ದೆಹಲಿ ಚುನಾವಣೆ ಕಾವು ಹೆಚ್ಚಾದಂತೆ ಬಿಜೆಪಿ ನಾಯಕರ ಮಾತು ಬದಲಾಗುತ್ತಿದೆ. ಸದ್ಯಕ್ಕೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಮನೋಜ್ ತಿವಾರಿ ”ಮುಖ್ಯಮಂತ್ರಿ ಕೇಜ್ರಿವಾಲನ್ನು ಯಾರೂ ಭಯೋತ್ಪಾದಕ ಎನ್ನುತ್ತಿಲ್ಲ” ಎಂದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರತಿಭಟಿಸುವವರ ವಿರುದ್ಧ ಬಿಜೆಪಿಯ ಕೆಲವರು ಬಳಸುತ್ತಿರುವ “ಗೋಲಿ ಮಾರೊ” ಘೋಷಣೆಗಳನ್ನು ಬಳಸುವುದು ತಪ್ಪು ಎಂದು ಮನೋಜ್ ತಿವಾರಿ ಒಪ್ಪಿಕೊಂಡಿದ್ದಾರೆ. ಆದರೆ ಪೊಲೀಸರು ಹೇಳುವಂತೆ, ಶಾಹೀನ್ ಬಾಗ್ ಮೇಲೆ ಗುಂಡು ಹಾರಿಸಿದವರು ಮುಖ್ಯಮಂತ್ರಿ ಕೇಜ್ರಿವಾಲ್ರವರ ಆಮ್ ಆದ್ಮಿ ಪಕ್ಷಕ್ಕೆ ಸೇರಿದವರು.” ಎಂದಿದ್ದಾರೆ.
ಜೊತೆಗೆ ಮುಖ್ಯಮಂತ್ರಿಯನ್ನು ತಮ್ಮ ಪಕ್ಷದವರು “ಭಯೋತ್ಪಾದಕ” ಎಂದು ಕರೆಯುತ್ತಾರೆ ಎಂಬುದನ್ನು ಅವರು ನಿರಾಕರಿಸಿದ್ದಾರೆ.
“ಗೋಲಿ ಮಾರೊ ಘೋಷಣೆಗಳನ್ನು ಕೂಗುವುದು ಸರಿಯಲ್ಲ. ಅಪರಾಧಿಗಳನ್ನು ಮತ್ತು ರಾಷ್ಟ್ರ ವಿರೋಧಿಗಳನ್ನು ಶಿಕ್ಷಿಸಲು ನ್ಯಾಯಾಂಗ ವ್ಯವಸ್ಥೆ ಇದೆ “ಎಂದು ಮನೋಜ್ ತಿವಾರಿ NDTVಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ದೆಹಲಿಯ ಚುನಾವಣಾ ಸಂಧರ್ಭದಲ್ಲಿ ಪ್ರಬಲ ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಎಎಪಿ ಶಾಹಿನ್ ಬಾಗ್ ಶೂಟೌಟ್ ಪ್ರಕರಣದಲ್ಲಿ ನಿನ್ನೆಯ ಪೊಲೀಸ್ ಹೇಳಿಕೆಯಿಂದ ಪರಸ್ಪರ ಬೆರಳು ತೋರಿಸುತ್ತಿವೆ.
“ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದ ಗೃಹ ಸಚಿವಾಲಯದ ಆದೇಶಗಳನ್ನು ಪೊಲೀಸರು ನಿರ್ವಹಿಸುತ್ತಿದ್ದಾರೆ” ಎಂದು ಎಎಪಿ ಹೇಳಿದ್ದರೆ, “ಅವರು ಏನು ಮಾಡುತ್ತಿದ್ದಾರೆಂದು ಪೊಲೀಸ್ ತನಿಖೆಯಿಂದ ಸಾಬೀತಾಗಿದೆ” ಎಂದು ಬಿಜೆಪಿ ಹೇಳಿದೆ.
ಸಂಸದ ಪ್ರವೇಶ್ ವರ್ಮಾ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸೇರಿದಂತೆ ಬಿಜೆಪಿ ನಾಯಕರ ಒಂದು ಭಾಗವು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರನ್ನು ಭಯೋತ್ಪಾದಕ ಎಂದು ಹೇಳಿದ್ದನ್ನು ಇಲ್ಲಿ ನಾವು ನೆನಪಿಸಬಹುದು.


