ತೆಲಂಗಾಣದ ಸಿದ್ಧಾಪೇಟೆ ಜಿಲ್ಲೆಯ ಎರ್ರವಳ್ಳಿಯಲ್ಲಿರುವ ಬಿಆರ್ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರ ಫಾರ್ಮ್ ಹೌಸ್ ಬಳಿ ದಲಿತ ಮುಖಂಡರು ಮತ್ತು ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ನಂತರ, ಬಿಆರ್ಎಸ್ ನಾಯಕರು ನಡೆಸಿದ ಶುದ್ಧೀಕರಣ ವಿಧಿಯು ವಿವಾದಕ್ಕೆ ಕಾರಣವಾಗಿದೆ.
ದಲಿತ ಸಮುದಾಯದವರಾದ ವಿಧಾನಸಭೆ ಸ್ಪೀಕರ್ ಗದ್ದಮ್ ಪ್ರಸಾದ್ ಕುಮಾರ್ ವಿರುದ್ಧ ಬಿಆರ್ಎಸ್ ಎಂಎಲ್ಸಿಗಳು ಬಳಸಿದ್ದಾರೆನ್ನಲಾದ ನಿಂದನಾತ್ಮಕ ಭಾಷೆಯನ್ನು ಖಂಡಿಸಿ, ಬಿಆರ್ಎಸ್ ವಿರುದ್ಧ ದಲಿತರು ‘ಡಪ್ಪು ಯಾತ್ರೆ’ ನಡೆಸಿದ್ದರು. ಈ ಯಾತ್ರೆ ನಡೆದ ರಸ್ತೆಗಳನ್ನು ಬಿಆರ್ಎಸ್ ನಾಯಕರು ನೀರಿನಿಂದ ತೊಳೆದು, ಅರಿಶಿನ ನೀರನ್ನು ಸಿಂಪಡಿಸುವ ಮೂಲಕ ಶುದ್ಧೀಕರಣ ಮಾಡಿದ್ದಾರೆ.
ಪ್ರತಿಭಟನೆ ನಡೆದ ಕೆಲವೇ ಗಂಟೆಗಳಲ್ಲಿ, ಮಂಗಳವಾರ ಮತ್ತು ಬುಧವಾರ ಎರ್ರವಳ್ಳಿ ಬಳಿ ಮಹಿಳೆಯರು ಸೇರಿದಂತೆ ಬಿಆರ್ಎಸ್ ನಾಯಕರು ಈ ಶುದ್ಧೀಕರಣ ವಿಧಿಯನ್ನು ನಡೆಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಇದರ ವೀಡಿಯೊಗಳು ವೈರಲ್ ಆದ ನಂತರ, ಮಾಲ ಮತ್ತು ಮಾದಿಗ ಪರಿಶಿಷ್ಟ ಜಾತಿ ಸಂಘಟನೆಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದವು. ವಿರೋಧಗಳು ಹೆಚ್ಚುತ್ತಿದ್ದಂತೆ, ಮಾಜಿ ಮುಖ್ಯಮಂತ್ರಿಯವರ ಫಾರ್ಮ್ ಹೌಸ್ಗೆ ಹೋಗುವ ದಾರಿಯಲ್ಲಿ ಬಿಆರ್ಎಸ್ ನಾಯಕರು ಈ ಶುದ್ಧೀಕರಣ ಕಾರ್ಯವನ್ನು ನಿಲ್ಲಿಸಿದರು.
ಕಾಂಗ್ರೆಸ್ ಮತ್ತು ಬಿಆರ್ಎಸ್ ನಡುವೆ ವಾಕ್ಸಮರ
ತಮ್ಮ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಬಿಆರ್ಎಸ್ ಬೆಂಬಲಿಗರು ಬುಧವಾರ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಪ್ರತಿಕೃತಿಯನ್ನು ದಹಿಸಿ, ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧದ ಈ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ ಅವರು, “ಕೆಸಿಆರ್ ಜಿಂದಾಬಾದ್” ಎಂದು ಘೋಷಣೆಗಳನ್ನು ಕೂಗಿದರು.
ಕಾಂಗ್ರೆಸ್ ನಾಯಕ ಮತ್ತು ಮಾದಿಗ ಮಾಲ ಸಂಘಗಳ ಜೆಎಸಿ ಅಧ್ಯಕ್ಷ ದೇವನಿ ಸತೀಶ್ ಮಾದಿಗ ಮಾತನಾಡಿ, ಚಂದ್ರಶೇಖರ ರಾವ್ ಮತ್ತು ಅವರ ಬಿಆರ್ಎಸ್ ಕಾರ್ಯಕರ್ತರು ಮಾದಿಗ ಹಾಗೂ ಮಾಲ ಸಮುದಾಯದವರ ಮೇಲೆ ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿದರು.
ವರದರಾಜಪಲ್ಲಿ ಗ್ರಾಮದಿಂದ ಕೆಸಿಆರ್ ಅವರ ಫಾರ್ಮ್ ಹೌಸ್ವರೆಗೆ ಮಾದಿಗ ಮತ್ತು ಮಾಲ ಸಮುದಾಯದ ಸದಸ್ಯರು ‘ಡಪ್ಪು ಯಾತ್ರೆ’ ನಡೆಸಿದ ನಂತರ, ಫಾರ್ಮ್ ಹೌಸ್ ರಸ್ತೆ “ಕಲುಷಿತಗೊಂಡಿದೆ” ಎಂದು ಬಿಆರ್ಎಸ್ ಕಾರ್ಯಕರ್ತರು ವಾದಿಸಿ, ಅದರ ಮೇಲೆ ಅರಿಶಿನ ನೀರನ್ನು ಸಿಂಪಡಿಸುವ ಮೂಲಕ ಶುದ್ಧೀಕರಣ ವಿಧಿ ನಡೆಸಿದ್ದಾರೆ ಎಂದು ಅವರು ತಿಳಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಕೆಸಿಆರ್ ಮತ್ತು ಬಿಆರ್ಎಸ್ ಕಾರ್ಯಕರ್ತರ ವಿರುದ್ಧ ಸೈಫಾಬಾದ್ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್ಐಆರ್ ದಾಖಲಾಗಿದೆ ಎಂದು ಸತೀಶ್ ತಿಳಿಸಿದರು. ಅಲ್ಲದೆ, ಕೆಸಿಆರ್ ಸ್ಪರ್ಶಿಸಿರುವ 125 ಅಡಿ ಎತ್ತರದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸೆಪ್ಟೆಂಬರ್ 10 ರಂದು ಸಾಂಕೇತಿಕವಾಗಿ ಹಾಲಿನಿಂದ ಶುದ್ಧೀಕರಿಸಲಾಗುವುದು ಎಂದು ಹೇಳಿದರು. ಅಂಬೇಡ್ಕರ್ ಪ್ರತಿಮೆಯ ಬಳಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಕ್ರೇನ್ ಒದಗಿಸುವಂತೆ ಅವರು ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಮನವಿ ಮಾಡಿದರು.


