Homeಅಂಕಣಗಳು“ಕೇಳುವಿರೇನು ನೀವು ನಾ ಹುಚ್ಚನಾದದ್ದು ಹೇಗೆಂದು?”- ಖಲೀಲ್ ಗಿಬ್ರಾನ್

“ಕೇಳುವಿರೇನು ನೀವು ನಾ ಹುಚ್ಚನಾದದ್ದು ಹೇಗೆಂದು?”- ಖಲೀಲ್ ಗಿಬ್ರಾನ್

- Advertisement -
- Advertisement -

ಒಬ್ಬ ನಿಷ್ಕಪಟ ಅಲೆಮಾರಿಯೊಬ್ಬ ಯಾವ ಸೋಗಿಲ್ಲದ ಗೆಳೆಯನಾಗಿ ಬಂದು ಆಪ್ತತೆಯಿಂದ ಇದ್ದರೆ, ಆತ್ಮೀಯತೆಯನ್ನು ತೋರಿದರೆ, ಆತ ನಮ್ಮೊಡನಿರುವ ಅಲ್ಪ ಕಾಲ ಬದುಕು ಆತ್ಮತೃಪ್ತಿ ಹೊಂದುವುದೆಂದರೆ? ಹೌದಲ್ಲಾ, ಅವನ ಪುಟ್ಟ ಪುಟ್ಟ ಕತೆಗಳು, ಕವನಗಳು ಅದೆಷ್ಟು ಗಾಢ ನೋಟಗಳನ್ನು ಹೊಂದಿರುತ್ತವೆ.

ಖಲೀಲನ ಬರಹಗಳೇ ಹಾಗೆ. ನಮಗೆ ತಿಳಿಯದೇ ಎಲ್ಲೋ ಇರುವ ನಮ್ಮವನೊಬ್ಬ ಮೆಲ್ಲನೆ ನುಸುಳಿ ಬಂದು, “ಹಲೋ, ನಾನಿಲ್ಲಿದ್ದೀನಿ” ಎಂದು ಕೈ ಬೀಸುವಂತೆ.

ವಾಂಡರರ್ ಎಂಬ ತಲೆಬರಹದ ಖಲೀಲನ ಅಲೆಮಾರಿಯಲ್ಲೂ ಹಾಗೇ.

ರಸ್ತೆಗಳು ಸಂಧಿಸುವಲ್ಲಿ ನಾ ಸಂಧಿಸಿದೆ ಅವನ.

ನಿಲುವಂಗಿ ಇಲ್ಲದ, ಜತೆಗಾರನು ಜತೆಗಿಲ್ಲದ, ಆದರೆ ನೋವಿನ ಮುಸುಕನು ಮುಖದ ಮೇಲೆಯೇ ಹೊದ್ದಾತನ.

ವಂದಿಸಿಕೊಂಡೆವು ಒಬ್ಬರಿಗೊಬ್ಬರು. “ನನ್ನಯ ಅತಿಥಿ ನೀನಾಗು, ಬಾ ನನ್ನಯ ಮನೆಗೆಂದು”- ನಾ ಅವನೊಡ ನುಡಿದೆ.

ಹಾ, ಅವ ಬಂದ.

ತಲೆಬಾಗಿಲಿನಲ್ಲಿ ಎದುರಿಗೆ ಬಂದರು ನನ್ನಯ ಹೆಂಡತಿ-ಮಕ್ಕಳು, ಅವರನು ಕಂಡು ನಸುನಕ್ಕನಾತನು, ಅವರೂ ಹಿಗ್ಗುತ ಮನ್ನಿಸಿದಾತನ ಬರುವಿಕೆಯನ್ನು.

ಉಂಬುವ ಎಡೆಯಲಿ ಕುಳಿತೆವು ಎಲ್ಲಾ, ಸಂತಸ ಪಡುತ ಆತನ ಮೌನವ, ಮತ್ತಾತನೊಳಿರುವ ಗುಪ್ತವಹನವ.

ಇರುಳಿನ ಊಟವ ಮುಗಿಸಿದ ನಂತರ ಸೇರಿದೆವೆಲ್ಲಾ ಬೆಂಕಿಯ ಸುತ್ತಲೂ. ಅರಿಯಲು ಕೇಳಿದೆ ನಾನವನ, ಅವನಲೆದಾಟದ ಪರಿ ಕುರಿತು.

ಅಂದಿನ ಇರುಳೂ, ಮುಂದಿನ ದಿನವೂ ಹೇಳಿದನವನು ಬಹು ಕಥೆಗಳನು. ಇಲ್ಲಿ ಮಂಡಿಸುವೆ ಅವನಾ ದಿನಗಳ ಕಾಠಿಣ್ಯಗಳ, ಸಾಗಿದ ಮಾರ್ಗದ ಧೂಳಿನ ಕಥೆಗಳ, ಅವುಗಳ ಒಡನೆ ಆತನಿಗಿದ್ದ ಸಹನೆ ಮತ್ತು ಮರುಕಗಳ.

ಮೂರು ದಿನಗಳ ನಂತರ ಅತಿಥಿಯು ಬಿಟ್ಟು ಹೊರಟರೂ ನಮ್ಮನ್ನು, ಅನಿಸಲೇ ಇಲ್ಲ ಅವ ತೊರೆದಿಹನೆಂದು. ಬದಲನಿಸುತಲಿತ್ತು, ಇಲ್ಲೇ ಹೊರಗೆ ತೋಟದಲಿರುವನು, ಇನ್ನೂ ಒಳಗೆ ಮರಳಿಲ್ಲ ನಮ್ಮೊಡನಿರುವ ಆ ಒಬ್ಬಾತನು.

ಅಲೆಮಾರಿಯಲ್ಲಿ ಖಲೀಲ್ ಗಿಬ್ರಾನ್ ತನ್ನ ಬರಹಗಳ ಮೂಲಕ ಬೂದಿಮುಚ್ಚಿರುವ ನಮ್ಮ ಭಾವದ ಸೆಲೆಯ ಕೆಂಡವನ್ನು ಉರುಬಿ ಜ್ವಲಿಸುವಂತೆ ಮಾಡುತ್ತಾನೆ. ಅವನು ಹೇಳುವ ಕತೆಗಳಲ್ಲಿ ಸೋಗಲಾಡಿತನದ ಸಮಾಜದ ಸಿದ್ಧ ಮಾದರಿಗಳನ್ನು ಪ್ರತಿಭಟಿಸುವುದೂ ಕೂಡಾ ಉಂಟು.

ಅದೊಂದು ದಿನ ಸೌಂದರ್ಯ ಮತ್ತು ಕುರೂಪಗಳೆರಡೂ ಸಂಧಿಸಿದವು ಒಂದು ಸಾಗರ ದಂಡೆಯಲಿ. ಒಬ್ಬರಿಗೊಬ್ಬರು ನುಡಿಯಾಡಿಕೊಂಡರು, “ನಡೆ ಮೀಯುವ ಆ ಸಾಗರದಲಿ.” ಎಂದು.

ಕಳಚಿ ಉಡುಪುಗಳ ನೀರಲಿ ಅವರು ಈಜಿದರು. ಸಮಯ ಸರಿಯಲು ದಡಕೆ ಬಂದಿತು ಕುರೂಪವು ಮೊದಲು. ಅಲ್ಲಿಂದ ಹೊರಟಿತು ಸೌಂದರ್ಯದ ಉಡುಪನ್ನು ತಾನುಟ್ಟು.

ಸೌಂದರ್ಯವೂ ಸಾಗರದಿಂದ ಹೊರಗೆ ಬಂದಿತು. ಕಾಣದಾಯಿತು ತಾ ಬಿಚ್ಚಿಟ್ಟಿದ್ದ ಉಡುಪು. ಅದಕೋ ಬಲು ಸಂಕೋಚ ಬೆತ್ತಲಾಗಿ ತಾನಿರಲು. ಕುರೂಪದ ಉಡುಪನೇ ತೊಟ್ಟಿತು, ಬೇರೆದಾರಿಯನು ಕಾಣದೇ. ಅದರಲೇ ನಡೆಯಿತು, ಹಿಡಿದದರ ದಾರಿ.

ಅಂದಿನಿಂದಲಿ ಸ್ತ್ರೀ-ಪುರುಷರೆಲ್ಲಾ ಒಂದಕೆ ಮತ್ತೊಂದನು ತಪ್ಪಾಗಿ ತಿಳಿಯುವರು.

ಆದರೂ ಸೌಂದರ್ಯದ ಮುಖ ನೋಡಿದ ಹಲವರು, ಅರಿವರು ಅದು ತೊಟ್ಟಿಹ ಉಡುಪು ಅದಕೆ ಹೊಂದುತ್ತಿಲ್ಲೆಂದು. ಅಂತೆಯೇ ಕುರೂಪದ ಮುಖ ಕಂಡವರ ಕಣ್ಣುಗಳಿಂದ, ಅದು ತಾ ತೊಟ್ಟಿಹ ಉಡುಗೆಯಿಂದ ತನ್ನನು ತಾ ಮರೆಮಾಚಲಾರದು.

ಲೋಕದ ಕಣ್ಣಿಗೆ ಕಾಣುವ ಮಂದಿಯ ಬಗೆಯನ್ನು ಪ್ರಶ್ನಿಸುವುದಿರಲಿ, ಸೌಂದರ್ಯವನ್ನೂ ಸಿದ್ಧ ಮಾದರಿಯ ಸೂತ್ರದಲ್ಲಿ ಕಟ್ಟಿಕೊಂಡಿರುವಂತ ಮಂದಿಯು ತಮ್ಮಲ್ಲೊಮ್ಮೆ ನೋಡಿಕೊಳ್ಳುವರೇ?

ಅವುಗಳು ಕತೆಗಳಲ್ಲ, ಸಾಮತಿಗಳು ಅಥವಾ ದೃಷ್ಟಾಂತಗಳು. ವಿಷಯಗಳನ್ನು ಸ್ಪಷ್ಟಪಡಿಸಲು, ಅರಿವಿನ ಹೂರಣವನ್ನು ಹೊರಗೆಡವಲು ಕಥನ ವಿಧಾನವನ್ನು ಅನುಸರಿಸುವುದು ಅವರ ಮಾರ್ಗ. ಯೇಸುವೂ ತನ್ನ ಬೋಧನೆಗಳಲ್ಲಿ ಹಾಗೆ ಮಾಡುತ್ತಿದ್ದ. ರಾಮಕೃಷ್ಣ ಪರಮಹಂಸರೂ ತಮ್ಮ ದೃಷ್ಟಾಂತದ ಕತೆಗಳಲ್ಲಿ ಸೂಕ್ಷ್ಮ ಒಳನೋಟವನ್ನು ಹೊಂದಿರುತ್ತಿದ್ದರು.

ಖಲೀಲನ ಇನ್ನೊಂದು ಕತೆ ನೋಡಿ.

ಬಾನಾಡಿಯೊಂದು ಮತ್ತು ಹದ್ದೊಂದು ಸಂಧಿಸಿದವು ಎತ್ತರದ ಬೆಟ್ಟದ ಮೇಲಿನ ಬಂಡೆಯೊಂದರ ಮೇಲೆ. ಬಾನಾಡಿ, “ಸುಪ್ರಭಾತವು ನಿಮಗೆ ಸ್ವಾಮಿ.” ಎಂದು ಹೇಳಲು ಹದ್ದು ಅದನ್ನು ಕಡೆಗಣಿಸುತ್ತಾ ನೀರಸವಾಗಿ ನುಡಿಯಿತು, “ಸುಪ್ರಭಾತ.”

ಬಾನಾಡಿ ಮತ್ತೂ ಹೇಳಿತು, “ಸ್ವಾಮೀ, ತಮ್ಮೆಲ್ಲಾ ಕಾರ್ಯ ಚಟುವಟಿಕೆಗಳು ಚೆನ್ನಾಗಿ ನಡೆಯುತ್ತಿರಬೇಕೆಂದು ನಾನು ಭಾವಿಸುತ್ತೇನೆ.”

“ಹೇಯ್,” ಹದ್ದು ಹೇಳಿತು, “ನನ್ನೆಲ್ಲಾ ಸಮಾಚಾರಗಳೂ ಚೆನ್ನಾಗೇ ಇವೆ. ಆದರೆ ನಿನಗಿದು ತಿಳಿಯದೇ ನಾವು ಪಕ್ಷಿಗಳ ರಾಜನೆಂದು ಮತ್ತು ನಾವಾಗಿಯೇ ನಿನ್ನನ್ನು ಮಾತನಾಡಿಸದ ಹೊರತು ನೀನು ನಮ್ಮನ್ನುದ್ದೇಶಿಸಿ ಮಾತಾಡಬಾರದೆಂದು?”

ಬಾನಾಡಿ ಹೇಳಿತು, “ನಾವೆಲ್ಲಾ ಒಂದೇ ಕುಟುಂಬಕ್ಕೆ ಸೇರಿದವರೆಂದು ನಾನು ಬಗೆದೆ.”

ಹದ್ದು ಅವನನ್ನು ತಿರಸ್ಕಾರದಿಂದ ಕಡೆಗಣಿಸಿ ಹೇಳಿತು, “ಯಾರವರು ಹೇಳಿದ್ದು ನೀನು ಮತ್ತು ನಾನು ಒಂದೇ ಕುಟುಂಬವೆಂದು.”
ಆಗ ಬಾನಾಡಿ ಹೇಳಿತು, “ನಿಮಗೆ ಈ ಒಂದು ವಿಷಯವನ್ನು ಚಿತ್ತಕ್ಕೆ ತರಲಿಚ್ಚಿಸುತ್ತೇನೆ. ನೀವೇರುವ ಎತ್ತರಕ್ಕೆಯೇ ನಾನೂ ಹಾರಬಲ್ಲೆ. ನಾನು ಹಾಡಿ ಈ ಭೂಮಿಯ ಇತರ ಜೀವಿಗಳಿಗೆ ಮುದಕೊಡಬಲ್ಲೆ. ಮತ್ತೆ ನೀವು ಆನಂದವನ್ನೋ ಅಥವಾ ಮುದವನ್ನೊ ಕೊಡಲಾರಿರಿ.”

ಆಗ ಕೋಪಗೊಂಡ ಹದ್ದು ಹೇಳಿತು. “ಆನಂದ ಮತ್ತು ಮುದ! ಎಲಾ ದುರಹಂಕಾರದ ಕ್ಷುದ್ರ ಜಂತುವೇ! ಒಮ್ಮೆಗೇ ನನ್ನ ಕೊಕ್ಕಿನಿಂದ ನಿನ್ನ ಒತ್ತಿ ನಾಶ ಮಾಡಿಬಿಡಬಲ್ಲೆ. ನೀನು ನನ್ನ ಪಾದದಷ್ಟೂ ಅಳತೆಗಿಲ್ಲ.”

ಬಾನಾಡಿಯಾಗ ಹಾರಿ ಹದ್ದಿನ ಬೆನ್ನ ಮೇಲೆರಗಿ ಅವನ ಪುಕ್ಕಗಳನ್ನು ಕೀಳಲಾರಂಭಿಸಿತು. ಹದ್ದಿಗೆ ರೇಗಿತು. ಸರ್ರನೆ ಮೇಲಕ್ಕೆ ಹಾರಿ ಆ ಕ್ಷುದ್ರ ಪಕ್ಷಿಯನ್ನು ನಿವಾರಿಸಿಕೊಳ್ಳಲು ಸಾಧ್ಯವೇನೋ ಎಂದು ನೋಡಿತು. ಆದರೆ ತನ್ನ ಕಾರ್ಯದಲ್ಲಿ ವಿಫಲವಾಯಿತು. ಕೊನೆಗೆ ಶಪಿಸುತ್ತಾ ತನ್ನ ಕೆಟ್ಟ ಕಾಲವನ್ನು ಬೆನ್ನಿಗಂಟಿದ್ದ ಆ ಪಕ್ಷಿಯೊಂದಿಗೆ ಎಂದೂ ಇಲ್ಲದಷ್ಟು ಆ ಎತ್ತರದ ಬೆಟ್ಟದ ಬಂಡೆಗಲ್ಲುಗಳಿಗೆ ಬೆನ್ನನ್ನು ತಗುಲಿಸಿಕೊಳ್ಳುತ್ತಿತ್ತು.

ಈಗ ಅಲ್ಲಿಗೊಂದು ಸಣ್ಣ ಆಮೆಯೊಂದು ಬಂದು ತಾನು ಕಾಣುತ್ತಿರುವ ಆ ದೃಶ್ಯಕ್ಕೆ ನಗಲಾರಂಭಿಸಿತು. ಅದೆಷ್ಟು ಹೊರಳಾಡಿಕೊಂಡು ಅದು ನಕ್ಕಿತೆಂದರೆ, ಇನ್ನೇನು ತನ್ನ ಬೆನ್ನ ಮೇಲೆಯೇ ಹೊರಳಿಬಿಡುತ್ತಿತ್ತು.

ಆ ಆಮೆಯನ್ನು ಉಪೇಕ್ಷೆಯಿಂದ ನೋಡುತ್ತಾ ಹದ್ದು ಹೇಳಿತು, “ಹೇ, ಭೂಮಿಯ ಮೇಲೆಯೇ ಬೇರೆಲ್ಲೂ ಕಾಣದಂತಹ ನಿಧಾನ ಗತಿಯಲ್ಲಿ ತೆವಳುವ ಜಂತುವೇ, ನೀನು ನಗುತ್ತಿರುವುದಾದರೂ ಏತಕ್ಕೆ?”

ಆ ಆಮೆ ಹೇಳಿತು, “ನೀನೊಂದು ಕುದುರೆಯಾಗಿ ಬದಲಾಗಿರುವುದನ್ನೇಕೆ ನೋಡುತ್ತಿರುವೆನೋ. ಅದೂ ಪುಟ್ಟ ಪಕ್ಷಿಯೊಂದು ನಿನ್ನ ಮೇಲೆ ಸವಾರಿ ಮಾಡುತ್ತಿದೆ. ಆದರೆ ನೋಡು, ಸಣ್ಣ ಪಕ್ಷಿಯೇ ಉತ್ತಮ ಪಕ್ಷಿ.

ಹದ್ದು ಆಮೆಗೆ ಹೇಳಿತು, “ನಿನ್ನ ಕೆಲಸ ನೀನು ನೋಡಿಕೋ ಹೋಗು. ಈ ಬಾನಾಡಿ ಸೋದರ ಮತ್ತು ಇದು ನಮ್ಮ ನಮ್ಮ ನಡುವಿನ ಕುಟುಂಬದ ವಿಷಯ.”

ಸಮಾಜದಲ್ಲಿ ಮುಖವಾಡಗಳು ಮತ್ತು ಹುಸಿಪ್ರತಿಷ್ಟೆಗಳ ಆರ್ಭಟಗಳ ನಡುವೆ ನಾವು ಹುಚ್ಚರಾಗಿಬಿಡುತ್ತೇವೆ ಎಂದುಕೊಂಡರೆ, ಓಶೋ ಹೇಳುತ್ತಾನೆ, ಹುಚ್ಚರೇ ನಿಜವಾದ ಪ್ರಾಮಾಣಿಕ ಒಳದನಿಯುಳ್ಳವರು ಎಂದು. ಓಶೋ ಖಲೀಲನ ಬಹುದೊಡ್ಡ ಅಭಿಮಾನಿ. ಖಲೀಲನೂ ಒಬ್ಬ ಹುಚ್ಚ. ಅವನ ಹುಚ್ಚ ಎನ್ನುವ ಪುಸ್ತಕದಲ್ಲಿ ಹೀಗೆ ತೆರೆದುಕೊಳ್ಳುತ್ತಾನೆ.

ಕೇಳುವಿರೇನು ನೀವು ನಾ ಹುಚ್ಚನಾದದ್ದು ಹೇಗೆಂದು?

ಅದು ನಡೆದಿದ್ದು ಹೀಗೆ:

ಅದೊಂದು ದಿನ, ಅದೆಷ್ಟೋ ದೇವರುಗಳು ಹುಟ್ಟುವ ಮುನ್ನ,

ಗಾಢನಿದ್ರೆಯಿಂದ ನಾ ಎಚ್ಚರಗೊಂಡೆ, ನನ್ನೆಲ್ಲಾ ಮುಖವಾಡಗಳೂ ಕಳುವಾಗಿರುವುದನ್ನು ಕಂಡುಕೊಂಡೆ.

ಏಳು ಜನುಮಗಳಲ್ಲಿ ನಾ ರಚಿಸಿ ತೊಟ್ಟಿದ್ದ ಆ ಏಳು ಮುಖವಾಡಗಳು!

ಮುಖವಾಡವಿಲ್ಲದೆಯೇ ಓಡಿದೆನು ಜನಭರಿತ ಬೀದಿಗಳಲರಚಿದೆನು, “ಕಳ್ಳರು, ಕಳ್ಳರು, ದರಿದ್ರದ ಕಳ್ಳರು!”

ಸ್ತ್ರೀ-ಪುರುಷರು ನಕ್ಕರು ನನ್ನ ನೋಡಿ. ಮನೆಯೊಳಗೆ ಓಡಿದರು ಕೆಲವರು ನನ್ನ ಭಯದಿಂದಲೇ ಕೂಡಿ.

ನಾ ತಲುಪಿದೆನಾಗ ಸಂತೆಮಾಳವನು, ಮನೆ ಮೇಲೆ ನಿಂತು ಕೂಗಿದನೊಬ್ಬ ಯುವಕನು, “ಅವನೊಬ್ಬ ಹುಚ್ಚ.”

ಹಾಗೆ ಕೂಗಿದವನ ದೃಷ್ಟಿಸಲೆಂದು ತಲೆಯೆತ್ತಿ ನೋಡಿದೆನು.

ಮೊದಲಬಾರಿಗೆ ನನ್ನದೇ ಆದ ನನ್ನ ನಗ್ನ ಮುಖವನ್ನು ಸೂರ್ಯ ಚುಂಬಿಸಿದನು.

ಪ್ರೇಮದೊಳು ನನ್ನಾತ್ಮ ರವಿಗಾಗಿ ಜ್ವಲಿಸಿತು.

ನನ್ನ ಮುಖವಾಡಗಳು ಇನ್ನು ಎನಗೆ ಬೇಡವಾಯಿತು.

ಪರವಶದಲಿ ಇರುವಂತೆ ನಾ ಕೂಗಿ ಹೇಳಿದೆ,

“ನನ್ನ ಮುಖವಾಡಗಳ ಕದ್ದೊಯ್ದ ಕಳ್ಳರು ಭಾಗ್ಯವಂತರು, ಭಾಗ್ಯವಂತರು.”

ಈ ರೀತಿಯಲ್ಲಿ ನಾ ಹುಚ್ಚನಾದೆ.

ಹಾಗೆ ಅರಿತುಕೊಳ್ಳುವುದರಲ್ಲಿ ನಾ ಕಂಡುಕೊಂಡೆ

ಏಕಾಂತತೆಯ ಮುಕ್ತತೆಯನ್ನೂ ಮತ್ತದರ ಸುರಕ್ಷಿತತೆಯನ್ನು,

ನಮ್ಮೊಳಗಿನ ಯಾವುದಕ್ಕಾದರೂ ಅಡಿಯಾಳಾಗಿರುವುದನ್ನು ಅರಿತುಕೊಂಡವರಾಗಿರುವುದಕ್ಕೆ.

ಏನಾದರಾಗಲಿ, ನನ್ನ ಸುರಕ್ಷಿತತೆಯ ಬಗ್ಗೆ ಅತಿಜಂಭ ನನಗೆ ಬೇಡವಾಗಿರಲಿ,

ಬಂಧಿಖಾನೆಯೊಳಗಿರುವ ಕಳ್ಳನೂ ಇನ್ನೊಬ್ಬ ಕಳ್ಳನಿಗಿಂತ ಸುರಕ್ಷಿತನು.

ಕೆಲವೊಮ್ಮೆ ಖಲೀಲನಂತವರು ಹೇಳುವ ಕತೆಗಳನ್ನು ವಿವರಿಸಲು ಹೋದರೆ, ಅವನ್ನು ಸಂಕುಚಿತಗೊಳಿಸಿಬಿಡುವ ಎಡವಟ್ಟು ಮಾಡಿಕೊಂಡುಬಿಡುತ್ತೇವೆ ಎನಿಸುತ್ತದೆ. ಬಹಳ ಸರಳವಾದ ಕತೆ ಅದೇನೇನನ್ನೋ ಹೇಳುತ್ತದೆ. ಓದುವವರಿಗೇ ಬಿಟ್ಟುಬಿಡಬೇಕು.

ಸೂರ್ಯೋದಯದ ಸಮಯದಲ್ಲಿ ನರಿಯೊಂದು ತನ್ನ ನೆರಳನ್ನು ನೋಡಿಕೊಂಡು ಹೇಳಿತು, “ನಾನಿವತ್ತು ನನ್ನ ಊಟಕ್ಕೆ ಒಂಟೆಯನ್ನು ತಿನ್ನುವೆ” ಎಂದು.

ಹಾಗೆಂದು ಬೆಳಗ್ಗೆ ಪೂರ್ತಿ ಒಂಟೆಗಳನ್ನು ಹುಡುಕುತ್ತಾ ಹೊರಟಿತು.

ಆದರೆ ಮಧ್ಯಾಹ್ನ ಮತ್ತೆ ತನ್ನ ನೆರಳನ್ನು ನೋಡಿಕೊಂಡು ಹೇಳಿತು, “ಒಂದು ಇಲಿಯಷ್ಟೇ ಸಾಕು” ಎಂದು.

ಅವರವರ ಸಿದ್ಧಾಂತಗಳು, ಧರ್ಮಗಳು, ನಂಬಿಕೆ ಶ್ರದ್ಧೆಗಳು ಶ್ರೇಷ್ಟವೆಂದು ಕಣ್ಣೆದುರು ನಡೆಯುತ್ತಿರುವ ಸಂಘರ್ಷಗಳನ್ನು ಕಂಡಾಗ ಖಲೀಲ ಮೆಲ್ಲನೆ ಈ ಕತೆಯನ್ನು ಕಿವಿಯಲ್ಲಿ ಉಸುರಿದಂತಾಗಿ ನಗು ಬಂದುಬಿಡುತ್ತದೆ.

ಒಂದು ದಿನ ಜಾಣ ನಾಯೊಂದು ಸಾಗಿ ಹೋಗುವಾಗ ಬೆಕ್ಕುಗಳ ಗುಂಪೊದನ್ನು ಕಂಡಿತು. ನಾಯಿಯು ಅವುಗಳ ಹತ್ತಿರ ಹೋದಾಗಲೂ ಅವುಗಳು ಇದರತ್ತ ಗಮನ ಹರಿಸದೇ ಮೈಮರೆತಿವುದನ್ನು ಕಂಡು ಅಲ್ಲೇ ನಿಂತಿತು.

ಆಗ ಅವುಗಳ ನಡುವಿಂದ ಒಂದು ದೊಡ್ಡ ಹಾಗೂ ಗಂಭೀರವಾದ ಬೆಕ್ಕೊಂದು ಎದ್ದು ನಿಂತು ತನ್ನ ಸುತ್ತಲಿರುವ ಇತರ ಬೆಕ್ಕುಗಳನ್ನು ನೋಡಿ ಹೇಳಿತು.

“ಸಹೋದರರೇ, ಪ್ರಾರ್ಥಿಸಿ, ಮತ್ತೆ ಮತ್ತೆ ಪ್ರಾರ್ಥಿಸಿ, ಹಾಗೆ ನೀವು ಮತ್ತೆ ಮತ್ತೆ ಪ್ರಾರ್ಥಿಸಲು, ಅನುಮಾನವೇ ಬೇಡ, ಖಂಡಿತವಾಗಿ ಆಗ ಇಲಿಗಳ ಮಳೆಯೇ ಸುರಿಯುವುದು.”

ನಾಯಿಯು ಇದನ್ನು ಕೇಳಿದಾಗ ಮನಸ್ಸಿನಲ್ಲಿಯೇ ನಕ್ಕು, “ಓ ಮೂಢ ಮತ್ತು ಅಂಧ ಬೆಕ್ಕುಗಳೇ ಶಾಸ್ತ್ರಗಳಲ್ಲಿ ಬರೆದಿರುವುದು ತಿಳಿದಿಲ್ಲವೇನು? ಹಾಗೂ ನನಗೂ, ನನಗಿಂತ ಮೊದಲೂ ನನ್ನ ಪರಮಪಿತನಿಗೂ ತಿಳಿದಿಲ್ಲವೇನು? ವಿಶ್ವಾಸ ಮತ್ತು ಶ್ರದ್ಧೆಯಿಂದ ಪ್ರಾರ್ಥಿಸಿದ್ದೇ ಆದರೆ ಸುರಿಯುವುದು ಇಲಿಗಳ ಮಳೆಯಲ್ಲ. ಬದಲಿಗೆ ಮೂಳೆಗಳ ಮಳೆಯೆಂಬುದನ್ನು” ಎಂದುಕೊಳ್ಳುತ್ತಾ ಹೊರಟು ಹೋಯಿತು.

ಖಲೀಲನೇ ಹಾಗೆ. ಅವನೂ ಮತ್ತು ಅವನ ಬರಹಗಳೂ ಸರಳವೇ ಆದರೂ, ಒಂದು ಸರಳಗಣ್ಣಿನ ಸಾಮರ್ಥ್ಯವಿರದಿದ್ದರೆ ಅವನು ಹೇಳುವುದಕ್ಕೆ ಕಿವಿಗಳು ಕಿವುಡಾಗಿಬಿಡುತ್ತವೆ.


ಇದನ್ನು ಓದಿ: ಮನೋಜ್ ಸಿನ್ಹಾ ಜಮ್ಮು ಕಾಶ್ಮೀರದ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...