ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ತವರು ಜಿಲ್ಲೆಯಾದ ತುಮಕೂರು ನಗರದ ಕೆಇಬಿ ಇಂಜಿನಿಯರ್ಸ್ ಸಂಘದ ಆವರಣದಲ್ಲಿ ನಾಲ್ವರು ದಲಿತ ಕಾರ್ಮಿಕರನ್ನು ಬರಿಗೈ ಹಾಗೂ ಬರಿಮೈಯಲ್ಲೇ ಶೌಚಗುಂಡಿಯ ಮಲವನ್ನು ಬಾಚಿಸಿ ಟ್ರಾಕ್ಟರ್ಗೆ ತುಂಬಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ತುಮಕೂರಿನ ನಂದೀಶ್, ಅರುಣ್, ಮಧುಗಿರಿ ಮೂಲದ ಮೂರ್ತಿ ನಾಯ್ಕ ಹಾಗೂ ನವೀನ್ ಎಂಬ ಕಾರ್ಮಿಕರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಶೌಚಗುಂಡಿಯಲ್ಲಿದ್ದ ಮಲವನ್ನು ಕೈಯಿಂದಲೇ ಹೊರತೆಗೆದು ಸಾಗಿಸುವ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ಕಾರ್ಮಿಕರ ಪ್ರಕಾರ, ಆರಂಭದಲ್ಲಿ ಮಣ್ಣು ತುಂಬುವ ಕೆಲಸವಿದೆ ಎಂದು ಕರೆತಂದಿದ್ದು, ಸ್ಥಳಕ್ಕೆ ಬಂದ ನಂತರ ಅದು ಶೌಚಗುಂಡಿ ಎಂಬುದು ತಿಳಿಯಿತು. ಹೊಟ್ಟೆಪಾಡಿನ ಕಾರಣದಿಂದ ಕೆಲಸ ಒಪ್ಪಿಕೊಳ್ಳಬೇಕಾಯಿತು. ಇಂತಹ ಕೆಲಸ ಮಾಡಿಸುವುದು ಕಾನೂನುಬಾಹಿರ ಎಂಬ ಮಾಹಿತಿ ನಮಗೆ ಇರಲಿಲ್ಲ. ಇನ್ನು ಮುಂದೆ ಇಂತಹ ಕೆಲಸಕ್ಕೆ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಮಲಹೊರುವ ಪದ್ಧತಿಯನ್ನು ನಿಷೇಧಿಸಿ ಕಠಿಣ ಕಾನೂನು ಜಾರಿಯಲ್ಲಿದ್ದರೂ, ತುಮಕೂರಿನ ಮಧ್ಯಭಾಗದಲ್ಲಿಯೇ ಈ ಅಮಾನವೀಯ ಪದ್ಧತಿ ಮುಂದುವರಿದಿರುವುದು ಆತಂಕ ಮೂಡಿಸಿದೆ. ವಿಶೇಷವಾಗಿ ಈ ಕಾರ್ಯವನ್ನು ಕೆಇಬಿ ಇಂಜಿನಿಯರ್ಸ್ ಸಂಘದ ವತಿಯಿಂದ ಮಾಡಿಸಿರುವ ಆರೋಪ ಕೇಳಿಬಂದಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ನೀಡಿದೆ.
ಇದಕ್ಕೂ ಮುನ್ನ ಕೊರಟಗೆರೆ ಬಸ್ ನಿಲ್ದಾಣದಲ್ಲಿ ದಲಿತ ಬಾಲ ಕಾರ್ಮಿಕನಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಘಟನೆ ವರದಿಯಾಗಿತ್ತು. ಇದೀಗ ತುಮಕೂರು ನಗರದಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಪ್ರಶ್ನಿಸುವಂತಾಗಿದೆ.
ಘಟನೆಯ ಮಾಹಿತಿ ದೊರೆತರೂ ಸ್ಥಳಕ್ಕೆ ಭೇಟಿ ನೀಡದಿರುವುದು ತುಮಕೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಬಯಲಿಗೆಳೆದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ದಲಿತ ಮುಖಂಡ ಜಟ್ಟಿ ಅಗ್ರಹಾರ ನಾಗರಾಜು, ಮಲಹೊರುವ ಪದ್ಧತಿ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿರುವ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಲಹೊರುವ ಅನಿಷ್ಟ ಪದ್ಧತಿ ಸಂಪೂರ್ಣ ನಿರ್ಮೂಲನೆಯಾಗಿದೆ ಎಂಬ ಸರ್ಕಾರದ ಹೇಳಿಕೆಗಳ ನಡುವೆಯೇ ಇಂತಹ ಘಟನೆಗಳು ಮರುಕಳಿಸುತ್ತಿರುವುದು, ಕಾನೂನು ಜಾರಿಯ ಪರಿಣಾಮಕಾರಿತ್ವದ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಅಧಿಕಾರಿಗಳು ಈ ಪ್ರಕರಣವನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಮತ್ತು ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.


