Homeಕರ್ನಾಟಕಗ್ರಾಮೀಣ ಮೀಸಲಾತಿಯ ಮೋಸಗಳು!!

ಗ್ರಾಮೀಣ ಮೀಸಲಾತಿಯ ಮೋಸಗಳು!!

ಮೀಸಲು ನೀತಿಯಲ್ಲಿನ ಲೋಪ-ದೊಷ ಸರಿಪಡಿಸಿದರಷ್ಟೇ ಕನ್ನಡ ಮಾಧ್ಯಮದತ್ತ ವಿದ್ಯಾರ್ಥಿಗಳನ್ನು ಪಾಲಕರನ್ನು ಸೆಳೆಯಲು ಸಾಧ್ಯ.

- Advertisement -
- Advertisement -

ಕನ್ನಡದಲ್ಲಿ ಕಲಿತರೆ ಭವಿಷ್ಯವಿದೆ ಎಂಬ ಭರವಸೆಯೇ ಮೂಡದ ಈ ಬರಡು ಸಂದರ್ಭದಲ್ಲಿ ಸರ್ಕಾರ ಒದಗಿಸುತ್ತಿರುವ ಗ್ರಾಮೀಣ ಮೀಸಲಾತಿಯ ಹಿಂದೆ ದೊಡ್ಡ ಸಾಮಾಜಿಕ ಅನ್ಯಾಯ ಅಡಗಿದೆ. ಗ್ರಾಮೀಣ ಮೀಸಲಾತಿಯ ಪಿತಾಮಹರ ದೋಷದಿಂದಾಗಿ ಅರ್ಹ-ಅಬಲ ಗ್ರಾಮೀಣ ವಿದ್ಯಾರ್ಥಿಗಳ ಅವಕಾಶವನ್ನು ಬಲಾಢ್ಯ ನಗರವಾಸಿಗಳು ರಾಜಾರೋಷವಾಗಿ ಲಪಟಾಯಿಸುತ್ತಿದ್ದಾರೆ. ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಖಾಸಗಿ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿಗಳೊಂದಿಗಿನ ಸಂಘರ್ಷದಲ್ಲಿ ಸೋಲುತ್ತಿದ್ದಾರೆ.

ರಾಜ್ಯ ಸರ್ಕಾರ ಶೇಕಡ 5ರಷ್ಟು ಕನ್ನಡ ಮಾಧ್ಯಮ ಹಾಗೂ ಶೇಕಡ 15ರಷ್ಟು ಗ್ರಾಮೀಣ ಸಮಾನಾಂತರ ಮೀಸಲಾತಿಯ ಶೈಕ್ಷಣಿಕ ಹಾಗೂ ಉದ್ಯೋಗ ನೇಮಕಾತಿಯಲ್ಲಿ ನಿಯಮ ಮಾಡಿ ಅದ್ಯಾವುದೋ ಕಾಲವಾಗಿದೆ. ಸದರಿ ಮೀಸಲಾತಿ ಮಾನದಂಡಗಳು ಮೀಸಲಾತಿ ಪರಿಕಲ್ಪನೆ ಹಾಗೂ ನೈಜ ಉದ್ದೇಶಕ್ಕೆ ವ್ಯತಿರಿಕ್ತವಾಗಿದೆ. ವಿರೋಧಾಭಾಸಗಳ ಈ ಮೀಸಲು ನಿಯಮ ಅರ್ಹರಿಗೆ-ದುರ್ಬಲರಿಗೆ ಅವಕಾಶದಿಂದ ವಂಚಿಸುತ್ತಿದೆ. ದುರಂತವೆಂದರೆ, ಬಲಾಢ್ಯ ಅನರ್ಹರು ಈ ಹುಚ್ಚು ನೀತಿಯ ದೌರ್ಬಲ್ಯ ಬಲಸಿಕೊಂಡು ಲಾಭ ಹೊಡೆಯುತ್ತಿದ್ದಾರೆ. ಸಮಾನತೆಯ ಆಶಯಕ್ಕೆ ಕನ್ನಡ ಮಾಧ್ಯಮ-ಗ್ರಾಮೀಣ ಮೀಸಲಾತಿ ಪದ್ಧತಿ ಆಘಾತಕಾರಿಯಾಗಿದೆ!!

ಈ ಮೀಸಲು ನಿಯಮಾವಳಿಯಲ್ಲಿ ಅಖಂಡ ಹತ್ತು ವರ್ಷ ಶಾಲೆಯಲ್ಲಿ ಕಲಿತವರಿಗಷ್ಟೇ ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಮೀಸಲಾತಿಯೆಂಬ ಷರತ್ತು ಹಾಕಲಾಗಿದೆ. ಇದು ಅವಾಸ್ತವಿಕವಷ್ಟೇ ಅಲ್ಲ ಅನ್ಯಾಯ ಕೂಡ. ಸರ್ಕಾರದ ನೀತಿ-ನಿಯಮ ಒಂದಕ್ಕೊಂದು ಪೂರಕವಾಗಿಲ್ಲ. ನಾನಾ ಕಾರಣಕ್ಕೆ ಶಾಲೆ ಸೇರಲಾಗದವರನ್ನು ಮತ್ತು ಶಾಲೆ ಬಿಟ್ಟವರನ್ನು ವಿದ್ಯಾಭ್ಯಾಸದೆಡೆ ಆಕರ್ಷಿಸಲಾಗುತ್ತಿದೆ. ಸರ್ಕಾರ ಅನೇಕ ರಿಯಾಯಿತಿ ಕೊಟ್ಟು ಶಿಕ್ಷಣದ ಅವಕಾಶ ಕಲ್ಪಿಸುತ್ತಿದೆ. ಶಿಕ್ಷಾಣಾರ್ಥಿಗಳ ಸಾಮರ್ಥ್ಯಕ್ಕೆ ತಕ್ಕಂತೆ ಅವರ ವಯಸ್ಸು ಪರಿಗಣಿಸಿ ಮೇಲ್ತರಗತಿಗಳಿಗೆ ಪ್ರವೇಶವೂ ಕೊಡುತ್ತಿದೆ. ದುರಂತವೆಂದರೆ, ಇಂಥ ಅಭ್ಯರ್ಥಿಗಳಿಗೆ ಕನ್ನಡ ಮಾಧ್ಯಮ ಗ್ರಾಮೀಣ ಮೀಸಲಾತಿ ದಕ್ಕುತ್ತಿಲ್ಲ! ಬಾಹ್ಯವಾಗಿ ಎಸ್‌ಎಸ್‌ಎಲ್‌ಸಿ ಮುಗಿಸಿದವರಿಗೂ ಈ ಮೀಸಲಾತಿಯಿಂದ ಲಾಭವೇನಿಲ್ಲ.

ಇಲ್ಲಿ ಘನಘೋರ ಎಡವಟ್ಟೊಂದಿದೆ ಹತ್ತು ವರ್ಷದ ಕಲಿಕಾ ಸರಣಿಯಲ್ಲಿ ಒಂದೇ ಒಂದು ವರ್ಷವೇನಾದರೂ ಪಟ್ಟಣ ಪ್ರದೇಶದಲ್ಲಿ ಕಲಿತರೆ ಗಂಡಾಂತರ ಖಂಡಿತ. ಈ ಗ್ರಾಮೀಣ ಅಭ್ಯರ್ಥಿಗಳೆಲ್ಲ ಸಾಮಾಜಿಕ ನ್ಯಾಯ ತತ್ವದಂತೆ ಮೀಸಲಾತಿ ಪರಿಕಲ್ಪನೆಯ ಸೌಲಭ್ಯಕ್ಕೆ ಅರ್ಹರು.

ಈ ಗ್ರಾಮೀಣ ಮೀಸಲಾತಿಗೆ ಹಳ್ಳಿಗಾಡಿನ ಹಿನ್ನಲೆ, ಸಂಸ್ಕೃತಿ, ಸಾಮಾಜಿಕ-ಅರ್ಥಿಕ ಸ್ಥಿತಿ-ಗತಿ ಮಾನದಂಡವಾಗಬೇಕಿತ್ತು. ಆದರೆ ಅಂದಿನಿಂದ ಆಳುವವರು ಮತ್ತವರ ಸಲಹೆಗಾರ ಪಂಡಿತ್ತೋತ್ತಮರು ಮೀಸಲು ನೀತಿ ನಿರೂಪಿಸುವಾಗ ಸರಳ, ಸಮಾಜಿಕ ನ್ಯಾಯ ತತ್ವವನ್ನೇ ಪಾಲಿಸಿಲ್ಲ. ವಿಚಿತ್ರವೆಂದರೆ, ಅಭ್ಯರ್ಥಿ ಕಲಿತ ಶಾಲಾ ಕಟ್ಟಡದ “ಭೌಗೋಳಿಕ ಅಸ್ತಿತ್ವ” ಮೀಸಲಾತಿ ಹಣೆಬರಹ ನಿರ್ಧರಿಸುತ್ತಿದೆ. ಮೀಸಲಾತಿ ಬಯಸುವವರ ಶಾಲೆ ಭೌಗೋಳಿಕವಾಗಿ ಹಳ್ಳಿಯಲ್ಲಿದೆಯೋ ಅಥವಾ ಪಟ್ಟಣದಲ್ಲಿದೆಯೆಂಬ ಆಧಾರದಲ್ಲಿ ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ಕೊಡಲಾಗುತ್ತಿದೆ. ಅಭ್ಯರ್ಥಿ ಬಾಳಿ-ಬದುಕಿದ ಪ್ರದೇಶಕ್ಕಿಂತಲೂ ಶಾಲೆಯ ಸ್ಥಾವರ ಸ್ಥಿತಿಗೆ ಪ್ರಾಧಾನ್ಯತೆ ಕೊಡಲಾಗಿದೆ.

ಇಂತಹ ಮೀಸಲಾತಿ ನಿರ್ಧರಿಸುವಿಕೆ ಗ್ರಾಮೀಣ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ಶಾಲೆ-ಹೈಸ್ಕೂಲು ಇಲ್ಲದ ಕುಗ್ರಾಮಗಳ ಮಕ್ಕಳು ಪಟ್ಟಣದ ಹಾಸ್ಟೆಲುಗಳಲ್ಲಿ ಉಳಿದು ಪಟ್ಟಣದ ಶಾಲೆಯಲ್ಲಿ ಕಲಿತರೂ ಸಾಕು ಅವರಿಗೆಲ್ಲ ಮೀಸಲಾತಿ ಸವಲತ್ತು ಸಿಗಲಾರದು. ಆಧುನಿಕ ಸೌಕರ್ಯ, ಸಕಲ ಸೌಲಭ್ಯವಿರುವ ಖಾಸಗಿ ಶಾಲೆ ಸರ್ಕಾರಿ ದಾಖಲೆ ಪ್ರಕಾರ ಗ್ರಾಮ ಪಂಚಾಯತ್ ಪರಿಧಿಯಲ್ಲಿ ಬಂದರೆ ಅಲ್ಲಿ ಪಟ್ಟಣ ಪ್ರದೇಶದ ನಗರವಾಸಿಯೂ ತೀರಾ ಮುಂದುವರಿದ ಕುಟುಂಬದ ಅಭ್ಯರ್ಥಿ ಸಲೀಸಾಗಿ ಗ್ರಾಮೀಣ ಮೀಸಲಾತಿ ಸಿಂಧುತ್ವ ಪಡೆದುಕೊಳ್ಳುತ್ತಾನೆ. ರಾಜ್ಯದ ಹಲವು ಕಡೆಯಲ್ಲಿ ಇಂಥ ದೋಖಾ ಗ್ರಾಮೀಣ ಶಾಲೆಗಳ ಹಾವಳಿ ಜೋರಾಗಿದೆ.

ಸರ್ಕಾರದ ಯಾವ್ಯಾವುದೋ ನೀತಿ ಧೋರಣೆಯಿಂದಾಗಿ ನಗರ ಪಟ್ಟಣಗಳ ವ್ಯಾಪ್ತಿ ರಾತ್ರಿಬೆಳಗಾಗುವುದರಲ್ಲಿ ವಿಶಾಲವಾಗುವ ಕಾಲಮಾನವಿದು ಈ ನಗರ ಪಟ್ಟಣಗಳ ಉದರದಲ್ಲಿ ಹೊರಹೊಲಯದ ಹಳ್ಳಿಗಳು ಜೀರ್ಣವಾಗಿ ಗ್ರಾಮೀಣ ಮೀಸಲಾತಿ ವ್ಯಾಖ್ಯಾನದಿಂದ ಹೊರದಬ್ಬಲ್ಪಡುತ್ತಿವೆ. ಗ್ರಾಮ ಪಂಚಾಯ್ತಿಯೊಂದು ಪಟ್ಟಣ ಪಂಚಾಯ್ತಿಯಾಗಿ ಪೌರಾಡಳಿತದ ವ್ಯಾಪ್ತಿಗೆ ಬಂತೆಂದು ಇಟ್ಟುಕೊಳ್ಳಿ; ಆಗ ಅಪ್ಪಟ ಹಳ್ಳಿಗರಿಗೆ ಶಿಕ್ಷಣ, ಉದ್ಯೋಗದ ಸೌಲಭ್ಯ ದಕ್ಕದಂತೆ ಮಾಡಿ ಗ್ರಾಮೀಣ ಮೀಸಲಾತಿ ಷರತ್ತು ಸತಾಯಿಸಲು ಶುರುಮಾಡುತ್ತದೆ. ಹೊಸ ಪಟ್ಟಣ ಪಂಚಾಯ್ತಿ ಪರಿಸರದ ಶಾಲೆಯಲ್ಲಿ ಕಲಿತವರು, ಕಲಿಯುತ್ತಿರುವವರು ಗ್ರಾಮೀಣ ಮೀಸಲಾತಿಯಿಂದ ವಂಚಿತರಾಗುತ್ತಾರೆ. ಇಲ್ಲಾಗುವುದು ಜನ ಸಂಖ್ಯೆ ಹೆಚ್ಚಳದ ಬದಲಾವಣೆಯೊಂದೇ! ಸಾಮಾಜಿ, ಸಾಂಸ್ಕೃತಿಕ, ಆಧುನಿಕತೆ, ಅಭಿವೃದ್ಧಿ…- ಹೀಗೆ ಯಾವ ಕ್ಷೇತ್ರದಲ್ಲೂ ಉನ್ನತಿಯಾಗಿರುವುದಿಲ್ಲ. ಗ್ರಾಮೀಣ ಚಹರೆಯ ಊರು ಪಟ್ಟಣ ಪ್ರದೇಶವೆಂಬ ವ್ಯಾಖ್ಯಾನದಲ್ಲಿ ಸಿಕ್ಕಿಬಿದ್ದು ಅರ್ಹರಿಗೆ ಮೀಸಲಾತಿ ಸಿಗದಂತೆ ಮಾಡಿಬಿಡುತ್ತದೆ!

ಶಿಕ್ಷಣ ದಂಧೆಕೋರರಿಗೆ ಗ್ರಾಮೀಣ ಮೀಸಲಾತಿ ಆಧ್ವಾನಗಳು ವ್ಯಾವಹಾರಿಕ ತಂತ್ರಗಾರಿಕೆಯಾಗಿ ಅನುಕೂಲಕವಾಗಿದೆ. ಪಟ್ಟಣಗಳ ಸರಹದ್ದಿನಲ್ಲಿರುವ ಹಳ್ಳಿಗಳಲ್ಲಿ ಅತ್ಯಾಧುನಿಕ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆದು ಗ್ರಾಮೀಣ ಮೀಸಲಾತಿಗೆ ಪಂಗನಾಮ ಹಾಕಲಾಗುತ್ತಿದೆ. ತಮ್ಮಲ್ಲಿ ಕಲಿತರೆ ಗ್ರಾಮೀಣ ಮೀಸಲಾತಿ ಭಾಗ್ಯ ಪಡೆಯಬಹುದೆಂಬ ಪ್ರಚಾರ ಮಾಡಿ ಖಾಸಗಿ ಲಾಬಿ ಮಾಡುತ್ತಿದೆ. ಹಳ್ಳಿಗಳಲ್ಲೀಗ ಅಂತಾರಾಷ್ಟ್ರೀಯ ಸೌಲಭ್ಯ-ಸೌಕರ್ಯ ಸವಲತ್ತಿನ ರೆಸಿಡೆನ್ಸಿಯಲ್ ಶಾಲೆಗಳೆಂದು ಹೇಳಿಕೊಳ್ಳುವ ಶೈಕ್ಷಣಿಕ ಸಂಸ್ಥೆಗಳು ಸ್ಥಾಪಿತವಾಗುತ್ತಿವೆ. ಇಲ್ಲಿ ಕಲಿಯುವ ಹೈಟೆಕ್ ನಗರಗಳ ಉಳ್ಳವರು ಮತ್ತು ಸಾಮಾಜಿಕವಾಗಿ ಮುಂದುವರೆದವರ ಮಕ್ಕಳಿಗೆ ಗ್ರಾಮೀಣ ಮೀಸಲಾತಿ ಪ್ರಯೋಜನ ಸಿಗುತ್ತದೆ. ಆದರೆ ಅದೇ ನಗರದ ಕೊಳಚೆ ಏರಿಯಾದ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಲಿಯುವ ದುರ್ಬಲರಿಗೆ ಮೀಸಲಾತಿ ಬರೀ ಕನಸಷ್ಟೇ.

ಹೈಟೆಕ್ ರೆಸಿಡೆನ್ಸಿಯಲ್ ಶಾಲೆಗಳಲ್ಲಿ ಅಭ್ಯಾಸ ಮಾಡಿದ ಬಲಾಢ್ಯರೊಂದಿಗೆ ಸರ್ಕಾರಿ ಶಾಲೆಯಲ್ಲಿ ಕಲಿತ ‘ನತದೃಷ್ಟ’ರನ್ನು ಒಂದೇ ಮಾನದಂಡದಿಂದ ಅಳೆಯುವುದಿದೆಯಲ್ಲ, ಅದು ಬರ್ಬರ-ಘೋರ ಅನ್ಯಾಯ! ಖಾಸಗಿ ಶಾಲೆಯಲ್ಲಿ ಕಲಿತವರು ಶೈಕ್ಷಣಿಕ-ಔದ್ಯೋಗಿಕ ಪೈಪೋಟಿಯಲ್ಲಿ ಗೆಲ್ಲುತ್ತಿದ್ದಾರೆ; ಸರ್ಕಾರಿ ಶಾಲೆಯಲ್ಲಿ ಕಲಿತ ನಗರ-ಹಳ್ಳಿಗಳ ಮಕ್ಕಳೂ ಸ್ವಂತ ಪರಿಶ್ರಮ, ಪ್ರತಿಭೆಯಿಂದ ಸಾಧನೆ ಮಾಡಿರಲೂಬಹುದು. ಆದರಿಂದ ಪ್ರಮಾಣ ತೀರ ಕಮ್ಮಿ; ಈ ಹಳ್ಳಿಗರು ಜಾಗತಿಕ ಸ್ಫರ್ಧೆಯಲ್ಲಿ ಎಡವುತ್ತಿದ್ದಾರೆ. ಪ್ರತಿಭೆ ಹೊರಹೊಮ್ಮಲು ಪ್ರೋತ್ಸಾಹವಿಲ್ಲದಾಗಿದೆ. ಸರಿಯಾದ ಸೂರು, ಶಿಕ್ಷಕರಿಲ್ಲದ, ಶಿಕ್ಷಕರಿದ್ದರೂ ಕರ್ತವ್ಯ ಪ್ರಜ್ಞೆ ಇಲ್ಲದವರೇ ಹೆಚ್ಚಿರುವ ಸರ್ಕಾರಿ ಶಾಲೆಗಳ ಗೋಳು ಹೇಳತೀರದು.

ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಕನ್ನಡ ಕಲಿತರೆ ಬದುಕು ರೂಪಿಸಿಕೊಳ್ಳಲಾಗದೆಂಬ ಹತಾಶೆ ಮಡುಗಟ್ಟಿದೆ. ‘ಕನ್ನಡ ಶಾಲೆ’ಗಳೆಂದೇ ಜನಜನಿತವಾಗಿದ್ದ ನೆಚ್ಚಿನ ಸರ್ಕಾರಿ ಶಾಲೆಗಳೀಗ ಕಣ್ಮರೆಯಾಗುತ್ತಿವೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ನಡೆಸುವುದಿರಲಿ, ಅಸ್ತಿತ್ವ ಉಳಿಸಿಕೊಳ್ಳಲಿಕ್ಕೆ ಒದ್ದಾಡಬೇಕಾಗಿದೆ. ಖಾಸಗಿ ಶಾಲೆಗಳು ಉತ್ತಮ ಫಲಿತಾಂಶ ಕೊಡುತ್ತಿವೆ. ಉತ್ಕೃಷ್ಟತೆ ಕಾಪಾಡಿಕೊಳ್ಳದಿದ್ದರೆ ನೆಲೆ-ಬೆಲೆ ಕುಸಿಯುವ ಭಯ ಖಾಸಗಿಯವರನ್ನು ನಿರಂತರ ಎಚ್ಚರ ಸ್ಥಿತಿಯಲ್ಲಿ ಇಟ್ಟಿರುತ್ತದೆ.

ಮೀಸಲು ನೀತಿಯಲ್ಲಿನ ಲೋಪ-ದೊಷ ಸರಿಪಡಿಸಿದರಷ್ಟೇ ಕನ್ನಡ ಮಾಧ್ಯಮದತ್ತ ವಿದ್ಯಾರ್ಥಿಗಳನ್ನು ಪಾಲಕರನ್ನು ಸೆಳೆಯಲು ಸಾಧ್ಯ. ಸರ್ಕಾರಿ ಶಾಲೆಗಳಲ್ಲಿ ವಿಶ್ವಾಸಾರ್ಹತೆ, ಲವಲವಿಕೆ, ಪ್ರೋತ್ಸಾಹ ಇಲ್ಲದಿದ್ದರೆ ಎಷ್ಟೆ ಆರ್ಥಿಕ ಸಂಕಷ್ಟವಿದ್ದರೂ ಸಾಲ-ಸೂಲ ಮಾಡಿಯಾದರೂ ಖಾಸಗಿ ಶಿಕ್ಷಣಕ್ಕೆ ಹಾತೊರೆಯುತ್ತಾರೆಂಬ ವಾಸ್ತವ ಸರ್ಕಾರಿ ಪಂಡಿತರಿಗೆ ಅರ್ಥವಾಗಬೇಕಿದೆ.

ನಿರಂತರ ಹತ್ತು ಶೈಕ್ಷಣಿಕ ವರ್ಷಗಳ ಅಧ್ಯಯನ ಬದಲಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಪಾಸು ಮಾಡಿದವರಿಗೆ ಕನಿಷ್ಠ ಶೇಕಡಾ 20ರಷ್ಟು ಸಮನಾಂತರ ಮೀಸಲಾತಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒದಗಿಸಲು ಚಿಂತಿಸಬೇಕಿದೆ. ಇದರಿಂದ ಗ್ರಾಮೀಣ ಮತ್ತು ನಗರ ಎರಡೂ ಕಡೆಯ ಬಡ ಅಸಾಯಕರಿಗೆ ಅನುಕೂಲವಾಗುತ್ತದೆ. ಭೌಗೋಳಿಕ ನೆಪವೊಡ್ಡಿ ಗ್ರಾಮೀಣ ಮೀಸಲಾತಿಗೆ ಕನ್ನ ಕೊರೆಯುವವರಿಗೆ ಕಡಿವಾಣ ಬೀಳುತ್ತದೆ. ಭಾಷೆ ಮೇಲಿನ ಪ್ರೀತಿಯಿಂದ ಕನ್ನಡ ಮಾಧ್ಯಮದಲ್ಲಿ ಕಲಿಯುವ ಹೊರನಾಡ ಕನ್ನಡಿಗರಿಗೂ ಈ ಮೀಸಲು ಸೌಲಭ್ಯ ಸಿಗುವಂತಾಗಬೇಕು. ರಾಜ್ಯ ಕೋಟಾದಲ್ಲಿ ಸಾಮಾನ್ಯ ಪ್ರವೇಶಪರೀಕ್ಷೆ (ಸಿಇಟಿ) ಬರೆಯಲು ಕನಿಷ್ಠ ಏಳು ವರ್ಷ ಕರ್ನಾಟಕದಲ್ಲಿ ಕಲಿತಿರಬೇಕೆಂಬ ಹುಚ್ಚು ನಿಯಮದಿಂದಲೂ ವಿನಾಯಿತಿ ಹೊರನಾಡ ಕನ್ನಡಿಗರಿಗೆ ಕೊಡಬೇಕು. ಇದೆಲ್ಲ ಈಗಿನ ಅವಾಂತರಕಾರಿ ಕನ್ನಡ ಮಾಧ್ಯಮ ಗ್ರಾಮೀಣ ಮೀಸಲಾತಿ ಬದಲಾವಣೆಯಿಂದ ಮಾತ್ರ ಸಾಧ್ಯ!

  • ಶುದ್ದೋಧನ

ಇದನ್ನೂ ಓದಿ: ಇವು ಮೀಸಲಾತಿಯ ಅಡ್ಡಪರಿಣಾಮಗಳು: ಮೀಸಲಾತಿ ವಿರುದ್ಧ ಮಾತನಾಡಿದ ಕಂಗನಾ ರಾಣಾವತ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...