ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ‘ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್’ (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ ಅನಿಲ ಸೋರಿಕೆಯಿಂದಾಗಿ ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದು, ಇಬ್ಬರು ಕಾರ್ಮಿಕರು ಸ್ಥಿತಿ ಚಿಂತಾಜನಕವಾಗಿದೆ.
ಮೃತರನ್ನು ಮಧ್ಯಪ್ರದೇಶದ ಕಟ್ನಿ ಮೂಲದ ವಿಕ್ರಂಸಿಂಗ್ (20-25 ವರ್ಷ) ಮತ್ತು ಸಂಜಯ್ಸಿಂಗ್ (20-25 ವರ್ಷ) ಹಾಗೂ ತೆಲಂಗಾಣದ ಮಹಬೂಬ್ನಗರ ಮೂಲದ ಕಟ್ಲ ಗಣೇಶ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಆಂಧ್ರಪ್ರದೇಶದ ಅನಂತಪುರ ಮೂಲದ ಮಂಚಾಲ ಹೇಮಂತ್ ಮತ್ತು ಮಂಚಾಲ ಶಿವಕುಮಾರ್ ಅವರನ್ನು ನೆರೆಯ ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ದುರಂತ ಸಂಭವಿಸಿದ್ದು ಹೇಗೆ?
ಜಿಲ್ಲಾಧಿಕಾರಿ ಡಾ. ರಾಹುಲ್ ಪಾಂಡ್ವೆ ಮತ್ತು ಎಸ್ಪಿ ಪೃಥ್ವಿಕ್ ಶಂಕರ್ ಅವರು ಘಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ದುರಂತದ ತಾಂತ್ರಿಕ ವಿವರಗಳನ್ನು ನೀಡಿದ್ದಾರೆ.
ಕಾರ್ಖಾನೆಯಲ್ಲಿ ಸ್ಟೇನ್ಲೆಸ್ ಸ್ಟೀಲ್ ರಿಯಾಕ್ಟರ್ನಲ್ಲಿ ಥಿಯೋನಿಲ್ ಕ್ಲೋರೈಡ್ (Thionyl Chloride) ರಾಸಾಯನಿಕವನ್ನು ಬಳಸಲಾಗುತ್ತಿತ್ತು. ಈ ಪ್ರಕ್ರಿಯೆಯ ಸಮಯದಲ್ಲಿ ಉಂಟಾಗುವ ಸಲ್ಫರ್ ಡೈಆಕ್ಸೈಡ್ (Sulphur Dioxide) ವಿಷಾನಿಲವನ್ನು ಪೈಪ್ಲೈನ್ ಮೂಲಕ ಸ್ಕ್ರಬ್ಬರ್ಗೆ ಸಾಗಿಸಲಾಗುತ್ತಿತ್ತು. ಆದರೆ, ಬುಧವಾರ ಮುಂಜಾನೆ 1 ರಿಂದ 2 ಗಂಟೆಯ ಸುಮಾರಿಗೆ ಪೈಪ್ಲೈನ್ನಲ್ಲಿ ಇದ್ದಕ್ಕಿದ್ದಂತೆ ಸೋರಿಕೆ ಉಂಟಾಗಿ, ನೈಟ್ಶಿಫ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅನಿಲವನ್ನು ಸೇವಿಸಿ ಉಸಿರುಗಟ್ಟಿದ್ದಾರೆ.
ಎಫ್ಐಆರ್ ದಾಖಲು
- ಕಾರ್ಖಾನೆ ಮ್ಯಾನೇಜ್ಮೆಂಟ್ ವಿರುದ್ಧ ದೂರು: ಸುರಕ್ಷತಾ ಮಾನದಂಡಗಳನ್ನು ಗಾಳಿಗೆ ತೂರಿದ ಆರೋಪದ ಮೇಲೆ ಸಿಲ್ ಲ್ಯಾಬೊರೇಟರೀಸ್ ಸಂಸ್ಥೆ, ಅದರ ಮ್ಯಾನೇಜರ್ ಹಾಗೂ ಉಸ್ತುವಾರಿ ಅಧಿಕಾರಿಗಳ ವಿರುದ್ಧ ಸೈದಾಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ.
ಅಹಿತಕರ ಘಟನೆಯ ನಡೆಯಲು ಕಾರಣ ಹಾಗೂ ಕಾರ್ಖಾನೆಯ ತಾಂತ್ರಿಕ ಲೋಪಗಳನ್ನು ಪತ್ತೆಹಚ್ಚಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ವಿಧಿವಿಜ್ಞಾನ (Forensic) ತಂಡಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ಕಂಪನಿಯ ಮಾಲೀಕರಿಗೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಮೃತಪಟ್ಟ ಮತ್ತು ಅಸ್ವಸ್ಥಗೊಂಡಿರುವ ಕಾರ್ಮಿಕರ ಕುಟುಂಬಗಳಿಗೆ ತಕ್ಷಣವೇ ಸೂಕ್ತ ಪರಿಹಾರ ಘೋಷಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಸುರಕ್ಷತಾ ನಿಯಮಗಳ ಉಲ್ಲಂಘನೆಯಿಂದ ಇಂತಹ ದುರಂತಗಳು ಪದೇ ಪದೇ ಮರುಕಳಿಸುತ್ತಿದ್ದು, ಕಾರ್ಖಾನೆಗಳ ಕಠಿಣ ತಪಾಸಣೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.


