ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇನ್ನು ಹತ್ತು ದಿನಗಳು ಕಳೆಯುವಷ್ಟರಲ್ಲೇ, ಸರ್ಕಾರದ ಆಡಳಿತವನ್ನು ಪ್ರಶ್ನಿಸುವವರ ಹಾಗೂ ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಆರಂಭವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರ ಮೊದಲ ಭಾಗವಾಗಿ ಕೋಲ್ಕತ್ತಾ ಪೊಲೀಸರು ಪ್ರಮುಖ ಸಾಮಾಜಿಕ ಕಾರ್ಯಕರ್ತ ಫರಿದುಲ್ ಇಸ್ಲಾಂ ಅವರನ್ನು ಸುಳ್ಳು ಪ್ರಕರಣದಡಿಯಲ್ಲಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಹಿನ್ನೆಲೆ:
ಕಳೆದ ಭಾನುವಾರ ತಿಲ್ಜಲಾದಲ್ಲಿ ನಡೆದ ಬುಲ್ಡೋಜರ್ ಕಾರ್ಯಾಚರಣೆಯನ್ನು ವಿರೋಧಿಸಿ ಜನನಿಬಿಡ ಪಾರ್ಕ್ ಸರ್ಕಸ್ ಸೆವೆನ್-ಪಾಯಿಂಟ್ ಕ್ರಾಸಿಂಗ್ನಲ್ಲಿ ಸಾರ್ವಜನಿಕರು ಭಾರಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹಿಂಸಾಚಾರ ನಡೆದಿತ್ತು. ಉದ್ರಿಕ್ತ ಜನಸಮೂಹವು ಕೋಲ್ಕತ್ತಾ ಪೊಲೀಸ್ (KP) ಮತ್ತು ಸಿಎಪಿಎಫ್ (CAPF) ಭದ್ರತಾ ಪಡೆಗೆ ಸೇರಿದ ವಾಹನಗಳನ್ನು ಧ್ವಂಸಗೊಳಿಸಿತ್ತು.
ಇದೀಗ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಪೋಸ್ಟ್ಗಳನ್ನು ಹಾಕಿ ಈ ಹಿಂಸಾತ್ಮಕ ಪ್ರತಿಭಟನೆಯನ್ನು ಆಯೋಜಿಸಿದ ಆರೋಪವನ್ನು ಫರಿದುಲ್ ಇಸ್ಲಾಂ ಅವರ ಮೇಲೆ ಹೊರಿಸಲಾಗಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬೆನಿಯಾಪುಕೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಗಳವಾರ ಸಂಜೆವರೆಗೆ ಒಟ್ಟು 46 ಜನರನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೆ, ಹಿಂಸಾಚಾರದಿಂದ ಉಂಟಾದ ಸಾರ್ವಜನಿಕ ನಷ್ಟವನ್ನು ಭರಿಸಲು ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.
“ನಾನು ಪ್ರತಿಭಟನೆಗೆ ಕರೆ ನೀಡಿಲ್ಲ, ನನ್ನ ಹೆಸರನ್ನೂ ವೋಟರ್ ಲಿಸ್ಟ್ನಿಂದ ಅಳಿಸಲಾಗಿದೆ”:
ತಮ್ಮ ಬಂಧನದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಫರಿದುಲ್ ಇಸ್ಲಾಂ, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ನಾನು ಈ ಪ್ರತಿಭಟನೆಗೆ ಕರೆ ನೀಡಿರಲಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಭಟನೆಯ ಪೋಸ್ಟರ್ ನೋಡಿ ನಾನು ಅಲ್ಲಿಗೆ ಹೋಗಿದ್ದೆ. ನಾನು ಆ ಜಾಗದ ಹತ್ತಿರದಲ್ಲೇ ಇದ್ದಿದ್ದರಿಂದ ಪ್ರತಿಭಟನೆಯಲ್ಲಿ ಭಾಗಿಯಾದೆ ಅಷ್ಟೇ. ಅಲ್ಲಿ ನನಗೆ ಪರಿಚಯವಿರುವ ಯಾರೂ ಇರಲಿಲ್ಲ. ಆದರೆ, ಅದು ಸರ್ಕಾರದ ಏಕಪಕ್ಷೀಯ ಬುಲ್ಡೋಜರ್ ಕ್ರಮ ಮತ್ತು ಮತದಾರರ ಪಟ್ಟಿಯಿಂದ ಬಡವರ ಹೆಸರುಗಳನ್ನು ಅಳಿಸುವುದರ ವಿರುದ್ಧ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ನಡೆಸುತ್ತಿದ್ದ ಪ್ರತಿಭಟನೆಯಾಗಿತ್ತು. ಅನ್ಯಾಯವೆಂದರೆ, ಸ್ವತಃ ನನ್ನ ಹೆಸರನ್ನು ಸಹ ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋರಾಟಗಾರರ ತೀವ್ರ ಖಂಡನೆ:
ಫರಿದುಲ್ ಇಸ್ಲಾಂ ಅವರ ಬಂಧನವನ್ನು ಪಶ್ಚಿಮ ಬಂಗಾಳದ ಮಾನವ ಹಕ್ಕುಗಳ ಹೋರಾಟಗಾರರು ಮತ್ತು ನಾಗರಿಕ ಸಮಾಜ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ದ್ವೈಪಾಯನ್ ಬ್ಯಾನರ್ಜಿ, “ಹಲವು ವರ್ಷಗಳಿಂದ ಮಾನವ ಹಕ್ಕುಗಳ ಚಳವಳಿಯೊಂದಿಗೆ ಗುರುತಿಸಿಕೊಂಡಿರುವ ಫರಿದುಲ್ ಇಸ್ಲಾಂ ಅವರು ಎಂದಿಗೂ ಇಂತಹ ಗೂಂಡಾಗಿರಿ ಅಥವಾ ಹಿಂಸಾಚಾರದಲ್ಲಿ ಭಾಗಿಯಾಗುವವರಲ್ಲ. ಸರ್ಕಾರದ ಜನವಿರೋಧಿ ಕ್ರಮದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿಯೇ ಅವರನ್ನು ಟಾರ್ಗೆಟ್ ಮಾಡಿ ಬಂಧಿಸಲಾಗಿದೆ. ಈ ದಮನಕಾರೀ ಬಂಧನವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಅವರ ಬಿಡುಗಡೆಗೆ ಆಗ್ರಹಿಸುತ್ತೇವೆ,” ಎಂದಿದ್ದಾರೆ.


