ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್ಐಆರ್) ಅಡಿಯಲ್ಲಿ, ಪಂಜಾಬ್ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು (ಸೆ.8) ತಿಳಿಸಿದ್ದಾರೆ.
ಎಎಪಿ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, “ಸೂಕ್ತ ಪ್ರಕ್ರಿಯೆಯನ್ನು ಅನುಸರಿಸದೆ ರಾಜೇಂದ್ರ ನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಚಡ್ಡಾ ಅವರ ಹೆಸರನ್ನು ಸೇರಿಸಲಾಗಿದೆ” ಎಂದು ಆರೋಪಿಸಿದ್ದಾರೆ.
ನವೀಕರಣ ಪ್ರಕ್ರಿಯೆಯ ಮೂಲಕ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಅವರ ಹಿಂದಿನ ಪಕ್ಷವಾದ ಎಎಪಿ ಅವರನ್ನು ರಾಜ್ಯಸಭೆಗೆ ಕಳುಹಿಸಿದ್ದ ಪಂಜಾಬ್ನ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ.
“ಮಂಗಳವಾರದವರೆಗೆ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗಾಗಿ ಒಟ್ಟು 700 ಅರ್ಜಿಗಳನ್ನು ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್ಒ) ಅನುಮೋದಿಸಿದ್ದಾರೆ. ಅವುಗಳಲ್ಲಿ ಚಡ್ಡಾ ಅವರ ಹೆಸರೂ ಇತ್ತು” ಎಂದು ದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಸ್ಐಆರ್ ಸಿದ್ಧತೆಗಾಗಿ ದೆಹಲಿಯ ಮತದಾರರ ಪಟ್ಟಿಯನ್ನು ಜೂನ್ 16ರಂದು ತಡೆಹಿಡಿಯಲಾಗಿತ್ತು. ಆಗಸ್ಟ್ 31ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸುವವರೆಗೆ ಅದೇ ಸ್ಥಿತಿಯಲ್ಲಿತ್ತು ಎಂದು ದೆಹಲಿ ಸಿಇಒ ಹೇಳಿಕೆ ತಿಳಿಸಿದೆ.
ಈ ಅವಧಿಯಲ್ಲಿ, ಹೊಸ ಮತದಾರರಿಗಾಗಿ (ನಮೂನೆ 7 ಮತ್ತು 8ರ ಜೊತೆಗೆ) ಸುಮಾರು 2.14 ಲಕ್ಷ ‘ನಮೂನೆ-6’ ಅರ್ಜಿಗಳನ್ನು ಸಲ್ಲಿಸಲಾಗಿದೆ. ಅಲ್ಲದೆ, ಆಕ್ಷೇಪಣೆಗಳ ಸಲ್ಲಿಕೆಯ ಅವಧಿಯಲ್ಲಿ, ನವೆಂಬರ್ 4ರಂದು ಪ್ರಕಟವಾಗಲಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಲು ಎಂಟು ದಿನಗಳಲ್ಲಿ (ಸೆಪ್ಟೆಂಬರ್ 7ರವರೆಗೆ) ಮತದಾರರು ಹೆಚ್ಚುವರಿಯಾಗಿ 25,011 ಜನರು ‘ನಮೂನೆ-6’ಗಳನ್ನು ಸಲ್ಲಿಸಿದ್ದಾರೆ ಎಂದು ಆಯೋಗ ಹೇಳಿದೆ.
ಎಸ್ಐಆರ್-ಪೂರ್ವ ಅವಧಿಯಲ್ಲಿ ಅಥವಾ ಆಕ್ಷೇಪಣೆಗಳ ಸಲ್ಲಿಕೆಯ ಅವಧಿಯಲ್ಲಿ ಹೆಸರು ಸೇರ್ಪಡೆಗಾಗಿ ಮತದಾರರು ಸಲ್ಲಿಸಿದ ಎಲ್ಲಾ ನಮೂನೆ-6 ಅರ್ಜಿಗಳು, ನಮೂನೆ-7 ಮತ್ತು 8ರೊಂದಿಗೆ ಪರಿಶೀಲನೆಯ ಹಂತದಲ್ಲಿವೆ. ಅರ್ಜಿಗಳು ಅನುಮೋದನೆಗೊಂಡ ನಂತರ, ಸಂದರ್ಭಾನುಸಾರ ಸೇರ್ಪಡೆ, ಅಳಿಸುವಿಕೆ ಮತ್ತು ಮಾರ್ಪಾಡುಗಳು ಮತದಾರರ ಡೇಟಾಬೇಸ್ನಲ್ಲಿ ಪ್ರತಿಫಲಿಸುತ್ತವೆ.
ಹೊಸ ಮತದಾರರ ಸೇರ್ಪಡೆಗಳನ್ನು ನವೆಂಬರ್ 4ರಂದು ಪೂರಕ ಪಟ್ಟಿಯಾಗಿ ಪ್ರಕಟಿಸಲಾಗುವುದು ಎಂದು ದೆಹಲಿ ಸಿಇಒ ಕಚೇರಿ ತಿಳಿಸಿದೆ.
“ಸಂಬಂಧಪಟ್ಟ ಮತಗಟ್ಟೆ ವ್ಯಾಪ್ತಿಯ ಪಟ್ಟಿಯು 746 ಮತದಾರರನ್ನು ತೋರಿಸುತ್ತಿರುವಾಗ ಚಡ್ಡಾ ಅವರ ಹೆಸರನ್ನು ದೆಹಲಿಯ ಕರಡು ಮತದಾರರ ಪಟ್ಟಿಗೆ ಹೇಗೆ ಸೇರಿಸಲಾಯಿತು” ಎಂದು ಆಮ್ ಆದ್ಮಿ ಪಕ್ಷ ಪ್ರಶ್ನಿಸಿದ್ದು, ಅನುಸರಿಸಿದ ಪ್ರಕ್ರಿಯೆಯ ಬಗ್ಗೆ ಚುನಾವಣಾ ಆಯೋಗದಿಂದ ವಿವರಣೆ ಕೋರಿದೆ.
“ಆಗಸ್ಟ್ 31ರಂದು ಪ್ರಕಟವಾದ ಕರಡು ಪಟ್ಟಿಯು 746 ಮತದಾರರನ್ನು ಹೊಂದಿದ್ದರೂ, ರಾಜೇಂದ್ರ ನಗರ ಮತದಾರರ ಪಟ್ಟಿಯಲ್ಲಿ ಚಡ್ಡಾ ಅವರ ಹೆಸರು 747ನೇ ಮತದಾರರಾಗಿ ಕಾಣಿಸಿಕೊಂಡಿದೆ” ಎಂದು ಎಎಪಿ ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಹೇಳಿದ್ದಾರೆ.
“ಮತದಾರರ ಪಟ್ಟಿಯ ಕ್ರಮಸಂಖ್ಯೆ 747ರಲ್ಲಿ 37 ವರ್ಷದ ಸುನಿಲ್ ಚಡ್ಡಾ ಅವರ ಮಗ ರಾಘವ್ ಚಡ್ಡಾ ಅವರ ಹೆಸರನ್ನು ದಾಖಲು ಮಾಡಲಾಗಿದೆ” ಎಂದು ಭಾರದ್ವಾಜ್ ತಿಳಿಸಿದ್ದಾರೆ.
“ಈ ಹೆಚ್ಚುವರಿ ಸೇರ್ಪಡೆ ಹೇಗೆ ಮಾಡಲಾಯಿತು” ಎಂದು ಪ್ರಶ್ನಿಸಿದ ಅವರು, “ಚಡ್ಡಾ ಅವರ ಹೆಸರನ್ನು ಸೇರಿಸಲು ಅನುಸರಿಸಿದ ಕಾರ್ಯವಿಧಾನವನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು” ಎಂದು ಒತ್ತಾಯಿಸಿದರು.
ಎಎಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚಡ್ಡಾ, “ನಾನು ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷವನ್ನು ಕಾಡುತ್ತಿರುವಂತೆ ತೋರುತ್ತಿದೆ… ನಾನು ಭ್ರಷ್ಟ ಆಮ್ ಆದ್ಮಿ ಪಕ್ಷವನ್ನು ತೊರೆದಾಗಿನಿಂದ, ಅದರ ನಾಯಕತ್ವಕ್ಕೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರು ಈಗ ತಾನೇ ಕೈಬಿಡಲ್ಪಟ್ಟ ಕಹಿ ಅನುಭವದಲ್ಲಿರುವ ಮಾಜಿ ಪ್ರೇಮಿಯಂತೆ ವರ್ತಿಸುತ್ತಿದ್ದಾರೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಂದುವರಿದು, “ಸತ್ಯಾಂಶಗಳು ಸರಳ ಮತ್ತು ನೇರವಾಗಿವೆ. ನಾನು ಅನ್ವಯವಾಗುವ ಎಲ್ಲಾ ಇಸಿಐ ಮಾರ್ಗಸೂಚಿಗಳು ಮತ್ತು ಕಾರ್ಯವಿಧಾನಗಳನ್ನು ಅನುಸರಿಸಿದ್ದೇನೆ. ನಿಗದಿತ ಪರಿಹಾರಗಳನ್ನು ಪಡೆದುಕೊಂಡಿದ್ದೇನೆ” ಎಂದು ಹೇಳಿದ್ದಾರೆ.


