ಸಾಲದ ಸುಳಿಗೆ ಸಿಲುಕಿ ಜೀವನ ನಡೆಸಲಾಗದೆ ನೇಕಾರ ಕೂಲಿ ಕಾರ್ಮಿಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಕರುಣಾಜನಕ ಘಟನೆ ಬೆಳಗಾವಿ ನಗರದ ಮಂಗಾಯಿ ನಗರದ 4ನೇ ಕ್ರಾಸ್ನಲ್ಲಿ ಸಂಭವಿಸಿದೆ. ಮೃತರನ್ನು ವಿಠ್ಠಲ ಲಿಂಗಪ್ಪ ಲೋಕರಿ ಎಂದು ಗುರುತಿಸಲಾಗಿದೆ. ಅವರು ಪತ್ನಿ ನಿರ್ಮಲ ಹಾಗೂ ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ಅತ್ಯಂತ ದಯನೀಯ ಸ್ಥಿತಿಯಲ್ಲಿ ಕುಟುಂಬ:
ಕೂಲಿ ನೇಕಾರ ವೃತ್ತಿ ಮಾಡುತ್ತಿದ್ದ ವಿಠ್ಠಲ ಲೋಕರಿ ಅವರು, ಮಗ್ಗದ ಕೆಲಸದಲ್ಲಿ ಸೂಕ್ತ ಆದಾಯವಿಲ್ಲದೆ ಹಾಗೂ ಕುಟುಂಬ ನಿರ್ವಹಣೆಗೆ ಮಾಡಿಕೊಂಡಿದ್ದ ಸಾಲದ ಒತ್ತಡ ತಾಳಲಾಗದೆ ಆಗಸ್ಟ್ 16, 2026ರಂದು ಆತ್ಮಹತ್ಯೆಗೆ ಶರಣಾಗಿದ್ದು ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಇದರ ನಡುವೆ, ಅವರ ಪತ್ನಿ ಮಂಜುಳಾ ಅವರು ಕಳೆದ ಕೆಲವು ಸಮಯದಿಂದ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಪೌಷ್ಟಿಕಾಂಶದ ಕೊರತೆ (ಅಪೌಷ್ಟಿಕತೆ) ಯಿಂದ ಶಕ್ತಿಹೀನರಾಗಿದ್ದಾರೆ. ಪತ್ನಿಯ ವೈದ್ಯಕೀಯ ವೆಚ್ಚ ಹಾಗೂ ಸಂಸಾರದ ನಿರ್ವಹಣೆಗಾಗಿ ವಿಠ್ಠಲ ಅವರು ಸುಮಾರು 6 ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದರೆನ್ನಲಾಗಿದೆ.
ನಮ್ಮ ಶಿಕ್ಷಣ ಮುಂದುವರೆಯಲು ಸಹಾಯ ಮಾಡಿ ಮಕ್ಕಳ ಅಳಲು:
ತಂದೆಯನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿರುವ ಕುಟುಂಬಕ್ಕೆ ಸದ್ಯ ಆರ್ಥಿಕ ಸಹಾಯ ಅಗತ್ಯವಾಗಿ ಆಗಬೇಕಿದೆ. ಸರ್ಕಾರ ಹಾಗೂ ಸ್ಥಳೀಯ ಆಡಳಿತ ಕೂಡಲೆ ತಮ್ಮ ಶಿಕ್ಷಣಕ್ಕೆ ಮತ್ತು ಕುಟುಂಬ ನಿರ್ವಹಣೆಗೆ ಆಸರೆಯಾಗಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ‘ನಾನು ಗೌರಿ.ಕಾಮ್’ ಜೊತೆ ಮಾತನಾಡಿದ ಮೃತ ವಿಠ್ಠಲ ಲಿಂಗಪ್ಪ ಲೋಕರಿ ಹಿರಿಯ ಮಗಳು ಶಾಂತ (ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ), “ನಮ್ಮ ಅಪ್ಪ ಸಾಲದ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಅಮ್ಮನಿಗೆ ತೀವ್ರ ಅನಾರೋಗ್ಯವಿದ್ದು, ಸಂಸಾರದ ನಿರ್ವಹಣೆಗೆ ಸುಮಾರು 6 ಲಕ್ಷ ರೂಪಾಯಿ ಸಾಲವಾಗಿದೆ. ನಾವಿನ್ನೂ ಸಣ್ಣ ಮಕ್ಕಳು, ನಮಗೆ ಓದಿ ಸ್ವಾವಲಂಬಿಯಾಗುವ ಆಸೆಯಿದೆ. ದಯವಿಟ್ಟು ನಮ್ಮ ಭವಿಷ್ಯ ರೂಪಿಸಲು ಮತ್ತು ಅಮ್ಮನ ಜೀವ ಉಳಿಸಲು ಯಾರಾದರೂ ನೆರವು ನೀಡಿ” ಎಂದು ಕಣ್ಣೀರು ಹಾಕುತ್ತಾ ಕರುಣಾಜನಕವಾಗಿ ಮನವಿ ಮಾಡಿದ್ದಾಳೆ.
ಮೃತನ ಪತ್ನಿ ನಿರ್ಮಲ ಹಾಗೂ ಮಕ್ಕಳಾದ ಶಾಂತ (ಪ್ರಥಮ ಪಿಯುಸಿ), ಪ್ರೀತಿ (8ನೇ ತರಗತಿ) ಮತ್ತು ಭೂಮಿಕಾ (3ನೇ ತರಗತಿ) ಪ್ರಸ್ತುತ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ಒಂದೆಡೆ ತಂದೆಯನ್ನು ಕಳೆದುಕೊಂಡ ಅನಾಥ ಪ್ರಜ್ಞೆ, ಮತ್ತೊಂದೆಡೆ ತಾಯಿಯ ಭೀಕರ ಅನಾರೋಗ್ಯ ಹಾಗೂ ಬೆಟ್ಟದಷ್ಟಿರುವ ಸಾಲದ ಹೊರೆ ಈ ಕಂದಮ್ಮಗಳನ್ನು ಕತ್ತಲಿಗೆ ತಳ್ಳಿದೆ. ತಮ್ಮ ಮುಂದಿನ ಶಿಕ್ಷಣವನ್ನು ಮುಂದುವರಿಸಲು ಮತ್ತು ತಾಯಿಯ ವೈದ್ಯಕೀಯ ಚಿಕಿತ್ಸೆಗೆ ತಕ್ಷಣವೇ ಆರ್ಥಿಕ ನೆರವು ನೀಡುವಂತೆ ಈ ಬಡ ಕುಟುಂಬವು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವಿ ಮಾಡಿದೆ.
ನೇಕಾರ ಕಾರ್ಮಿಕರ ದಶಕಗಳ ಹೋರಾಟ:
ವಿದ್ಯುತ್ ಚಾಲಿತ ಮಗ್ಗ ಹಾಗೂ ಕೈಮಗ್ಗಗಳ ಮೇಲೆ ನಿರಂತರವಾಗಿ 10 ರಿಂದ 12 ಗಂಟೆಗಳ ಕಾಲ ಶ್ರಮಿಸುವ ಕೂಲಿ ನೇಕಾರರಿಗೆ ಯಾವುದೇ ಸೂಕ್ತ ಸಾಮಾಜಿಕ ಭದ್ರತೆ, ಕನಿಷ್ಠ ವೇತನ ಅಥವಾ ಕಾರ್ಮಿಕ ಕಾಯ್ದೆಯಡಿ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಆಡಳಿತದಲ್ಲಿದ್ದ ಸರ್ಕಾರಗಳು ನೇಕಾರ ಉದ್ಯಮಿಗಳಿಗೆ, ಸಾಲ ಮನ್ನಾ, ವಿದ್ಯುತ್ ಸಬ್ಸಿಡಿ ಹಾಗೂ ಶೇಕಡಾ 3 ರ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತವೆಯೇ ಹೊರತು, ದಿನವಿಡೀ ದುಡಿಯುವ ನೈಜ ‘ಕೂಲಿ ನೇಕಾರರಿಗೆ’ ಯಾವುದೇ ನೇರ ಸೌಲಭ್ಯಗಳು ತಲುಪುತ್ತಿಲ್ಲ.
ಕೂಲಿ ನೇಕಾರರನ್ನು ಅಸಂಘಟಿತ ಕಾರ್ಮಿಕರೆಂದು ಗುರುತಿಸಿ ‘ಪ್ರತ್ಯೇಕ ಕೂಲಿ ನೇಕಾರ ಕಲ್ಯಾಣ ಮಂಡಳಿ’ ಸ್ಥಾಪಿಸಬೇಕು, ಅವರಿಗೂ ಕಟ್ಟಡ ಕಾರ್ಮಿಕರ ಮಾದರಿಯಲ್ಲೇ ಗುರುತಿನ ಚೀಟಿ (ಲೇವರ್ ಕಾರ್ಡ್) ವಿತರಿಸಿ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ನೇಕಾರರ ಸಂಘಟನೆಗಳು ಹಾಗೂ ಕಾರ್ಮಿಕರು ಕಳೆದ ಹಲವಾರು ವರ್ಷಗಳಿಂದ ಸರ್ಕಾರದ ಮಟ್ಟದಲ್ಲಿ, ಬೆಳಗಾವಿ ಅಧಿವೇಶನದ ವೇಳೆಯೂ ಸರಣಿ ಪ್ರತಿಭಟನೆ ಹಾಗೂ ಮನವಿಗಳ ಮೂಲಕ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದಾಗ್ಯೂ, ಸರ್ಕಾರಗಳು ನೇಕಾರ ಮಾಲೀಕರು ಮತ್ತು ಕೂಲಿ ನೇಕಾರರ ನಡುವಿನ ವ್ಯತ್ಯಾಸವನ್ನು ಪರಿಗಣಿಸದೆ ನಿರ್ಲಕ್ಷಿಸುತ್ತಿರುವುದೇ ಇಂತಹ ಸಾಲು ಸಾಲು ಆತ್ಮಹತ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯ ಕಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೂ.10 ಲಕ್ಷ ಪರಿಹಾರಕ್ಕೆ ಒತ್ತಾಯ
ಕಳೆದ ಹತ್ತು ವರ್ಷಗಳಿಂದ ಇಲ್ಲಿನ ವಿದ್ಯುತ್ ಚಾಲಿತ ಮಗ್ಗಗಳಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕೂಲಿ ನೇಕಾರ ಕಾರ್ಮಿಕರಿಗೆ ಇದುವರೆಗೂ ಕೂಲಿ/ಮಜೂರಿ ಹೆಚ್ಚಳವಾಗಿಲ್ಲ. ಸರ್ಕಾರದ ಸೌಲಭ್ಯಗಳಾದ ಕನಿಷ್ಠ ವೇತನ, ಬೋನಸ್, ಪಿಎಫ್ (PF), ಇಎಸ್ಐ (ESI) ಅಥವಾ ಯಾವುದೇ ತರಹದ ಆರ್ಥಿಕ ನೆರವು ಈ ಬಡ ಕಾರ್ಮಿಕರಿಗೆ ಸಿಗುತ್ತಿಲ್ಲ. ಅವರು ಪಡುವ ಕಠಿಣ ಶ್ರಮಕ್ಕೆ ಸಿಗುವ ಅಲ್ಪ ಸಂಬಳವೇ ಅವರಿಗೆ ಏಕೈಕ ಆಸರೆಯಾಗಿದೆ.
ಮತ್ತೊಂದೆಡೆ, ಸರ್ಕಾರದಿಂದ ಸಿಗುವ ಸಾಲ ಸೌಲಭ್ಯ, ಸಾಲ ಮನ್ನಾ, ಸಬ್ಸಿಡಿ, ಕಂಪ್ಯೂಟರ್ ಮಗ್ಗ ಹಾಗೂ ಅತ್ಯಾಧುನಿಕ ರೇಪಿಯರ್ (Rapier) ಮಗ್ಗಗಳ ಯೋಜನೆಗಳ ಎಲ್ಲಾ ಲಾಭಗಳನ್ನು ಕೇವಲ ಮಗ್ಗದ ಮಾಲೀಕ ವರ್ಗವೇ ಪಡೆಯುತ್ತಿದೆ. ಕೂಲಿ ನೇಕಾರರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಾಗಲೂ, ಅದರ ಹೆಸರಿನಲ್ಲಿ ಸಿಗುವ ಸರ್ಕಾರದ ಸೌಲಭ್ಯಗಳನ್ನು ಮಾಲೀಕರೇ ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಸಾಲು ಸಾಲಾಗಿ ಎದುರಾಗುತ್ತಿರುವ ಆರ್ಥಿಕ ಬಿಕ್ಕಟ್ಟು ಹಾಗೂ ನೇಕಾರರ ಸಂಕಷ್ಟಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ದುರಂತಕ್ಕೀಡಾದ ಈ ಬಡ ಕುಟುಂಬಕ್ಕೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಹಾಗೂ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಬೇಕಿದೆ. ತಂದೆಯನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿರುವ ಈ ಬಡ ಕುಟುಂಬದ ಉಳಿವಿಗಾಗಿ, ತಾಯಿಯ ವೈದ್ಯಕೀಯ ಚಿಕಿತ್ಸೆ ಹಾಗೂ ಹೆಣ್ಣುಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಸರ್ಕಾರ ತಕ್ಷಣವೇ 10 ಲಕ್ಷ ರೂಪಾಯಿ ಪರಿಹಾರ ಧನ ಘೋಷಣೆ ಮಾಡಬೇಕು ಎಂದು ನೇಕಾರರ ಕಾರ್ಮಿಕ ಮುಖಂಡರಾದ ರವಿ ಪಾಟೀಲ ಒತ್ತಾಯಿಸಿದ್ದಾರೆ.


