ಮಧ್ಯಪ್ರದೇಶ ರಾಜಧಾನಿ ಭೋಪಾಲ್ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಹಳ್ಳಿಯೊಂದರಲ್ಲಿ ಪ್ರಯಾಣಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಐದು ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದು 15 ಮಂದಿ ಗಾಯಗೊಂಡಿದ್ದಾರೆ.
20 ಜನರ ವಲಸೆ ಕಾರ್ಮಿಕರ ಗುಂಪು ಹೈದರಾಬಾದ್ನಿಂದ ಮಾವಿನಹಣ್ಣು ಸಾಗಿಸುವ ಟ್ರಕ್ ಒಂದರಲ್ಲಿ ತಮ್ಮ ಊರುಗಳಿಗೆ ತೆರಳುತ್ತಿದ್ದರು. ಟ್ರಕ್ ನರಸಿಂಗ್ಪುರದ ಗ್ರಾಮವೊಂದರಲ್ಲಿ ಪಲ್ಟಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಅವರಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ರೈಲ್ವೇ ಹಳಿಗಳ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಸರಕು ರೈಲುಗಳು ಹರಿದ ಪರಿಣಾಮ 16 ವಲಸಿಗ ಕಾರ್ಮಿಕರು ಮೃತಪಟ್ಟ ಘಟನೆ ಎರಡು ದಿನಗಳ ಹಿಂದೆ ನಡೆದೆ. ಇವರು ಲಾಕ್ಡೌನ್ ಇರುವುದರಿಂದ ಇಪ್ಪತ್ತು ಮಂದಿ ಮಹಾರಾಷ್ಟ್ರದ ಜಲ್ನಾದಿಂದ ಮಧ್ಯಪ್ರದೇಶದ ಭೂಸಾವಲ್ ವರೆಗೆ 157 ಕಿ.ಮೀ ನಡೆದುಕೊಂಡು ಹೋಗುತ್ತಿದ್ದರು.
ಹೆದ್ದಾರಿಯನ್ನು ತಪ್ಪಿಸಲು ನಡೆಯಲು ರೈಲ್ವೆ ಹಳಿಗಳನ್ನು ಆಯ್ಕೆ ಮಾಡಿಕೊಂಡಿದ್ದ ವಲಸೆ ಕಾರ್ಮಿಕರು, ಲಾಕ್ಡೌನ್ನಿಂದಾಗಿ ರೈಲುಗಳು ಓಡುತ್ತಿಲ್ಲ ಎಂದು ಭಾವಿಸಿ ಹಳಿಗಳ ಮೇಲೆ ಮಲಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗದ ಕಾರಣಕ್ಕೆ ಯಾವುದೆ ತಯಾರಿಯಿಲ್ಲದೆ ಗಂಟೆಗಳ ಅಂತರದಲ್ಲಿ ಲಾಕ್ಡೌನ್ ಘೋಷಿಸಿ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಿದ ಪರಿಣಾಮ ದೇಶದಾದ್ಯಂತ ಲಕ್ಷಾಂತರ ವಲಸಿಗರು ಹಾಗೂ ಇತರರು ಸಿಕ್ಕಿಬಿದ್ದಾರೆ. ಹಣ, ಆಹಾರ, ಆಶ್ರಯವಿಲ್ಲದೆ ಲಕ್ಷಾಂತರ ಮಂದಿ ಕಾಲ್ನಡಿಗೆಯಲ್ಲೇ ಮನೆಗೆ ಹೊರಟ ಪರಿಣಾಮ ದಾರಿಯಲ್ಲಿ ಸಾವಿಗೀಡಾದವರ ಸಂಖ್ಯೆ ಹೆಚ್ಚುತ್ತಿದೆ.
ವಿಶೇಷ ರೈಲುಗಳು ಮತ್ತು ಬಸ್ಸುಗಳಲ್ಲಿ ಕಾರ್ಮಿಕರನ್ನು ಮನೆಗೆ ತಲುಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನದ ಹೊರತಾಗಿಯೂ, ಅನೇಕರು ಇನ್ನೂ ಮಹಾ ನಡಿಗೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: ರೈಲು ಹಳಿಗಳಲ್ಲಿ ಪ್ರಾಣಬಿಟ್ಟ 15 ವಲಸೆ ಕಾರ್ಮಿಕರು : ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ನಡೆದ ದುರ್ಘಟನೆ


