ಬಿಹಾರದ ಬಂಕಿಪುರ, ಗುಜರಾತ್ನ ಮಂಜಲ್ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ.
ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ ಗೆಲ್ಲುತ್ತಿದ್ದ ಬಿಹಾರದ ಬಂಕಿಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷ ಗೆಲುವು ಸಾಧಿಸಿದೆ. ಈ ಗೆಲುವು ಪ್ರಶಾಂತ್ ಕಿಶೋರ್ ಮತ್ತು ಅವರ ಪಕ್ಷದ ಇಬ್ಬರಿಗೂ ಚುನಾವಣಾ ರಾಜಕೀಯದ ಮೊಟ್ಟಮೊದಲ ಅಧಿಕೃತ ಗೆಲುವಾಗಿದೆ.
ಜನ ಸುರಾಜ್ ಪಕ್ಷವನ್ನು ಅಕ್ಟೋಬರ್ 2024ರಲ್ಲಿ ಪ್ರಶಾಂತ್ ಕಿಶೋರ್ ಸ್ಥಾಪಿಸಿದರು. ನವೆಂಬರ್ 2025ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 238 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತಾದರೂ, ಒಂದು ಸ್ಥಾನದಲ್ಲೂ ಗೆಲ್ಲಲಾಗದೆ ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿತ್ತು. ಆ ಚುನಾವಣೆಯಲ್ಲಿ ಖಾತೆ ತೆರೆಯದ ಪಕ್ಷಕ್ಕೆ, ಈಗ ಬಂಕಿಪುರ ಉಪಚುನಾವಣೆಯ ಮೂಲಕ ಬಿಹಾರ ವಿಧಾನಸಭೆಯಲ್ಲಿ ಮೊದಲ ಶಾಸಕ ಸ್ಥಾನ ಸಿಕ್ಕಂತಾಗಿದೆ.
ಇಷ್ಟು ದಿನ ತೆರೆಮರೆಯ ರಾಜಕೀಯ ತಂತ್ರಜ್ಞರಾಗಿ (Political Strategist) ದೇಶದ ವಿವಿಧ ಪ್ರಮುಖ ಪಕ್ಷಗಳಿಗೆ ಚುನಾವಣೆ ಗೆಲ್ಲಿಸಿಕೊಡುತ್ತಿದ್ದ ಪ್ರಶಾಂತ್ ಕಿಶೋರ್ ಅವರು, ತಮ್ಮ ಜೀವಮಾನದಲ್ಲೇ ಮೊದಲ ಬಾರಿಗೆ ನೇರವಾಗಿ ಚುನಾವಣಾ ಕಣಕ್ಕಿಳಿದಿದ್ದು ಇದೇ ಮೊದಲ ಬಾರಿಗೆ. ಹೀಗಾಗಿ ಅಭ್ಯರ್ಥಿಯಾಗಿ ಇದು ಅವರ ಮೊದಲ ವೈಯಕ್ತಿಕ ಗೆಲುವಾಗಿದೆ.
2025ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ವತಃ ಸ್ಪರ್ಧಿಸದೇ ಇದ್ದದ್ದೇ ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂದು ಪ್ರಶಾಂತ್ ಕಿಶೋರ್ ಒಪ್ಪಿಕೊಂಡಿದ್ದರು. ಆ ತಪ್ಪನ್ನು ತಿದ್ದಿಕೊಳ್ಳಲು ಈ ಉಪಚುನಾವಣೆಯಲ್ಲಿ ಸ್ವತಃ ತಾವೇ ಅಖಾಡಕ್ಕಿಳಿದು ಯಶಸ್ವಿಯಾಗಿದ್ದಾರೆ.
ಬಿಜೆಪಿಯ ಹಾಲಿ ರಾಷ್ಟ್ರೀಯ ಅಧ್ಯಕ್ಷರ ಕ್ಷೇತ್ರ ಬಂಕಿಪುರ
ಬಿಜೆಪಿಯ ಹಿರಿಯ ನಾಯಕರಾದ ನಿತಿನ್ ನಬೀನ್ ಅವರು ಡಿಸೆಂಬರ್ 2025ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಹಾಗೂ ಜನವರಿ 2026ರಲ್ಲಿ ಅಧಿಕೃತವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು. ಇದಾದ ಬಳಿಕ ಏಪ್ರಿಲ್ 2026ರಲ್ಲಿ ಅವರು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು.
ಸಂಸದರಾಗಿ (ರಾಜ್ಯಸಭಾ ಸದಸ್ಯರಾಗಿ) ಆಯ್ಕೆಯಾದ ಹಿನ್ನೆಲೆಯಲ್ಲಿ, ಅವರು ತಾವು ಪ್ರತಿನಿಧಿಸುತ್ತಿದ್ದ ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಮಾರ್ಚ್ 30, 2026 ರಂದು ಅಧಿಕೃತವಾಗಿ ರಾಜೀನಾಮೆ ನೀಡಿದರು.
ತನ್ನ ಪಕ್ಷದ ಮೊದಲ ಗೆಲುವು, ಅಭ್ಯರ್ಥಿಯಾಗಿ ಮೊದಲ ಗೆಲುವು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಕ್ಷೇತ್ರದಲ್ಲಿ ಗೆಲುವು, ಹೀಗೆ ಬಂಕಿಪುರದ ಗೆಲುವು ಪ್ರಶಾಂತ್ ಕಿಶೋರ್ ಪಾಲಿಗೆ ಒಂದು ಐತಿಹಾಸಿಕ ಗೆಲುವಾಗಿದೆ.
ಗುಜರಾತ್ನ ಮಂಜಲ್ಪುರ
ಗುಜರಾತ್ನ ಮಂಜಲ್ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭಿಖಾಭಾಯಿ ರಬರಿ ವಿರುದ್ಧ ಬಿಜೆಪಿ ಅಭ್ಯರ್ಥಿ ಸತೇಂದ್ರಭಾಯಿ ಪಟೇಲ್ ಅವರಿಗೆ ಗೆಲುವಾಗಿದೆ. ಬಿಜೆಪಿ ಅಭ್ಯರ್ಥಿ 55,481 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ 24,851 ಮತಗಳನ್ನು ಗಳಿಸಿದ್ದಾರೆ. ಗೆಲುವಿನ ಅಂತರ 30,630 ಇದ್ದು, 2,247 ನೋಟಾ ಮತಗಳು ಚಲಾವಣೆಯಾಗಿವೆ.
ಮಂಜಲ್ಪುರ ವಿಧಾನಸಭಾ ಕ್ಷೇತ್ರದ ಹಿರಿಯ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಯೋಗೇಶ್ ಪಟೇಲ್ ಅವರು ಜೂನ್ 2, 2026 ರಂದು ದೀರ್ಘಕಾಲದ ಕಾಯಿಲೆಯಿಂದ ನಿಧನರಾದ ಕಾರಣ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿತ್ತು.
ಮಧ್ಯಪ್ರದೇಶದ ದಾಟಿಯಾ
fದಾಟಿಯಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ರಾಜೇಂದ್ರ ಭಾರ್ತಿ ಅವರ ಶಾಸಕ ಸ್ಥಾನ ರದ್ದಾದ ಕಾರಣ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘನಶ್ಯಾಮ್ ಸಿಂಗ್ ಗೆಲುವು ದಾಖಲಿಸಿದ್ದಾರೆ. ಘನಶ್ಯಾಮ್ ಅವರು 66,757 ಮತಗಳನ್ನು ಪಡೆದರೆ, ಪ್ರತಿಸ್ಪರ್ದಿ ಬಿಜೆಪಿ ಅಭ್ಯರ್ಥಿ ಅಶುತೋಷ್ ತಿವಾರಿ ಅವರು 60,741 ಮತಗಳನ್ನು ಗಳಿಸಿದ್ದಾರೆ. ಇಲ್ಲಿ ಗೆಲುವಿನ ಅಂತರ 6,016 ಮತಗಳು ಮಾತ್ರ. ಅಲ್ಲದೆ, ಬರೋಬ್ಬರಿ 21 ಅಭ್ಯರ್ಥಿಗಳು ಕಣದಲ್ಲಿದ್ದರು. 456 ನೋಟಾ ಮತಗಳು ಕೂಡ ಚಲಾವಣೆಯಾಗಿವೆ.


