Homeಸಾಮಾಜಿಕತೇಜಸ್ವಿ ಕಂಡ ನಾಯಿ ಲೋಕ

ತೇಜಸ್ವಿ ಕಂಡ ನಾಯಿ ಲೋಕ

- Advertisement -
- Advertisement -

ತೇಜಸ್ವಿಯವರು ತೀರಿಕೊಂಡ ಮೇಲೆ ಮನಸ್ಸಿನ ಕಳವಳ ಹೆಚ್ಚಾಗಿತ್ತು. ಅದೇಕೋ ಶ್ರೀಮತಿ ರಾಜೇಶ್ವರಿ ಅವರನ್ನು ಕಂಡು ಮಾತಾಡಿಸುವ ಆಸೆ ಹೆಚ್ಚಾಗಿತ್ತು. ನಮ್ಮೊಳಗೂ ತೇಜಸ್ವಿ ಸಾವಿನ ನೋವು ಜೀರ್ಣವಾಗಿರಲಿಲ್ಲ. ತವರಿನ ಜನ ತಮ್ಮಕ್ಕನಿಗೆ ಭಾವನ ಅಗಲಿಕೆಯ ಸಾಂತ್ವನ ಹೇಳಲು ಹೊಸ ಸೀರೆ ಕೊಂಡು ಹೋಗುತ್ತಾರೆ. ನಾವೆಲ್ಲಾ ಅದೇ ಥರ ನಿರುತ್ತರಕ್ಕೆ ಹೋದೆವು. ಮಾತಿನಲ್ಲಿ ಅವರನ್ನು ಸಮಾಧಾನ ಪಡಿಸುವ ಶಕ್ತಿ ನಮಗಿರಲಿಲ್ಲ. ಮಾತುಗಳ ಕೇಂದ್ರ ಸೆಳೆತ ಸಹಜವಾಗಿ ತೇಜಸ್ವಿಯೇ ಆಗಿದ್ದರು. ಸಹಜವಾಗಿ ಇರಲು ಯತ್ನಿಸುತ್ತಿದ್ದ ರಾಜೇಶ್ವರಿಯವರ ಆಳದಲ್ಲಿ ಕಣ್ಣೀರ ಝರಿ ಸದ್ದಿಲ್ಲದೆ ಹರಿಯುತ್ತಿತ್ತು. ಯಾವ ಕ್ಷಣದಲ್ಲಾದರೂ ಅವರ ದುಃಖ ಸ್ಪೋಟಗೊಂಡೀತು ಎಂಬ ದುಗಡದಲ್ಲೇ ಇದ್ದೆವು. ತೇಜಸ್ವಿ ಅವರ ಬದುಕಿನ ವಿಶೇಷಗಳ ಹೇಳುತ್ತಾ ಸಹಜವಾಗಿದ್ದ ಮೇಡಂ ತಮ್ಮ ಮನೆ ನಾಯಿ `ಕಿವಿಯ’ ವಿಷಯ ಬಂದಾಗ ಮಾತ್ರ ತಡೆಯಲಾರದೆ ಹೋದರು.
ನಾಯಿ `ಕಿವಿಗೆ’ ವಯೋ ಸಹಜ ಕೊನೆಗಾಲ ಸಮೀಪಿಸಿತ್ತು. ಅದು ನಡೆಯಲಾಗದೆ ದೃಷ್ಟಿ ಮಂದವಾಗಿ ಕೂತಲ್ಲೇ ಚಡಪಡಿಸುತ್ತಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡು ಕಾಡೆಲ್ಲ ಸುತ್ತ್ತುತ್ತಿದ್ದ ತೇಜಸ್ವಿ ಅವರ ಚಲನೆಯನ್ನೂ ಕಿವಿ ಕಟ್ಟಿ ಹಾಕಿತ್ತು. ಚಲನೆ ನಿಂತ ಕಿವಿ ಮಂಕಾಗಿತ್ತು. ಅದರ ಸಾವು ನಿಶ್ಚಯವಾದ ಕೊನೇ ದಿನ ತೇಜಸ್ವಿ ಅದನ್ನು ಮಗುವಿನಂತೆ ಎದೆಗವುಚಿಕೊಂಡು ಮನೆ, ತೋಟ ಎಲ್ಲಾ ಕಡೆ ಸುತ್ತಾಡಿಸಿದರಂತೆ. “ನೋಡೋ ಕಿವಿ ಈ ಜಾಗದಲ್ಲಿ ನೀನು ಹಾವೊಂದನ್ನು ಹೆದರಿ ಓಡಿಸಿದ್ದೆ. ಅಗೋ ಆ ತಾವಿನಲ್ಲಿ ನಿನ್ನ ಗಂಟಲಲ್ಲಿ ಸಿಕ್ಕ ಮೂಳೆ ಚೂರು ನಾನು ಎಳೆದು ತೆಗೆದಿದ್ದೆ. ಪ್ಯಾರನ ಜತೆ ನೀನಿಲ್ಲಿ ತಕರಾರು ಮಾಡಿದ್ದೆ. ಇಗೋ ಅಲ್ಲಿ ಜೇನುನೊಣಗಳು ನಿನ್ನ ಕಚ್ಚಿ ಸತಾಯಿಸಿದ್ದವು. ಈ ಕಿರುದಾರಿಯಲ್ಲೇ ನಾನು ನೀನು ಕಾಡಿಗೆ ಹೋಗುತ್ತಿದ್ದೆವು. ಇದೆಲ್ಲ ನಿನಗೆ ನೆನಪಿದೆ ಅಲ್ವೇನೋ” ಎಂದು ಮಮತೆ ತುಂಬಿ ಕಿವಿಯನ್ನು ಒಪ್ಪಿಸುತ್ತಿದ್ದರು. ಏಕಪಾತ್ರಾಭಿನಯದಂತೆ ಕಾಣುತ್ತಿದ್ದ ಈ ಘಟನೆಯಲ್ಲಿ ತೇಜಸ್ವಿಯ ನಿರಂತರ ಮಾತು, ಕಿವಿಯ ಭಯಾನಕ ಮೌನ ಇಡೀ ಸಂದರ್ಭದ ಸಂಕಟ ಹೆಚ್ಚಿಸಿತ್ತು. ಹೀಗೆ ಸಾಕು ನಾಯಿಯ ಹೊತ್ತುಕೊಂಡು ಅಲೆದಾಡಿ ಚಡಪಡಿಸಿದ ಸಂದರ್ಭ ಕೇಳುತ್ತಾ ರಾಜೇಶ್ವರಿ ಮೇಡಂ ಗೊಳೋ ಎಂದು ರೋಧಿಸತೊಡಗಿದರು. ಆ ಕ್ಷಣ ನಾವೆಲ್ಲಾ ಮಾತು ಮರೆತು ಥಂಡ ಹೊಡೆದು ಕೂತೆವು. ತುಂಬಾ ಹೊತ್ತು ನೀರವ ಮೌನ ಆವರಿಸಿತು. ಮನಸ್ಸಿನಲ್ಲಿ ತೇಜಸ್ವಿ ಗೆಳೆತನಕ್ಕೆ ಅಷ್ಟು ಹತ್ತಿರವಾಗಿದ್ದ ಆ ಕಿವಿಯ ಅದೃಷ್ಟ ನೆನೆದು ಹೆಮ್ಮೆ ಎನಿಸಿತು.
ಸಾಕು ನಾಯಿಯೊಂದು ಗೆಳೆಯನಂತಾಗಿ ಮನೆ ಯಜಮಾನನ ಮನಸ್ಸಿಗೆ ಆಪ್ತ್ತವಾಗುವ ಈ ಪ್ರೀತಿಯ ಸೆಲೆಯೇ ವಿಶಿಷ್ಟ ಎನಿಸುತ್ತದೆ. ಮಲೆನಾಡಿನ ಜನ ನಾಯಿಯನ್ನು ತಮ್ಮ ಪ್ರಾಣದಷ್ಟೇ ಗೌರವಿಸುತ್ತಾರೆ. ಅನೇಕ ಆಪತ್ಕಾಲಗಳಲ್ಲಿ ಅವು ಹಿತೈಷಿಗಿಂತ ಹೆಚ್ಚಾಗಿ ನಡೆದುಕೊಂಡಿರುತ್ತವೆ. ಕುಪ್ಪಳ್ಳಿಗೆ ಹೋದವರು ಕುವೆಂಪು ಬಾಲ್ಯದ ಫೋಟೋವೊಂದನ್ನು ಅಲ್ಲಿ ನೋಡಿರಬಹುದು. ಅಲ್ಲಿ ಪುಟ್ಟಪ್ಪನವರು ತಂದೆ ವೆಂಕಟಪ್ಪನವರ ಜೊತೆ ಕೂತು ತೆಗೆಸಿಕೊಂಡ ಅಪರೂಪದ ಫೋಟೋ ಒಂದಿದೆ. ಅಲ್ಲಿ ಕುಟುಂಬದ ಸದಸ್ಯರಂತೆ ಫೋಸು ಕೊಟ್ಟಿರುವ ಅನೇಕ ಶ್ವಾನಗಳನ್ನು ನೋಡಬಹುದು. ಇದು ಮಲೆನಾಡಿನ ಜನರ ಬದುಕಿನೊಳಗೆ ಪ್ರಾಣಿಲೋಕ ಮಿಳಿತಗೊಂಡು ಒಂದಾಗಿರುವ ಬಗೆ. ಕುವೆಂಪು ಕಾದಂಬರಿಯ ‘ಹುಲಿಯಾ’ ತೇಜಸ್ವಿ ಕಥನಗಳ ‘ಕಿವಿ’ ಎರಡೂ ಪ್ರಾಣಿಗಳು ಅವರ ಸಾಹಿತ್ಯದಲ್ಲಿ ಗಳಿಸಿರುವ ಪ್ರಾಮುಖ್ಯತೆಯೇ ಇದಕ್ಕೆ ಸಾಕ್ಷಿ. ಶಿಕಾರಿಯಲ್ಲಿ ಜತೆಯಾಗಿ, ಮನೆಗೆ ಕಾವಲಾಗಿ, ಕಾಡುಪ್ರಾಣಿಗಳ ಆಕ್ರಮಣದಿಂದ ಜೀವ ಕಾಪಾಡುವ ನಾಯಿಗಳ ನಿಯತ್ತು ಮಲೆನಾಡಿಗರಿಗೆ ಇಷ್ಟವಾಗಿದೆ. ಬಯಲು ಸೀಮೆಯ ಕುರಿ ಕಾಯುವ ಜನರೂ ನಾಯಿಗಳನ್ನು ಒಡಹುಟ್ಟಿದವರಂತೆ ಕಾಣುತ್ತಾರೆ. ಅವರ ಇಡೀ ಕುರಿಮಂದೆಯನ್ನು ಜೋಪಾನ ಮಾಡುವ ಬಯಲಿನ ಆಕ್ರಮಣಗಳಿಂದ ಅವರನ್ನು ಕಾಪಾಡುವ ಪ್ರಾಣಿಲೋಕವನ್ನು ಬಲು ಶ್ರದ್ಧೆಯಿಂದ ಗೌರವಿಸುತ್ತಾರೆ.
ತೇಜಸ್ವಿ ತಮ್ಮ ನಾಯಿ ಕಿವಿ ಕುರಿತು “ಕಿವಿ ನನ್ನ ಬಳಿ ಇದ್ದ ಒಂದು ಸ್ಪಾನಿಯಲ್ ಜಾತಿಯ ಬಿಳಿಯ ನಾಯಿ. ಮನೆ ಕಾಯುವುದರಿಂದ ಹಿಡಿದು ಶಿಕಾರಿಯವರೆಗೆ ಎಲ್ಲದರಲ್ಲೂ ಅದ್ವಿತೀಯನಾಗಿದ್ದ. ಅದರ ಗುಣ ಬುದ್ದಿವಂತಿಕೆಗಳನ್ನು ನೋಡಿ ಅನೇಕ ಬಾರಿ ನಾನೂ ಆಶ್ಚರ್ಯಪಡುತ್ತಿದ್ದೆ. ಕೇವಲ ಜಾನಪದ ಗೀತೆಗಳಲ್ಲಿ, ದಂತಕತೆಗಳಲ್ಲಿ ಮಾತ್ರ ಆ ರೀತಿಯ ನಾಯಿ ಇರುತ್ತದೆಂದು ಕೇಳಿದ್ದೆ. ಕಿವಿಯನ್ನು ಸಾಕಿದ ಅನಂತರ ಅದನ್ನು ಸಾಕ್ಷಾತ್ತಾಗಿ ನೋಡಿದಂತಾಗಿತ್ತು” ಎನ್ನುತ್ತಾರೆ.
ಪ್ರಾಣಿಲೋಕದಿಂದಲೂ ಮನುಷ್ಯ ಕಲಿಯಬೇಕಾದ ಜ್ಞಾನದ ಅನೇಕ ಪಾಠಗಳಿವೆ ಎನ್ನುತ್ತಿದ್ದರು ತೇಜಸ್ವಿ. ಪ್ರಕೃತಿ ಹಾಗೂ ಮನುಷ್ಯನ ನಡುವೆ ಅರ್ಥವಾಗದ ಅನೇಕ ಸಂಗತಿಗಳಿರುತ್ತವೆ. ಕೆಲವು ಮನುಷ್ಯನ ಅರಿವಿಗೆ ಬಾರದ ಸೂಕ್ಷ್ಮ ವಿಷಯಗಳು. ಇಂಥವನ್ನು ಮೊದಲು ಕಾಣುವ ಶಕ್ತಿ ನಾಯಿಗಿದೆ. ಈ ನಿಸರ್ಗದ ಸಣ್ಣ ಶಬ್ದ, ಭಿನ್ನ ನಡೆ, ಸೂಕ್ಷ್ಮ ಬದಲಾವಣೆಗಳನ್ನು ನಾಯಿ ಬಲು ಬೇಗ ಗ್ರಹಿಸುತ್ತದೆ. ನಾಯಿಯ ಈ ಪ್ರತಿಭೆಯಿಂದ ನಿಸರ್ಗದ ಜ್ಞಾನದ ಎಳೆಗಳನ್ನು ಹುಡುಕಬಹುದು. ನಾಯಿಯೆಂಬ ಪ್ರಾಣಿಯನ್ನು ನಿರ್ಲಕ್ಷ್ಯ ಮನೋಭಾವದಿಂದ ನೋಡುವ ಅನೇಕರಿಗೆ ನಾಯಿಯ ಕುರಿತ ಇಷ್ಟೊಂದು ವ್ಯಾಖ್ಯಾನಗಳು ವಿಚಿತ್ರ ಎನಿಸಬಹುದು.
ನಾಯಿಯನ್ನು ಕುರಿತ ವ್ಯಾಮೋಹ, ಅದನ್ನು ಸಾಕುವ ಕಳಕಳಿ ತೇಜಸ್ವಿ ಅವರಿಗೆ ಮೊದಲಿನಿಂದಲೂ ಇದ್ದ ಹಾಗೆ ಕಾಣುತ್ತದೆ. ಅವರ ಪರಿಸರದ ಕಥೆ ಶುರುವಾಗುವುದೇ ನಾಯಿಯ ಮೂಲಕ. ಅನ್ವೇಷಣೆ ಮಾಡುವ ಆನುಷಂಗಿಕ ಗುಣ ನಿರೂಪಕನಲ್ಲಿ ಹೆಚ್ಚಾಗಲು ನಾಯಿ ಜೊತೆಗಿನ ಗೆಳೆತನವೇ ಕಾರಣವಾಗಿರಬೇಕು. ಇದು ಮಲೆನಾಡಿನ ಸಾಕಷ್ಟು ಜನರಿಗೆ ಸಿಕ್ಕಿರುವ ಒಂದು ಪ್ರಾಕೃತಿಕ ವರ. ಕುವೆಂಪು ಅವರಿಗೆ ತೇಜಸ್ವಿ ಬಾಲಕರಾಗಿದ್ದಾಗ “ನಮಗೆ ಎರಡು ನಾಯಿ ಮರಿ ಬೇಕೇಬೇಕು. ಮಾವನಿಗೆ ಕಾಗದ ಬರೆಯುತ್ತಾ ನಮಗೆ ಒಂದು ಹೆಣ್ಣು ನಾಯಿ ಮರಿ ಬೇಕು ಎಂದು ಬರೆಯಿರಿ” ಎಂದು ಒತ್ತಾಯಿಸಿ ಬರೆದಿರುವ ಮೊದಲ ಪತ್ರ ಸಾಕಷ್ಟು ಕುತೂಹಲ ಹುಟ್ಟಿಸುತ್ತದೆ.
ತೇಜಸ್ವಿ ತಮ್ಮ ಮಿಲನಿಯಮ್ ಸರಣಿಯಲ್ಲಿ ‘ಜರ್ಮನ್ ಷಪರ್ಢ್’ ನಾಯಿಯ ಬಗ್ಗೆ ಬರೆಯುತ್ತಾರೆ. ನಮ್ಮಲ್ಲಿನ ‘ಪರಮವೀರ ಚಕ್ರ’ ಪ್ರಶಸ್ತಿಗೆ ಸಮನಾದ ‘ಡಿಕೆನ್ಸ್ ಕ್ರಾಸ್’ ಪ್ರಶಸ್ತಿಯನ್ನು ಈ ಜರ್ಮನ್ ನಾಯಿ ಗಳಿಸುತ್ತದೆ. ಅದಕ್ಕಿಟ್ಟ ಹೆಸರು ‘ಅಂಟಿಸ್’ ಎಂದು. ಯುದ್ಧದಲ್ಲಿ ತೋರಿದ ಧೈರ್ಯ, ಸಾಹಸ, ಪರಾಕ್ರಮಗಳಿಗೆ ಪ್ರಶಸ್ತಿ ಪಡೆಯುವ ಅಂಟಿಸ್ ಅಸಾಧಾರಣ ಬುದ್ಧಿಶಕ್ತಿಯ ನಾಯಿ ಎನಿಸಿತ್ತು, ಜನರ ಕಿವಿಗೆ ಕೇಳಿಸದ ನಿಗೂಢ ಸದ್ದು ಅದಕ್ಕೆ ಮೊದಲೇ ಕೇಳಿಸುತ್ತಿತ್ತು. ತನ್ನ ಅಧ್ಭುತ ಶಕ್ತಿಯಿಂದ, ಜ್ಞಾನಪ್ರತಿಭೆಯಿಂದ ನೂರಾರು ಜನರ ಹಾಗೂ ಸೈನಿಕರ ಪ್ರಾಣವನ್ನು ಯುದ್ಧದಲ್ಲಿ ಉಳಿಸಿದ ಈ ನಾಯಿಯ ಬಗ್ಗೆ ತೇಜಸ್ವಿ ಹೆಮ್ಮೆಯಿಂದ ಬರೆಯುತ್ತಾರೆ. ನಾಯಿಯ ಇಂದ್ರಿಯಗಳ ಅಸಾಧಾರಣ ಸೂಕ್ಷ್ಮಜ್ಞತೆ, ಅವುಗಳಿಗಿರುವ ಅಸಾಧಾರಣ ಬುದ್ಧಿಶಕ್ತಿಯ ಬಗ್ಗೆ ಹೆಚ್ಚು ಒಲವಿದ್ದ ಕಾರಣಕ್ಕೆ ತೇಜಸ್ವಿ ಕಥನಗಳು ನಾಯಿಯ ಕುರಿತು ಹೆಚ್ಚು ಶ್ರದ್ಧೆ ತೋರುತ್ತವೆ.
‘ಪರಿಸರ ಕಥೆ’ಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಹಾಗೂ ‘ಕರ್ವಾಲೊ’ ಕಾದಂಬರಿಯಲ್ಲಿ ಮುಖ್ಯ ಪಾತ್ರವಾಗಿ ಬರುವ ಕಿವಿ ಎಂಬ ನಾಯಿಯ ಪಾತ್ರವನ್ನು ತೇಜಸ್ವಿ ಬಲು ಜತನದಿಂದ ನಿರೂಪಿಸುತ್ತಾರೆ. ಕಾಡಿನ ಅರಿವನ್ನು ಕಲಿಸುವ ಒಬ್ಬ ಗುರುವಾಗಿ ನಾಯಿ ಇಲ್ಲಿ ಕಾಣುತ್ತದೆ. ಕಾಡಿನ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಲೇಖಕರಿಗೆ ತಿಳಿಯುವಂತೆ ಮಾಡುವ ಕಿವಿ ಪ್ರಕೃತಿ ಹಾಗೂ ಮನುಷ್ಯನ ನಡುವೆ ಜ್ಞಾನದ ಕೊಂಡಿಯಾಗಿ ಕೆಲಸ ಮಾಡುತ್ತದೆ.
“ನಾನು ತೋಟ ಮಾಡಲು ಆರಂಭಿಸಿದ ಮೊದಲ ವರ್ಷಗಳಲ್ಲಿ ಕೋವಿ ಹೆಗಲ ಮೇಲೆ ಹಾಕಿಕೊಂಡು ದಿನವಿಡೀ ಕಿವಿಯೊಂದಿಗೆ ಅಲೆಯುವುದು ನನ್ನ ಕೆಲಸವಾಗಿತ್ತು. ಓದುವುದು, ಬರೆಯುವುದು, ಎಲ್ಲದಕ್ಕೂ ತಿಲಾಂಜಲಿಯಿತ್ತು. ಹೀಗೆ ನಿರ್ಜನ ಕಾಡುಗಳಲ್ಲಿ ಗೊತ್ತು, ಗುರಿಯಿಲ್ಲದೆ ಅಲೆಯುತ್ತಿರುವ ನನ್ನನ್ನು ನೋಡಿ ಅನೇಕರು ಇವನು ಸಂಪೂರ್ಣ ಹಾಳಾದನೆಂದು ವ್ಯಸನ ಸೂಚಿಸಿದವರಿದ್ದಾರೆ. ಅನೇಕರು `ಎಂಥವರಿಗೆ ಎಂಥಾ ಮಗ’ ಎಂದು ವಿಷಾದಪಟ್ಟವರೂ ಅನೇಕರಿದ್ದಾರೆ. ಕೆಲವರು ‘ಈ ನಾಯಿಯ ದೆಸೆಯಿಂದ ಹಾಳಾದ’ ಎಂದು ಕಿವಿಯನ್ನೂ ದೂಷಿಸಿದವರೂ ಇದ್ದಾರೆ” ಎನ್ನುತ್ತಾರೆ ತೇಜಸ್ವಿ
ಕುವೆಂಪು ಸಾಹಿತ್ಯ ಪ್ರಕೃತಿಯ ವಿವರಗಳಿಂದ ಸೌಂದರ್ಯ ಮತ್ತು ಧ್ವನಿ ಪಡೆದು ಭಾವನಾತ್ಮಕವಾದರೆ, ಅದೇ ತೇಜಸ್ವಿ ಕಥನ ನಿಸರ್ಗದಲ್ಲಿ ಕಾಣದ ಬದುಕಿನ ವಿವರಗಳೆಡೆಗೆ ಆಸಕ್ತಿ ವಹಿಸಿ ಸೃಜನಾತ್ಮಕವಾಗುತ್ತದೆ. ಕುವೆಂಪು ಅವರ ನಾಯಿಗುತ್ತಿ ಪ್ರಕೃತಿಯ ನಡುವೆ ಒಂದು ಲಯವಾಗಿ ಬದುಕುವವನು. ಆತನ ನಾಯಿ ಹುಲಿಯ ನಿಸರ್ಗವನ್ನು ನೋಡುವ ಅವನ ನೋಟವನ್ನು ಹೆಚ್ಚು ಸೂಕ್ಷ್ಮಗೊಳಿಸುತ್ತದೆ. ಅವನಿಗೂ ನಿಸರ್ಗದ ಅರಿವಿನ ಪಾಠ ಹೇಳುವ ಸೂಕ್ಷ್ಮ ಜೀವಿ ಅದು. ಇದರ ಹಾಗೆಯೇ ತೇಜಸ್ವಿ ಕಥನದ ನಾಯಿ ‘ಕಿವಿ’ ಕೂಡ ನಿಸರ್ಗದ ಕಾಣದ ಅನೇಕ ಮುಖಗಳನ್ನು ತೋರಿಸುತ್ತಾ ಹೋಗುತ್ತದೆ. ಪ್ರಾಣಿಯಿಂದ ಮನುಷ್ಯ ಕೂಡ ಕಲಿಯುತ್ತಾನೆ ಮತ್ತು ಕಲಿಯಬೇಕು ಎಂಬ ಸಂಗತಿಯೇ ಇಲ್ಲಿ ಮುಖ್ಯ.
ಅಲೆದಾಟದಲ್ಲಿ, ಸಾಕು ಪ್ರಾಣಿಯೊಟ್ಟಿಗಿನ ಆಪ್ತತೆಯಲ್ಲಿ ಜ್ಞಾನ ಗಳಿಸುತ್ತಿದ್ದ ತೇಜಸ್ವಿ ಹೊರ ಜಗತ್ತಿಗೆ ಹಾಳಾದವರಂತೆ ಕಂಡಿರುವುದು ಉತ್ಪ್ರೇಕ್ಷೆಯ ಸಂಗತಿಯಲ್ಲ. ಮನುಷ್ಯ ತನ್ನೆಲ್ಲಾ ಸಂಬಂಧಗಳಷ್ಟೇ ಮಿಗಿಲಾಗಿ ಪ್ರಾಣಿಲೋಕದೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಳ್ಳುವುದು ಬಯಲ ಮತ್ತು ಕಾಡಿನ ಬದುಕಿನವರಿಗೆ ಎಷ್ಟು ಅನಿವಾರ್ಯ ಎನ್ನುವುದನ್ನು ತೇಜಸ್ವಿ ಕಥನಗಳು ಹೇಳುತ್ತವೆ.
ಮನುಷ್ಯನಿಗಿಂತ ಮಿಗಿಲಾದ ವಾಸನಾ ಜ್ಞಾನ, ಮತ್ತು ಎಚ್ಚರದ ಸ್ಥಿತಿ ಇರುವ ನಾಯಿ ತೇಜಸ್ವಿ ಅವರಿಗೆ ಹೊಸ ಸಂಗತಿಗಳನ್ನು ತಿಳಿಸುವ ಗುರುವಾಗಿದೆ. ತನ್ನ ಸೂಕ್ಷ್ಮ ಗ್ರಹಿಕೆಗಳಿಂದ ನಿರೂಪಕನ ಅರಿವನ್ನು ವಿಸ್ತಾರಿಸುವ ನಾಯಿ ಜಗದ ಕಣ್ಣಿಗೆ ಮಾತ್ರ ಸಾಮಾನ್ಯ ಪ್ರಾಣಿ. ಇಂಥ ಸಾಮಾನ್ಯ ಜೀವದಿಂದಲೂ ಕಲಿಯುವ ಸಾಕಷ್ಟು ಸಂಗತಿಗಳಿವೆ ಎಂಬ ಸರಳ ಸತ್ಯವನ್ನು ತೇಜಸ್ವಿ ಕಥನಗಳು ತೆರೆದಿಡುತ್ತವೆ. “ಮನುಷ್ಯನ ಮಿತ್ರ ಶೇಷ್ಠನಾದ ನಾಯಿ ನಮ್ಮ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿ ನಮಗೆ ಪರಿಚಯವಾದಾಗ ಮಾತ್ರ ನಾಯಿಯ ಹಿರಿಮೆ ನಮಗೆ ಅರ್ಥವಾಗುತ್ತದೆ. ನಮ್ಮ ಅಂತಃಕರಣವನ್ನು ಈ ಜೀವಗಳು ಎಷ್ಟು ಕಲಕುತ್ತವೆ ಎಂದರೆ ಇದನ್ನು ಇತರರಿಗೆ ವಿವರಿಸಿ, ವಿಶ್ಲೇಷಿಸಿ ಹೇಳುವುದು ಕಷ್ಟ ಎನಿಸುತ್ತದೆ” ಎನ್ನುತ್ತಾರೆ ತೇಜಸ್ವಿ. ನಮ್ಮ ಪರಿಸರದಲ್ಲೇ ಬದುಕುವ ಜೀವಿಗಳ ಜೊತೆಗೆ ಸಹಜವಾಗಿ ಬಾಳುವ ಜೊತೆಗೆ ಅವುಗಳ ಅಂತಃಸತ್ವವನ್ನೂ ಅರಿತು ಗೌರವಿಸುವ ವಿವೇಕವನ್ನು ತೇಜಸ್ವಿ ಬರೆಹಗಳು ಕಲಿಸುತ್ತವೆ.
“ನಾಯಿಗೆ ನಾವು ಮಾಡುವಂತೆ ಮಾನವೀಯ ವ್ಯಕ್ತಿತ್ವವನ್ನೂ ಆರೋಪಿಸಿ ನಮ್ಮಂತೆಯೇ ಅದು ಕೂಡ ಎಂದು ನೋಡುವುದರಿಂದ ನಾಯಿಗೆ ಸಂತೋಷವಾಗಲೀ, ಪ್ರಯೋಜನವಾಗಲೀ ಉಂಟೆ ಎಂದು ನನಗೆ ಅನುಮಾನ” ಎನ್ನುವ ತೇಜಸ್ವಿ ಮನುಷ್ಯ ಮತ್ತು ಪ್ರಾಣಿಲೋಕದ ನಡುವೆ ಇಕಾಲಜಿ ರೂಪಿಸಿರುವ ಮಿತಿಗಳನ್ನೂ ಗಮನಿಸಿ ಹೇಳಬಲ್ಲರು. ಪರಿಸರ ಲೋಕದ ಇಂಥ ಬೆಸುಕೊಂಡಿಗಳನ್ನು ನಮ್ಮ ನಮ್ಮ ಬುದ್ಧಿಶಕ್ತಿಯ ಮಿತಿಗೆ ತಕ್ಕಂತೆ ನಾವೆಲ್ಲಾ ವ್ಯಾಖ್ಯಾನಿಸಿಕೊಳ್ಳುತ್ತಿದ್ದೇವೆ. ಈ ಪ್ರಾಣಿಲೋಕವನ್ನು ಕರುಣೆ, ಸಹಾನುಭೂತಿಯಿಂದ ನೋಡಬೇಕೇ ಹೊರತು ನಮ್ಮಂತೆ ಅವೂ ಕೂಡ ಇರಬೇಕು ಎಂದು ಬಯಸುವುದು ಮನುಕುಲದ ಆಲೋಚನಾ ಪರಿಮಿತಿ.
ತನ್ನ ಜಾಣತನ, ನಿಷ್ಠ್ಠೆ ಮತ್ತು ಪ್ರತಿಭೆಗಳನ್ನು ತನ್ನ ಸಾಕುವ ಮಾಲೀಕನಿಗೆ ಪರಿಚಯಿಸಲು ಹೋಗಿ ಹತವಾದ ನಾಯಿಗಳ ಕಥೆ ಅನೇಕ ಇವೆ. ಹುಚ್ಚು ಸಾಹಸಗಳ ತೋರಿಸಲು ಹೋಗಿ ಶತ್ರುಗಳಿಂದ ಕೊಲ್ಲಲ್ಪಟ್ಟ ನಾಯಿಗಳಿವೆ. ಕಾಡಿನ ಪ್ರಾಣಿಗಳ ಜತೆ ಸೆಣೆಸಿ ಪ್ರಾಣ ಬಿಡುವ ಅನೇಕ ನಾಯಿ ಪಾತ್ರಗಳು ತೇಜಸ್ವಿ ಕಥೆಗಳಲ್ಲಿವೆ. ಭಿಕ್ಷುಕರು ಬಂದರೆ ಬೊಗಳುವುದು, ಸಿರಿವಂತರು ಬಂದರೆ ಗೌರವಿಸುವ ಗುಣ ತಮ್ಮ ನಾಯಿ ಕಿವಿ ಕಲಿತ ಬಗ್ಗೆ ತೇಜಸ್ವಿಯವರಿಗೆ ಆಶ್ಚರ್ಯವೆನಿಸುತ್ತದೆ. ತರತಮ ಭಾವ ಮನುಷ್ಯರಲ್ಲಿ ಸಹಜ. ಆದರೆ ನಾಯಿಯೂ ಇದನ್ನು ಪಾಲಿಸುವುದು ಹೇಗೆಂದು ಅವರಿಗೂ ಗೊತ್ತಾಗುವುದಿಲ್ಲ. “ಇದು ನಾಯಿಗೆ ಇರುವ ತಾರತಮ್ಯ ಭಾವವೋ, ಪ್ರಕೃತಿ ಅದಕ್ಕೆ ಕಲಿಸಿರುವ ಪಾಠವೋ ಗೊತ್ತಿಲ್ಲ. ಮನುಷ್ಯರಂತೆಯೇ ಬೇರೆ ಬೇರೆ ಸ್ವಭಾವ, ವರ್ತನೆ ಇರುವ ಪ್ರಾಣಿ ಲೋಕವೂ ಇರುತ್ತದೆ ಎನ್ನುವುದಕ್ಕೆ ನಾಯಿ ಕಿವಿಯೇ ಉದಾಹರಣೆ” ಎನ್ನುತ್ತಾರೆ.
ಪ್ರಾಣಿ ಪಕ್ಷಿಗಳಿಗೆ ಮನುಷ್ಯರಂತೆ, ಬದುಕಿನ ವಿವರಗಳು, ಜಿದ್ದು, ನೆನಪು, ಭಾವುಕತೆ, ಉಪಕಾರ ಸ್ಮರಣೆ, ಸ್ನೇಹ, ನಂಬಿಕೆಗಳು, ಸಂಬಂಧಗಳನ್ನು ಕಾಪಾಡುವ ಜವಾಬ್ದಾರಿ ಇತ್ಯಾದಿಗಳು ಇರುತ್ತವೆಯೋ ಇಲ್ಲವೋ ಎನ್ನುವ ಚರ್ಚೆ ಅನೇಕ ಕಡೆ ಬರುತ್ತದೆ. ಮನುಷ್ಯ ಪ್ರತಿಯೊಂದು ಜೀವದ ಜತೆ ದಿನನಿತ್ಯದ ಸಖ್ಯ, ಒಡನಾಟ ಬೆಳೆಸಿಕೊಂಡರೆ ತನ್ನತನದ ಸ್ವರೂಪಗಳನ್ನು, ಮನುಷ್ಯನ ವ್ಯಕ್ತಿತ್ವಕ್ಕೆ ಹತ್ತಿರದ ಗುಣ ಸ್ವಭಾವಗಳನ್ನು ಪ್ರಾಣಿ ಪಕ್ಷಿಗಳಲ್ಲಿ ಹುಡುಕಲು ಆರಂಭಿಸುತ್ತಾನೆ. ಇದೊಂದು ಸಹಜ ಪ್ರಕ್ರಿಯೆ.
ಲೇಖಕರ ಕೈಯ್ಯಲ್ಲಿ ಕೋವಿ ನೋಡಿದರೆ ನಾಯಿ ಕಿವಿ ಬೆಳಗಾಗುವವರೆಗೂ ಹಿಂದಿರುಗದೆ ರಾತ್ರಿ ಎಲ್ಲಾ ಕಾಡೊಳಗೇ ಶಿಕಾರಿ ಹುಡುಕಿಕೊಂಡು ತಿರುಗುವ ಸ್ವಭಾವ ಹೊಂದಿದೆ. ತಿರುಗಾಟದ, ಶಿಕಾರಿಯ ಹಿಂದೆ ಅಲೆಯುವ ಸ್ವಭಾವ ಪ್ರಧಾನ ಗುಣವಾದ ಕಾರಣ ಲೇಖಕನಿಗೆ ಕಿವಿ ಮುಖ್ಯ ಸಂಗಾತಿ ಎನಿಸುತ್ತದೆ. ಶಿಕಾರಿ ಸಮಯದಲ್ಲಿ ಟಾರ್ಚ್ ಬೆಳಕನ್ನೂ, ನಿರೂಪಕನ ಧ್ವನಿಯನ್ನೂ ಕೇಳುತ್ತಲೇ ಅದನ್ನೇ ತನ್ನ ಪ್ರೋತ್ಸಾಹವೆಂದು ತಿಳಿದು ಮತ್ತಷ್ಟು ಜೋರಾಗಿ ಬೊಗಳುತ್ತಾ, ಪೊದೆಯ ಮುಳ್ಳು, ಅಪಾಯ ಒಂದನ್ನೂ ಲೆಕ್ಕಿಸದೆ ಪ್ರಾಣಿಯ ಮೇಲೆ ಹಾರಿ ಆಕ್ರಮಣ ಮಾಡುವ ಕಿವಿ ತನ್ನ ಈ ವಿಶೇಷ ಪ್ರತಿಭೆಯ ಕಾರಣಕ್ಕೆ ಹೆಚ್ಚು ಮನ್ನಣೆ ಪಡೆಯುತ್ತದೆ. ಮನುಷ್ಯರ ಜೊತೆ ಬದುಕುತ್ತಾ ಅವರ ಬೇಕು ಬೇಡಗಳನ್ನು ಅರಿತು ಅವರಂತಾಗುವ ವಿಶೇಷ ಗುಣ ನಾಯಿಗಳಿಗಿದೆ.

– ಕಲೀಮ್ ಉಲ್ಲಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...