Homeಬಹುಜನ ಭಾರತಬಹುಜನ ಭಾರತ: ಇತಿಹಾಸದ ಕಟಕಟೆಯಲ್ಲಿ ಅರುಣ್ ಮಿಶ್ರ ಎಂಬ ನ್ಯಾಯಮೂರ್ತಿ

ಬಹುಜನ ಭಾರತ: ಇತಿಹಾಸದ ಕಟಕಟೆಯಲ್ಲಿ ಅರುಣ್ ಮಿಶ್ರ ಎಂಬ ನ್ಯಾಯಮೂರ್ತಿ

ಭಾರತದ ಸರ್ವೋಚ್ಚ ನ್ಯಾಯಾಲಯದ ಕಾರ್ಯವೈಖರಿ ಈಗಿನಷ್ಟು ಟೀಕೆ ಟಿಪ್ಪಣಿಗೆ ಗುರಿಯಾಗಿರುವಷ್ಟು ಕಳೆದ ಎಪ್ಪತ್ತು ವರ್ಷಗಳ ಅಸ್ತಿತ್ವದಲ್ಲಿ ಹಿಂದೆಂದೂ ಆಗಿರಲಿಲ್ಲ.

- Advertisement -
- Advertisement -

ಮೊನ್ನೆ ಆಗಸ್ಟ್ 31ರಂದು ರಾಜಸ್ತಾನದಲ್ಲಿನ ಅದಾನಿ ವಿದ್ಯುಚ್ಛಕ್ತಿ ಉತ್ಪಾದನಾ ಸ್ಥಾವರಕ್ಕೆ 8000 ಕೋಟಿ ರುಪಾಯಿಯ ಪರಿಹಾರ ನೀಡುವಂತೆ ಸುಪ್ರೀಮ್ ಕೋರ್ಟು ಆದೇಶ ನೀಡಿತು. ಸಂಬಂಧಪಟ್ಟ ನ್ಯಾಯಪೀಠದ ನೇತೃತ್ವ ವಹಿಸಿದ್ದವರು ನ್ಯಾಯಮೂರ್ತಿ ಅರುಣ್ ಮಿಶ್ರ.

ವಿದ್ಯುಚ್ಛಕ್ತಿ ದರಗಳ ಏರಿಕೆಯ ಮುಖಾಂತರ ಸಾವಿರಾರು ಕೋಟಿ ರುಪಾಯಿಗಳ ಈ ಮೊತ್ತವನ್ನು ಚುಕ್ತಾ ಮಾಡುವವರು ರಾಜಸ್ತಾನದ ಜೈಪುರ, ಜೋಧಪುರ ಹಾಗೂ ಅಜ್ಮೇರಿನ ಜನಸಾಮಾನ್ಯರು.

ಮಿಶ್ರ ಅವರು ಸೆಪ್ಟಂಬರ್ ಎರಡರಂದು ನಿವೃತ್ತಿ ಹೊಂದಿದರು. ನ್ಯಾಯಮೂರ್ತಿ ಅರುಣ್ ಮಿಶ್ರ ನೇತೃತ್ವದ ನ್ಯಾಯಪೀಠಗಳು 2019ರ ಆರಂಭದಿಂದ ಮೊನ್ನೆಯ ತನಕ ಅದಾನಿ ಗ್ರೂಪ್ ಪರವಾಗಿ ತೀರ್ಪು ನೀಡಿ ಏಳನೆಯ ಖಟ್ಲೆ ಇದಾಗಿತ್ತು.

ಭಾರತದ ಸರ್ವೋಚ್ಚ ನ್ಯಾಯಾಲಯದ ಕಾರ್ಯವೈಖರಿ ಈಗಿನಷ್ಟು ಟೀಕೆ ಟಿಪ್ಪಣಿಗೆ ಗುರಿಯಾಗಿರುವಷ್ಟು ಕಳೆದ ಎಪ್ಪತ್ತು ವರ್ಷಗಳ ಅಸ್ತಿತ್ವದಲ್ಲಿ ಹಿಂದೆಂದೂ ಆಗಿರಲಿಲ್ಲ. ಆಳುವವರಿಗೆ ಮುಳ್ಳೆನಿಸುವ ಮೊಕದ್ದಮೆಗಳನ್ನು ವಿಚಾರಣೆಗೆ ಎತ್ತಿಕೊಳ್ಳದೆ ಬದಿಗೆ ಸರಿಸುವುದೇ ಅಲ್ಲದೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಹೊರಬಿದ್ದ ತೀರ್ಪುಗಳೇ ಪ್ರಶ್ನಾರ್ಹ ಎನಿಸಿವೆ.

2018ರ ಜನವರಿಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದು ಇದೇ ಅಂಶವನ್ನು. ಸುಪ್ರೀಮ್ ಕೋರ್ಟ್ ಆಡಳಿತ ಕೊಳೆತಿದ್ದು, ದೇಶದಲ್ಲಿ ಜನತಂತ್ರ ಉಳಿಯಬೇಕೆಂದಿದ್ದರೆ ಅದನ್ನು ಸರಿಪಡಿಸಬೇಕು ಎಂದು ಹೇಳಿಕೆ ನೀಡಿದ್ದರು.

ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಯಾವ್ಯಾವ ನ್ಯಾಯಮೂರ್ತಿಗೆ ಯಾವ್ಯಾವ ಕೇಸುಗಳನ್ನು ವಿಚಾರಣೆಗೆ ಒಪ್ಪಿಸಬೇಕೆಂಬ ತೀರ್ಮಾನದಲ್ಲಿ ಗಂಭೀರ ಅಕ್ರಮಗಳು ನಡೆಯುತ್ತಿವೆ ಎಂಬ ಅಪಾದನೆಯನ್ನು ಈ ಹಿರಿಯ ನ್ಯಾಯಮೂರ್ತಿಗಳು ಮಾಡಿದ್ದರು. ನ್ಯಾಯಾಲಯದ ಘನತೆ ಮಣ್ಣುಪಾಲಾಗುತ್ತದೆಂಬ ಕಾರಣದಿಂದ ವಿವರಗಳನ್ನು ಬಹಿರಂಗಗೊಳಿಸುತ್ತಿಲ್ಲ ಎಂದೂ ಸಾರಿದ್ದರು. ಈ ನಾಲ್ವರ ಪೈಕಿ ಒಬ್ಬರಾದ ರಂಜನ್ ಗೊಗೋಯ್ ಮುಖ್ಯ ನ್ಯಾಯಮೂರ್ತಿಯ ಹುದ್ದೆ ಏರಿದರು. ಆದರೆ ಅವರು ಮಿಶ್ರ ಅವರನ್ನೂ ಮೀರಿಸಿದ್ದು ಬಲು ದೊಡ್ಡ ವಿಡಂಬನೆ. ಗೊಗೋಯ್ ಮೇಲಿನ ಆಪಾದನೆಗಳು ದೀಪಕ್ ಮಿಶ್ರ ವಿರುದ್ಧ ಮಾಡಿದ್ದ ಆಪಾದನೆಗಳಿಗಿಂತ ಹೀನ ಸ್ವರೂಪದವು!

’ಅಧಿಕೃತ ತುರ್ತುಪರಿಸ್ಥಿತಿಯನ್ನು ಕೂಡ ಘೋಷಿಸದೆ ಕಳೆದ ಆರು ವರ್ಷಗಳ ಅವಧಿಯಲ್ಲಿ ಭಾರತದ ಜನತಂತ್ರವನ್ನು ಹೇಗೆ ನಾಶ ಮಾಡಲಾಯಿತು ಎಂಬುದನ್ನು ಭವಿಷ್ಯತ್ತಿನಲ್ಲಿ ಇತಿಹಾಸಕಾರರು ಹೊರಳಿ ನೋಡಲಿದ್ದಾರೆ. ಆಗ ಅವರು ಈ ವಿನಾಶದಲ್ಲಿ ಸುಪ್ರೀಮ್ ಕೋರ್ಟಿನ, ಅದರಲ್ಲೂ ವಿಶೇಷವಾಗಿ ಕಳೆದ ನಾಲ್ವರು ಮುಖ್ಯನ್ಯಾಯಮೂರ್ತಿಗಳ ಪಾತ್ರವನ್ನು ರೇಖಾಂಕಿತಗೊಳಿಸಿ ಗುರುತಿಸುವರು. ತಮ್ಮ ಮೂಲಭೂತ ಹಕ್ಕನ್ನು ಉಳಿಸಿಕೊಳ್ಳಲು ಕದ ಬಡಿಯುವ ನಾಗರಿಕರ ಪಾಲಿಗೆ ಸುಪ್ರೀಮ್ ಕೋರ್ಟನ್ನು ಲಾಕ್ ಡೌನ್ ಸ್ಥಿತಿಯಲ್ಲಿ ಇರಿಸಿ ಅವರಿಗೆ ನ್ಯಾಯವನ್ನು ನಿರಾಕರಿಸಿರುವ ಮುಖ್ಯ ನ್ಯಾಯಮೂರ್ತಿಯವರು ನಾಗಪುರದ ರಾಜಭವನದಲ್ಲಿ ಬಿಜೆಪಿ ನಾಯಕರೊಬ್ಬರ ಒಡೆತನದ 50 ಲಕ್ಷ ರು ಬೆಲೆ ಬಾಳುವ ಮೋಟರ್ ಸೈಕಲ್ಲನ್ನು ಏರಿ ಕುಳಿತಿದ್ದಾರೆ. ಮಾಸ್ಕ್ ಮತ್ತು ಹೆಲ್ಮೆಟ್ ಕೂಡ ಧರಿಸಿಲ್ಲ ಎಂಬ ಎರಡು ಟ್ವೀಟ್‌ಗಳಿಗಾಗಿ ಜನಪರ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರನ್ನು ಶಿಕ್ಷಿಸಲಾಗಿದೆ. ಶಿಕ್ಷಿಸಿದ್ದು ಕೂಡ ಅರುಣ್ ಮಿಶ್ರ ನೇತೃತ್ವದ ನ್ಯಾಯಪೀಠವೇ.

ಭೂಷಣ್ ಅವರ ಒಂದು ಟ್ವೀಟ್ ಸುಪ್ರೀಮ್ ಕೋರ್ಟಿನ ಕಳೆದ ನಾಲ್ವರು ಮುಖ್ಯ ನ್ಯಾಯಮೂರ್ತಿಗಳನ್ನು ಕಟಕಟೆಯಲ್ಲಿ ನಿಲ್ಲಿಸುತ್ತದೆ. ಈ ನಾಲ್ವರ ಇಂಗಿತವರಿತು ಕಾರ್ಯನಿರ್ವಹಿಸಿದವರು ಎಂಬ ಅಭಿದಾನ ಅರುಣ್ ಮಿಶ್ರ ಅವರ ಸುತ್ತ ಸುತ್ತುವುದು ಕಂಡುಬರುತ್ತದೆ.


ಇದನ್ನೂ ಓದಿ: ಪ್ರಧಾನಿ ಮೋದಿ ಹೊಗಳಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ವರ್ತನೆಗೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​ಖಂಡನೆ.


ನ್ಯಾಯವಾದಿಯಾಗಿದ್ದ ಅರುಣ್ ಮಿಶ್ರ ಅವರನ್ನು 1999ರಲ್ಲಿ ಮಧ್ಯಪ್ರದೇಶದ ಹೈಕೋರ್ಟಿಗೆ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗುತ್ತದೆ. 2014ರಲ್ಲಿ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುತ್ತಾರೆ.

ಅತಿ ಸೂಕ್ಷ್ಮಸ್ವರೂಪದ ಹಲವು ಪ್ರಕರಣಗಳನ್ನು ಮಿಶ್ರ ನೇತೃತ್ವದ ನ್ಯಾಯಪೀಠ ನಡೆಸುತ್ತದೆ. ಇಂತಿಂತಹ ವ್ಯಾಜ್ಯ-ಪ್ರಕರಣ-ಮೊಕದ್ದಮೆಯನ್ನು ಇಂತಿಂತಹ ನ್ಯಾಯಪೀಠವೇ ನಡೆಸಬೇಕೆಂದು ಅವುಗಳನ್ನು ಹಂಚಿಕೊಡುವ ಅಧಿಕಾರ ಮುಖ್ಯ ನ್ಯಾಯಮೂರ್ತಿಗಳದು ಎಂಬುದನ್ನು ಇಲ್ಲಿ ಮತ್ತೊಮ್ಮೆ ನೆನೆಯುವುದು ಸೂಕ್ತ. 2015 ರಲ್ಲಿ ಗುಜರಾತಿನ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಅವರ ಪ್ರಕರಣ ಮಿಶ್ರ ಅವರ ನ್ಯಾಯಪೀಠದ ಮುಂದೆ ಬರುತ್ತದೆ. ಅಂದಿನ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರು. ಗುಜರಾತ್ ಕೋಮುದಂಗೆಗಳಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮುಂತಾದವರ ಪಾತ್ರವಿತ್ತೆಂದು ಆಪಾದಿಸಿದ್ದವರು ಭಟ್. ಅವರೀಗ ಜೈಲಿನಲ್ಲಿದ್ದಾರೆ. ತಮ್ಮ ಮೇಲೆ ಸಲ್ಲಿಸಲಾಗಿರುವ ಎಫ್.ಐ.ಆರ್‌ಗಳ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ನೇಮಿಸುವಂತೆ ಭಟ್ ಸುಪ್ರೀಮ್ ಕೋರ್ಟ್ ಮೊರೆ ಹೋಗಿರುತ್ತಾರೆ. ನ್ಯಾಯಮೂರ್ತಿ ಮಿಶ್ರ ಅವರು ಈ ಮನವಿಯನ್ನು ತಳ್ಳಿಹಾಕಿ ತೀರ್ಪು ನೀಡುತ್ತಾರೆ.

ಗುಜರಾತ್ ಮತ್ತು ಮಧ್ಯಪ್ರದೇಶದ ಅಂದಿನ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಶಿವರಾಜಸಿಂಗ್ ಚೌಹಾಣ್ ಅವರಿಗೆ ನಿಧಿ ಸಂದಾಯವಾಗಿದೆ ಎಂದು ಸೂಚಿಸುವ ಕಾಗದಪತ್ರಗಳನ್ನು ಆದಾಯ ತೆರಿಗೆ ಇಲಾಖೆ ಯಾಕೆ ಮುಚ್ಚಿಟ್ಟಿದೆ ಎಂಬುದಾಗಿ ಪ್ರಶ್ನಿಸಲಾದ ಸಹಾರಾ-ಬಿರ್ಲಾ ಡೈರಿಗಳ ಪ್ರಕರಣದ ವಿಚಾರಣೆಯೂ ಮಿಶ್ರ ಅವರ ಮುಂದೆ ಬರುತ್ತದೆ. ಪ್ರಶ್ನೆಯನ್ನು ಬದಿಗೊತ್ತಿ ತೀರ್ಪು ನೀಡಲಾಗುತ್ತದೆ.

ಗುಜರಾತಿನ ಮಾಜಿ ಗೃಹಮಂತ್ರಿ ಹರೇನ್ ಪಾಂಡ್ಯ ಅವರ ಕೊಲೆ ಪ್ರಕರಣವನ್ನು ಹೊಸ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಮರುತನಿಖೆ ನಡೆಸಬೇಕೆಂಬ ಪ್ರಶಾಂತ್ ಭೂಷಣ್ ಅವರ ಮನವಿಯನ್ನೂ ಮಿಶ್ರ ನ್ಯಾಯಪೀಠ ತಿರಸ್ಕರಿಸುತ್ತದೆ. ಅಷ್ಟೇ ಅಲ್ಲದೆ ಅರ್ಜಿದಾರರಿಗೆ 50 ಸಾವಿರ ರುಪಾಯಿಗಳ ದಂಡ ವಿಧಿಸುತ್ತದೆ.

ಸೊಹ್ರಾಬುದ್ದೀನ್ ಶೇಖ್ ಹುಸಿ ಎನ್ಕೌಂಟರ್ ಹತ್ಯೆ ಕುರಿತು ಅಮಿತ್ ಶಾ ಅವರ ಮೇಲಿನ ಆಪಾದನೆಗಳ ವಿಚಾರಣೆ ನಡೆಸುತ್ತಿದ್ದ ಅಧೀನ ನ್ಯಾಯಾಲಯದ ನ್ಯಾಯಾಧೀಶ ಬಿ.ಎಚ್.ಲೋಯಾ ಅವರ ನಿಗೂಢ ಮರಣದ ಪ್ರಕರಣವನ್ನು ಸ್ವತಂತ್ರ ತನಿಖೆಗೆ ವಹಿಸುವಂತೆ ಅರ್ಜಿಗಳನ್ನು ಸಲ್ಲಿಸಲಾಗಿರುತ್ತದೆ. 2018ರ ಜನವರಿ 11ರಂದು ಈ ಅರ್ಜಿಗಳು ವಿಚಾರಣೆಗೆ ಬಂದಿರುತ್ತವೆ. ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಈ ಅರ್ಜಿಗಳ ವಿಚಾರಣೆಯನ್ನು ಅರುಣ್ ಮಿಶ್ರ ನ್ಯಾಯಪೀಠಕ್ಕೆ ಒಪ್ಪಿಸಿರುತ್ತಾರೆ. ಮರುದಿನ ಈ ಅರ್ಜಿಗಳ ವಿಚಾರಣೆ ನಡೆಯಬೇಕಿರುತ್ತದೆ. ಈ ಹಂತದಲ್ಲೇ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಐತಿಹಾಸಿಕ ಪತ್ರಿಕಾಗೋಷ್ಠಿ ನಡೆಸುತ್ತಾರೆ. ದೇಶದ ಮೇಲೆ ಮತ್ತು ಸುಪ್ರೀಮ್ ಕೋರ್ಟ್ ಮೇಲೆ ದೂರಗಾಮಿ ಸಾಧಕ ಬಾಧಕಗಳನ್ನು ಹೊಂದಿದ ಕೇಸುಗಳನ್ನು ಮುಖ್ಯ ನ್ಯಾಯಮೂರ್ತಿಗಳು ಯಾವುದೇ ಕಾರ್ಯಕಾರಣ ನೀಡದೆ ತಮಗೆ ಬೇಕಾದ ನ್ಯಾಯಪೀಠಗಳಿಗೆ ಒಪ್ಪಿಸುತ್ತಾರೆ ಎಂಬ ಆಪಾದನೆಯನ್ನೂ ಈ ನಾಲ್ವರು ನ್ಯಾಯಮೂರ್ತಿಗಳು ಅಂದು ಮಾಡಿದ್ದರು. ಲೋಯಾ ಕೇಸನ್ನು ಅರುಣ್ ಮಿಶ್ರ ಪೀಠಕ್ಕೆ ಒಪ್ಪಿಸಿದ್ದೇ ಈ ಟೀಕೆಯ ಹಿಂದಿನ ಪ್ರಚೋದನೆ ಎಂದು ವ್ಯಾಖ್ಯಾನಿಸಲಾಗಿತ್ತು. ಈ ಆಪಾದನೆಯ ಹಿನ್ನೆಲೆಯಲ್ಲಿ ಲೋಯಾ ಕೇಸನ್ನು ತಮ್ಮ ನೇತೃತ್ವದ ನ್ಯಾಯಪೀಠಕ್ಕೆ ವರ್ಗಾಯಿಸಿಕೊಂಡರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ. ಸ್ವತಂತ್ರ ತನಿಖೆಯ ಅಹವಾಲನ್ನು ತಳ್ಳಿಹಾಕಿದರೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಪತ್ರಿಕಾಗೋಷ್ಠಿ ನಡೆಸಿದ ನಾಲ್ವರು ನ್ಯಾಯಮೂರ್ತಿಗಳ ಪೈಕಿ ಒಬ್ಬರಾಗಿದ್ದ ನ್ಯಾಯಮೂರ್ತಿ ಗೊಗೋಯ್ ಮುಖ್ಯ ನ್ಯಾಯಮೂರ್ತಿಯಾಗುತ್ತಾರೆ. ತಮ್ಮ ಮೇಲೆ ಬಂದ ಲೈಂಗಿಕ ಕಿರುಕುಳದ ಆಪಾದನೆಯ ಮೊಕದ್ದಮೆಯ ವಿಚಾರಣೆಗೆ ಅವರು ನೆಚ್ಚುವುದು ಈ ಹಿಂದೆ ತಾವು ಗುರಿಯಿಟ್ಟಿದ್ದ ಅರುಣ್ ಮಿಶ್ರ ಅವರನ್ನೇ.

ಅದಾನಿ ಕಂಪನಿಗಳಿಗೆ ಸಂಬಂಧಿಸಿದ ನಾಲ್ಕು ಕೇಸುಗಳನ್ನು ಅರುಣ್ ಮಿಶ್ರ ನ್ಯಾಯಪೀಠಕ್ಕೇ ಒಪ್ಪಿಸಿರುವ ಕುರಿತು ಸುಪ್ರೀಮ್ ಕೋರ್ಟಿನ ಹಿರಿಯ ನ್ಯಾಯವಾದಿ ದುಷ್ಯಂತ್ ದವೆ 2009ರ ಆಗಸ್ಟ್ ತಿಂಗಳಲ್ಲೇ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದು ದೂರಿದ್ದರು.

ವನ್ಯಜೀವಿ ಸಂರಕ್ಷಣೆಯ ಹೆಸರಿನಲ್ಲಿ 18 ಲಕ್ಷ ಜನರನ್ನು ಅಡವಿಗಳಿಂದ ಒಕ್ಕಲೆಬ್ಬಿಸುವ ಆದೇಶವೊಂದನ್ನು ಮಿಶ್ರ ನೇತೃತ್ವದ ನ್ಯಾಯಪೀಠ 2019ರ ಜನವರಿಯಲ್ಲಿ ನೀಡಿತ್ತು. ಹಾಹಾಕಾರದ ಹಿನ್ನೆಲೆಯಲ್ಲಿ ಈ ಆದೇಶವನ್ನು ತಡೆಹಿಡಿಯಬೇಕಾಯಿತು. ರೇಲ್ವೆ ಹಳಿಗಳ ಇಬ್ಬದಿಯಲ್ಲಿರುವ ೪೮ ಸಾವಿರ ಕೊಳೆಗೇರಿ ವಸತಿಗಳನ್ನು ಕಾಲಮಿತಿಯೊಳಗಾಗಿ ಖಾಲಿ ಮಾಡಿಸುವಂತೆಯೂ ಈ ಕೆಲಸದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಸಲ್ಲದು ಎಂಬ ಆದೇಶವನ್ನೂ ಮಿಶ್ರ ಹೊರಡಿಸಿದ್ದರು.

ಇಂತಹ ನಿದರ್ಶನಗಳು ಇನ್ನೂ ಹಲವಾರು. ಈ ಪೈಕಿ ಕಟ್ಟಕಡೆಯವು ಅದಾನಿ ಕಂಪನಿಗೆ ಎಂಟು ಸಾವಿರ ಕೋಟಿ ರುಪಾಯಿಯ ಪರಿಹಾರ ಮತ್ತು ಪ್ರಶಾಂತ್ ಭೂಷಣ್ ಅವರು ನ್ಯಾಯಾಂಗ ನಿಂದನೆ ಎಸಗಿದ್ದಾರೆಂದು ನೀಡಿದ ಆದೇಶಗಳು.

ಅರುಣ್ ಮಿಶ್ರ ಅವರು ಪ್ರಧಾನಿ ಮೋದಿಯವರನ್ನು Versatile Genius (ಬಹುಮಖ ಮೇಧಾವಿ) ಎಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಹೊಗಳಿದ್ದರು. ನ್ಯಾಯಪೀಠದಲ್ಲಿ ಕುಳಿತವರು ಬಹಿರಂಗವಾಗಿ ಇಂತಹ ಟಿಪ್ಪಣಿಗಳನ್ನು ಮಾಡುವುದು ಸರ್ವಥಾ ಸಲ್ಲದು.

ಇತಿಹಾಸ ಎಲ್ಲರಿಗಿಂತ ದೊಡ್ಡ ನ್ಯಾಯಾಧೀಶ. ಅದರ ಮುಂದೆ ಅತಿರಥ ಮಹಾರಥರೂ ಕಾಲಾನುಕ್ರಮದಲ್ಲಿ ಕೈಕಟ್ಟಿ ಕಟಕಟೆಯಲ್ಲಿ ನಿಲ್ಲಬೇಕಾದೀತು – ಸಜೀವವಾಗಿ ಇಲ್ಲವೇ ಮರಣೋತ್ತರವಾಗಿ..


ಇದನ್ನೂ ಓದಿ; ನಿವೃತ್ತಿಯಾದ ನ್ಯಾಯಮೂರ್ತಿ ಅರುಣ್ ಮಿಶ್ರಾರವರ 5 ವಿವಾದಿತ ಪ್ರಕರಣಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...