ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶಾಸಕರ ರಾಜೀನಾಮೆ ಬೆದರಿಕೆ ಕುರಿತು ನಡೆಯುತ್ತಿರುವ ಚರ್ಚೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ರಾಜೀನಾಮೆ ಕೊಡುವವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪಕ್ಷ ಬೇಕು ಮತ್ತು ತಮಗೆ ರಾಜಕೀಯ ಭವಿಷ್ಯ ಬೇಕು ಅನ್ನುವುದಾದರೆ ಶಾಸಕರು ಪಕ್ಷದಲ್ಲೇ ಇರುತ್ತಾರೆ” ಎಂದು ಸ್ಪಷ್ಟಪಡಿಸಿದರು.
ತಮ್ಮದೇ ಉದಾಹರಣೆಯನ್ನು ನೀಡಿದ ಅವರು, ಧರಂ ಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಸಚಿವ ಸಂಪುಟ ರಚನೆ ವೇಳೆ ನನಗೂ ಸಚಿವ ಸ್ಥಾನ ತಪ್ಪಿತ್ತು. ಹಾಗೆಂದು ನಾನು ಆಗ ರಾಜೀನಾಮೆ ನೀಡಲು ಸಾಧ್ಯವಿರಲಿಲ್ಲವೇ? ನಾನು ಮತ್ತು ಡಾ. ಜಿ. ಪರಮೇಶ್ವರ್ ಆ ಸಂದರ್ಭದಲ್ಲಿ ತಾಳ್ಮೆಯಿಂದಿರಲಿಲ್ಲವೇ? ಹಿಂದೆ ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿ ಬಂಗಾರಪ್ಪ, ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂ ಸಿಂಗ್ ಅವರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಅವರೆಲ್ಲರೂ ರಾಜ್ಯದ ಮುಖ್ಯಮಂತ್ರಿಯಾದರು. ರಾಜಕೀಯದಲ್ಲಿ ಕೆಲವು ಸಂದರ್ಭಗಳಲ್ಲಿ ತಾಳ್ಮೆಯಿಂದಿರುವುದು ಅಗತ್ಯ. ಅಧಿಕಾರಕ್ಕಿಂತ ಪಕ್ಷವೇ ಸದಾ ದೊಡ್ಡದು ಎಂದು ಕಿವಿಮಾತು ಹೇಳಿದರು.
ನಿಗಮ-ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಆದ್ಯತೆ
ರಾಜ್ಯ ಸರ್ಕಾರದ ವಿವಿಧ ನಿಗಮ ಮತ್ತು ಮಂಡಳಿಗಳ ಹುದ್ದೆಗಳ ಕುರಿತು ಮಾತನಾಡಿದ ಸಿಎಂ, “ಎಲ್ಲಾ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಸೇರಿದಂತೆ ಇತರ ಹುದ್ದೆಗಳಿಗೆ ರಾಜೀನಾಮೆ ನೀಡುವಂತೆ ಶಾಸಕರಿಗೆ ಸೂಚಿಸುತ್ತೇನೆ. ಸರ್ಕಾರ ಅಧಿಕಾರಕ್ಕೆ ಬಂದಾಗ ಎಲ್ಲರಿಗೂ ಎರಡೂವರೆ ವರ್ಷಗಳ ಕಾಲಾವಧಿ ಎಂದು ಮುಂಚಿತವಾಗಿಯೇ ಸ್ಪಷ್ಟಪಡಿಸಲಾಗಿತ್ತು. ಮೊದಲು ಪಕ್ಷದ ಶ್ರಮಿಕ ಕಾರ್ಯಕರ್ತರಿಗೆ ಈ ಪದವಿಗಳಲ್ಲಿ ಅವಕಾಶ ನೀಡಲಾಗುವುದು, ಆ ನಂತರ ಶಾಸಕರನ್ನು ಕರೆದು ಚರ್ಚಿಸಲಾಗುವುದು” ಎಂದರು.
ರಾಜ್ಯದಲ್ಲಿನ ಹವಾಮಾನ ಪರಿಸ್ಥಿತಿಯ ಕುರಿತು ಉಲ್ಲೇಖಿಸಿದ ಮುಖ್ಯಮಂತ್ರಿಗಳು, “ನಾಳೆಯಿಂದಲೇ ಎಲ್ಲ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳಿಗೆ ತೆರಳಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಸ್ಥಿತಿಯ ಪರಿವೀಕ್ಷಣೆ ನಡೆಸುವಂತೆ ಸೂಚಿಸಿದ್ದೇನೆ. ಸಚಿವರು ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳು ಮತ್ತು ಪ್ರಸ್ತುತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು” ಎಂದು ಆದೇಶಿಸಿದರು.


