ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ವೇತನವನ್ನು ಸಮಯಕ್ಕೆ ಸರಿಯಾಗಿ ನೀಡಲು ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ತನ್ನ ಆದೇಶದ ಹೊರತಾಗಿಯೂ ಸಮಯಕ್ಕೆ ಸರಿಯಾಗಿ ಸಂಬಳ ನೀಡದಿರುವುದನ್ನು ಖಂಡಿಸಿದ ನ್ಯಾಯಾಲಯ ಕೂಡಲೇ ಸಂಬಳ ಪಾವತಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸಮಯಕ್ಕೆ ಸರಿಯಾಗಿ ಸಂಬಳ ನೀಡಲು ವಿಫಲವಾಗಿರುವ ರಾಜ್ಯಗಳಿಗೂ ಚಾಟಿ ಬೀಸಿರುವ ಸುಪ್ರೀಂ, ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಿದೆ.
ಕೇಂದ್ರವು ರಾಜ್ಯಗಳಿಗೆ ಈಗಾಗಲೇ ನಿರ್ದೇಶನಗಳನ್ನು ನೀಡಿದ್ದೇವೆ ಎಂದು ವಾದಿಸಿತು. ಆದರೆ ಪಂಜಾಬ್, ಮಹಾರಾಷ್ಟ್ರ, ತ್ರಿಪುರ ಮತ್ತು ಕರ್ನಾಟಕ ರಾಜ್ಯಗಳು ಇನ್ನೂ ಸಮಯಕ್ಕೆ ಸರಿಯಾಗಿ ಆರೋಗ್ಯ ಕಾರ್ಯಕರ್ತರಿಗೆ ವೇತನ ನೀಡಿಲ್ಲ ಎಂದು ಎಎನ್ಐ ವರದಿ ಮಾಡಿದೆ.
Centre informs SC that Punjab, Maharashtra, Tripura & Karnataka haven't made timely payment to frontline COVID-19 healthcare workers & doctors despite its direction. SC asks Centre to do needful to ensure that salaries of health workers involved in COVID fight are paid in time. pic.twitter.com/4idv5gYlnr
— ANI (@ANI) July 31, 2020
“ನೀವು ಅಸಹಾಯಕರಲ್ಲ. ನಿಮ್ಮ ಆದೇಶವನ್ನು ಕಾರ್ಯಗತಗೊಳಿಸಲಾಗಿದೆಯೆ ಎಂದು ಪರಿಶೀಲಿಸಬೇಕು. ವಿಪತ್ತು ನಿರ್ವಹಣಾ ಕಾಯ್ದೆಯಡಿ ನಿಮಗೆ ಅಧಿಕಾರವಿದೆ. ನೀವು ಸಹ ವೇತನ ನೀಡಲು ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ನ್ಯಾಯಮೂರ್ತಿ ಎಂ.ಆರ್ ಶಾ ನೇತೃತ್ವದ ಪೀಠ ಕೇಂದ್ರದ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಆರೋಗ್ಯ ಕಾರ್ಯಕರ್ತರಿಗೆ ಕ್ಯಾರೆಂಟೈನ್ ಅವಧಿಯನ್ನು ರಜೆ ಎಂದು ಪರಿಗಣಿಸಲಾಗುತ್ತಿದೆ ಎಂಬ ಅರ್ಜಿದಾರರ ದೂರಿನ ಮೇರೆಗೆ ಉನ್ನತ ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅದು ಸರಿಯಿಲ್ಲವೆಂದು ಒಪ್ಪಿಕೊಂಡು, ಅದನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಎನ್ಡಿಟಿವಿ ವಿಡಿಯೊ ಬಿಡುಗಡೆ: ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಸರ್ಕಾರ ಸುಳ್ಳು ಹೇಳಿದೆಯೆ?