ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಅವರನ್ನು ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಇದೀಗ ದೋಷ ಮುಕ್ತಗೊಂಡಿರುವ ಬಿಜೆಪಿ ನಾಯಕಿ ಉಮಾ ಭಾರತಿ ಶ್ಲಾಘಿಸಿದ್ದು, “ತೇಜಸ್ವಿಯವರಿಗೆ ವಯಸ್ಸು ಇದ್ದರೂ, ರಾಜ್ಯವನ್ನು ನಡೆಸುವಷ್ಟು ಅನುಭವವಿಲ್ಲ, ಬಿಹಾರದಲ್ಲಿ ಗೆದ್ದಿದ್ದರೆ ಅಂತಿಮವಾಗಿ ಲಾಲು ಯಾದವ್ ಚುಕ್ಕಾಣಿ ಹಿಡಿಯುತ್ತಿದ್ದರು” ಎಂದು ಪ್ರತಿಪಾದಿಸಿದ್ದಾರೆ.
“ತೇಜಸ್ವಿ ತುಂಬಾ ಒಳ್ಳೆಯ ಹುಡುಗ. ಆದರೆ ಬಿಹಾರವನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅಂತಿಮವಾಗಿ ಬಿಹಾರವನ್ನು ಮತ್ತೇ ಜಂಗಲ್ರಾಜ್ಗೆ ಕರೆದೊಯ್ಯುವ ಚುಕ್ಕಾಣಿ ಹಿಡಿಯುತ್ತಿದ್ದರು. ತನ್ನ ಮುಂದಿನ ವಯಸ್ಸಿನಲ್ಲಿ ತೇಜಸ್ವಿ ರಾಜ್ಯವನ್ನು ಮುನ್ನಡೆಸಬಹುದು” ಎಂದು ಅವರು ಭೋಪಾಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
ಇದನ್ನೂ ಓದಿ: ಬಾಬರಿ ಮಸೀದಿ ದ್ವಂಸ ತೀರ್ಪು ಪ್ರಕಟಿಸಿದ ನ್ಯಾಯಾಲಯ: ಆರೋಪಿಗಳು ದೋಷಮುಕ್ತ
ನಂತರ ಮಧ್ಯಪ್ರದೇಶ ಉಪಚುನಾವಣೆಯ ಬಗ್ಗೆ ಮಾತನಾಡಿದ ಉಮಾ ಭಾರತಿ, “ಕಮಲ್ ನಾಥ್ ಈ ಚುನಾವಣೆಯಲ್ಲಿ ಚಾತುರ್ಯದಿಂದ ಹೋರಾಡಿದ್ದಾರೆ. ಬಹುಶಃ ಅವರು ತಮ್ಮ ಸರ್ಕಾರವನ್ನು ಚೆನ್ನಾಗಿ ನಡೆಸುತ್ತಿದ್ದರೆ ಈ ಚುನಾವಣೆಯ ಸಮಸ್ಯೆಗಳಿರಲಿಲ್ಲ. ಅವರು ನನ್ನ ಹಿರಿಯ ಅಣ್ಣನಿದ್ದಂತೆ, ಬಹಳ ಸಭ್ಯ ವ್ಯಕ್ತಿ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮಾಜಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ತನ್ನ 22 ಬೆಂಬಲಿಗ ಶಾಸಕರೊಂದಿಗೆ ರಾಜಿನಾಮೆ ನೀಡಿದ್ದರಿಂದ, ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಪಕ್ಷ ಆಡಳಿತ ಕುಸಿದು ಬಿದ್ದಿತ್ತು. ಅಲ್ಲಿ ಇತ್ತೀಚೆಗೆ ಒಟ್ಟು 28 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿತ್ತು, ಅದರಲ್ಲಿ ಬಿಜೆಪಿ 19 ಸ್ಥಾನಗಳಲ್ಲಿ ಜಯಗಲಿಸಿದ್ದರೆ, ಕಾಂಗ್ರೆಸ್ ಕೇವಲ 9 ಸ್ಥಾನಗಳಲ್ಲಿ ಜಯಗಳಿಸಿದೆ.
ಇದನ್ನೂ ಓದಿ: ಬಾಬರಿ ಮಸೀದಿ ಪ್ರಕರಣದಲ್ಲಿ ಗಲ್ಲಿಗೇರಿಸಲಿ, ಜಾಮೀನು ಪಡೆಯುವುದಿಲ್ಲ- ಉಮಾ ಭಾರತಿ