ಭಾರತದ ಗಡಿಯೊಳಗೆ ಆಕ್ರಮಣ ಮಾಡಿದ್ದ ಚೀನಾ ಪಡೆಗಳನ್ನು ಯಾವಾಗ ಮತ್ತು ಹೇಗೆ ಹೊರಹಾಕಲಾಯಿತು ಎಂಬುದನ್ನು ದೇಶದ ಜನತೆಯ ಮುಂದೆ ಬಹಿರಂಗಪಡಿಸಬೇಕು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಗ್ರಹಿಸಿದ್ದಾರೆ.
ಚೀನಾ-ಭಾರತದ ಗಡಿಯಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜವಾಬ್ದಾರಿಗಳಿಂದ ನುಣಿಚಿಕೊಳ್ಳಲು ಹಾಗೂ ಓಡಿಹೋಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಪಡೆಗಳು ಗಡಿಯೊಳಗೆ ಪ್ರವೇಶಿಸಿಲ್ಲ ಎಂದು ಹೇಳುತ್ತಾರೆ. ರಕ್ಷಣಾ ಸಚಿವರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಚೀನಾ ಪಡೆಗಳ ಗಡಿಯೊಳಗೆ ಅತಿಕ್ರಮಣ ಮಾಡಿರುವ ಕುರಿತು ಮಾತುಕತೆ ನಡೆಸುತ್ತಾರೆ. ಯಾವುದು ಸತ್ಯ ಎಂದು ಸೋನಿಯಾ ಪ್ರಶ್ನಿಸಿದ್ದಾರೆ.
ಮಾಜಿ ಸೇನಾ ದಂಡನಾಯಕರು, ಭದ್ರತಾ ತಜ್ಞರು ಮತ್ತು ಮಾಧ್ಯಮಗಳು ಸ್ಯಾಟಲೈಲ್ ಚಿತ್ರಗಳನ್ನು ಪ್ರಕಟಿಸಿ ಚೀನಾ ಅತಿಕ್ರಮಣ ಮಾಡಿರುವುದನ್ನು ದೃಢಪಡಿಸಿವೆ. ಹಾಗಾಗಿ ಲಡಾಕ್ ಪ್ರದೇಶವನ್ನು ಯಾವಾಗ ಮತ್ತು ಹೇಗೆ ಕೇಂದ್ರ ಸರ್ಕಾರ ವಾಪಸ್ ಪಡೆಯಲಿದೆ ಎಂಬುದನ್ನು ದೇಶ ಬಯಸುತ್ತಿದೆ ಎಂದು ಹೇಳಿದ್ದಾರೆ.
ಭಾರತದ ಗಡಿಯೊಳಗೆ ನುಗ್ಗಿರುವ ಚೀನಾ ಪಡೆಗಳು ಬಂಕರ್ ಗಳನ್ನು ಅಳಿಸಿಹಾಕಿವೆ. ಗಲ್ವಾನ ಕಣಿವೆ ಮತ್ತು ಪ್ಯಾಂಗೋಂಗ್ ತ್ಸೋ ಪ್ರದೇಶದಲ್ಲಿ ಹೊಸ ರಚನೆ ನಿರ್ಮಾಣ ಮಾಡಲಾಗಿದೆ. ಗಡಿಯ ಸಮಗ್ರತೆಯನ್ನು ಉಲ್ಲಂಘಿಸಲಾಗಿದೆ. ಹಾಗಾಗಿ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.