ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, “ತಮ್ಮ ಆಹಾರ ಪದ್ಧತಿ ಮತ್ತು ಧಾರ್ಮಿಕ ಆಚರಣೆಗಳನ್ನು ಆಯ್ಕೆ ಮಾಡಿಕೊಳ್ಳಲು ಜನರಿಗೆ ಸಾಂವಿಧಾನಿಕ ಸ್ವಾತಂತ್ರ್ಯವಿದೆ” ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದು ಶನಿವಾರ ಹಮ್ಮಿಕೊಂಡಿದ್ದ ಶೃಂಗಸಭೆಯಲ್ಲಿ ಮಾತನಾಡಿದ ಅವರು, “ಜನರು ತಮಗೆ ಇಷ್ಟವಾದ ಧಾರ್ಮಿಕ ಆಚರಣೆಗಳನ್ನು ಅನುಸರಿಸಲು ಸ್ವತಂತ್ರರಾಗಿದ್ದಾರೆ, ಇಂತಹ ವೈಯಕ್ತಿಕ ನಿರ್ಧಾರಗಳಿಗಾಗಿ ಯಾರೂ ಕೂಡ ನಿಂದನೆಗೆ ಒಳಗಾಗಬಾರದು” ಎಂದು ತಿಳಿಸಿದರು.
“ವಿವಿಧ ನಂಬಿಕೆಗಳ ಧರ್ಮಗುರುಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಅವುಗಳನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದು ಜನರಿಗೆ ಬಿಟ್ಟ ವಿಚಾರ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ನಮ್ಮ ಮಹಾನ್ ಸಂವಿಧಾನವು ನಮಗೆ ಈ ಸ್ವಾತಂತ್ರ್ಯವನ್ನು ನೀಡಿದೆ” ಎಂದು ಅವರು ಹೇಳಿದರು.
ತಮ್ಮದೇ ಆಹಾರ ಪದ್ಧತಿಯನ್ನು ಉಲ್ಲೇಖಿಸಿದ ಅಧಿಕಾರಿ, ಗುರುವಾರದಂದು ಕೌಶಿಕಿ ಅಮಾವಾಸ್ಯೆಯ ಸಂದರ್ಭದಲ್ಲಿ ಇಲ್ಲಿನ ಕಾಳಿಘಾಟ್ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಮೀನಿನ ತಲೆ ಮತ್ತು ಬಾಸಂತಿ ಪುಲಾವೊ ಒಳಗೊಂಡ ‘ಪ್ರಸಾದ’ವನ್ನು ಸ್ವೀಕರಿಸಿರುವುದಾಗಿ ತಿಳಿಸಿದರು.
“ಕೌಶಿಕಿ ಅಮಾವಾಸ್ಯೆಯ ದಿನದಂದು ನಾನು ಕಾಳಿಘಾಟ್ನಲ್ಲಿ ಮಾ ಕಾಳಿಗೆ ಪೂಜೆ ಸಲ್ಲಿಸಿದೆ. ಆ ಬಳಿಕ, ದೇವಿಗೆ ಅರ್ಪಿಸಲಾಗಿದ್ದ ಮೀನು ಹಾಗೂ ಬಾಸಂತಿ ಪುಲಾವೊ ಸೇವಿಸಿದೆ” ಎಂದು ಅವರು ಹೇಳಿದರು.
ರಾಧಾಷ್ಟಮಿಯ ಸಂದರ್ಭದಲ್ಲಿ ಸೆಪ್ಟೆಂಬರ್ 19 ರಂದು ಬಾಗ್ಬಜಾರ್ ಗೌಡೀಯ ಮಠಕ್ಕೆ ಭೇಟಿ ನೀಡಿ, ಅಲ್ಲಿ ‘ಸಾತ್ವಿಕ’ ಆಹಾರ ಸೇವಿಸುವುದಾಗಿಯೂ ಮುಖ್ಯಮಂತ್ರಿ ತಿಳಿಸಿದರು.
“ರಾಧಾಷ್ಟಮಿಯಂದು ಬಾಗ್ಬಜಾರ್ ಗೌಡೀಯ ಮಠದಿಂದ ನನಗೆ ಆಹ್ವಾನ ಬಂದಿದ್ದು, ಅಲ್ಲಿಗೆ ತೆರಳಿ ‘ಸಾತ್ವಿಕ’ ಆಹಾರ ಸ್ವೀಕರಿಸುತ್ತೇನೆ” ಎಂದರು.
ಜನರು ವಿವಿಧ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿದ ಅಧಿಕಾರಿ, ವ್ಯಕ್ತಿಗಳ ಆಹಾರ ಆಯ್ಕೆಗಳನ್ನು ಗುರಿಯಾಗಿಸಿ ಅಥವಾ ನಿಂದಿಸುವ ಪದ್ಧತಿಯನ್ನು ಪ್ರಶ್ನಿಸಿದರು.
“ನಾವು ವೈಷ್ಣವ ಸಂಪ್ರದಾಯಗಳನ್ನು ಅಥವಾ ಇತರೆ ಸಂಪ್ರದಾಯಗಳನ್ನು ಅನುಸರಿಸುವ ಹಕ್ಕನ್ನು ಹೊಂದಿದ್ದೇವೆ. ಈ ಹಕ್ಕನ್ನು ನಮ್ಮ ಧರ್ಮ ಹಾಗೂ ಸಂವಿಧಾನವು ನಮಗೆ ನೀಡಿದೆ. ಆದರೆ ಯಾರಿಗಾದರೂ ಗುರಿಯಾಗಿಸಿ, ಅವರ ಸುತ್ತ ವೀಡಿಯೊಗಳನ್ನು ಮಾಡಿ, ಅಸಭ್ಯವಾಗಿ ಬೈಯುವುದು ಯಾವ ರೀತಿಯ ಹಕ್ಕು ಅಥವಾ ಸ್ವಾತಂತ್ರ್ಯ” ಎಂದು ಅವರು ಪ್ರಶ್ನಿಸಿದರು.
ದುರ್ಗಾ ಪೂಜೆಯ ಸಂದರ್ಭದಲ್ಲಿ ಮಾಂಸಾಹಾರವನ್ನು “ಅಪವಿತ್ರ” ಎಂದು ಬಣ್ಣಿಸಿ, ಅದರ ಸೇವನೆಯ ಮೇಲೆ ನಿರ್ಬಂಧ ವಿಧಿಸಬೇಕು ಎಂದು ಬಾಗೇಶ್ವರ ಬಾಬಾ ನೀಡಿದ್ದ ಹೇಳಿಕೆಗಳ ಸುತ್ತ ವಿವಾದ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಈ ಹೇಳಿಕೆ ಬಂದಿದೆ.


