ಅರಣ್ಯದಲ್ಲಿ ಬೇಟೆಗೆ ಬಂದಿದ್ದರೆನ್ನಲಾದ ನಾಲ್ವರು ಮತ್ತು ಅರಣ್ಯ ಸಿಬ್ಬಂದಿ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವ ಪರಾರಿಯಾದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಶನಿವಾರ (ಆ.15) ಮುಂಜಾನೆ ನಡೆದಿರುವ ಬಗ್ಗೆ ವರದಿಯಾಗಿದೆ.
ಶಾಗ್ಯ ಗ್ರಾಮದ ಸಮೀಪದ ಮರಿಯ ಮಂಗಲ ಬೀಟ್ನಲ್ಲಿ ಘಟನೆ ನಡೆದಿದ್ದು, ಮೃತರನ್ನು ತೊಮಿಯರ್ ಪಾಳ್ಯ ಗ್ರಾಮದ ಅಂತೊಣಿಸ್ವಾಮಿ , ಪೀಟರ್ , ಕುಮಾರ್ ಎಂದು ಗುರುತಿಸಲಾಗಿದೆ. ಮರಿಯ ಮಂಗಲದ ಮಹಿಮಾದಾಸ್ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ್ದರೆನ್ನಲಾದ ನಾಲ್ವರು ವನ್ಯ ಪ್ರಾಣಿಯನ್ನು ಬೇಟೆಯಾಡಿ, ಅದರ ಮಾಂಸವನ್ನು ಹಂಚಿಕೆ ಮಾಡಿಕೊಳ್ಳುವ ಸಮಯದಲ್ಲಿ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಗುಂಡಿನ ದಾಳಿ ನಡೆದಿದೆ. ಪರಿಣಾಮ ಅಂತೊಣಿಸ್ವಾಮಿ , ಪೀಟರ್ , ಕುಮಾರ್ ಸಾವನ್ನಪ್ಪಿದ್ದು, ಪರಾರಿಯಾಗಿರುವ ಮಹಿಮಾದಾಸ್ ಸೆರೆಗಾಗಿ ಅರಣ್ಯಾಧಿಕಾರಿಗಳು ಶೋಧನಾ ಕಾರ್ಯ ಮುಂದುವರೆಸಿದ್ದಾರೆ ಎಂದು ವರದಿಗಳು ಹೇಳಿವೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರ ಮೃತ ದೇಹಗಳನ್ನು ಮೊದಲು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿತ್ತು. ನಂತರ ಪೊಲೀಸ್ ಬಂದೂಬಸ್ತ್ ನೊಂದಿಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಶವ ಪರೀಕ್ಷೆಗೆ ಕಳುಹಿಸಲಾಗಿದೆ.
ಗ್ರಾಮಸ್ಥರಿಂದ ಆಕ್ರೋಶ
ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಹತ್ಯೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದ ಕೆಲವರು ಶಾಗ್ಯದಲ್ಲಿರುವ ಸಹಾಯಕ ವಲಯ ಅರಣ್ಯಾಧಿಕಾರಿಗಳ ಕಛೇರಿಯ ಮೇಲೆ ದಾಳಿ ನಡೆಸಿ ಕಛೇರಿಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ ತೊಮಿಯರ್ ಪಾಳ್ಯ, ಶಾಗ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ.
ಅರಣ್ಯ ಇಲಾಖೆ ಪ್ರತಿಕ್ರಿಯೆ
“ಮೃತರು ಬೇಟೆಯಾಡಲು ಹೋಗಿದ್ದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಎದುರಾಗಿದ್ದಾರೆ. ಈ ವೇಳೆ ಅವರು ನಾಡಬಂದೂಕಿನಿಂದ ಸಿಬ್ಬಂದಿ ಮೇಲೆ ಗುಂಡು ಹಾರಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಬಳಿಕ ಅವರನ್ನು ರಕ್ಷಣೆ ಮಾಡಲು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಅಷ್ಟರಲ್ಲಿ ಮೂವರೂ ಸಾವನ್ನಪ್ಪಿದ್ದಾರೆ” ಎಂದು ಎಸಿಎಫ್ ಮರಿಸ್ವಾಮಿ ಹೇಳಿರುವುದಾಗಿ ನ್ಯೂಸ್ 18 ಕನ್ನಡದ ವರದಿ ಉಲ್ಲೇಖಿಸಿದೆ.
ಅರಣ್ಯ ಇಲಾಖೆಯಿಂದ ದೊಡ್ಡ ತಪ್ಪಾಗಿದೆ : ಸಚಿವ ಪುಟ್ಟರಂಗಶೆಟ್ಟಿ
“ಶೂಟೌಟ್ ಮಾಡಿದ ಮೇಲೆ ಯಾಕೆ ಮೃತದೇಹಗಳನ್ನು ಮೈಸೂರಿಗೆ ತಂದರು ಎಂದು ನನಗೂ ಗೊತ್ತಿಲ್ಲ. ಒಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪಾಗಿದೆ” ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಘಟನೆಯ ಕುರಿತು ಹೇಳಿದ್ದಾರೆ.
ಮೃತದೇಹಗಳನ್ನು ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, “ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪಾಗಿದೆ. ಪ್ರಕರಣದ ಬಗ್ಗೆ ಇಲಾಖೆಯವರು ನನಗೆ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಒಬ್ಬೊಬ್ಬ ಅಧಿಕಾರಿ ಒಂದೊಂದು ರೀತಿ ನಮಗೆ ಸುಳ್ಳು ಹೇಳುತ್ತಿದ್ದಾರೆ. ನನಗೆ ಇಡೀ ಪ್ರಕರಣದ ಬಗ್ಗೆ ಸತ್ಯಾಸತ್ಯತೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಬೇಟೆಯಾಡಿಕೊಂಡು ವಾಪಸ್ ಬರುವಾಗ ಗುಂಡು ಹೊಡೆದರು ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಇದನ್ನು ನಂಬುವ ಸ್ಥಿತಿಯಲ್ಲಿ ನಾನಿಲ್ಲ. ಎನ್ಕೌಂಟರ್ ಮಾಡಿದ ಮೇಲೆ ಮೃತ ದೇಹ ಯಾಕೆ ಅಲ್ಲಿಂದ ಮೈಸೂರಿಗೆ ಶಿಫ್ಟ್ ಮಾಡಿದರು. ಯಾರನ್ನು ಕೇಳದೆ ಮೈಸೂರಿಗೆ ಮೃತದೇಹ ಏಕೆ ಬಂತು? ನನಗೆ ಅರಣ್ಯ ಇಲಾಖೆಯವರು ಹೇಳುತ್ತಿರುವುದು ಸುಳ್ಳು. ಈ ಪ್ರಕರಣದ ಬಗ್ಗೆ ಹಲವು ಸಂಶಯಗಳು ಇವೆ. ಈ ಕುರಿತು ಸಮಗ್ರ ತನಿಖೆ ಮಾಡಿಸುತ್ತೇವೆ ಎಂದು ಪುಟ್ಟರಂಗಶೆಟ್ಟಿ ಹೇಳಿದ್ದಾರೆ.
ಮೃತಪಟ್ಟಿರುವವರು ಬೇಟೆಗಾರರು ಎಂದು ನನಗೆ ಅನಿಸುವುದಿಲ್ಲ. ಅರಣ್ಯ ಇಲಾಖೆಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಪ್ರಕರಣದಿಂದ ಸರ್ಕಾರಕ್ಕೂ ಮುಜುಗರ ಆಗಿದೆ. ಪ್ರಕರಣದ ಬಗ್ಗೆ ಇನ್ನು ಯಾರು ದೂರು ಕೊಟ್ಟಿಲ್ಲ. ಎಫ್ಐಆರ್ ಆಗದೆ ಮರಣೋತ್ತರ ಪರೀಕ್ಷೆ ಆಗಲ್ಲ ಎಂದು ತಿಳಿಸಿದ್ದಾರೆ.


