ಈದ್ ಅಲ್-ಅಧಾ ಹಬ್ಬದ ಮುನ್ನ ಉತ್ತರ ಬಂಗಾಳದಾದ್ಯಂತ ಜಾನುವಾರು ಮಾರುಕಟ್ಟೆಗಳು ಹೆಚ್ಚಾಗಿ ನಿರ್ಜನವಾಗಿದ್ದವು. ವ್ಯಾಪಾರಿಗಳು ಮತ್ತು ರೈತರು ಜಾನುವಾರು ಮಾರಾಟದ ಮೇಲಿನ ನಿರ್ಬಂಧಗಳಿಂದಾಗಿ ವ್ಯಾಪಾರದಲ್ಲಿ ಪ್ರಮುಖ ಕುಸಿತ ಕಂಡುಬಂದಿದೆ ಎಂದು ಅವಲತ್ತುಕೊಂಡಿದ್ದಾರೆ. ಮಾಲ್ಡಾ ಮತ್ತು ಸಿಲಿಗುರಿಯಿಂದ ಕೂಚ್ ಬೆಹಾರ್, ದಿನಜ್ಪುರದವರೆಗೆ ಹಲವಾರು ಜಾನುವಾರು ಮಾರುಕಟ್ಟೆಗಳಲ್ಲಿ ಕಡಿಮೆ ಚಟುವಟಿಕೆ ಇತ್ತು. ಇದರಿಂದ ರೈತರು ತಮ್ಮ ಜೀವನೋಪಾಯದ ಬಗ್ಗೆ ಚಿಂತಿತರಾಗಿದ್ದಾರೆ.
ಬುಧವಾರ ಮಾರುಕಟ್ಟೆಗಳಿಗೆ ಆಗಮಿಸಿದ ಅನೇಕ ಜಾನುವಾರು ರೈತರು ಯಾವುದೇ ಜಾನುವಾರು ಮಾರಾಟ ಮಾಡದೆ ಮನೆಗೆ ಮರಳಿದ್ದಾರೆ ಎಂದು ವರದಿಯಾಗಿದೆ. ಪ್ರತಿ ವರ್ಷ ಈದ್ ಅಲ್-ಅಧಾ ಮೊದಲು ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುತ್ತಿತ್ತು, ಆದರೆ ಈ ಬಾರಿ ವಹಿವಾಟುಗಳು ಬಹುತೇಕ ನಿಂತುಹೋಗಿವೆ ಎಂದು ವ್ಯಾಪಾರಿಗಳು ಹೇಳಿಕೊಂಡಿದ್ದಾರೆ.
ಮಾಲ್ಡಾದ ಮಾಣಿಕ್ಚಕ್ ಪ್ರದೇಶದ ಮಥುರಾಪುರದ ಯುವ ಜಾನುವಾರು ಮಾಲೀಕ ಬಾಪಿ ಮೊಂಡಲ್ ಮಾತನಾಡಿ, ತನ್ನ ಜಾನುವಾರುಗಳಿಗೆ ಆಹಾರ ಮತ್ತು ನಿರ್ವಹಣೆಗಾಗಿ ದಿನವಿಡೀ ಹಣವನ್ನು ಖರ್ಚು ಮಾಡಿದ್ದೇನೆ. ಆದರೆ, ಖರೀದಿದಾರರನ್ನು ಹುಡುಕಲು ವಿಫಲನಾಗಿದ್ದೇನೆ ಎಂದು ಹೇಳಿದರು.
“ನಾನು ನನ್ನ ಜಾನುವಾರುಗಳಿಗೆ ಪ್ರತಿದಿನ ಸುಮಾರು 200 ರೂ. ಖರ್ಚು ಮಾಡುತ್ತೇನೆ, ಆದರೆ ಯಾವುದೇ ಆದಾಯವಿಲ್ಲ. ಜಾನುವಾರು ವ್ಯಾಪಾರ ಸಂಪೂರ್ಣವಾಗಿ ನಿಂತುಹೋದರೆ, ಪ್ರಾಣಿಗಳಿಗೆ ಮಾತ್ರವಲ್ಲದೆ ನಮಗೂ ಆಹಾರ ಪಡೆದುಕೊಳ್ಳಲು ನಾವು ಕಷ್ಟಪಡುತ್ತೇವೆ” ಎಂದು ಅವರು ಹೇಳಿದರು.
ದನಗಳ ಕೊರತೆಯಿಂದಾಗಿ ಮೇಕೆ ಮಾಂಸದ ಬೆಲೆ ಏರಿಕೆ
ದನಗಳು ಲಭ್ಯವಿಲ್ಲದ ಕಾರಣ, ಅನೇಕ ಜಿಲ್ಲೆಗಳಲ್ಲಿ ಮೇಕೆಗಳಿಗೆ ಬೇಡಿಕೆ ತೀವ್ರವಾಗಿ ಹೆಚ್ಚಾಗಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಈದ್ ಅಲ್-ಅಧಾ ಮುನ್ನ ಮೇಕೆ ಮಾಂಸದ ಬೆಲೆ ಪ್ರತಿ ಕಿಲೋಗ್ರಾಂಗೆ ಸುಮಾರು 800–900 ರೂ.ಗಳಿಂದ ಸುಮಾರು 1,500 ರೂ.ಗಳಿಗೆ ಏರಿದೆ.
ದಕ್ಷಿಣ ದಿನಾಜ್ಪುರದ ಕುಮಾರ್ಗಂಜ್ ಬ್ಲಾಕ್ನಲ್ಲಿರುವ ದೋರಾಹಾ ಗ್ರಾಮದ ರೈತ ತೈಫೂರ್ ಮೊಂಡಲ್, ಅನೇಕ ಕುಟುಂಬಗಳು ಈದ್ ಬಲಿದಾನಕ್ಕಾಗಿ ತಮ್ಮ ಯೋಜನೆಗಳನ್ನು ಬದಲಾಯಿಸುತ್ತಿವೆ ಎಂದು ಹೇಳಿದರು.
“ನಮಗೆ ಈದ್ಗಾಗಿ ದನಗಳು ಸಿಗುತ್ತಿಲ್ಲ. ಬದಲಾಗಿ ನಾವು ಮೇಕೆಗಳೊಂದಿಗೆ ಬಕ್ರೀದ್ ಆಚರಿಸುತ್ತೇವೆ” ಎಂದು ಅವರು ಹೇಳಿದರು.
ಮಳೆಗಾಲ ಸಮೀಪಿಸುತ್ತಿದ್ದಂತೆ ಕೃಷಿ ಕೆಲಸದ ಬಗ್ಗೆಯೂ ರೈತರು ಕಳವಳ ವ್ಯಕ್ತಪಡಿಸಿದರು. ಅನೇಕ ಗ್ರಾಮೀಣ ಪ್ರದೇಶಗಳಲ್ಲಿ, ಉಳುಮೆ ಮಾಡಲು ಮತ್ತು ಕೃಷಿ ಭೂಮಿಯನ್ನು ಸಮತಟ್ಟು ಮಾಡಲು ಎತ್ತುಗಳು ಇನ್ನೂ ಬೇಕಾಗುತ್ತವೆ. ಆದರೆ, ದನಗಳ ಕೊರತೆಯಿಂದಾಗಿ ರೈತರು ಕೆಲಸ ಮಾಡುವ ಪ್ರಾಣಿಗಳನ್ನು ಖರೀದಿಸುವುದು ಕಷ್ಟಕರವಾಗಿದೆ ಎಂದರು.
ಕೂಚ್ ಬೆಹಾರ್ನ ರೈತ ಗಣೇಶ್ ಬರ್ಮನ್ ಮಾತನಾಡಿ, “ಹೆಚ್ಚಿನ ಕೃಷಿಯನ್ನು ಈಗ ಯಂತ್ರಗಳಿಂದ ಮಾಡಲಾಗುತ್ತದೆ, ಆದರೆ ಕೆಲವು ಹೊಲಗಳಲ್ಲಿ ಎತ್ತುಗಳು ಇನ್ನೂ ಅಗತ್ಯವಿದೆ. ಮಾರುಕಟ್ಟೆಯಲ್ಲಿನ ಕೊರತೆಯಿಂದಾಗಿ ಅನೇಕ ರೈತರು ಅವುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ” ಎಂದು ಬೇಸರ ಹೊರಹಾಕಿದರು.
ಜಾನುವಾರು ವ್ಯಾಪಾರದ ಮೇಲೆ ಪರಿಣಾಮ ಬೀರಿದ ಸರ್ಕಾರಿ ಮಾರ್ಗಸೂಚಿ
ಸ್ಥಳೀಯ ವ್ಯಾಪಾರಿಗಳು ಮತ್ತು ರೈತರು ಪಶು ವ್ಯಾಪಾರದಲ್ಲಿನ ಕುಸಿತವನ್ನು ಪಶ್ಚಿಮ ಬಂಗಾಳ ಸರ್ಕಾರವು ಬಲಿಗಾಗಿ ಪ್ರಾಣಿಗಳ ಮಾರಾಟದ ಕುರಿತು ಇತ್ತೀಚೆಗೆ ಹೊರಡಿಸಿದ ಮಾರ್ಗಸೂಚಿಗಳ ಕಡೆಗೆ ಬೊಟ್ಟು ಮಾಡಿದ್ದಾರೆ.
ಪತಿರಾಮ್, ಹರಿರಾಂಪುರ್, ದಂಗರ್ಹ್ಯಾಟ್, ದುರ್ಗಾಪುರ್ ಹಾತ್, ಕಮಲಾಬರಿ ಹಾತ್, ಬಂಗಲ್ಬರಿ ಹಾತ್, ರಾಮಗಂಜ್ ಹಾತ್, ಪಂಜಿಪರಾ ಹಾತ್ ಮತ್ತು ಮಲ್ಲಿಕ್ಪುರ್ ಹಾತ್ ಸೇರಿದಂತೆ ಉತ್ತರ ಬಂಗಾಳದಾದ್ಯಂತದ ಹಲವಾರು ಜಾನುವಾರು ಮಾರುಕಟ್ಟೆಗಳು ಕಳೆದ ಕೆಲವು ದಿನಗಳಿಂದ ಜಾನುವಾರು ಖರೀದಿ ಮತ್ತು ಮಾರಾಟದಲ್ಲಿ ಪ್ರಮುಖ ಕುಸಿತವನ್ನು ಕಂಡಿವೆ ಎಂದು ವರದಿಯಾಗಿದೆ.
ಇಟಾಹಾರ್ನ ರೈತ ಇಸ್ರೇಲ್ ಅಲಿ, ನಿರ್ಬಂಧಗಳು ಜಾನುವಾರು ಮಾಲೀಕರಿಗೆ ವ್ಯಾಪಕ ಸಮಸ್ಯೆಗಳನ್ನು ಸೃಷ್ಟಿಸಿವೆ ಎಂದು ಹೇಳಿದರು.
“ಜಾನುವಾರು ವ್ಯಾಪಾರದ ಮೇಲಿನ ನಿರ್ಬಂಧಗಳಿಂದಾಗಿ, ಎಲ್ಲೆಡೆ ಸಮಸ್ಯೆಗಳು ಹೆಚ್ಚುತ್ತಿವೆ. ಹಾಲು ನೀಡುವುದನ್ನು ನಿಲ್ಲಿಸಿದ ಹಸುಗಳನ್ನು ಸಹ ಮಾರಾಟ ಮಾಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ಜಾನುವಾರು ವ್ಯಾಪಾರದಲ್ಲಿನ ನಿಧಾನಗತಿಯು ವಾರದ ಮಾರುಕಟ್ಟೆಗಳನ್ನು ಅವಲಂಬಿಸಿರುವ ಸಣ್ಣ ವ್ಯವಹಾರಗಳ ಮೇಲೂ ಪರಿಣಾಮ ಬೀರಿದೆ.
ಹಳೆ ಮಾಲ್ಡಾದ ಬೊಲಾಟುಲಿಯಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಸಾಪ್ತಾಹಿಕ ಜಾನುವಾರು ಮಾರುಕಟ್ಟೆಯಲ್ಲಿ, ಆಹಾರ ಮಳಿಗೆಯ ಮಾಲೀಕ ಸಾಧನ್ ಸರ್ಕಾರ್ ಅವರು ಸಂತೆಗೆ ಕಡಿಮೆ ಜನರು ಭೇಟಿ ನೀಡಿದ್ದರಿಂದ ಆದಾಯದಲ್ಲಿ ಕುಸಿತ ಕಂಡಿದೆ ಎಂದು ಹೇಳಿದರು.
“ಮಾರುಕಟ್ಟೆಯು ಮುಖ್ಯವಾಗಿ ಜಾನುವಾರು ವ್ಯಾಪಾರವನ್ನು ಅವಲಂಬಿಸಿದೆ. ಜಾನುವಾರುಗಳನ್ನು ಮಾರಾಟ ಮಾಡದಿದ್ದರೆ, ಜನರು ಬರುವುದಿಲ್ಲ. ಅದು ನನ್ನ ಆಹಾರ ವ್ಯವಹಾರದ ಮೇಲೂ ಪರಿಣಾಮ ಬೀರಿದೆ” ಎಂದು ಅವರು ಹೇಳಿದರು.
ಉತ್ತರ ಬಂಗಾಳದಾದ್ಯಂತದ ರೈತರು ಮತ್ತು ವ್ಯಾಪಾರಿಗಳು ಈದ್ ಅಲ್-ಅಧಾ ಆಚರಣೆ. ಗ್ರಾಮೀಣ ಜೀವನೋಪಾಯ ಎರಡಕ್ಕೂ ಪರಿಸ್ಥಿತಿ ಅನಿಶ್ಚಿತತೆಯನ್ನು ಸೃಷ್ಟಿಸಿದೆ ಎಂದು ಹೇಳುತ್ತಾರೆ. ವಿಶೇಷವಾಗಿ ಕೃಷಿ ಋತು ಪ್ರಾರಂಭವಾಗುವ ಮೊದಲು ಅನೇಕರು ಜಾನುವಾರು ಮಾರಾಟವನ್ನು ಅವಲಂಬಿಸಿರುತ್ತಾರೆ.


