TRP ತಿರುಚಿದ ಆರೋಪದಲ್ಲಿ ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಚಾನೆಲ್ಗಳ ಮೇಲೆ ತನಿಖೆ ನಡೆಸುವುದಾಗಿ ಮುಂಬೈ ಪೊಲೀಸರು ಘೋಷಿಸಿದ ಬೆನ್ನಲ್ಲೆ, ವಿಷಕಾರುವ, ದ್ವೇಷ ಹರಡುವ ಚಾನೆಲ್ಗಳಿಗೆ ಜಾಹೀರಾತು ನೀಡುವುದಿಲ್ಲ ಎಂದು ಉದ್ಯಮಿ ರಾಜೀವ್ ಬಜಾಜ್ ಸ್ಪಷ್ಟಪಡಿಸಿದ್ದಾರೆ.
ಸಿಎನ್ಬಿಸಿ ಟಿವಿ18 ಜೊತೆ ನಡೆಸಿದ ಸಂಭಾಷಣೆಯಲ್ಲಿ ಅವರು “ನಮ್ಮ ಕಂಪನಿಯು ಮೂರು ಚಾನೆಲ್ಗಳನ್ನು ಕಪ್ಪು ಪಟ್ಟಿಗೆ ಸೇರಿಸಿ, ಜಾಹೀರಾತು ನಿಷೇಧಿಸಿದ್ದೇವೆ. ದ್ವೇಷದ ಮೂಲಗಳೆನ್ನುವ ಯಾವುದರೊಂದಿಗೂ ನಾವು ಸಂಬಂಧ ಹೊಂದುವುದಿಲ್ಲ..” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನರೇಂದ್ರ ಮೋದಿ ಸರ್ಕಾರವನ್ನು ಬಹಿರಂಗವಾಗಿ ಟೀಕಿಸಲು ಸಾಧ್ಯವಾಗುತ್ತಿಲ್ಲ: ಅಮಿತ್ ಶಾ ಎದುರೆ ರಾಹುಲ್ ಬಜಾಜ್ ಹೇಳಿಕೆ
ಬೃಹತ್ ವ್ಯವಹಾರ ನಡೆಸಬೇಕಾದರೆ ಬಲಾಢ್ಯ ಬ್ರ್ಯಾಂಡ್ ಅಗತ್ಯ. ಅದೇ ಸಮಯದಲ್ಲಿ ಬೃಹತ್ ವ್ಯವಹಾರವು ಸಮಾಜಕ್ಕೆ ಕೊಡುಗೆ ನೀಡಬೇಕು. ಹಾಗಾಗಿ ಸಮಾಜದಲ್ಲಿ ವಿಷ ಹರಡುವ ಮತ್ತು ದ್ವೇಷ ಬಿತ್ತುವ ಯಾವುದರೊಂದಿಗೂ ನಮ್ಮ ಬ್ರ್ಯಾಂಡ್ ಸಹಭಾಗಿಗಳಾಗುವುದಿಲ್ಲ ಎಂದು ಚಾನೆಲ್ಗಳ ಹೆಸರು ಹೇಳದೇ ರಾಹುಲ್ ಮಾತನಾಡಿದ್ದಾರೆ.
ನಿನ್ನೆ ಮುಂಬೈ ಪೊಲೀಸರು ಟಿಆರ್ಪಿ ತಿರುಚಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಮೂರು ಚಾನೆಲ್ಗಳ ಮೇಲೆ ತನಿಖೆ ಆರಂಭಿಸಿದ್ದಾರೆ. “ಜಾಹಿರಾತುದಾರರಿಂದ ಚಾನೆಲ್ಗಳು ಪಡೆಯುವ ಹಣ ಅಪರಾಧದ ಹಿನ್ನೆಲೆಯಿಂದ ಬಂದಿದೆಯೆ ಎಂಬ ಬಗ್ಗೆ ಕೂಡಾ ತನಿಖೆ ನಡೆಯಲಿದ್ದು, ಚಾನೆಲ್ಗಳ ಬ್ಯಾಂಕ್ ಖಾತೆಗಳ ಬಗ್ಗೆ ಕೂಡಾ ತನಿಖೆ ನಡೆಸಲಾಗುವುದು” ಎಂದು ಮುಂಬೈ ಪೊಲೀಸ್ ಮುಖ್ಯಸ್ಥ ಪರಮ್ವೀರ್ ಸಿಂಗ್ ಹೇಳಿದ್ದಾರೆ.
“ಹಿಂದಿನ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಯಾರನ್ನು ಬೇಕಾದರೂ ಟೀಕಿಸುವ ಸ್ವಾತಂತ್ಯ್ರವಿತ್ತು. ಆದರೆ ಈಗಿನ ಸಂದರ್ಭದಲ್ಲಿ ಬಹಿರಂಗವಾಗಿ ಮೋದಿ ಸರ್ಕಾರವನ್ನು ಟೀಕಿಸುವ ಪರಿಸ್ಥಿತಿಯಿಲ್ಲ” ಎಂದು ಕಳೆದ ಡಿಸೆಂಬರ್ನಲ್ಲಿ ಆರ್ಥಿಕ ಕುಸಿತದ ಬಗ್ಗೆ ರಾಹುಲ್ ಬಜಾಜ್ ಮಾತನಾಡಿ ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: TRP ತಿರುಚಿದ ಆರೋಪ; ರಿಪಬ್ಲಿಕ್ ಸೇರಿ 3 ಚಾನೆಲ್ಗಳ ಮೇಲೆ ತನಿಖೆ!