‘ಅಂಫಾನ್’ ಚಂಡಮಾರುತದಿಂದ ತತ್ತರಿಸಿರುವ ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ಮೋದಿ 1000 ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ.
ಇಂದು ಪಶ್ಚಿಮ ಬಂಗಾಳಕ್ಕೆ ಆಗಮಿಸಿದ ಮೋದಿ ವೈಮಾನಿಕ ಸಮೀಕ್ಷೆ ನಡೆಸಿ 1000 ಕೋಟಿ ರೂ. ಗಳ ಪರಿಹಾರ ಘೋಷಿಸಿದರು. ವೈಮಾನಿಕ ಸಮೀಕ್ಷೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್ ಧಂಖರ್ ಕೂಡಾ ಪ್ರಧಾನಿ ಮೋದಿ ಜೊತೆಗಿದ್ದರು.
ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್ ಧಂಖರ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಧಾನಿಯವರನ್ನು ಸ್ವಾಗತಿಸಿದರು. ಕೊರೊನಾ ಬಿಕ್ಕಟ್ಟಿನ 83 ದಿನಗಳ ನಂತರ ಪ್ರಧಾನಿ ಮೋದಿಯವರ ಮೊದಲ ಪ್ರವಾಸ ಇದಾಗಿದೆ. ಫೆಬ್ರವರಿ 29 ರಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮತ್ತು ಚಿತ್ರಕೂಟ್ ಗೆ ಪ್ರವಾಸ ಮಾಡಿದ ನಂತರ ಲಾಕ್ಡೌನ್ನಿಂದಾಗಿ ದೆಹಲಿಯಲ್ಲೇ ಉಳಿದುಕೊಂಡಿದ್ದರು.
#WATCH: PM Narendra Modi conducts aerial survey of areas affected by #CycloneAmphan in West Bengal. CM Mamata Banerjee is also accompanying. pic.twitter.com/Da7NebJhws
— ANI (@ANI) May 22, 2020
ಬುಧವಾರ ಅಪ್ಪಳಿಸಿದ ಅಂಫಾನ್ ಚಂಡಮಾರುತಕ್ಕೆ 76 ಜನರು ಸಾವನ್ನಪ್ಪಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತ, “ರಾಜ್ಯದಲ್ಲಿ ‘ಅಂಫಾನ್’ ಚಂಡಮಾರುತದಿಂದ 76 ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ಮೃತಪಟ್ಟವರ ಕುಟುಂಬಕ್ಕೆ 2.5 ಲಕ್ಷ ರೂ. ಪರಿಹಾರ ಧನ ಘೋಷಿಸಲಾಗಿದೆ , ಚಂಡಮಾರುತ ಪೀಡಿತ ಪ್ರದೇಶಕ್ಕೆ ಪ್ರಧಾನಿಯವರು ಭೇಟಿ ನೀಡಿ ಹಾನಿಗಳ ಬಗ್ಗೆ ಪರಿಶೀಲನೆ ನಡೆಸಬೇಕು” ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ ನೀಡಿದ ಭೇಟಿಯನ್ನು ಕರ್ನಾಟಕ ಕಾಂಗ್ರೆಸ್ “ಡಬ್ಬಲ್ ಸ್ಟಾಂಡರ್ಡ್” ಎಂದು ಹೇಳಿದೆ. ಕಳೆದ ವರ್ಷ ದಕ್ಷಿಣ ರಾಜ್ಯಗಳೆಗೆ ಎರಗಿದ ಪ್ರವಾಹದ ಸಂದರ್ಭದಲ್ಲಿ ಅಂದು 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಆದರೆ ಅವರು ಕರ್ನಾಟಕಕ್ಕೆ ಭೇಟಿ ನೀಡಿರಲಿಲ್ಲ ಎಂದು ಟೀಕಿಸಿದೆ.
ಓದಿ: ‘ಡಬ್ಬಲ್ ಸ್ಟಾಂಡರ್ಡ್’ ಪ್ರಧಾನಿ: ಪಶ್ಚಿಮ ಬಂಗಾಳದ ಭೇಟಿಯ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟೀಕೆ