ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ‘ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್’ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು ಎದುರಿಸುತ್ತಿರುವ “ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ” ತಪ್ಪಿಸಿಕೊಳ್ಳಲು ಇಷ್ಟು ದೊಡ್ಡ ಪ್ರಮಾಣದ ಫಲಾನುಭವಿಗಳನ್ನು ಉದ್ದೇಶಪೂರ್ವಕವಾಗಿಯೇ ಪಟ್ಟಿಯಿಂದ ಕೈಬಿಡುತ್ತಿದೆ ಎಂದು ವಿರೋಧ ಪಕ್ಷಗಳು ತೀವ್ರ ಆರೋಪ ಮಾಡಿವೆ.
ಏಪ್ರಿಲ್ 30ರ ಇ-ಕೆವೈಸಿ ಅಂತಿಮ ಗಡುವಿನ ನಂತರ ಯೋಜನೆಯ ಫಲಾನುಭವಿಗಳ ಸಂಖ್ಯೆಯು 2.4 ಕೋಟಿಯಿಂದ ಸುಮಾರು 1.7 ಕೋಟಿಗೆ ಕುಸಿದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಆದರೆ, ಈ ಅನರ್ಹತೆಗಳು ಕೇವಲ ಇ-ಕೆವೈಸಿ ಕಾರಣಕ್ಕೆ ಮಾತ್ರವಲ್ಲದೆ, ಯೋಜನೆಯ ನಿಯಮ ಮತ್ತು ಅರ್ಹತಾ ಮಾನದಂಡಗಳನ್ನು ಪಾಲಿಸದ ಕಾರಣಕ್ಕೂ ನಡೆದಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪಿಟಿಐ ಮಾಹಿತಿ ಆಧರಿಸಿ ಡೆಕನ್ ಹೆರಾಲ್ಡ್ ವರದಿ ಪ್ರಕಟಿಸಿದೆ.
ತಾಂತ್ರಿಕ ಕಾರಣ ಮತ್ತು ಮಾನದಂಡಗಳ ವಿವರ:
ಫಲಾನುಭವಿಗಳು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ಎಂಟು ತಿಂಗಳ ಸುದೀರ್ಘ ಕಾಲಾವಕಾಶ ನೀಡಿತ್ತು ಎಂದು ತಿಳಿಸಿದ ಅಧಿಕಾರಿಗಳು ಮಾಧ್ಯಮಗಳ ಎದುರು ಮಹಿಳೆಯರನ್ನು ಯೋಜನೆಯಿಂದ ಕೈಬಿಡಲು ಕಾರಣಗಳನ್ನು ತಿಳಿಸಿದ್ದಾರೆ.
- ಪ್ರಕ್ರಿಯೆ ಪೂರ್ಣಗೊಳಿಸದವರು: ಸುಮಾರು 50 ರಿಂದ 55 ಲಕ್ಷ ಮಹಿಳೆಯರು ಇ-ಕೆವೈಸಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ವಿಫಲರಾಗಿದ್ದಾರೆ. ಆದಾಗ್ಯೂ, ಈ ಅವಧಿಯಲ್ಲಿ ಕಂಡುಬಂದಿದ್ದ 2 ರಿಂದ 3 ಲಕ್ಷ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
- ಆದಾಯ ಮಿತಿ ಮೀರಿದವರು: ಸುಮಾರು 12 ಲಕ್ಷ ಮಹಿಳೆಯರು ವಾರ್ಷಿಕ 2.5 ಲಕ್ಷ ರೂ. ಆದಾಯ ಮಿತಿಗಿಂತ ಹೆಚ್ಚು ಗಳಿಸುವ ಆದಾಯ ತೆರಿಗೆ ಪಾವತಿದಾರರು (IT Payers) ಎಂದು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ
- ವಯೋಮಿತಿ ಮೀರಿದವರು: 4.5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಯೋಜನೆಯ ಗರಿಷ್ಠ ವಯೋಮಿತಿಯಾದ 65 ವರ್ಷಗಳನ್ನು ದಾಟಿದ್ದಾರೆ ಎಂಬ ಕಾರಣ ನೀಡಿದ್ದಾರೆ.
- ಇತರ ಯೋಜನೆಗಳ ಫಲಾನುಭವಿಗಳು: ಸುಮಾರು 5 ಲಕ್ಷ ಮಹಿಳೆಯರು ಈಗಾಗಲೇ ‘ನಮೋ ಶೇತ್ಕರಿ ಯೋಜನೆ’ಯಡಿ ಆರ್ಥಿಕ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಕಾರಣ ಮುಂದಿಟ್ಟಿದ್ದಾರೆ.
ಇ-ಕೆವೈಸಿ ಪೂರ್ಣಗೊಳಿಸಿದರೂ ಮಾಸಿಕ ಕಂತುಗಳ ಹಣ ಜಮೆಯಾಗದ ಕುರಿತು ಬರುತ್ತಿರುವ ದೂರುಗಳಿಗೆ ಪ್ರತಿಕ್ರಿಯಿಸಿದ ಅಧಿಕಾರಿ, “ನಿಜವಾದ ಫಲಾನುಭವಿಗಳ ಅಂತಿಮ ಅಂಕಿ-ಅಂಶಗಳು ಇನ್ನು ಒಂದು ವಾರದಲ್ಲಿ ಸ್ಪಷ್ಟವಾಗಲಿವೆ ಮತ್ತು ಸಲ್ಲಿಕೆಯಾಗಿರುವ ದೂರುಗಳನ್ನು ಪರಿಶೀಲಿಸಲಾಗುತ್ತಿದೆ. ಕೇವಲ ಇ-ಕೆವೈಸಿ ನೆಪದಲ್ಲಿ 80 ಲಕ್ಷ ಮಹಿಳೆಯರನ್ನು ಕೈಬಿಡಲಾಗಿದೆ ಎಂಬ ಆರೋಪ ಸುಳ್ಳು” ಎಂದು ಸ್ಪಷ್ಟನೆ ನೀಡಿದ್ದಾರೆ.
‘ಲಡ್ಕಿ ಬಹಿನ್’ಗಳಿಗೆ ಬಿದ್ದ ಮೊದಲ ಹೊಡೆತ: ಜಯಂತ್ ಪಾಟೀಲ್ ಆಕ್ರೋಶ
ಮತ್ತೊಂದೆಡೆ, ಸರ್ಕಾರದ ಈ ಕ್ರಮದ ವಿರುದ್ಧ ಎನ್ಸಿಪಿ (ಶರದ್ ಪವಾರ್ ಬಣ) ನಾಯಕ ಜಯಂತ್ ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯೋಜನೆಯಿಂದ ಇಷ್ಟೊಂದು ದೊಡ್ಡ ಸಂಖ್ಯೆಯ ಫಲಾನುಭವಿಗಳನ್ನು ಕೈಬಿಡುತ್ತಿರುವುದು ರಾಜ್ಯ ಸರ್ಕಾರ ಎದುರಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿಯಾಗಿದೆ” ಎಂದು ಅವರು ಹೇಳಿದ್ದಾರೆ.
“ಕಳೆದ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಕಳಪೆ ಪ್ರದರ್ಶನದ ನಂತರ, 2024ರ ರಾಜ್ಯ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅರ್ಹ ಮಹಿಳೆಯರಿಗೆ ಮಾಸಿಕ 1,500 ರೂ. ನೀಡುವ ಈ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೆ ತರಲಾಗಿತ್ತು. ಈಗ ಚುನಾವಣೆ ಮುಗಿಯುತ್ತಿದ್ದಂತೆ 80 ಲಕ್ಷ ಮಹಿಳೆಯರನ್ನು ಅನರ್ಹರೆಂದು ಘೋಷಿಸಲಾಗಿದೆ. ಇದು ನಂಬಿ ಮತಹಾಕಿದ ಜನರಿಗೆ ಮಾಡಿದ ದ್ರೋಹ. ಕೇಂದ್ರದ ಬೆನ್ನಲ್ಲೇ ರಾಜ್ಯ ಸರ್ಕಾರವೂ ದೊಡ್ಡ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ಇದರ ಮೊದಲ ಹೊಡೆತ ನಮ್ಮ ‘ಲಡ್ಕಿ ಬಹಿನ್’ (ಆತ್ಮೀಯ ಸಹೋದರಿಯರ) ಮೇಲೆ ಬಿದ್ದಿದೆ. ಹಣಕಾಸಿನ ಕೊರತೆ ಮತ್ತು ಜಾಗತಿಕ ಆರ್ಥಿಕ ಕುಸಿತದ ಪರಿಸ್ಥಿತಿಯನ್ನು ಸರಿಯಾದ ಯೋಜನೆ ಮತ್ತು ಮುನ್ನೆಚ್ಚರಿಕೆಯ ಕ್ರಮಗಳ ಮೂಲಕ ನಿಭಾಯಿಸಬಹುದಿತ್ತು” ಎಂದು ಮಾಜಿ ಸಚಿವರೂ ಆದ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಯೋಜನೆ ನಿಲ್ಲಿಸುವುದೇ ಸರ್ಕಾರದ ಅಂತಿಮ ಗುರಿ: ಶಾಸಕ ರೋಹಿತ್ ಪವಾರ್ ಆರೋಪ
ಇದೇ ಧಾಟಿಯಲ್ಲಿ ಮಾತನಾಡಿದ ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್, “ರಾಜ್ಯ ಸರ್ಕಾರವು ಯೋಜನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಅಂತಿಮ ಗುರಿಯನ್ನು ಹೊಂದಿದ್ದು, ಅದಕ್ಕಾಗಿ ಹಂತಹಂತವಾಗಿ ಫಲಾನುಭವಿಗಳನ್ನು ಪಟ್ಟಿಯಿಂದ ಹೊರಹಾಕುತ್ತಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
“ವಿಧಾನಸಭಾ ಚುನಾವಣೆಗೆ ಮುನ್ನ ಈ ಯೋಜನೆಯಡಿ 2.47 ಕೋಟಿ ಫಲಾನುಭವಿಗಳಿದ್ದರು. ಆದರೆ ಈಗ ಸುಮಾರು 81 ಲಕ್ಷ ಮಹಿಳೆಯರ ಹೆಸರುಗಳನ್ನು ಕೈಬಿಡಲಾಗಿದೆ. ಕೆವೈಸಿ (KYC) ಎಂಬುದು ಕೇವಲ ನೆಪವಷ್ಟೇ. ಫಲಾನುಭವಿಗಳನ್ನು ಕಡಿಮೆ ಮಾಡಿ ಕೊನೆಗೆ ಯೋಜನೆಯನ್ನೇ ನಿಲ್ಲಿಸುವುದು ಸರ್ಕಾರದ ಅಸಲಿ ಉದ್ದೇಶ” ಎಂದು ಪವಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣೆಗೆ ಮುನ್ನ ಸರಿಯಾದ ಪರಿಶೀಲನೆ ನಡೆಸದ ಸರ್ಕಾರದ ನಡೆಯನ್ನು ಪ್ರಶ್ನಿಸಿದ ಅವರು, “ಈಗ ಕೈಬಿಡಲಾದ ಮಹಿಳೆಯರನ್ನು ಸರ್ಕಾರ ನಕಲಿ ಫಲಾನುಭವಿಗಳು ಎನ್ನುವುದಾದರೆ, ಚುನಾವಣೆಗೆ ಮುನ್ನ ಸೂಕ್ತ ಕೆವೈಸಿ ಪರಿಶೀಲನೆ ನಡೆಸದೆ ಯೋಜನೆಯನ್ನು ಜಾರಿಗೆ ತಂದಿದ್ದು ಸರ್ಕಾರದ ವೈಫಲ್ಯವಲ್ಲವೇ?” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಮಹಿಳಾ ಫಲಾನುಭವಿಗಳಿಂದ ಈಗಾಗಲೇ ನೀಡಿರುವ ಹಣವನ್ನು ವಸೂಲಿ ಮಾಡಲು ಪ್ರಯತ್ನಿಸಿದರೆ ಅಥವಾ ಅವರಿಗೆ ಅನಾನುಕೂಲ ಉಂಟುಮಾಡಿದರೆ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


