ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ ಭಾರತೀಯ ಕ್ರಿಕೆಟಿಗ ಕೀರ್ತಿ ಆಜಾದ್ ಟೀಕಿಸಿದ್ದು, ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ಎಕ್ಸ್’ (ಟ್ವಿಟರ್) ನಲ್ಲಿ ಈ ಬಗ್ಗೆ ಪ್ರಶ್ನಿಸಿರುವ ಆಜಾದ್, ಕುಟುಂಬಸ್ಥರು ಮತ್ತು ಮಕ್ಕಳು ಒಟ್ಟಾಗಿ ವೀಕ್ಷಿಸುವ ಕ್ರೀಡಾಕೂಟದ ವೇಳೆ ಇಂತಹ ಜಾಹೀರಾತುಗಳು ಸೂಕ್ತವೇ ಎಂದು ಪ್ರಶ್ನಿಸಿದ್ದಾರೆ. “ಓಲ್ಡ್ ಟ್ರಾಫರ್ಡ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತರರಾಷ್ಟ್ರೀಯ ಟಿ೨೦ ಪಂದ್ಯವನ್ನು ಮಕ್ಕಳು ನೇರವಾಗಿ ವೀಕ್ಷಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರದೆಯ ಮೇಲೆ ಡ್ಯುರೆಕ್ಸ್ ಕಂಪನಿಯ ವಯಸ್ಕರ ಜಾಹೀರಾತು ಬರುವುದು ನಾಚಿಕೆಗೇಡಿನ ಸಂಗತಿಯಲ್ಲವೇ?” ಎಂದು ಬರೆದಿರುವ ಅವರು, ತಮ್ಮ ಪೋಸ್ಟ್ನಲ್ಲಿ ಬಿಸಿಸಿಐ (BCCI) ಅನ್ನು ಸಹ ಟ್ಯಾಗ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಶೀಘ್ರವಾಗಿ ವೈರಲ್ ಆಗಿದ್ದು, 3,26,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 700 ಕ್ಕೂ ಹೆಚ್ಚು ಕಮೆಂಟ್ಗಳನ್ನು ಪಡೆದುಕೊಂಡಿದೆ.
ಅನೇಕ ಬಳಕೆದಾರರು ಆಜಾದ್ ಅವರ ಕಳಕಳಿಯನ್ನು ಒಪ್ಪಿಕೊಂಡಿದ್ದಾರೆ. ಕ್ರಿಕೆಟ್ ಪಂದ್ಯಗಳು ಕೌಟುಂಬಿಕ ಮನರಂಜನೆಯಾಗಿದ್ದು, ಇಂತಹ ಜಾಹೀರಾತುಗಳು ಒಟ್ಟಿಗೆ ಕುಳಿತು ನೋಡುವಾಗ ಮುಜುಗರ ಉಂಟುಮಾಡುತ್ತವೆ ಎಂದು ವಾದಿಸಿದ್ದಾರೆ. “ಖಂಡಿತವಾಗಿಯೂ ಹೌದು ಸರ್, ನನಗೂ ಇದನ್ನು ನೋಡಿ ಮುಜುಗರವಾಯಿತು ಮತ್ತು ಪಂದ್ಯ ನೋಡುವುದನ್ನೇ ನಿಲ್ಲಿಸಿದೆ” ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ನಾನು ವಯಸ್ಕನಾಗಿದ್ದರೂ ಸಹ, ನನ್ನ ಪೋಷಕರೊಂದಿಗೆ ಈ ಜಾಹೀರಾತುಗಳನ್ನು ನೋಡುವುದು ಮುಜುಗರ ತಂದಿತು” ಎಂದು ಬರೆದಿದ್ದಾರೆ.
ಆದರೆ, ಇನ್ನೂ ಹಲವರು ಈ ಜಾಹೀರಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಇವು ಯಾವುದೇ ಅನುಚಿತ ವಿಷಯವನ್ನು ಪ್ರಸಾರ ಮಾಡುತ್ತಿಲ್ಲ, ಬದಲಿಗೆ ಸುರಕ್ಷಿತ ಲೈಂಗಿಕತೆ ಮತ್ತು ಗರ್ಭನಿರೋಧಕಗಳ ಬಗ್ಗೆ ಜಾಗೃತಿ ಮೂಡಿಸುತ್ತಿವೆ ಎಂದು ಅವರು ಹೇಳಿದ್ದಾರೆ. “ಇದಕ್ಕೆ ವಿರುದ್ಧವಾಗಿ ಆಜಾದ್ ಅವರೇ, ದೇಶದ ಜನಸಂಖ್ಯಾ ಸ್ಫೋಟವನ್ನು ಗಮನಿಸಿದರೆ ಇದು ಎಲ್ಲಕ್ಕಿಂತ ಹೆಚ್ಚು ಮುಖ್ಯವಾಗಿದೆ. ಮಕ್ಕಳಿಗೆ ಶಿಕ್ಷಣ ನೀಡಿ. ಜಾಗೃತಿ ಮೂಡಿಸಲು ಕ್ರೀಡಾಂಗಣವು ಅತ್ಯುತ್ತಮ ವೇದಿಕೆಯಾಗಿದೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬರು ಈ ಟೀಕೆಯನ್ನು ಪ್ರಶ್ನಿಸುತ್ತಾ, “ಇದರಲ್ಲಿ ನಾಚಿಕೆಪಡುವಂಥದ್ದು ಏನಿದೆ? ನನಗೆ ಒಂದು ಕಾರಣ ಕೊಡಿ. ನಿಯಂತ್ರಣ ಮತ್ತು ಸುರಕ್ಷತೆಯನ್ನು ಕಲಿಸಲು ಇದು ನಿಜಕ್ಕೂ ಉತ್ತಮ ಮಾರ್ಗವಾಗಿದೆ. ಇಂದಿನ ಜಗತ್ತಿನಲ್ಲಿ ಕಾಂಡೊಮ್ಗಳು ಮುಖ್ಯವಾಗಿವೆ. ಜನರ ನಡುವೆ ಜಾಗೃತಿ ಮೂಡಿಸಬೇಕಾಗಿದೆ” ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರೊಬ್ಬರು, “ಅದರಲ್ಲಿ ಏನು ಸಮಸ್ಯೆಯಿದೆ? ನಿಮ್ಮ ಮಕ್ಕಳು ಹದಿಹರೆಯದವರಾಗಿದ್ದರೆ ಇದು ಗರ್ಭನಿರೋಧಕ ಎಂದು ಅವರಿಗೆ ತಿಳಿದಿರಬೇಕು. ನನ್ನ ತಂದೆ ನನಗೆ 10 ವರ್ಷ ವಯಸ್ಸಿದ್ದಾಗಲೇ ಗರ್ಭನಿರೋಧಕಗಳ ಬಗ್ಗೆ ತಿಳಿಸಿದ್ದರು” ಎಂದು ಸೇರಿಸಿದ್ದಾರೆ.
ಶನಿವಾರ ಮ್ಯಾಂಚೆಸ್ಟರ್ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟಿ20 ಪಂದ್ಯದ ನೇರ ಪ್ರಸಾರದ ವೇಳೆ ಆಜಾದ್ ಈ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಭಾರತ ನೀಡಿದ್ದ 191 ರನ್ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್, 19 ಓವರ್ಗಳಲ್ಲಿ 4 ವಿಕೆಟ್ಗಳ ಅಂತರದಿಂದ ಜಯಗಳಿಸಿತು. ಆತಿಥೇಯ ಇಂಗ್ಲೆಂಡ್ ಪರ ಜೇಕಬ್ ಬೆಥೆಲ್ 46 ಎಸೆತಗಳಲ್ಲಿ ಅಜೇಯ 76 ರನ್ ಗಳಿಸಿ ಮಿಂಚಿದರು. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.


