ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಗ್ರಾಮದಲ್ಲಿ ಕೊರಚ ಸಮುದಾಯಕ್ಕೆ ಸೇರಿದ ಅಲೆಮಾರಿ ಜನಾಂಗದ ಮೂವರ ಕಗ್ಗೊಲೆ ಖಂಡಿಸಿ, ಆರೋಪಿಗಳ ಪತ್ತೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಅಲೆಮಾರಿ, ಅರೆ-ಅಲೆಮಾರಿ ಬುಡಕಟ್ಟು SC/ST ಮಹಾಸಭಾ, ಕರ್ನಾಟಕ ಶಾಂತಿ ಸೌಹಾರ್ದ ವೇದಿಕೆ ಮತ್ತು ಜಿಲ್ಲಾ ಸಿಳ್ಳೆ ಕ್ಯಾತಾರ ಸಂಘದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ನೂರಾರು ಜನರು ಭಾಗವಹಿಸಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ದಲಿತರು, ಅಲೆಮಾರಿ ಬುಡಕಟ್ಟು ಜನಾಂಗದವರಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರಗಳು ದಲಿತರ ಹಕ್ಕುಗಳನ್ನು ದಮನ ಮಾಡುತ್ತಿವೆ. ದಲಿತರು ಕುಡಿಯಲು ನೀರು ಕೇಳಿದ್ರೆ ಜಾತಿ ನಿಂದನೆ ಮಾಡಿ ಅವಮಾನ ಮಾಡುತ್ತಿದ್ದಾರೆ. ಪೆಟ್ರೋಲ್ ಕೇಳಿದರೆ ಕಂಬಕ್ಕೆ ಕಟ್ಟಿ ಹೊಡೆಯುತ್ತಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಾಯಕನಹಟ್ಟಿಯಲ್ಲಿ ನಡೆದಿರುವ ಕೊಲೆ ಪ್ರಕರಣವು ಅಮಾನವೀಯ ಕೃತ್ಯವಾಗಿದೆ. ಈ ಕೂಡಲೇ ದೌರ್ಜನ್ಯ ಪ್ರಕರಣ ದಾಖಲಿಸಿ ನ್ಯಾಯಯುತ ತನಿಖೆ ನಡೆಸಬೇಕು. ಆರೋಪಿಗಳನ್ನು ಬಂಧಿಸುವ ಮೂಲಕ ನೊಂದವರಿಗೆ ನ್ಯಾಯ ಮತ್ತು ರಕ್ಷಣೆ ನೀಡಬೇಕೆಂದು ಅವರು ಆಗ್ರಹಿಸಿದರು.
ಪ್ರಗತಿಪರ ಹೋರಾಟಗಾರರಾದ ವಿಶ್ವಸಾಗರ್ ಮಾತನಾಡಿ “ನಾಯಕನಹಟ್ಟಿ ಕೊಲೆ ಪ್ರಕರಣವು ರಾಜ್ಯವೇ ಬೆಚ್ಚಿ ಬೀಳಿಸಿದ ಘಟನೆಯಾಗಿದೆ. ಪೊಲೀಸರು ತ್ವರಿತ ತನಿಖೆ ನಡೆಸಬೇಕು. ಶೋಷಿತರಿಗೆ ರಕ್ಷಣೆ ಕೊಡುವ ಜವಾಬ್ದಾರಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯದ್ದಾಗಿದೆ” ಎಂದರು.
ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷರಾದ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ ‘ಕೊಲೆಗೀಡಾದ ವ್ಯಕ್ತಿಗಳು ಹಂದಿ ಸಾಕಾಣಿಕೆ ಕಸುಬು ಮಾಡುತ್ತಿದ್ದರು. ಹಂದಿ ಕಳ್ಳತನ ಮಾಡುವ ಉದ್ದೇಶದಿಂದಲೇ ಅವರನ್ನು ಕಗ್ಗೊಲೆ ಮಾಡಲಾಗಿದೆ. ಅವರ ಜೀವಕ್ಕೆ ಬೆಲೆ ಇಲ್ಲವೇ? ಜಿಲ್ಲೆಯಲ್ಲಿ ಕಳ್ಳತನ ಮಾಡಲು ಕೊಲೆ ಮಾಡುವಂತಹ ಹೀನ ಪರಿಸ್ಥಿತಿ ಬಂದಿದೆಯೆಂದರೆ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದರ್ಥ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ನೀಡಿ ಎಲ್ಲಾ ಹಂದಿ ಸಾಕುವವರನ್ನು ನಗರದಿಂದ ಹೊರಗೆ ಹಾಕಲಾಗಿದೆ. ಅವರಿಗೆ ನಗರ ಸಭೆ, ಪುರಸಭೆಗಳಿಂದ ಕಿರುಕುಳ ಕೊಡಲಾಗುತ್ತಿದೆ. ಲಾಕ್ಡೌನ್ ಕಾರಣದಿಂದ ಈಗಾಗಲೇ ಸಂಕಷ್ಟದಲ್ಲಿರುವ ಕೊರಚ ಸಮುದಾಯದ ಅಲೆಮಾರಿಗಳಿಗೆ ಬೇರೆ ಉದ್ಯೋಗವಿಲ್ಲ. ಹಾಗಾಗಿ ಊರ ಹೊರಗಿರುವವರಿಗೆ ಪೊಲೀಸ್ ರಕ್ಷಣೆ ನೀಡಬೇಕು. ಕೊಲೆಗೆ ಸಂಬಂಧಿಸಿದಂತೆ ಎಸ್ಎಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ರಾಧಿಕಾ “ಕೊರಚ ಸಮುದಾಯದ ಕಗ್ಗೂಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು. ತೀವ್ರಗತಿಯಲ್ಲಿ ತನಿಖೆ ನಡೆಸಲಿದ್ದ, ಆರೋಪಿಗಳ ಬಂಧನಕ್ಕೆ ಪ್ರಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ” ಎಂದರು.
ಪ್ರತಿಭಟನೆಯಲ್ಲಿ ಅಲೆಮಾರಿ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎಂ.ನಾಗರಾಜ್, ಕೃಷ್ಣಪ್ಪ, ಗುರುಮೂರ್ತಿ, ಸಿಳ್ಳೆಕ್ಯಾತಾರ್ ಸಂಘದ ಜಿಲ್ಲಾಧ್ಯಕ್ಷ ತ್ಯಾಗರಾಜ, ರವಿಕುಮಾರ್, ಬಿಎಸ್ಪಿ ಜಿಲ್ಲಾಧ್ಯಕ್ಷ ವೆಂಕಟೇ ಶ್ಐಹೊಳೆ, ಎನ್. ಪ್ರಕಾಶ್ ಹೊಳಲ್ಕೆರೆ ಮುಂತಾದವರು ಭಾಗವಹಿಸಿದ್ದರು.
ಇದನ್ನೂ ಓದಿ: KRS ಬುಡದಲ್ಲಿ ಗಣಿಗಾರಿಕೆ ನಿಷೇಧಕ್ಕೆ ಸಿಎಂ ಎದುರು ಹೋರಾಟ: ಮುಖಂಡರ ಬಂಧನ