ ಭಾಗವಹಿಸಿದ್ದೀರಿ” : ನ್ಯಾಯಮೂರ್ತಿ ಶರ್ಮಾ ಪೀಠದ ಮುಂದೆ ಕೇಜ್ರಿವಾಲ್ ಗಂಭೀರ ವಾದ

- Advertisement -
- Advertisement -

ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ (ಏ.13) ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಆರ್‌ಎಸ್‌ಎಸ್ ಸಂಯೋಜಿತ ವಕೀಲರ ಸಂಘಟನೆಯಾದ ‘ಅಧಿವಕ್ತ ಪರಿಷತ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಲ್ಕು ಬಾರಿ ಭಾಗವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಅವರು ತಾವು ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ವಿರುದ್ಧವಾಗಿದ್ದೇನೆ ಎಂದು ತಿಳಿಸಿದ್ದು, ದೆಹಲಿ ಮದ್ಯ ನೀತಿ ಪ್ರಕರಣವನ್ನು ‘ರಾಜಕೀಯ ಪ್ರೇರಿತ’ ಎಂದು ಕರೆದಿದ್ದಾರೆ.

ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಸಿಬಿಐ ಅರ್ಜಿ ವಿಚಾರಣೆಯಿಂದ ನ್ಯಾಯಮೂರ್ತಿ ಶರ್ಮಾ ಅವರು ಹಿಂದೆ ಸರಿಯಬೇಕು ಎಂದು ಕೇಜ್ರಿವಾಲ್ ಕೋರಿದ್ದಾರೆ. ಅವರ ಮುಂದೆ ನಡೆಯುವ ವಿಚಾರಣೆಯು ನಿಷ್ಪಕ್ಷಪಾತವಾಗಿ ಮತ್ತು ತಟಸ್ಥವಾಗಿರುವುದಿಲ್ಲ ಎಂಬ ಗಂಭೀರವಾದ ಹಾಗೂ ಸಮಂಜಸವಾದ ಆತಂಕ ತನಗಿದೆ ಎಂದು ಹೇಳಿದ್ದಾರೆ.

“ನನ್ನ ಬಳಿ ಅಧಿವಕ್ತ ಪರಿಷತ್ ಎಂಬ ವಕೀಲರ ಸಂಘಟನೆಯ ಮಾಹಿತಿ ಇದೆ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ಪಾಲಿಸುವ ಸಂಸ್ಥೆಯಾಗಿದೆ. ಘನ ನ್ಯಾಯಾಲಯವು (ನ್ಯಾಯಮೂರ್ತಿ ಶರ್ಮಾ) ಅದರ ಕಾರ್ಯಕ್ರಮಗಳಲ್ಲಿ ನಾಲ್ಕು ಬಾರಿ ಭಾಗವಹಿಸಿದೆ. ಅವರು ಅನುಸರಿಸುವ ಸಿದ್ಧಾಂತವನ್ನು ನಾವು ಬಲವಾಗಿ ಮತ್ತು ಬಹಿರಂಗವಾಗಿ ವಿರೋಧಿಸುತ್ತೇವೆ. ಈ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ” ಎಂದು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿ ಕೇಜ್ರಿವಾಲ್ ವಾದ ಮಂಡಿಸಿದ್ದಾರೆ.

ರಾಜಕೀಯ ಪಕ್ಷಪಾತದ ಆರೋಪ ಮಾಡಿದ ಕೇಜ್ರಿವಾಲ್, ನ್ಯಾಯಾಂಗದ ಗ್ರಹಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಿರ್ದಿಷ್ಟ ಸಿದ್ಧಾಂತಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ತನ್ನ ಪ್ರಕರಣದ ನಿಷ್ಪಕ್ಷಪಾತದ ಮೇಲೆ ಪರಿಣಾಮ ಬೀರಬಹುದೇ ಎಂದು ಅವರು ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಅವಲೋಕನಗಳನ್ನು ಉಲ್ಲೇಖಿಸಿದ ಅವರು, “ಕಾರ್ಯನಿರತ ಪ್ರಜಾಪ್ರಭುತ್ವದಲ್ಲಿ ಗ್ರಹಿಕೆ ಮುಖ್ಯವಾಗುತ್ತದೆ” ಎಂಬ ಹೇಳಿಕೆಯನ್ನು ಸ್ಮರಿಸಿದ್ದಾರೆ. ಅಲ್ಲದೆ, ಈ ಹಿಂದೆ ಸಿಬಿಐ ಅನ್ನು ‘ಪಂಜರದ ಗಿಣಿ’ ಎಂದು ಬಣ್ಣಿಸಿದ್ದನ್ನು ನೆನಪಿಸಿದ ಅವರು, ತನಿಖಾ ಸಂಸ್ಥೆಗಳು ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಬೇಕು ಮತ್ತು ಪಕ್ಷಪಾತದ ಗ್ರಹಿಕೆಗಳನ್ನು ಹೋಗಲಾಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಮುಂದುವರಿದು, ಸಿಬಿಐ ‘ರಾಜಕೀಯ ಪಕ್ಷಪಾತಕ್ಕೆ ಒಳಪಟ್ಟಿದೆ’ ಎಂದು ನ್ಯಾಯಾಲಯವೇ ಈ ಹಿಂದೆ ಅಭಿಪ್ರಾಯಪಟ್ಟಿದೆ ಎಂದು ತಿಳಿಸಿದ್ದಾರೆ.

ನನಗೆ ನ್ಯಾಯ ಸಿಗಬಹುದೇ?

ಕೇಜ್ರಿವಾಲ್ ಅವರು ವಾದಿಸುತ್ತಾ, ಒಬ್ಬ ನ್ಯಾಯಾಧೀಶರು ನಿರ್ದಿಷ್ಟ ಸಿದ್ಧಾಂತಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೆ, ವಿರೋಧ ಸಿದ್ಧಾಂತದ ಆರೋಪಿಗೆ ನ್ಯಾಯ ಸಿಗದಿರುವ ಬಗ್ಗೆ ಸಮಂಜಸವಾದ ಭಯವಿರಬಹುದು ಎಂದು ತಿಳಿಸಿದ್ದಾರೆ. “ನಾನು ವಿರುದ್ಧ ಸಿದ್ಧಾಂತದವನಾಗಿದ್ದರೆ, ನನಗೆ ನ್ಯಾಯ ಸಿಗುತ್ತದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಪ್ರಕರಣಗಳ ವಿಚಾರಣೆಯಲ್ಲಿ ಸೆಲೆಕ್ಟಿವ್ ತುರ್ತುಸ್ಥಿತಿಯನ್ನು ತೋರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಕೇಂದ್ರದ ರಾಜಕೀಯ ವಿರೋಧಿಗಳನ್ನು ಒಳಗೊಂಡ ಪ್ರಕರಣಗಳನ್ನು ಮಾತ್ರ ವೇಗವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ ಮತ್ತು ವಿಚಾರಣೆಗಳಲ್ಲಿ ಅನಗತ್ಯ ಆತುರ ತೋರಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ದೆಹಲಿ ಮದ್ಯ ನೀತಿ ಪ್ರಕರಣದ ಕುರಿತು ವಾದಿಸಿದ ಕೇಜ್ರಿವಾಲ್, ಹೈಕೋರ್ಟ್ ಹೆಚ್ಚಾಗಿ ಇಡಿ ಮತ್ತು ಸಿಬಿಐ ವಾದಗಳನ್ನು ಅನುಮೋದಿಸಿದೆ ಎಂದು ಪ್ರತಿಪಾದಿಸಿದ್ದಾರೆ. “ಒಂದು ಪ್ರಕರಣವನ್ನು ಹೊರತುಪಡಿಸಿ, ಇಡಿ ಮತ್ತು ಸಿಬಿಐನ ಪ್ರತಿಯೊಂದು ಕೋರಿಕೆಯೂ ತೀರ್ಪಾಗಿ ಮಾರ್ಪಟ್ಟಿದೆ” ಎಂದು ಅವರು ಹೇಳಿದ್ದಾರೆ.

“ನಾನು ಇಂದು ಇಲ್ಲಿ ಆರೋಪಿಯಾಗಿ ನಿಂತಿಲ್ಲ. ನಾನು ಈಗಾಗಲೇ ಬಿಡುಗಡೆ ಹೊಂದಿದ್ದೇನೆ” ಎಂದು ಕೇಜ್ರಿವಾಲ್ ಒತ್ತಿ ಹೇಳಿದ್ದಾರೆ.

ಮಾರ್ಚ್ 9ರ ಆದೇಶ ಸೇರಿದಂತೆ ನ್ಯಾಯಾಲಯದ ಹಿಂದಿನ ಕಲಾಪಗಳನ್ನು ಉಲ್ಲೇಖಿಸಿದ ಅವರು, ಕೇವಲ ಸಿಬಿಐ ಉಪಸ್ಥಿತಿಯಲ್ಲಿ ನಡೆದ ಸಂಕ್ಷಿಪ್ತ ವಿಚಾರಣೆಯ ನಂತರ ಆ ಆದೇಶವನ್ನು ಹೊರಡಿಸಲಾಗಿದೆ ಎಂದು ಆರೋಪಿಸಿದ್ದಾರೆ. “ಯಾರನ್ನೂ ವಿಚಾರಿಸದೆ, ಯಾರ ಉತ್ತರವನ್ನೂ ಪಡೆಯದೆ ಏಕಪಕ್ಷೀಯವಾಗಿ ಆದೇಶ ನೀಡಲಾಗಿದೆ. ಈ ನ್ಯಾಯಾಲಯವು ಮೇಲ್ನೋಟಕ್ಕೆ ಆ ಆದೇಶವು ದೋಷಪೂರಿತವಾಗಿದೆ ಎಂದು ತಿಳಿಸಿದೆ” ಎಂದಿದ್ದಾರೆ. ವಿಚಾರಣಾ ನ್ಯಾಯಾಲಯವು ಸಾವಿರಾರು ಪುಟಗಳನ್ನು ಪರಿಶೀಲಿಸಿತ್ತು, ಆದರೆ ಅಲ್ಪಾವಧಿಯ ವಿಚಾರಣೆಯ ನಂತರ ಅದರ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 27ರಂದು, ವಿಚಾರಣಾ ನ್ಯಾಯಾಲಯವು ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್, ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಮತ್ತು ಇತರ 21 ಜನರಿಗೆ ಕ್ಲೀನ್ ಚಿಟ್ ನೀಡಿದೆ. ಈ ಸಂದರ್ಭದಲ್ಲಿ ಸಿಬಿಐ ಅನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯವು, ಈ ಪ್ರಕರಣವು ನ್ಯಾಯಾಂಗ ಪರಿಶೀಲನೆಯಲ್ಲಿ ಉಳಿಯಲು ಸಂಪೂರ್ಣವಾಗಿ ಅಸಮರ್ಥವಾಗಿದೆ ಮತ್ತು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಹೇಳಿದೆ.

ಆರೋಪಿಗಳ ಖುಲಾಸೆ ವಿರುದ್ದ ಸಿಬಿಐ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಸಿಬಿಐ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶರ್ಮಾ ಅವರು ಮಾರ್ಚ್ 9ರಂದು ಎಲ್ಲಾ 23 ಜನರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ದೋಷಾರೋಪಣೆ ಪಟ್ಟಿ ಸಿದ್ಧಪಡಿಸುವ ಹಂತದಲ್ಲಿ ವಿಚಾರಣಾ ನ್ಯಾಯಾಲಯವು ನೀಡಿದ ಕೆಲವು ಅವಲೋಕನಗಳು ಮತ್ತು ಸಂಶೋಧನೆಗಳು ಮೇಲ್ನೋಟಕ್ಕೆ ದೋಷಪೂರಿತವಾಗಿ ಕಂಡುಬರುತ್ತಿವೆ ಮತ್ತು ಅವುಗಳ ಮರುಪರಿಶೀಲನೆಯ ಅಗತ್ಯವಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಕೋರ್ಟ್ ಆದೇಶ ನೋಡಿ ನನ್ನ ಮನಸ್ಸಿಗೆ ನೋವಾಯಿತು-ಕೇಜ್ರಿವಾಲ್

ವಿಚಾರಣೆಯ ಸಮಯದಲ್ಲಿ ಕೇಜ್ರಿವಾಲ್ ಅವರು ಮಾರ್ಚ್ 9ರ ಆದೇಶವು ಪಕ್ಷಪಾತದ ಬಗ್ಗೆ ಗಂಭೀರ ಆತಂಕಗಳನ್ನು ಉಂಟುಮಾಡಿದೆ ಎಂದು ಹೇಳಿದ್ದಾರೆ. “ಕೋರ್ಟ್ ಆದೇಶ ನೋಡಿ ನನ್ನ ಮನಸ್ಸಿಗೆ ನೋವಾಯಿತು, ಪಕ್ಷಪಾತದ ಬಗ್ಗೆ ನನಗೆ ಗಂಭೀರವಾದ ಆತಂಕವಿತ್ತು. ಆದ್ದರಿಂದ, ನಾನು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದೆ” ಎಂದು ಅವರು ತಿಳಿಸಿದ್ದಾರೆ. ತಮ್ಮ ಮನವಿಯನ್ನು ತಿರಸ್ಕರಿಸಿದ ನಂತರ ಅವರು ನ್ಯಾಯಾಲಯವನ್ನು ಸಂಪರ್ಕಿಸಿರುವುದಾಗಿ ಹೇಳಿದ್ದಾರೆ.

ಕಾನೂನು ತತ್ವಗಳನ್ನು ಉಲ್ಲೇಖಿಸಿದ ಅವರು, ಪಕ್ಷಪಾತದ ಕೇವಲ ಒಂದು ಆತಂಕವಿದ್ದರೂ ಸಹ ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿಯಲು ಅದು ಸಾಕಾಗುತ್ತದೆ ಎಂದು ಹೇಳಿದ್ದಾರೆ. “ಒಂದು ಪಕ್ಷದ ಮನಸ್ಸಿನಲ್ಲಿ ಪಕ್ಷಪಾತದ ಆತಂಕವಿದ್ದರೆ, ಆಗ ವಿಚಾರಣೆಯಿಂದ ಹಿಂದೆ ಸರಿಯಲು (recusal) ಅವಕಾಶವಿರುತ್ತದೆ. ನನ್ನ ಮನಸ್ಸಿನಲ್ಲಿರುವ ಆತಂಕವು ನನಗೂ ಮತ್ತು ನ್ಯಾಯಾಲಯಕ್ಕೂ ನಡುವಿನ ವಿಷಯವಾಗಿದೆ. ಇದರಲ್ಲಿ ಸಿಬಿಐ ಅನ್ನು ಒಂದು ಪಕ್ಷವನ್ನಾಗಿ ಮಾಡಬಾರದು” ಎಂದಿದ್ದಾರೆ.

ಹಿಂದಿನ ಸಂಬಂಧಿತ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಜಾಮೀನು ಅರ್ಜಿಗಳು ಸೇರಿದಂತೆ ಸಹ-ಆರೋಪಿಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ವಿಚಾರಣೆ ಈಗಾಗಲೇ ನಡೆದಿದೆ ಎಂದು ತಿಳಿಸಿದ್ದಾರೆ. “ಆ ವಿಷಯಗಳಲ್ಲಿ ಈ ನ್ಯಾಯಾಲಯವು ಮಾಡಿದ ಅವಲೋಕನಗಳು ತೀರ್ಪುಗಳಿಗೆ ಸಮಾನವಾಗಿವೆ” ಎಂದು ಹೇಳಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಕೇವಲ ಕೆಲವೇ ವಿಚಾರಣೆಗಳಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. “ಅನೇಕ ಅಂಶಗಳ ಬಗ್ಗೆ ಈ ನ್ಯಾಯಾಲಯವು ಕೇವಲ ಎರಡು ವಿಚಾರಣೆಗಳಲ್ಲಿ ಅಂತಿಮ ತೀರ್ಪು ನೀಡಿದಂತೆ ತೋರುತ್ತಿದೆ” ಎಂದಿದ್ದಾರೆ.

ಸಿಸೋಡಿಯಾ ಅವರ ಪ್ರಕರಣದ ಕುರಿತು ವಾದಿಸಿದ ಅವರು, ಭ್ರಷ್ಟಾಚಾರದ ಕುರಿತಾದ ತೀರ್ಮಾನಗಳು ಅಕಾಲಿಕವಾಗಿವೆ ಎಂದು ಹೇಳಿದ್ದಾರೆ. “ನಾವು ಕೇವಲ ಭ್ರಷ್ಟರು ಎಂದು ಘೋಷಿಸಲ್ಪಟ್ಟಿಲ್ಲ, ಬದಲಾಗಿ ಅತ್ಯಂತ ಭ್ರಷ್ಟರು ಎಂದು ಘೋಷಿಸಲ್ಪಟ್ಟಂತೆ ಭಾಸವಾಯಿತು” ಎಂದಿದ್ದಾರೆ. ಸುಪ್ರೀಂ ಕೋರ್ಟ್ ನಂತರ ಕೆಲವು ಅವಲೋಕನಗಳನ್ನು ಪಕ್ಕಕ್ಕಿಟ್ಟಿದೆ ಎಂದು ಅವರು ಸೇರಿಸಿದ್ದಾರೆ. ಇದು ಹಿಂದಿನ ಅವಲೋಕನಗಳಲ್ಲಿನ ಅಸಂಗತತೆಯನ್ನು ತೋರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಸಿಬಿಐ ಪ್ರಕರಣವು ಮುಖ್ಯವಾಗಿ ಅಪ್ರೂವರ್‌ಗಳ (ತಪ್ಪೊಪ್ಪಿಗೆದಾರರ) ಹೇಳಿಕೆಗಳ ಮೇಲೆ ನಿಂತಿದೆ ಎಂದು ಕೇಜ್ರಿವಾಲ್ ವಾದಿಸಿದ್ದಾರೆ. ಅಂತಹ ಹೇಳಿಕೆಗಳನ್ನು ಪ್ರಶ್ನಿಸುವುದು ವಿಚಾರಣಾ ನ್ಯಾಯಾಲಯದ ಆದೇಶವನ್ನು ದುರ್ಬಲಗೊಳಿಸಿದಂತೆ ಎಂದು ಅವರು ಪ್ರತಿಪಾದಿಸಿದ್ದಾರೆ.

ತಮ್ಮ ವಾದಗಳನ್ನು ಪೂರ್ಣಗೊಳಿಸಿದ ನಂತರ ಕೇಜ್ರಿವಾಲ್ ಅವರು ಅಲ್ಲಿಂದ ತೆರಳಲು ನ್ಯಾಯಾಲಯದ ಅನುಮತಿ ಕೋರಿದ್ದಾರೆ. ಅವರ ವಾದಗಳನ್ನು ಮೆಚ್ಚಿದ ನ್ಯಾಯಾಧೀಶರು, “ನೀವು ತುಂಬಾ ಚೆನ್ನಾಗಿ ವಾದ ಮಂಡಿಸಿದ್ದೀರಿ. ನೀವು ವಕೀಲರೂ ಆಗಬಹುದು” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ನಗುಮೊಗದಿಂದ ಪ್ರತಿಕ್ರಿಯಿಸಿದ ಕೇಜ್ರಿವಾಲ್, “ಧನ್ಯವಾದಗಳು ಮೇಡಂ. ನಾನು ಈಗ ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ಸಂತೋಷವಿದೆ” ಎಂದಿದ್ದಾರೆ.

ಏಪ್ರಿಲ್ 6 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಸಿಬಿಐ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕೇಜ್ರಿವಾಲ್ ಅವರ ಈ ಅರ್ಜಿಯನ್ನು ಬಲವಾಗಿ ವಿರೋಧಿಸಿದ್ದರು ಮತ್ತು ಇದು ಆಧಾರರಹಿತವಾಗಿದೆ ಎಂದಿದ್ದರು. ಅಲ್ಲದೆ, ಸಿಬಿಐ ಈ ಅರ್ಜಿಯ ವಿರುದ್ಧ ಅಧಿಕೃತ ಪ್ರತಿಕ್ರಿಯೆಯನ್ನು ಸಲ್ಲಿಸಿದೆ.




ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...