ಭಾರತವು ಕೊರೋನಾ ಬಿಕ್ಕಟ್ಟನ್ನು ನಿಭಾಯಿಸಿ ಪ್ರಪಂಚ ಮಟ್ಟದಲ್ಲಿ ತಲೆಯೆತ್ತಿ ನಿಲ್ಲಲು ಮತ್ತು ಜನರ ಹಿತ ಕಾಪಾಡಲು 1% ಅತಿ ಶ್ರೀಮಂತರಿಗೆ 2% ಸಂಪತ್ತಿನ ತೆರಿಗೆ ವಿಧಿಸಬೇಕು ಎಂಬ ಅಭಿಯಾನ ಆರಂಭವಾಗಿದೆ.
ಮೇಧಾ ಪಾಟ್ಕರ್, ಅರುಣಾ ರಾಯ್, ಪ್ರೊ.ಅನಿಲ್ ಸದ್ಗೋಪಾಲ್, ನ್ಯಾಯಾಧೀಶ ಬಿ ಜಿ ಕೋಲ್ಸೆ ಪಾಟೀಲ್ ಸೇರಿದಂತೆ ಹಲವರು ಆರಂಭಿಸಿರುವ ಈ ಅಭಿಯಾನದಲ್ಲಿ ’2020 ಮೇ 1 ರ ಸಂಪತ್ತಿನ ತೆರಿಗೆ ಪಿಟಿಷನ್ಗೆ’ ಸಹಿ ಮಾಡುವ ಮೂಲಕ ಪಾಲ್ಗೊಳ್ಳಿ ಎಂದು ಕರ್ನಾಟಕದ ದೇವನೂರು ಮಹಾದೇವ, ಎ.ಆರ್ ವಾಸವಿ ಸೇರಿದಂತೆ ಹಲವರು ಮನವಿ ಮಾಡಿದ್ದಾರೆ.
ಭಾರತವು ಕಲ್ಯಾಣರಾಜ್ಯ (Welfare State)ಕಡೆಗೆ ಚಲಿಸಬೇಕೆಂಬ ಆಶಯಗಳು ಇದ್ದಾಗ 1957ರಲ್ಲೇ ಸಂಪತ್ತಿನ ಮೇಲೆ ತೆರಿಗೆ ಪರಿಕಲ್ಪನೆ ಜಾರಿಯಲ್ಲಿತ್ತಾದರೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿರಲಿಲ್ಲ. ಆದರೆ, 1991ರ ನಂತರ ಮಾರುಕಟ್ಟೆ ಶಕ್ತಿಗಳು ಆಳ್ವಿಕೆಯನ್ನು ನಿಯಂತ್ರಿಸತೊಡಗಿದ ಪರಿಣಾಮವಾಗಿ 2015 ರಲ್ಲಿ ಕೇಂದ್ರ ಸರ್ಕಾರವು ಸಂಪತ್ತಿನ ಮೇಲಿನ ತೆರಿಗೆ ಪರಿಕಲ್ಪನೆಯನ್ನೇ ರದ್ದುಮಾಡಿಬಿಟ್ಟಿತು. ಆದರೀಗ, ಒಂದು ಲಕ್ಷ ದಾಟಿ ಓಡುತ್ತಿರುವ ಕೊರೋನಾ ಸೋಂಕಿನ ದಾಳಿಯಿಂದ ತತ್ತರಿಸುತ್ತಿರುವ ಭಾರತವು ಚೇತರಿಸಿಕೊಳ್ಳುವಂತಾಗಲು 1% ಅತಿ ಶ್ರೀಮಂತರಿಗೆ 2% ಸಂಪತ್ತಿನ ತೆರಿಗೆ ವಿಧಿಸಿಯಾದರೂ ಆರ್ಥಿಕತೆಯನ್ನು ತಹಬಂದಿಗೆ ತರುವುದು ಇಂದಿನ ತುರ್ತಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್ಜಿಯವರು ಈಗಾಗಲೇ ತಮ್ಮ ಒಟ್ಟು ಸಂಪತ್ತಿನ ಶೇ. 2% ರಷ್ಟನ್ನು ಕೊರೋನಾ ಬಿಕ್ಕಟ್ಟಿನ ನಿವಾರಣೆಗಾಗಿ ಬಿಟ್ಟುಕೊಟ್ಟಿರುವುದನ್ನು ಗಮನಿಸಿ ಹೇಳುವುದಾದರೆ ಈ ಸಾಧ್ಯತೆ ಅಂತಹ ಕಷ್ಟದಾಯಕವಾದುದ್ದೇನೂ ಅಲ್ಲ. ಈ ವಿಚಾರದಲ್ಲಿ ಜನರಿಂದ ಆಯ್ಕೆಯಾದ ಮತ್ತು ಶಕ್ತಿಯುತವಾದ ಯಾವುದೇ ಸರ್ಕಾರವು ಹಿಂದೆ-ಮುಂದೆ ನೋಡದೆ ತುಂಬಾ ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಚಿಂತಕರು ಒತ್ತಾಯಿಸಿದ್ದಾರೆ.
ಇಂದಿನ ಕೊರೋನಾ ಬಿಕ್ಕಟ್ಟಿನ ಭಯಂಕರ ಪರಿಸ್ಥಿತಿಯನ್ನು ಎದುರಿಸಲು ಇತ್ತೀಚೆಗೆ, ನಮ್ಮ ಪ್ರಧಾನ ಮಂತ್ರಿಗಳು ಘೋಷಿಸಿರುವ 20 ಲಕ್ಷಕೋಟಿ ಪ್ಯಾಕೇಜ್ನ ಒಳಹೊಕ್ಕು ನೋಡಿದರೆ, ಇದರಲ್ಲಿ ಎಲ್ಲಾ ಕೂಡಿ ಕಳೆದು ವಾಸ್ತವವಾಗಿ ಸರ್ಕಾರ ಕೋವಿಡ್ನ ಆರ್ಥಿಕ ಮುಗ್ಗಟ್ಟು ಎದುರಿಸಲು ವಾಸ್ತವವಾಗಿ ಘೋಷಿಸಿರುವುದು ಹೆಚ್ಚೆಂದರೆ 2 ಲಕ್ಷಕೋಟಿ ರೂಪಾಯಿಗಳಾಗಬಹುದಷ್ಟೆ. ಹೀಗೆಂದೇ ಎಲ್ಲಾ ಆರ್ಥಿಕ ತಜ್ಞರೂ, ವಿವಿಧ ಬ್ಯಾಂಕಿನ ಮುಖ್ಯಸ್ಥರೂ ಹೇಳುತ್ತಿದ್ದಾರೆ. ಸರ್ಕಾರವೂ ಇದನ್ನು ನಿರಾಕರಿಸಿಲ್ಲ. ವಾಸ್ತವ ಹೀಗಿರುವಾಗ, ಈ ಕೊರೋನ ದುರಂತ ಸಂದರ್ಭದಲ್ಲಿನ ಸಮಾಜೋ-ಆರ್ಥಿಕ ಬಿಕ್ಕಟ್ಟನ್ನು ನಿಜವಾಗಿ, ಯಶಸ್ವಿಯಾಗಿ ಮತ್ತು ಮಾನವೀಯವಾಗಿ ನಿರ್ವಹಿಸುವ ಸಲುವಾಗಿ ದೇಶದ 1% ಅತಿಶ್ರೀಮಂತರಿಗೆ ಸಂಪತ್ತಿನ ಮೇಲೆ 2%, ಸಂಪತ್ತಿನ ತೆರಿಗೆ ಜಾರಿಗೆ ತನ್ನಿ ಎಂಬ ಹಕ್ಕೊತ್ತಾಯ ನ್ಯಾಯಯುತವಾದುದು ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ದೇಶದ ಪ್ರಜ್ಞಾವಂತರು 2020 ಮೇ 1 ರಂದು ಪಿಟಿಷನ್ ಹಾಕಿದ್ದಾರೆ. ಅದಕ್ಕೆ ಕರ್ನಾಟಕ ಜನತೆ ಸಹಿ ಮಾಡಿ ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ.
ಕರ್ನಾಟಕದ ಪ್ರವರ್ತಕರಾಗಿ ಪತ್ರಿಕಾ ಹೇಳಿಕೆಗೆ ಎ. ಆರ್. ವಾಸವಿ, ವಿ.ಕೆ.ನಟರಾಜ್, ಟಿ.ಆರ್. ಚಂದ್ರಶೇಖರ, ಪುರುಷೋತ್ತಮ ಬಿಳಿಮಲೆ, ದೇವನೂರ ಮಹಾದೇವ, ಎಸ್. ಆರ್, ಹಿರೇಮಠ್, ದು. ಸರಸ್ವತಿ, ಚುಕ್ಕಿ ನಂಜುಂಡಸ್ವಾಮಿ, ರೂಪ ಹಾಸನ, ಸಪ್ತಗಿರಿ ಐಯ್ಯಂಗಾರ್, ಎ. ನಾರಾಯಣ, ಕೆ.ಸಿ.ರಘು, ಪ್ರಕಾಶ ಕಮ್ಮರಡಿ, ಡಾ. ರಜಾಕ್ ಉಸ್ತಾದ್ ಸಹಿ ಹಾಕಿದ್ದಾರೆ.
ಈ ಆಂದೋಲನಕ್ಕೆ ನೀವೂ ಸಹಿ ಮಾಡಿ ಬೆಂಬಲ ಸೂಚಿಸುವುದಿದ್ದರೆ ಇಲ್ಲಿ ಕ್ಲಿಕ್ ಮಾಡಿ.