ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಚುನಾವಣಾಪೂರ್ವ ಮೈತ್ರಿ ಬೇಡ ಎಂದು ನಾನೂ ಹೇಳಿದ್ದೆ. ಇದರಿಂದ ನಿರೀಕ್ಷಿಸಿದ ಹಾಗೆ ಮತ ಧ್ರುವೀಕರಣ ಆಗುವುದಿಲ್ಲ ಎಂಬುದು ನನ್ನ ಲೆಕ್ಕಾಚಾರವಾಗಿತ್ತು. ಮೈತ್ರಿ ಮಾಡಿಕೊಳ್ಳದೆ ಇದ್ದಿದ್ದರೆ ಕನಿಷ್ಠ 7-8 ಸ್ಥಾನಗಳನ್ನು ಗೆಲ್ಲುತ್ತಿದ್ದೆವು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ಗಳನ್ನು ಮಾಡಿರುವ ಅವರು, ಕೊರೊನಾ ನಿಯಂತ್ರಣ, ಅನ್ ಲೈನ್ ಶಿಕ್ಷಣ ಮತ್ತು ಲಾಕ್ಡೌನ್ ಬಗ್ಗೆ ಮಾತನಾಡಿದ್ದಾರೆ.
ಹಲವು ಮಂದಿ ತಜ್ಞರು ಕೇವಲ ಆನ್ಲೈನ್ ಶಿಕ್ಷಣದಿಂದ ಮಕ್ಕಳ ಮನೋವಿಕಾಸ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಲಾಕ್ಡೌನ್ ನಂತರವೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ಹಾಗಾದರೆ ಲಾಕ್ಡೌನ್ನಿಂದಾದ ಪ್ರಯೋಜನವೇನು? ಈಗ ನಿಜವಾಗಿ ಲಾಕ್ಡೌನ್ ಅಗತ್ಯವಿದೆ. ಸರ್ಕಾರ ಕೇವಲ ಆರ್ಥಿಕತೆಗೆ ಮಹತ್ವ ನೀಡುತ್ತಿದೆ, ಜನರ ಜೀವಗಳಿಗೆ ಬೆಲೆ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಹಳ್ಳಿಗಳಿಂದ ಬಂದ ಜನರು ಬೆಂಗಳೂರಿನಲ್ಲಿ ಉಳಿದುಕೊಳ್ಳುವಂತಹ ವಾತಾವರಣವನ್ನು ಸರ್ಕಾರ ಕಲ್ಪಿಸಬೇಕಿತ್ತು, ಆಗ ಅವರು ಮರಳಿ ಹಳ್ಳಿಕಡೆ ಮುಖ ಮಾಡುವಂತಹಾ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ. ಅವರಿಗೆ ವಸತಿ, ಉದ್ಯೋಗ ನೀಡುವ ಜೊತೆಗೆ ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿರುವುದೇ ಜನ ಹಳ್ಳಿಗಳಿಗೆ ಮರಳಲು ಕಾರಣ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಖರ್ಚು ವೆಚ್ಚಗಳ ಸೂಕ್ತ ಮಾಹಿತಿ ಸರ್ಕಾರದ ಬಳಿಯಿದ್ದರೆ ಅಧಿಕಾರಿಗಳ ಜೊತೆ ಅದನ್ನು ಕಳಿಸಿಕೊಡಲಿ, ನಾನೂ ಒಮ್ಮೆ ನೋಡುತ್ತೇನೆ. ತಾರ್ತಿಕ ಅಂತ್ಯ ಕಾಣುವವರೆಗೂ ಈ ವಿಚಾರದಿಂದ ಹಿಂದೆ ಸರಿಯುವುದಿಲ್ಲ. ಜನರ ಹಣ, ಜನರಿಗೆ ಲೆಕ್ಕ ಕೊಡಬೇಕು. ಇದನ್ನು ಕೇಳುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪಠ್ಯದಿಂದ ಪೌರತ್ವ, ಒಕ್ಕೂಟ ವ್ಯವಸ್ಥೆ, ರಾಷ್ಟ್ರೀಯತೆ, ಜಾತ್ಯತೀತತೆಯ ಅಧ್ಯಾಯಗಳನ್ನು ಕೈಬಿಟ್ಟ CBSE