ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಬಳಸಿದ್ದ ‘ಅಟೋಮೇಟೆಡ್ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್’ (AFRS – ಮುಖಚರ್ಯೆ ಗುರುತಿಸುವ ತಂತ್ರಜ್ಞಾನ) ಗಂಭೀರ ಲೋಪದಿಂದ ಕೂಡಿದೆ ಎಂಬ ಅಘಾತಕಾರಿ ಅಂಶವೊಂದು ಬಯಲಾಗಿದೆ.
ಪ್ರತಿಭಟನಾ ಸ್ಥಳದಲ್ಲಿದ್ದರು ಎಂದು ಪೊಲೀಸರು ಗುತಿಸಿದ (ಎಫ್ಆರ್ಎಸ್ ತಂತ್ರಜ್ಞಾನ ಗುರುತಿಸಿ) ಕನಿಷ್ಠ 25 ಜನರು, ಆ ಸಮಯದಲ್ಲಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದರು ಎಂಬುದನ್ನು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ನಡೆಸಿದ ತನಿಖಾ ವರದಿ ಬಹಿರಂಗಪಡಿಸಿದೆ.
ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ನಾಗರಿಕರ ಮೇಲೆ ಇಂತಹ ತಂತ್ರಜ್ಞಾನ ಬಳಸಿ ಕಣ್ಗಾವಲು ಇಡುವುದು ಎಷ್ಟರ ಮಟ್ಟಿಗೆ ಕಾನೂನುಬದ್ಧ? ಇದು ಖಾಸಗಿತನದ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತವಾಗಿ ಸಭೆ ಸೇರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯೇ? ಎಂಬುದನ್ನು ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿರುವ ಬೆನ್ನಲ್ಲೇ ಈ ತನಿಖಾ ವರದಿ ಹೊರಬಿದ್ದಿರುವುದು ತೀವ್ರ ಮಹತ್ವ ಪಡೆದುಕೊಂಡಿದೆ.
ಜುಲೈ 20 ರಿಂದ 26 ರ ನಡುವೆ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನಾ ಸ್ಥಳದಲ್ಲಿ ಅಪರಾಧ ಹಿನ್ನೆಲೆಯುಳ್ಳ 2,873 ಜನರನ್ನು ತಮ್ಮ ಎಫ್ಆರ್ಎಸ್ ತಂತ್ರಜ್ಞಾನದ ಮೂಲಕ ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸರು ಪ್ರತಿಪಾದಿಸಿದ್ದರು. ಆದರೆ, ಪೊಲೀಸ್, ಜೈಲು ಮತ್ತು ನ್ಯಾಯಾಲಯದ ದಾಖಲೆಗಳನ್ನು ಪರಿಶೀಲಿಸಿದಾಗ, ಅದರಲ್ಲಿನ 25 ಜನರು ಆ ಸಮಯದಲ್ಲಿ ದೆಹಲಿಯ ತಿಹಾರ್, ಮಂಡೋಲಿ ಮತ್ತು ರೋಹಿಣಿ ಜೈಲು ಸಂಕೀರ್ಣಗಳಲ್ಲಿ ಬಂಧಿಯಾಗಿದ್ದರು ಎಂಬುದು ಸಾಬೀತಾಗಿದೆ.
ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ವಿದ್ಯಾರ್ಥಿ ಪ್ರತಿಭಟನೆಗೆ ಸಂಬಂಧಿಸಿದಂತೆ ದೇಶಾದ್ಯಂತ ದಾಖಲಾಗಿದ್ದ ಎಫ್ಐಆರ್ಗಳನ್ನು ವಜಾಗೊಳಿಸಿತ್ತು. ಆದರೆ, ದೆಹಲಿ ಪೊಲೀಸರು ಕ್ರಿಮಿನಲ್ ಹಿನ್ನೆಲೆಯುಳ್ಳವರು ಎಂದು ಹೆಸರಿಸಿದ್ದ ಈ 2,873 ಜನರ ವಿರುದ್ಧ ತನಿಖೆ ಮುಂದುವರಿಸಲು ಆಯೋಗಕ್ಕೆ ಕೋರ್ಟ್ ಅನುಮತಿ ನೀಡಿತ್ತು. ಇದೀಗ ಆ ಪಟ್ಟಿಯ ನಿಖರತೆಯೇ ಪ್ರಶ್ನೆಗೊಳಗಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸರು, ಎಫ್ಆರ್ಎಸ್ ನೀಡುವ ಫಲಿತಾಂಶವನ್ನು ಅಂತಿಮ ಆಧಾರವೆಂದು ಪರಿಗಣಿಸುವುದಿಲ್ಲ ಮತ್ತು ಕ್ಷೇತ್ರ ಮಟ್ಟದ ಪರಿಶೀಲನೆ (Field Verification) ನಡೆಸದೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಕೊಲೆ, ಅತ್ಯಾಚಾರ ಆರೋಪಿಗಳೂ ಜೈಲಿನಿಂದಲೇ ಪ್ರತಿಭಟನೆಯಲ್ಲಿ ಭಾಗಿ?
ಪೋಲಿಸರು ನೀಡಿದ ಪಟ್ಟಿಯ ಪೈಕಿ ತೀವ್ರ ಸ್ವರೂಪದ ಅಪರಾಧ ಆರೋಪ ಹೊತ್ತಿದ್ದ 205 ಜನರ ವಿವರಗಳನ್ನು ತನಿಖೆಗೆ ಒಳಪಡಿಸಲಾಗಿತ್ತು. ಇದರಲ್ಲಿ 101 ಕೊಲೆ ಆರೋಪಿಗಳು, 61 ಅತ್ಯಾಚಾರ ಆರೋಪಿಗಳು, 6 ಪೋಕ್ಸೋ (POCSO) ಆರೋಪಿಗಳು ಹಾಗೂ 37 ಕೊಲೆಯತ್ನ ಆರೋಪಿಗಳು ಸೇರಿದ್ದರು.
ತನಿಖೆಯ ಪ್ರಕಾರ, ಕೊಲೆ ಪ್ರಕರಣ ಎದುರಿಸುತ್ತಿರುವ 17 ಜನರು, ಅತ್ಯಾಚಾರ ಪ್ರಕರಣದ 4 ಜನರು ಹಾಗೂ ಕೊಲೆಯತ್ನ ಪ್ರಕರಣದ 4 ಆರೋಪಿಗಳು ಜೈಲಿನಲ್ಲಿದ್ದರೂ, ಪೊಲೀಸರ ಎಫ್ಆರ್ಎಸ್ ಕ್ಯಾಮೆರಾ ಜುಲೈ 24, 25 ಮತ್ತು 26 ರಂದು ಇವರನ್ನು ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ಗುರುತಿಸಿತ್ತು.
ಕೊಲೆ ಆರೋಪಿಗಳ ಪಟ್ಟಿಯಲ್ಲಿ ದಕ್ಷಿಣ ದೆಹಲಿಯ ಜಿಮ್ ಮಾಲೀಕ ನಾದಿರ್ ಶಾ ಕೊಲೆ ಪ್ರಕರಣದ ಆರೋಪಿ ಹಾಗೂ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಮತ್ತು ಹಾಶಿಮ್ ಬಾಬಾ ಗ್ಯಾಂಗ್ನ ಶೂಟರ್ ಆಗಿದ್ದ ‘ಯೋಗೇಶ್ ಯಾದವ್’ ಕೂಡ ಸೇರಿದ್ದ. ಈತ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಈಗಾಗಲೇ ಜೈಲಿನಲ್ಲಿದ್ದರೂ, ಎಫ್ಆರ್ಎಸ್ ಕ್ಯಾಮೆರಾ ಈತನನ್ನು ಜಂತರ್ ಮಂತರ್ನಲ್ಲಿದ್ದನೆಂದು ತೋರಿಸಿತ್ತು. ಉಳಿದಂತೆ ಕಿಶನ್, ಮುಷ್ತಾಕ್, ಅಂಕಿತ್ ಕುಮಾರ್, ಪ್ರತಾಪ್ ಸಿಂಗ್ ಸಿಸೋಡಿಯಾ ಸೇರಿದಂತೆ ಹಲವರು ಜೈಲಿನಲ್ಲಿದ್ದರೂ ಕ್ಯಾಮೆರಾಗೆ ‘ಸಿಕ್ಕಿಬಿದ್ದಿದ್ದರು’! ಪೋಕ್ಸೋ ಮತ್ತು ಅತ್ಯಾಚಾರ ಆರೋಪಿಗಳಾದ ಅಂಕಿತ್, ಸುನಿಲ್ ಕುಮಾರ್, ಹೀರಾ ಸಿಂಗ್, ಕುಂದನ್ ಹಾಗೂ ಕೊಲೆಯತ್ನ ಆರೋಪಿಗಳಾದ ಮಹೇಶ್, ಬಾಬಿ, ಜೀಶಾನ್ ಮುಂತಾದವರೂ ಸಹ ಜೈಲಿನಲ್ಲೇ ಇದ್ದರು.
ಆಗಸ್ಟ್ 17 ರಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ದೆಹಲಿ ಪೊಲೀಸರು ಈ ತಂತ್ರಜ್ಞಾನವನ್ನು ಸಮರ್ಥಿಸಿಕೊಂಡಿದ್ದರು. ತಮ್ಮ ಅಧಿಕೃತ ಪೊಲೀಸ್ ಡೇಟಾಬೇಸ್ನಲ್ಲಿ ಮಾಹಿತಿ ಇರುವವರನ್ನು ಮಾತ್ರ ಈ ಸಿಸ್ಟಮ್ ಗುರುತಿಸಿದೆ ಎಂದು ಅವರು ತಿಳಿಸಿದ್ದರು. ಒಟ್ಟು ಪತ್ತೆಯಾದ 2,873 ಮುಖಗಳಲ್ಲಿ, 2,402 ಮುಖಗಳು ದೆಹಲಿ ಪೊಲೀಸರ ‘ಕ್ರೈಮ್ ಕುಂಡ್ಲಿ’ ಎಂಬ ಬಯೋಮೆಟ್ರಿಕ್ ಡೇಟಾಬೇಸ್ನಿಂದ ಹಾಗೂ ಉಳಿದ 471 ಮುಖಗಳು ಇತರ ಕ್ರಿಮಿನಲ್ ದಾಖಲೆಗಳಿಂದ ಹೊಂದಾಣಿಕೆಯಾಗಿದ್ದವು ಎಂದು ಪೊಲೀಸರು ಹೇಳಿದ್ದರು.
ಪೊಲೀಸರ ಪ್ರಕಾರ, ಈ ತಂತ್ರಜ್ಞಾನವು ಶಾಂತಿಯುತ ಪ್ರತಿಭಟನಾಕಾರರ ಪ್ರೊಫೈಲ್ ತಯಾರಿಸುವುದಿಲ್ಲ. ಕೇವಲ ಗಂಭೀರ ಅಪರಾಧ ಹಿನ್ನೆಲೆಯುಳ್ಳವರನ್ನು ಮಾತ್ರ ಫ್ಲ್ಯಾಗ್ ಮಾಡುತ್ತದೆ. ಆದರೆ, ಜೈಲಿನಲ್ಲಿದ್ದವರನ್ನೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ತೋರಿಸಿರುವುದು ಈ ಸಿಸ್ಟಮ್ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಸಿಪಿಐ(ಎಂ) ರಾಜ್ಯಸಭಾ ಸಂಸದ ಎ.ಎ. ರಹೀಮ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ಆಧಾರದ ಮೇಲೆ ಸುಪ್ರೀಂ ಕೋರ್ಟ್ ಈ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಸಂಸದರ ಪರವಾಗಿ ಹಿರಿಯ ನ್ಯಾಯವಾದಿ ಮೇನಕಾ ಗುರುಸ್ವಾಮಿ ಮತ್ತು ನ್ಯಾಯವಾದಿ ಸುಭಾಷ್ ಚಂದ್ರನ್ ವಾದ ಮಂಡಿಸುತ್ತಿದ್ದಾರೆ.
ಪ್ರತಿಭಟನಾಕಾರರು, ಪತ್ರಕರ್ತರು ಮತ್ತು ಸಾರ್ವಜನಿಕರ ಮೇಲೆ ಸಿಸಿಟಿವಿ, ಡ್ರೋನ್, ಕಣ್ಗಾವಲು ವಾಹನ, ‘ಆಜ್ಞಾಲೆನ್ಸ್’ ಸ್ಮಾರ್ಟ್ ಗ್ಲಾಸ್ ಹಾಗೂ ಎನ್ಸಿಆರ್ಬಿಯ ‘ಅಭಿಜ್ಞಾನ್’ ಆಪ್ಗಳ ಮೂಲಕ ನಿರಂತರವಾಗಿ ಬಯೋಮೆಟ್ರಿಕ್ ಕಣ್ಗಾವಲು ಇಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
“ಜನರ ಅನುಮತಿಯಿಲ್ಲದೆ ಮುಖ ಮತ್ತು ಬಯೋಮೆಟ್ರಿಕ್ ದತ್ತಾಂಶವನ್ನು ಸಂಗ್ರಹಿಸಲಾಗುತ್ತಿದೆ. ಈ ದತ್ತಾಂಶವನ್ನು ಆದಿತ್ಯ ಇನ್ಫೋಟೆಕ್ ಮತ್ತು ಡೈಮೆನ್ಷನ್ ಎನ್ಎಕ್ಸ್ಜಿ ಯಂತಹ ಖಾಸಗಿ ಕಂಪನಿಗಳು ಯಾವುದೇ ಕಾನೂನು ಚೌಕಟ್ಟಿಲ್ಲದೆ ನಿರ್ವಹಿಸುತ್ತಿವೆ. ಇದು ಡಿಪಿಡಿಪಿ (DPDP) ಕಾಯ್ದೆ ಮತ್ತು ಸಿಆರ್ಪಿಸಿ ನಿಯಮಗಳ ಉಲ್ಲಂಘನೆ” ಎಂದು ಮೇನಕಾ ಗುರುಸ್ವಾಮಿ ಕೋರ್ಟ್ನಲ್ಲಿ ವಾದಿಸಿದ್ದಾರೆ.
ಸರ್ಕಾರದ ಸಮರ್ಥನೆ ಮತ್ತು ತಾಂತ್ರಿಕ ಲೋಪಗಳು
ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಪ್ರತಿಭಟನಾಕಾರರ ಮೇಲೆ ಬೇಕಾಬಿಟ್ಟಿ ಕಣ್ಗಾವಲು ಇಡಲಾಗುತ್ತಿಲ್ಲ. ಗಂಭೀರ ಅಪರಾಧದ ಹಿನ್ನೆಲೆಯುಳ್ಳವರನ್ನು ಮಾತ್ರ ಸಿಸ್ಟಮ್ ಗುರುತಿಸುತ್ತದೆ. ತಕ್ಷಣಕ್ಕೆ ಯಾರ ಮೇಲೆಯೂ ಕ್ರಮ ಕೈಗೊಳ್ಳುವುದಿಲ್ಲ, ಸ್ಥಳೀಯ ಮಟ್ಟದ ತನಿಖೆಯ ನಂತರವೇ ಮುಂದಿನ ಹಂತ” ಎಂದು ಪ್ರತಿಪಾದಿಸಿದರು.
ಸಾಮಾನ್ಯವಾಗಿ ಎಫ್ಆರ್ಎಸ್ ತಂತ್ರಜ್ಞಾನವು ಶೇಕಡಾ 80 ರಷ್ಟು ಸಾಮ್ಯತೆ (Accuracy) ಕಂಡುಬಂದರೆ ಧನಾತ್ಮಕ ಎಂದು ಗುರುತಿಸುತ್ತದೆ. ಆದರೆ, ಬೆಳಕಿನ ಅಭಾವ, ಕ್ಯಾಮೆರಾ ಕೋನ, ಮಾಸ್ಕ್ ಧರಿಸಿರುವುದು ಹಾಗೂ ಅಪೂರ್ಣ ದತ್ತಾಂಶಗಳಿಂದಾಗಿ ಇದು ಶೇಕಡಾ 100 ರಷ್ಟು ನಿಖರವಾಗಿರುವುದಿಲ್ಲ.
ಮತ್ತೊಂದೆಡೆ, ಹಿರಿಯ ನ್ಯಾಯವಾದಿ ವೃಂದಾ ಗ್ರೋವರ್ ಅವರು ವಾದ ಮಂಡಿಸಿ, ಶಾಂತಿಯುತ ಪ್ರತಿಭಟನಾಕಾರರ ಮೇಲಿನ ಎಫ್ಐಆರ್ಗಳನ್ನು ರದ್ದುಗೊಳಿಸಬೇಕು ಮತ್ತು ಉನ್ನತ ಮಟ್ಟದ ಸಮಿತಿಯಲ್ಲಿ ಮಹಿಳಾ ಅಧಿಕಾರಿಗಳನ್ನು ಒಳಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸುಪ್ರೀಂ ಕೋರ್ಟ್ನಿಂದ ಪ್ರಮುಖ ನಿರ್ಧಾರದ ನಿರೀಕ್ಷೆ
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಪೀಠವು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸ್ ಕಮಿಷನರ್ಗೆ ನೋಟಿಸ್ ಜಾರಿ ಮಾಡಿದೆ. ಸಂಗ್ರಹಿಸಿದ ಎಲ್ಲಾ ದತ್ತಾಂಶಗಳನ್ನು ಸುರಕ್ಷಿತವಾಗಿಡಲು ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸದಂತೆ ಆದೇಶಿಸಿದೆ.
2017ರ ‘ಕೆ.ಎಸ್. ಪುಟ್ಟಸ್ವಾಮಿ’ ಐತಿಹಾಸಿಕ ತೀರ್ಪಿನಂತೆ ‘ಖಾಸಗಿತನದ ಹಕ್ಕು’ ಮೂಲಭೂತ ಹಕ್ಕಾಗಿದೆ. ಯಾವುದೇ ಕಣ್ಗಾವಲು ಪ್ರಕ್ರಿಯೆಗೆ ನಿರ್ದಿಷ್ಟ ಕಾನೂನಿನ ಬೆಂಬಲ ಹಾಗೂ ಸ್ಪಷ್ಟ ಉದ್ದೇಶವಿರಬೇಕು. ಪ್ರಸ್ತುತ ಭಾರತದಲ್ಲಿ ಪೊಲೀಸರು ಎಫ್ಆರ್ಎಸ್ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಪ್ರತ್ಯೇಕ ಮತ್ತು ಸ್ಪಷ್ಟ ಕಾನೂನುಗಳಿಲ್ಲ.
ಜೈಲಿನಲ್ಲಿದ್ದ 25 ಜನರನ್ನು ಪ್ರತಿಭಟನೆಯಲ್ಲಿದ್ದರೆಂದು ತೋರಿಸಿರುವ ಈ ವರದಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ದುರ್ಬಳಕೆ ಹಾಗೂ ನಾಗರಿಕರ ಖಾಸಗಿತನದ ಮೇಲಿನ ದಾಳಿಯ ಕುರಿತಾದ ಚರ್ಚೆಯನ್ನು ಮತ್ತಷ್ಟು ಮುನ್ನಲೆಗೆ ತಂದಿದೆ.
Source: The Indian Express


