ಇದುವರೆಗೂ ಭಾರತೀಯ ರೈಲ್ವೆಯು ಶ್ರಮಿಕ್ ರೈಲುಗಳ ಮೂಲಕ 57 ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಸಾಗಿಸಿದ್ದು, ಕೇವಲ 26 ಲಕ್ಷ ವಲಸೆ ಕಾರ್ಮಿಕರು ಉಳಿದುಕೊಂಡಿದ್ದಾರೆ ಕೇಂದ್ರ ಸರ್ಕಾರದ ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿ ತನ್ನ ವೆಬ್ಸೈಟ್ನಲ್ಲಿ ದತ್ತಾಂಶವನ್ನು ಪ್ರಕಟಿಸಿದೆ.
ಅಂದರೆ ಉಳಿದ ಕೋಟ್ಯಾಂತರ ವಲಸೆ ಕಾರ್ಮಿಕರು ಬಸ್ ಅಥವಾ ನಡೆದುಕೊಂಡೇ ತಮ್ಮ ಸ್ಥಳಗಳನ್ನು ತಲುಪಿದ್ದಾರೆ ಎಂದು ಅಂದಾಜಿಸಬಹುದಾಗಿದೆ.
ಈ ಡೇಟಾದ ಬಿಡುಗಡೆ ಮುಖ್ಯವಾದುದು. ಏಕೆಂದರೆ ವಲಸೆ ಕಾರ್ಮಿಕರ ಸ್ಥಿತಿಗತಿ ಮತ್ತು ಅವರು ಭಾರತದಾದ್ಯಂತ ಹೇಗೆ ಹರಡಿದ್ದಾರೆ ಎಂದು ತಿಳಿಯಲು ಮಾಹಿತಿ ಹಕ್ಕು ಅರ್ಜಿಗಳನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಸಲ್ಲಿಸಲಾಗಿತ್ತು.
ಉಳಿದುಕೊಂಡಿರುವ ವಲಸೆ ಕಾರ್ಮಿಕರಲ್ಲಿ ಶೇ.10 ರಷ್ಟು ಮಾತ್ರ ಪುನರ್ವಸತಿ ಕೇಂದ್ರದಲ್ಲಿದ್ದಾರೆ. ಶೇ.43 ರಷ್ಟು ಜನರು ತಮ್ಮ ಕೆಲಸದ ಸ್ಥಳದಲ್ಲಿದ್ದು, ಉಳಿದ ಶೇ.46 ರಷ್ಟು ಜನರು ಇತರ ಜಾಗಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಆದರೆ ಸರ್ಕಾರದ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ಹಲವು ಅಚ್ಚರಿಗಳು ಕಾಣಸಿಗುತ್ತವೆ. 26 ಲಕ್ಷ ಕಾರ್ಮಿಕರಲ್ಲಿ ಚತ್ತೀಸ್ಘಡ ಒಂದರಲ್ಲೇ 10.85 ಲಕ್ಷ ಕಾರ್ಮಿಕರಿದ್ದಾರೆ. ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರನ್ನು ಹೊಂದಿರುವ ಇತರ ರಾಜ್ಯಗಳು ಕೇರಳ 2.86 ಲಕ್ಷ, ಮಹಾರಾಷ್ಟ್ರ 2.01 ಲಕ್ಷ (ಹೆಚ್ಚುವರಿ 20,000 ಸೇರಿದಂತೆ), ತಮಿಳುನಾಡು 1.93 ಲಕ್ಷ, ತೆಲಂಗಾಣ 1.84 ಲಕ್ಷ ಮತ್ತು ಆಂಧ್ರಪ್ರದೇಶದಲ್ಲಿ 1 ಲಕ್ಷಕ್ಕಿಂತ ಕಡಿಮೆ ಜನರಿದ್ದಾರೆ.
ಒಡಿಶಾ, ರಾಜಸ್ಥಾನ, ಕರ್ನಾಟಕ, ಮತ್ತು ಜಮ್ಮು ಮತ್ತು ಕಾಶ್ಮೀರಗಳು 50,000 ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಹೊಂದಿರುವ ಇತರ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಾಗಿವೆ.
ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಾದ ಉತ್ತರ ಪ್ರದೇಶ (36,421), ಬಿಹಾರ (7,719), ಜಾರ್ಖಂಡ್ (16,616) ಮತ್ತು ಮಧ್ಯಪ್ರದೇಶ (9,621) ನಲ್ಲಿ ಕಡಿಮೆ ಸಂಖ್ಯೆಯ ವಲಸೆ ಕಾರ್ಮಿಕರು ಇದ್ದಾರೆ. ಇದು ಆ ರಾಜ್ಯಗಳಲ್ಲಿನ ಅವಕಾಶಗಳ ಕೊರತೆ, ಕಾರ್ಮಿರ ಸ್ನೇಹಿ ವಾತಾವರಣ ಇಲ್ಲದಿರುವುದನ್ನು ಸೂಚಿಸುತ್ತದೆ. ಆ ರಾಜ್ಯಗಳಿಂದ ಇತರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆಯೇ ಹೊರತು, ಇತರೆ ರಾಜ್ಯಗಳಿಂದ ಈ ರಾಜ್ಯಗಳಿಗೆ ಜನ ವಲಸೆ ಬಂದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಅತಿ ಹೆಚ್ಚಿನ ಆಶ್ರಯ ನೀಡಿದ ಕೇರಳ
ಪುನರ್ವಸತಿ ಶಿಬಿರಗಳಲ್ಲಿ ವಲಸೆ ಕಾರ್ಮಿಕರಿಗೆ ಆತಿಥ್ಯ ವಹಿಸುವ ವಿಷಯ ಬಂದಾಗ, ಕೇರಳವು ಹೆಚ್ಚಿನ ಸಂಖ್ಯೆಯ 134,384 ಕಾರ್ಮಿಕರಿಗೆ ಅಂತಹ ಸೌಲಭ್ಯವನ್ನು ಒದಗಿಸುತ್ತದೆ ಎಂದು ಡೇಟಾ ಬಹಿರಂಗಪಡಿಸುತ್ತದೆ. ಇದು ಒಟ್ಟು ಉಳಿದುಕೊಂಡಿರುವವರಲ್ಲಿ ಶೇ 45% ರಷ್ಟು ವಲಸೆ ಕಾರ್ಮಿಕರನ್ನು ಹೊಂದಿದೆ. ಕೇರಳದಲ್ಲಿ 1.07 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಸಹ ಕೆಲಸದ ಸ್ಥಳಗಳಲ್ಲಿ ಉಳಿದಿದ್ದಾರೆ.
ಮತ್ತೊಂದೆಡೆ, ಚತ್ತೀಸ್ಘಡ, ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ವಲಸೆ ಕಾರ್ಮಿಕರನ್ನು ಪರಿಹಾರ ಶಿಬಿರಗಳಲ್ಲಿ ಉಳಿದುಕೊಳ್ಳಲು ಬಹಳ ಕಡಿಮೆ ವ್ಯವಸ್ಥೆ ಮಾಡಲಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ಬಹುಪಾಲು ಜನರು ತಮ್ಮ ಕೆಲಸದ ಸ್ಥಳಗಳಲ್ಲಿಯೇ ಇದ್ದಾರೆ. ಚತ್ತೀಸ್ಘಡದಲ್ಲಿ 80% ಕ್ಕಿಂತಲೂ ಹೆಚ್ಚು ಜನರು ಇತರ ಪ್ರದೇಶಗಳಲ್ಲಿಯೇ ಇದ್ದಾರೆ.
ಇದನ್ನೂ ಓದಿ: ಒಬಿಸಿ ಅಭ್ಯರ್ಥಿಗಳಿಗೆ ನೀಟ್ ಮೀಸಲಾತಿಯಲ್ಲಿ ಅನ್ಯಾಯ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ


