ಸತತ ಆರು ಆಸ್ಪತ್ರೆಗಳು ದಾಖಲು ಮಾಡಲು ನಿರಾಕರಿಸಿದ ನಂತರ ಹೈದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹೋರಾಟಗಾರ ಬಲ್ಲದೀರ್ ಮೊಹಮ್ಮದ್ ನಿಸ್ಸಾರ್ ಅಹ್ಮದ್ ಕೊರೊನಾಗೆ ಬಲಿಯಾಗಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ಕಳೆಪೆ ಚಿಕಿತ್ಸೆ ಚಿಕಿತ್ಸೆ ನೀಡಲಾಗಿದೆ, ಇದೇ ಅವರ ಸಾವಿಗೆ ಕಾರಣ ಎಂದು TSRTC ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ರಾಜಿ ರೆಡ್ಡಿ ಆರೋಪಿಸಿದ್ದಾರೆ.
55 ವರ್ಷದ ಪ್ರತಿಭಾನ್ವಿತ ಸಾಹಿತ್ಯಿಕ ವ್ಯಕ್ತಿತ್ವ ಹೊಂದಿದ್ದ ಇವರು ಇತ್ತೀಚೆಗೆ ಕೊರೊನಾವೈರಸ್ ಕುರಿತು ಜಾಗೃತಿ ಗೀತೆ ಬರೆದು ಹಾಡಿ ಸುಡ್ಡಲಾ ನಿಸ್ಸಾರ್ ಎಂದು ಜನಪ್ರಿಯವಾಗಿದ್ದರು. ಟ್ರಕ್ ಕ್ಲೀನರ್ ಆಗಿ ಜೀವನವನ್ನು ಪ್ರಾರಂಭಿಸಿದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮದ (TSRTC) ಉದ್ಯೋಗಿಯಾಗಿದ್ದರು. ಅಲ್ಲಿಯೇ ಸಿಬ್ಬಂದಿ ಸಂಘದ ಕಾರ್ಯದರ್ಶಿಯಾಗಿದ್ದರು. ಚಾಲಕನಾಗಿ ಕೆಲಸ ಮಾಡುವಾಗ, ಸಮಾಜದಲ್ಲಿನ ಅಸಮಾನತೆ ಮತ್ತು ಕಾರ್ಮಿಕ ವರ್ಗದ ಸಮಸ್ಯೆಗಳನ್ನು ಎತ್ತಿ ತೋರಿಸುವ ಜಾನಪದ ಗೀತೆಗಳನ್ನು ಬರೆಯಲು ಮತ್ತು ಹಾಡಲು ಪ್ರಾರಂಭಿಸಿದರು. ಸಿಎಎ, ಎನ್ಆರ್ಸಿ ವಿರುದ್ಧವು ಹಲವು ಹಾಡುಗಳನ್ನು ಬರೆದು ಹಾಡಿದ್ದರು.
ಕಳೆದ 3 ದಶಕಗಳಿಂದ ಬರೆಯುತ್ತಾ, ಹಾಡುತ್ತಾ, ಅದರ ಮೂಲಕವೇ ತನ್ನ ಹೋರಾಟವನ್ನು ವ್ಯಕ್ತಪಡಿಸುತ್ತಾ,ಜಾಗೃತಿ ಮೂಡಿಸುತ್ತಿದ್ದ ಸುಡ್ಡಲಾ ನಿಸ್ಸಾರ್ ಅನೇಕ ಅಭಿಮಾನಿಗಳನ್ನು ಹೊಂದಿದ್ದರು. ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿರುವಾಗ ಹಲವಾರು ಖಾಸಗಿ ಆಸ್ಪತ್ರೆಗಳು ಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿವೆ ಎಂದು TSRTC ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ರಾಜಿ ರೆಡ್ಡಿ ಆರೋಪಿಸಿದ್ದಾರೆ. ಇನ್ನೂ ಸರ್ಕಾರಿ ಗಾಂಧಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಲಭ್ಯವಿಲ್ಲದ ಕಾರಣ ಈ ಅನ್ಯಾಯದ ಸಾವು ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಲಸಿಕೆ, ಮೂಲಸೌಕರ್ಯ ಇಲ್ಲದಿದ್ದರೆ 2021 ವೇಳೆಗೆ ದಿನಕ್ಕೆ 2.87 ಲಕ್ಷ ಕೊರೊನಾ ಪ್ರಕರಣ ಸಾಧ್ಯತೆ: ಅಧ್ಯಯನ