ಜಂತರ್ ಮಂತರ್ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್ಸ್ಟಾಗ್ರಾಮ್ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ, ಪುಂಡಾಟಿಕೆಗಳು ಮಿತಿಮೀರಿದ್ದವು ಎಂಬ ಆರೋಪಗಳಿದ್ದರೂ, ಅದನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವಲ್ಲಿ ಕಾಂಗ್ರೆಸ್ ಬೆಂಬಲಿತ ಎನ್ಎಸ್ಯುಐ (NSUI) ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ವಿಫಲವಾಗಿರುವುದು ಪ್ರಜಾಸತ್ತಾತ್ಮಕ ಚಿಂತಕರಲ್ಲಿ ತೀವ್ರ ಕಳವಳ ಮೂಡಿಸಿದೆ.
ದೆಹಲಿ ವಿವಿ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರ ‘ಚಾತ್ರೋಂ ಕಿ ಗೂಂಜ್’ ಕಾರ್ಯಕ್ರಮಕ್ಕೆ ಸಿಕ್ಕ ಯುವಜನರ ಬೆಂಬಲ ಕಾಂಗ್ರೆಸ್ನಲ್ಲಿ ಹೊಸ ಭರವಸೆ ಮೂಡಿಸಿತ್ತು. ರಾಹುಲ್ ಅವರ ವೈಯಕ್ತಿಕ ಜನಪ್ರಿಯತೆ ಎಷ್ಟೇ ಇದ್ದರೂ, ಅದು ಪಕ್ಷದ ಒಳಗಿರುವ ತಂಟೆ-ತಕರಾರು ಮತ್ತು ಗೊಂದಲಗಳನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬುದನ್ನು ದೆಹಲಿ ವಿವಿ ಚುನಾವಣೆ ಫಲಿತಾಂಶ ಸ್ಪಷ್ಟಪಡಿಸಿದೆ.
ಶನಿವಾರ (ಸೆಪ್ಟೆಂಬರ್ 19, 2026) ಪ್ರಕಟಗೊಂಡ ಫಲಿತಾಂಶದಲ್ಲಿ ಕಾಂಗ್ರೆಸ್ನ ವಿದ್ಯಾರ್ಥಿ ಘಟಕವಾದ ‘ಎನ್ಎಸ್ಯುಐ’ (NSUI) ಸ್ಪರ್ಧಿಸಿದ್ದ ನಾಲ್ಕೂ ಹುದ್ದೆಗಳಲ್ಲಿ ಶೋಚನೀಯ ಸೋಲು ಕಂಡಿದೆ. ಬಿಜೆಪಿಯ ಆರ್ಎಸ್ಎಸ್ ಬೆಂಬಲಿತ ಘಟಕವಾದ ‘ಎಬಿವಿಪಿ’ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಉಪಾಧ್ಯಕ್ಷ ಹುದ್ದೆಯನ್ನು, ಎನ್ಎಸ್ಯುಐ ಟಿಕೆಟ್ ಸಿಗದೆ ಬಂಡಾಯ ಎದ್ದು ಪಕ್ಷೇತರವಾಗಿ ಸ್ಪರ್ಧಿಸಿದ್ದ ದೀಪಾಂಶು ಶೋಕೀನ್ ಬೃಹತ್ ಅಂತರದಿಂದ ಗೆದ್ದುಕೊಂಡಿದ್ದಾರೆ.
ಇಂದೋರ್ನ ಭಾರತ್ ಜೋಡೋ ಮೈದಾನದಲ್ಲಿ ರಾಹುಲ್ ಗಾಂಧಿ ಅವರು ‘ಚಾತ್ರೋಂ ಕಿ ಗೂಂಜ್’ ರ್ಯಾಲಿಯ 5ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡುವ ಕೆಲವೇ ಗಂಟೆಗಳ ಮೊದಲು ಮತ್ತು ‘ಕಾಕ್ರೋಚ್ ಜನತಾ ಪಾರ್ಟಿ’ ಸೇರಿದಂತೆ ವಿಪಕ್ಷಗಳು ಶಿಕ್ಷಣ ವ್ಯವಸ್ಥೆಯ ಅಕ್ರಮಗಳ ವಿರುದ್ಧ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಂದರ್ಭದಲ್ಲೆ ಈ ಶೋಚನೀಯ ಸೋಲು ಎದುರಾಗಿರುವುದು ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದೆ.
ಆದರೆ, 2014ರ ನಂತರ ಎಬಿವಿಪಿ ಸಾಧಿಸುತ್ತಿದ್ದ ಏಕಪಕ್ಷೀಯ ಗೆಲುವಿಗೆ ಹೋಲಿಸಿದರೆ, ಈ ಬಾರಿಯ ಚುನಾವಣೆಯ ಪ್ರತಿ ಹಂದಲ್ಲೂ ಕಠಿಣ ಪೈಪೋಟಿ ಕಂಡುಬಂದಿದೆ. ಒಟ್ಟು 60,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಲಾಯಿಸಿದ ಮತಗಳನ್ನು ಗಮನಿಸಿದರೆ ಕೇಸರಿ ಪಡೆಯ ವಿರುದ್ಧ ತೀವ್ರ ಆಕ್ರೋಶವಿತ್ತು ಎಂಬುದು ಸ್ಪಷ್ಟವಾಗುತ್ತದೆ. ಹೀಗಿದ್ದೂ, ಬಿಜೆಪಿಯ ವಿರುದ್ಧವಿದ್ದ ಈ ತೀವ್ರ ಅಲೆಯ ಲಾಭವನ್ನು ಪಡೆಯಲು ಎನ್ಎಸ್ಯುಐ ಏಕೆ ವಿಫಲವಾಯಿತು ಎಂಬುದಕ್ಕೆ ಪ್ರಚಾರ ಕಾರ್ಯತಂತ್ರ ರೂಪಿಸಿದ ಕಾಂಗ್ರೆಸ್ ಪದಾಧಿಕಾರಿಗಳೇ ಹೈಕಮಾಂಡ್ಗೆ ಉತ್ತರಿಸಬೇಕಿದೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಈ ಸೋಲಿಗೆ “ಅಭ್ಯರ್ಥಿಗಳ ಆಯ್ಕೆ ಮಾಡಿದ ನಾಯಕರೇ” ನೇರ ಹೊಣೆ. ಎನ್ಎಸ್ಯುಐ ರಾಷ್ಟ್ರೀಯ ಪದಾಧಿಕಾರಿಯೊಬ್ಬರು ಬಹಿರಂಗಪಡಿಸಿರುವಂತೆ, 13,000ಕ್ಕೂ ಹೆಚ್ಚು ಮತಗಳ ದಾಖಲೆ ಅಂತರದಿಂದ ಗೆದ್ದ ದೀಪಾಂಶು ಶೋಕೀನ್ ಮತ್ತು ಕಾರ್ಯದರ್ಶಿ ಸ್ಥಾನದಲ್ಲಿ ಎರಡನೇ ಸ್ಥಾನ ಪಡೆದ ಸಮಾಜವಾದಿ ಛಾತ್ರ ಸಭಾ ಅಭ್ಯರ್ಥಿ ವಿಶೇಶ್ ಯಾದವ್ ಇಬ್ಬರೂ ಎನ್ಎಸ್ಯುಐ ಮೂಲದವರೇ ಆಗಿದ್ದರು. ಆದರೆ, ಪ್ರಭಾವಿ ನಾಯಕರನ್ನು ಮೆಚ್ಚಿಸಲು ಇವರಿಬ್ಬರಿಗೂ ಟಿಕೆಟ್ ನಿರಾಕರಿಸಿ, ಬಂಡಾಯೇಳುವಂತೆ ಮಾಡಲಾಯಿತು.
ಎಚ್ಚರಿಕೆಗಳನ್ನು ಗಾಳಿಗೆ ತೂರಿದ ಕನ್ಹಯ್ಯ ಕುಮಾರ್ ಮತ್ತು ವೇಣುಗೋಪಾಲ್!
2000ರ ದಶಕದ ಆರಂಭದಲ್ಲಿ ಡಿಯುಎಸ್ಯು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು, “ದೀಪಾಂಶು ಮತ್ತು ವಿಶೇಶ್ ಇಬ್ಬರೂ ಗೆಲ್ಲುವ ಅಭ್ಯರ್ಥಿಗಳಾಗಿದ್ದರು. ಎಐಸಿಸಿಯಲ್ಲಿದ್ದುಕೊಂಡೇ ಎನ್ಎಸ್ಯುಐ ಜೊತೆ ಕೆಲಸ ಮಾಡುತ್ತಿರುವ ನಾವುಗಳು ಟಿಕೆಟ್ ಹಂಚಿಕೆ ನಾಯಕರಿಗೆ ಈ ಬಗ್ಗೆ ಪದೇ ಪದೇ ಎಚ್ಚರಿಸಿದ್ದೆವು. ಆದರೆ ನಮ್ಮ ಮಾತುಗಳನ್ನು ತಳ್ಳಿಹಾಕಲಾಯಿತು” ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಭಾರಿ ಸೋಲಿಗೆ ಎನ್ಎಸ್ಯುಐ ರಾಷ್ಟ್ರೀಯ ಅಧ್ಯಕ್ಷ ವಿನೋದ್ ಜಖಾರ್, ಎನ್ಎಸ್ಯುಐ ಉಸ್ತುವಾರಿ ವಹಿಸಿಕೊಂಡಿರುವ ಎಐಸಿಸಿ ನಾಯಕ ಕನ್ಹಯ್ಯ ಕುಮಾರ್ ಮತ್ತು ಎಐಸಿಸಿ ಪ್ರಧಾನ ಕಚೇರಿ ಉಸ್ತುವಾರಿ ಮನೀಶ್ ಚಾತ್ರಾತ್ ಕಡೆಗೆ ಬೆರಳುಗಳು ಬೆಟ್ಟುಮಾಡುತ್ತಿವೆ. ಮನೀಶ್ ಚಾತ್ರಾತ್ ಅವರ ಪುತ್ರ ವೀರ್ ಚಾತ್ರಾತ್ಗೆ ಉಪಾಧ್ಯಕ್ಷ ಸ್ಥಾನದ ಟಿಕೆಟ್ ನೀಡಿದ್ದೇ ಬಂಡಾಯಕ್ಕೆ ಪ್ರಮುಖ ಕಾರಣವಾಯಿತು.
ಮೂಲಗಳ ಪ್ರಕಾರ, ಟಿಕೆಟ್ ಘೋಷಣೆಯಾದ ತಕ್ಷಣವೇ ಕಾಂಗ್ರೆಸ್ ನಾಯಕತ್ವಕ್ಕೆ “ದೊಡ್ಡ ತಪ್ಪು ಮಾಡುತ್ತಿದ್ದೇವೆ” ಎಂಬ ಎಚ್ಚರಿಕೆ ರವಾನೆಯಾಗಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಜಖಾರ್, ಕನ್ಹಯ್ಯ ಕುಮಾರ್ ಮತ್ತು ಮನೀಶ್ ಚಾತ್ರಾತ್ ಸಮ್ಮುಖದಲ್ಲಿ ತುರ್ತು ಸಭೆಯೂ ನಡೆದಿತ್ತು. ಆಗಲೂ ಕನ್ಹಯ್ಯ ಕುಮಾರ್ ಮತ್ತು ಜಖಾರ್ ಅವರು ಇಡೀ ಪ್ಯಾನೆಲ್ ಗೆಲ್ಲಿಸುವ ‘ವೈಯಕ್ತಿಕ ಗ್ಯಾರಂಟಿ’ ನೀಡಿ ವೇಣುಗೋಪಾಲ್ ಅವರನ್ನು ನಂಬಿಸಿದ್ದರು.
ಶನಿವಾರ ಫಲಿತಾಂಶದ ಟ್ರೆಂಡ್ಗಳು ಬರುತ್ತಿದ್ದಂತೆ ಹಿರಿಯ ನಾಯಕರ ಆತಂಕ ನಿಜವಾಯಿತು. ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಿಜಯ್ ಶಂಕರ್ ಮೀನಾ ಎಬಿವಿಪಿಯ ಯಶ್ ದಾಸ್ಗೆ ತೀವ್ರ ಪೈಪೋಟಿ ನೀಡಿದರೂ, ಉಳಿದ ಮೂರು ಸ್ಥಾನಗಳ ಅಭ್ಯರ್ಥಿಗಳು ನೆಲಸಮವಾದರು.
“ನಾವು ಶೋಕೀನ್ ಮತ್ತು ಯಾದವ್ಗೆ ಟಿಕೆಟ್ ನೀಡಿದ್ದರೆ ಸಂಪೂರ್ಣ ಪ್ಯಾನೆಲ್ ಗೆಲ್ಲುತ್ತಿತ್ತು. ಅಧಿಕೃತ ಅಭ್ಯರ್ಥಿ ಮತ್ತು ಬಂಡಾಯ ಅಭ್ಯರ್ಥಿಗಳು ಪಡೆದ ಒಟ್ಟು ಮತಗಳನ್ನು ಕೂಡಿಸಿದರೆ ಎಬಿವಿಪಿ ವಿರುದ್ಧದ ಆಕ್ರೋಶ ಎಷ್ಟಿತ್ತು ಎಂಬುದು ತಿಳಿಯುತ್ತದೆ. ಅರ್ಹ ಅಭ್ಯರ್ಥಿ ಶೋಕೀನ್ಗೆ ಟಿಕೆಟ್ ತಪ್ಪಿಸಿ, ಯಾವುದೇ ಪ್ರಭಾವವಿಲ್ಲದ ನಾಯಕನ ಮಗನಿಗೆ (ವೀರ್ ಚಾತ್ರಾತ್) ಟಿಕೆಟ್ ನೀಡಿದ್ದನ್ನು ವಿದ್ಯಾರ್ಥಿಗಳು ವಂಶಪಾರಂಪರ್ಯ ರಾಜಕಾರಣವೆಂದು ನೋಡಿ ತಿರಸ್ಕರಿಸಿದರು” ಎಂದು ಮಾಜಿ ಡಿಯುಎಸ್ಯು ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಸೋಲು ಕೇವಲ ಕ್ಯಾಂಪಸ್ ರಾಜಕಾರಣಕ್ಕೆ ಸೀಮಿತವಾಗಿಲ್ಲ. ನರೇಂದ್ರ ಮೋದಿ ನಾಯಕತ್ವಕ್ಕೆ ಯುವಜನತೆ ನೀಡಿದ ಬೆಂಬಲ ಎಂದು ಬಿಜೆಪಿ ಮತ್ತು ಎಬಿವಿಪಿ ಇದನ್ನು ಪ್ರಚಾರ ಮಾಡುತ್ತಿದ್ದು, ಯುವಜನರ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಮತ್ತು ವಿಪಕ್ಷಗಳು ರೂಪಿಸುತ್ತಿದ್ದ ರಾಷ್ಟ್ರೀಯ ಹೋರಾಟದ ತೀವ್ರತೆಯನ್ನು ಕುಗ್ಗಿಸಲು ಬಿಜೆಪಿ ಇದನ್ನು ಅಸ್ತ್ರವಾಗಿಸಿಕೊಂಡಿದೆ.
ಆದರೆ, ಈ ಭಾರಿ ಸೋಲಿನ ನಂತರವೂ ಆಂತರಿಕ ಹೊಣೆಗಾರಿಕೆ ಹೊರುವ ಬದಲು ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಕನ್ಹಯ್ಯ ಆಪ್ತರು ಜಖಾರ್ ಮೇಲೆ ಗೂಬೆ ಕೂರಿಸುತ್ತಿದ್ದರೆ, ಜಖಾರ್ ಬೆಂಬಲಿಗರು ಕನ್ಹಯ್ಯ ಕುಮಾರ್ ಜವಾಬ್ದಾರಿ ರಹಿತ, ಸ್ವಯಂ-ಕೇಂದ್ರಿತ ನಾಯಕ ಮತ್ತು ಜೆಎನ್ಯುನಿಂದ ಬಂದ ತಮ್ಮ ಹಳೆಯ ಎಡಪಂಥೀಯ ಮಿತ್ರರಿಗೆ ಮಾತ್ರ ಪ್ರಾಶಸ್ತ್ಯ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಈ DUSU ಫಲಿತಾಂಶವು ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲಕ್ಕೆ ಸ್ಪಷ್ಟ ಸಾಕ್ಷಿ. ಒಂದೆಡೆ ರಾಹುಲ್ ಗಾಂಧಿ ‘ಚಾತ್ರೋಂ ಕಿ ಗೂಂಜ್’ ಮೂಲಕ ಯುವಜನರ ಧ್ವನಿಯಾಗಿ ಬೀದಿಯಲ್ಲಿದ್ದು ಹೋರಾಟ ಕಟ್ಟುತ್ತಿದ್ದರೆ, ಇನ್ನೊಂದೆಡೆ ದೆಹಲಿಯ ಕಾಂಗ್ರೆಸ್ ನಾಯಕರು ಸ್ವಜನಪಕ್ಷಪಾತ ಮತ್ತು ವಂಶಪಾರಂಪರ್ಯ ರಾಜಕಾರಣಕ್ಕೆ ಆದ್ಯತೆ ನೀಡಿ ಗೆಲ್ಲುವ ಅವಕಾಶವನ್ನೇ ಹಾಳುಮಾಡಿಕೊಂಡಿದ್ದಾರೆ.
ನೀಟ್, ಪರೀಕ್ಷಾ ಅಕ್ರಮ ಮತ್ತು ನಿರುದ್ಯೋಗದಿಂದ ಬೇಸತ್ತು ಬದಲಾವಣೆ ಬಯಸಿದ್ದ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ನಾಯಕರು ‘ಬಂಡಾಯ’ದ ಕೊಡುಗೆ ನೀಡಿದರು. ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಿ, ತಮ್ಮ ನಾಯಕರ ಮಕ್ಕಳಿಗೆ ಟಿಕೆಟ್ ನೀಡಿದ ಕಾಂಗ್ರೆಸ್ನ ಹಳೆಯ ಕಾಯಿಲೆಯೇ ಇಂದು ಆರ್ಎಸ್ಎಸ್-ಎಬಿವಿಪಿಗೆ ದೆಹಲಿ ಕ್ಯಾಂಪಸ್ನಲ್ಲಿ ಮರುಜೀವ ಸಿಗಲು ಮುಖ್ಯ ಕಾರಣವಾಯಿತು. ಕಾರ್ಯಕರ್ತರ ಶ್ರಮವನ್ನು ನಾಯಕರ ‘ಅಹಂ’ ಹೇಗೆ ವ್ಯರ್ಥ ಮಾಡಬಲ್ಲದು ಎಂಬುದಕ್ಕೆ ಈ ಚುನಾವಣೆಯೇ ಉದಾಹರಣೆ.
ಜಂತರ್ ಮಂತರ್ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್ಸ್ಟಾಗ್ರಾಮ್ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ, ಪುಂಡಾಟಿಕೆಗಳು ಮಿತಿಮೀರಿದ್ದವು ಎಂಬ ಆರೋಪಗಳಿದ್ದರೂ, ಅದನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವಲ್ಲಿ ಕಾಂಗ್ರೆಸ್ ಬೆಂಬಲಿತ ಎನ್ಎಸ್ಯುಐ (NSUI) ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ವಿಫಲವಾಗಿರುವುದು ಪ್ರಜಾಸತ್ತಾತ್ಮಕ ಚಿಂತಕರಲ್ಲಿ ತೀವ್ರ ಕಳವಳ ಮೂಡಿಸಿದೆ.


