N-95 ಮಾಸ್ಕ್ಗಳ ಕೊರತೆ ಬಗ್ಗೆ ದನಿಯೆತ್ತಿದ್ದ ಕಾರಣಕ್ಕೆ ಅಮಾನತ್ತಾಗಿದ್ದ ವೈದ್ಯನನ್ನು ಪೊಲೀಸರು ರಸ್ತೆಯಲ್ಲಿ ಎಳೆದಾಡಿ, ಆತನ ಕೈ ಕಟ್ಟಿಹಾಕಿ ಅಮಾನವೀಯವಾಗಿ ಥಳಿಸಿರುವ ದುರ್ಘಟನೆ ಆಂಧ್ರಪ್ರದೇಶದ ವಿಶಾಖಪಟ್ನಂನಲ್ಲಿ ಜರುಗಿದೆ.
ಮುಖ್ಯರಸ್ತೆಯಲ್ಲಿ ನೂರಾರು ಸಾರ್ವಜನಿಕರ ಸಮ್ಮುಖದಲ್ಲಿಯೇ ವೈದ್ಯನ ಬಟ್ಟೆ ಬಿಚ್ಚಿಸಿ, ಕೈಕಟ್ಟಿ ಐದಾರು ಪೊಲೀಸರು ಹೊಡೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಪೊಲೀಸರ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಹಲ್ಲೆಗೊಳಗಾದ ವೈದ್ಯ ಡಾ.ಸುಧಾಕರ್ ಆಗಿದ್ದು, ಅವರು ಮಾರ್ಚ್ ತಿಂಗಳಿನಲ್ಲಿ N-95 ಮಾಸ್ಕ್ಗಳ ಕೊರತೆಯಿದೆ. ಒಂದು ಮಾಸ್ಕ್ ಅನ್ನೇ ಹದಿನೈದು ದಿನಗಳ ಕಾಲ ಬಳಸಬೇಕಾಗಿದೆ ಎಂದು ದೂರಿದ್ದಕ್ಕಾಗಿ ಅವರನ್ನು ತಪ್ಪು ಮಾಹಿತಿ ಪ್ರಸಾರ ಮಾಡಿದ ಆರೋಪದ ಮೇಲೆ ಅಮಾನತ್ತು ಮಾಡಲಾಗಿತ್ತು.
ವಿಶಾಖಪಟ್ನಂ ಪೊಲೀಸ್ ಕಮಿಷನರ್ ಆರ್.ಕೆ ಮೀನಾ ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ಘಟನೆಯಲ್ಲಿ ಭಾಗಿಯಾದ, ಹಲ್ಲೆ ನಡೆಸಿದ ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಲಾಗಿದೆ ಎಂದಿದ್ದಾರೆ.
ವಿಶಾಖಪಟ್ನಂ ಪೊಲೀಸರ ಈ ಕೃತ್ಯವು ರಾಜಕೀಯ ಬಣ್ಣ ಪಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ವಿರೋಧ ಪಕ್ಷ ಟಿಡಿಪಿ, ಸಿಪಿಐ ಸೇರಿದಂತೆ ಹಲವು ಪಕ್ಷಗಳು ಘಟನೆಯನ್ನು ಖಂಡಿಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದ್ದಾರೆ.
ವೈದ್ಯಕೀಯ ಸಹೋದರರಲ್ಲಿ ಮನವಿ, ನೀವು ಎಷ್ಟು ಮಂದಿ ತಾಲಿ, ಥಾಲಿ ಅಥವಾ ಹೂ ದಳಗಳನ್ನು ನೆನಪಿಸಿಕೊಳ್ಳುತ್ತೀರಿ ಎಂದು ನನಗೆ ತಿಳಿದಿಲ್ಲ. ಆದರೆ ಅಧಿಕಾರಿಗಳ ನೈಜ ಮುಖವನ್ನು ಬಹಿರಂಗಪಡಿಸುವ ಡಾ.ಸುಧಾಕರ್ ಅವರ ಈ ವೀಡಿಯೊವನ್ನು ಮರೆಯಬೇಡಿ. ಅವರು ನಿಮ್ಮನ್ನು ಗೌರವಿಸುವುದಿಲ್ಲ. ಅವರ ಅಸಮರ್ಥತೆಗಾಗಿ ಬಲಿಪಶು ಮಾಡಲು ನಿಮ್ಮನ್ನು ಬಳಸಿಕೊಳ್ಳುತ್ತಾರೆ ಅಷ್ಟೇ. ನೀವು ನಿರಾಕರಿಸಿದರೆ ಈ ರೀತಿ ನಡೆಸಿಕೊಳ್ಳುತ್ತಾರೆ ಎಂದು ವೈದ್ಯರಾದ ಹರ್ಜಿತ್ ಸಿಂಗ್ ಭಟ್ಟಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.
Appeal to medical fraternity, I don’t know how many of u will remember Tali,Thaali or Flower petals but don’t forget this video of Dr Sudhakar which exposes the real face of authorities.They don’t respect u, they just want to scapegoat u for their incompetence. If u deny then ? pic.twitter.com/dx6mu78YtU
— Harjit Singh Bhatti (@DrHarjitBhatti) May 17, 2020
ವಿಶಾಖಪಟ್ನಂ ಪೊಲೀಸ್ ಕಮಿಷನರ್ ಆರ್.ಕೆ ಮೀನಾ ಮಾತನಾಡಿ “ಅಕ್ಕಯ್ಯಪಾಲೇಂ ಬಳಿ ಡಾ.ಸುಧಾಕರ್ ಗೊಂದಲದ ವಾತಾವರಣ ಸೃಷ್ಟಿಸಿದ್ದಾರೆ. ಪೊಲೀಸರು ತಡೆಯಲು ಹೋದಾಗ ಅವರ ಮೊಬೈಲ್ ಕಿತ್ತು ಬಿಸಾಡಿದ್ದಾರೆ. ಆತ ಮದ್ಯಪಾನ ಮಾಡಿದ್ದು ಮಾನಸಿಕ ಸ್ಥಿಮಿತತೆ ಕಳೆದುಕೊಂಡಂತೆ ವರ್ತಿಸಿದ್ದಾರೆ. ಅವರನ್ನು ವೈದ್ಯಕೀಯ ತಪಾಸಣೆಗಾಗಿ ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು” ಹೇಳಿದ್ದಾರೆ.
ಇದನ್ನೂ ಓದಿ: ವಲಸೆ ಕಾರ್ಮಿಕರ ಕಷ್ಟ ನಿವಾರಣಗೆ ಕೇಂದ್ರ, ರಾಜ್ಯ ಸರ್ಕಾರಗಳು ಮಾಡಿದ್ದೇನು?: ಮದ್ರಾಸ್ ಹೈಕೋರ್ಟ್ ಪ್ರಶ್ನೆ
ವೈದ್ಯರ ಮೇಲಿನ ಈ ಹಲ್ಲೆ ಕಂಡನಾರ್ಹ. ಈ ಪೊಲೀಸರಿಗೆ ತಕ್ಕ ಶಿಕ್ಷೆ ಆಗಬೇಕು.