ಭಾರತೀಯ ಚುನಾವಣಾ ಆಯೋಗವು (ಇಸಿಐ) ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಹಾಗೂ ಇತರ ಚುನಾವಣೆ ಸಂಬಂಧಿತ ವಿಷಯಗಳ ವಿರುದ್ಧ ಇಂಡಿಯಾ ಮೈತ್ರಿಕೂಟದ ಹೊರಗಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಆಮ್ ಆದ್ಮಿ ಪಾರ್ಟಿ (ಎಎಪಿ) ಸೇರಿದಂತೆ ಒಟ್ಟು 23 ವಿರೋಧ ಪಕ್ಷಗಳು ಮತ್ತು ಒಬ್ಬರು ಪಕ್ಷೇತರ ಸಂಸದರು ಮಂಗಳವಾರ (ಜೂನ್ 30) ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿಗೆ ಜಂಟಿ ಪತ್ರವೊಂದನ್ನು ಬರೆದಿದ್ದಾರೆ.
ಜೂನ್ 8ರಂದು 25 ವಿರೋಧ ಪಕ್ಷಗಳು ಇಂಡಿಯಾ ಮೈತ್ರಿಕೂಟದ ಸಭೆ ನಡೆಸಿ, ಒಗ್ಗಟ್ಟನ್ನು ಮೂಡಿಸಲು ನಿರ್ಣಯಿಸಿತ್ತು, ಜೊತೆಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮತ್ತು ಚುನಾವಣೆಗಳ ನಿಷ್ಪಕ್ಷಪಾತತೆಯ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಕಳುಹಿಸಿತ್ತು. ಜೂನ್ 8ರ ಸಭೆಗೆ ಡಿಎಂಕೆ ಮತ್ತು ಎಎಪಿ ಹಾಜರಾಗದಿದ್ದರೂ, ಎರಡೂ ಪಕ್ಷಗಳು ಜಂಟಿ ಪತ್ರಕ್ಕೆ ಸಹಿ ಹಾಕಿವೆ.
ಇಂಡಿಯಾ ಮೈತ್ರಿಕೂಟದ ಪ್ರಮುಖ ಅಂಗವಾಗಿದ್ದ ಡಿಎಂಕೆ, ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷವು ತನ್ನ ಕೈಬಿಟ್ಟು, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ ಕಾರಣ ಈ ತಿಂಗಳ ಆರಂಭದಲ್ಲಿ ನಡೆದ ಸಭೆಗೆ ಹಾಜರಾಗಿರಲಿಲ್ಲ.
ಆ ಸಭೆಯಲ್ಲಿ ಡಿಎಂಕೆ ಪಕ್ಷವನ್ನು ನಡೆಸಿಕೊಂಡ ರೀತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ತೀವ್ರ ಟೀಕೆಯನ್ನು ಎದುರಿಸಿತ್ತು ಮತ್ತು ಡಿಎಂಕೆ ಹಾಗೂ ಎಎಪಿ ಎರಡೂ ಪಕ್ಷಗಳನ್ನು ಮೈತ್ರಿಕೂಟಕ್ಕೆ ಮರಳಿ ಕರೆತರಲು ಎಲ್ಲಾ ಪಕ್ಷಗಳು ಶ್ರಮಿಸಬೇಕು ಎಂಬ ಒಮ್ಮತಕ್ಕೆ ನಾಯಕರು ಬಂದಿದ್ದರು ಎಂದು ವರದಿಯಾಗಿದೆ.
ಜೂನ್ 8 ರಂದು ನಡೆದ ಸಭೆಯ ತೀರ್ಮಾನದಂತೆ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಜಂಟಿ ಪತ್ರವನ್ನು ಕಳುಹಿಸಲಾಗಿದೆ ಎಂದು ಕಾಂಗ್ರೆಸ್ ಸಂಸದ ಮತ್ತು ಮಾಧ್ಯಮ ವಿಭಾಗದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಜೂನ್ 8, 2026 ರಂದು ನಡೆದ ಇಂಡಿಯಾ ಜನ್ಬಂಧನ್ ಸಭೆಯಲ್ಲಿ 21 ರಾಜಕೀಯ ಪಕ್ಷಗಳು ಮತ್ತು ಒಬ್ಬರು ಪಕ್ಷೇತರ ಸಂಸದರು ಭಾಗವಹಿಸಿದ್ದರು. ಈ ಸಭೆಯಲ್ಲಿ, ಭಾರತೀಯ ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆ ಮತ್ತು ಇತರ ಚುನಾವಣೆ ಸಂಬಂಧಿತ ವಿಷಯಗಳ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಜಂಟಿ ಪತ್ರ ಬರೆಯಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು” ಎಂದು ಹೇಳಿದ್ದಾರೆ.
ಮುಂದುವರಿದು, “ಅದರಂತೆ, ಈಗ 23 ರಾಜಕೀಯ ಪಕ್ಷಗಳು ಹಾಗೂ ಒಬ್ಬರು ಪಕ್ಷೇತರ ಸಂಸದರು ಸಹಿ ಮಾಡಿರುವ ಜಂಟಿ ಪತ್ರವನ್ನು ಇಂದು ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಾಗಿದೆ. ವಿರೋಧ ಪಕ್ಷಗಳು ‘ಶ್ಯೂರ್’ (SURE—Solidarity, Unity and REsistance) ತತ್ವಕ್ಕೆ ದೃಢವಾಗಿ ಬದ್ಧವಾಗಿವೆ” ಎಂದು ತಿಳಿಸಿದ್ದಾರೆ.
ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಜೈರಾಮ್ ರಮೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಇಂಡಿಯಾ ಮೈತ್ರಿಕೂಟದ ಹೊರಗಿರುವ ಎಎಪಿ ಮತ್ತು ಡಿಎಂಕೆ ಪಕ್ಷಗಳು ಈ ಪತ್ರಕ್ಕೆ ಸಹಿ ಹಾಕಿರುವುದನ್ನು ಖಚಿತಪಡಿಸಿದ್ದಾರೆ.
ಕಳೆದ ವರ್ಷ ಬಿಹಾದಲ್ಲಿ ಮೊದಲ ಬಾರಿಗೆ ಆರಂಭಿಸಲಾದ ಎಸ್ಐಆರ್ ಪ್ರಕ್ರಿಯೆಯು ಒಂದು ವರ್ಷವನ್ನು ಪೂರೈಸಿದ ಸಂದರ್ಭದಲ್ಲೇ ಈ ಜಂಟಿ ಪತ್ರವನ್ನು ಕಳುಹಿಸುವ ನಿರ್ಧಾರಕ್ಕೆ ಬರಲಾಗಿದೆ. ಅಂದಿನಿಂದ ಈವರೆಗೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ಇದರ ಪರಿಣಾಮವಾಗಿ ಐದು ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪಶ್ಚಿಮ ಬಂಗಾಳವೊಂದರಲ್ಲೇ ಸುಮಾರು 27 ಲಕ್ಷ ಮತದಾರರು ಏಪ್ರಿಲ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗಿಲ್ಲ ಮತ್ತು ಈ ಕುರಿತಾದ ಮೇಲ್ಮನವಿಗಳು ಇಂದಿಗೂ ನ್ಯಾಯಾಂಗ ನ್ಯಾಯಮಂಡಳಿಗಳ ಮುಂದೆ ಬಾಕಿ ಇವೆ.


