ಕೊರೊನ ಸೋಂಕಿನಿಂದ ಮಕ್ಕಳನ್ನು ದೂರವಿಡಲು ರಾಜ್ಯ ಸರ್ಕಾರ ಆನ್ಲೈನ್ ಶಿಕ್ಷಣಕ್ಕೆ ಒತ್ತು ನೀಡಿದೆ. ಹಲವು ತಿಂಗಳುಗಳಿಂದಲೂ ಎಲ್ಲಾ ಹಂತದ ಮಕ್ಕಳಿಗೂ ಆನ್ಲೈನ್ನಲ್ಲಿ ಪಾಠ ಪ್ರವಚನ ಮಾಡಲಾಗುತ್ತಿದೆ. ಇದು ಪರಿಣಾಮಕಾರಿಯಾಗಿ ಮಕ್ಕಳಿಗೆ ತಲುಪುತ್ತಿದೆಯೇ? ಆನ್ಲೈನ್ ಪಾಠವನ್ನು ಮಕ್ಕಳು ಗ್ರಹಿಸುತ್ತಿದ್ದಾರೆಯೇ ಎಂಬ ಗೊಂದಲಕ್ಕೆ ಸರ್ಕಾರ ಯಾವುದೇ ಪರಿಹಾರವನ್ನು ಕಂಡುಕೊಂಡಿಲ್ಲ. ನೇರ ಕಲಿಕೆಯ ಮಕ್ಕಳಿಗೇ ಪಾಠ ಅರ್ಥವಾಗುವುದಿಲ್ಲ. ಇನ್ನು ಆನ್ಲೈನ್ ಶಿಕ್ಷಣ ಹೇಗೆ ಅರ್ಥವಾದೀತು! ಹಾಗಾಗಿಯೇ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಬಿಇಒ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಹಲವು ಮನವಿಗಳನ್ನು ಸಲ್ಲಿಸಿ ಆನ್ಲೈನ್ ಶಿಕ್ಷಣ ನಿಲ್ಲಿಸುವಂತೆ ಆಗ್ರಹಿಸಿವೆ.
ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದವರೆಗೆ ಆನ್ಲೈನ್ನಲ್ಲಿ ಪಾಠ ಪ್ರವಚನಕ್ಕೆ ಅವಕಾಶ ನೀಡಿದೆ. ಆನ್ಲೈನ್ನಲ್ಲಿ ವಿದ್ಯಾರ್ಥಿಗಳು ಭಾಗಿಯಾದರೂ ಅವರ ಗೊಂದಲಗಳು ಮತ್ತು ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಆನ್ಲೈನ್ನಲ್ಲಿ ಪಾಠ ಹೇಗೆ ಮಾಡಬೇಕೆಂಬ ಬಗ್ಗೆ ತರಬೇತಿ ಪಡೆದಿಲ್ಲ. ಹಾಗಾಗಿ ಮಕ್ಕಳಿಗೆ ವಿಷಯ ಅರ್ಥ ಮಾಡಿಸುವುದು ಕಷ್ಟವೇ ಆಗಿದೆ. ಶಿಕ್ಷಕ ವರ್ಗವೂ ಇದನ್ನು ಅಲ್ಲಗೆಳೆಯುತ್ತಿಲ್ಲ. ವಿದ್ಯಾರ್ಥಿಗಳಿಂದ “ಪಾಠ ಅರ್ಥವಾಗುತ್ತಿಲ್ಲ, ನಮಗೆ ಉದ್ಭವಿಸುವ ಸಮಸ್ಯೆಗಳಿಗೆ ಪರಿಹಾರವೂ ಸಿಗುತ್ತಿಲ್ಲ, ಹೆಚ್ಚು ಹೊತ್ತು ಕೇಳಲು ಆಗುತ್ತಿಲ್ಲ” ಎನ್ನುವ ದೂರು ಸಾಮಾನ್ಯ.
ಇದನ್ನೂ ಓದಿ: ನೆಟ್ವರ್ಕ್ ಸಮಸ್ಯೆ: ಆನ್ಲೈನ್ ತರಗತಿಗಾಗಿ 5 ಕಿಮೀ ನಡೆಯುವ ವಿದ್ಯಾರ್ಥಿಗಳು!
ಆದರೆ ಆನ್ಲೈನ್ ಶಿಕ್ಷಣ ನೀಡಬೇಕೇ ಅಥವಾ ಆಫ್ಲೈನ್ ಶಿಕ್ಷಣ ಕೊಡಬೇಕೇ ಎಂಬ ಬಗ್ಗೆ ಸರ್ಕಾರಕ್ಕೇ ಗೊಂದಲವಿದೆ. ಆ ಗೊಂದಲವನ್ನು ಮಕ್ಕಳ ಮೇಲೆ ಮತ್ತು ಶಿಕ್ಷಕ ವೃಂದದ ಮೇಲೆಯೂ ವರ್ಗಾಯಿಸಿದೆ. ಆದ್ದರಿಂದ ಗೊಂದಲದ ಸನ್ನಿವೇಶವೇ ಮುಂದುವರಿದಿದೆ. ಉನ್ನತ ಮತ್ತು ಪ್ರಾಥಮಿಕ ಶಿಕ್ಷಣ ಸಚಿವರಿಬ್ಬರೂ ಕೂಡ ಸ್ಪಷ್ಟ ತೀರ್ಮಾನಗಳನ್ನು ಕೈಗೊಳ್ಳಲು ಇದುವರೆಗೆ ಸಾಧ್ಯವಾಗಿಲ್ಲ. ದೊಡ್ಡದೊಡ್ಡ ಶಿಕ್ಷಣ ಸಂಸ್ಥೆಗಳ ಮಾಲಿಕರು ಮನೆಪಾಠವನ್ನು ಬೆಂಬಲಿಸುವ ಶಿಕ್ಷಣ ತಜ್ಞರಿಂದ ಸಲಹೆಗಳನ್ನು ಕೇಳುತ್ತಿದ್ದು, ಬಹುತ್ವವನ್ನು ಪ್ರತಿಪಾದಿಸುವ ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳನ್ನು ನಿರ್ಲಕ್ಷಿಸಿರುವುದೇ ಈ ಗೊಂದಲಕ್ಕೆ ಕಾರಣ ಎನ್ನಲಾಗುತ್ತಿದೆ.
ಗೊಂದಲ ಸನ್ನಿವೇಶವನ್ನೇ ಬಂಡವಾಳ ಮಾಡಿಕೊಂಡಿರುವ ಶ್ರೀಮಂತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಮಕ್ಕಳಿಂದ ಮೊದಲ ಕಂತಿನ ಹಣವನ್ನು ಕಟ್ಟಿಸಿಕೊಂಡಿವೆ. ಈಗ ಎರಡನೇ ಕಂತಿನ ಹಣವನ್ನು ನೀಡುವಂತೆ ಮಕ್ಕಳ ಪೋಷಕರ ಮೇಲೆ ಒತ್ತಡ ಹೇರುತ್ತಿವೆ. ಎರಡನೇ ಕಂತಿನ ಹಣ ನೀಡಿಲ್ಲದ ಮಕ್ಕಳಿಗೆ (ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆ ಹಂತದ) ಆನ್ಲೈನ್ ಪಾಠದ ವಿಡಿಯೋಗಳನ್ನು ಹಾಕುವುದನ್ನು ನಿಲ್ಲಿಸಿದೆ. “ಹಣ ಕಟ್ಟಿ, ಪಾಠದ ವಿಡಿಯೋಗಳನ್ನು ಹಾಕುತ್ತೇವೆ” ಎಂದು ಮುಖ್ಯಶಿಕ್ಷಕರು ಮಕ್ಕಳ ಪೋಷಕರ ಮೊಬೈಲ್ಗಳಿಗೆ ಮೆಸೇಜ್ ಹಾಕಿ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪವೂ ವ್ಯಾಪಕವಾಗಿ ಕೇಳಿಬರುತ್ತಿದೆ.
ಇದನ್ನೂ ಓದಿ: 3 ತಿಂಗಳಲ್ಲಿ 350 ಆನ್ಲೈನ್ ಕೋರ್ಸ್; ವಿಶ್ವದಾಖಲೆ ಮಾಡಿದ ಆರತಿ ರಂಗನಾಥ್!
ಶ್ರೀಮಂತ ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರ ಮೇಲೆ ಶುಲ್ಕದ ಹಣಕ್ಕಾಗಿ ಒತ್ತಡ ಹೇರುತ್ತಿದ್ದರೆ, ಬಡ ಖಾಸಗಿ ಶಿಕ್ಷಣ ಸಂಸ್ಥೆಗಳ ಆನ್ಲೈನ್ ಶಿಕ್ಷಣವನ್ನೇ ನಿಲ್ಲಿಸಿಬಿಡುವಂತೆ ಬಿಇಒ ಮತ್ತು ಡಿಡಿಪಿಐಗಳನ್ನು ಆಗ್ರಹಿಸಿವೆ. ಆನ್ಲೈನ್ ಶಿಕ್ಷಣ ಮಕ್ಕಳಿಗೆ ಅರ್ಥವಾಗುವುದಿಲ್ಲ. ಹಾಗಾಗಿ ಅದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಆನ್ಲೈನ್ ಪಾಠ ಮಾಡುವುದರಿಂದ ಅನುಕೂಲ ಇಲ್ಲ. ಮಕ್ಕಳು ಹೆಚ್ಚು ಹೊತ್ತು ಮೊಬೈಲ್ ಹಿಡಿದು ಪಾಠ ಕೇಳಲು ಆಗುವುದಿಲ್ಲ. ವಿದ್ಯಾರ್ಥಿಗಳ ಮಿದುಳಿನ ಮೇಲೆ ಗಾಢ ಪರಿಣಾಮ ಬೀರುತ್ತದೆ. ಕಣ್ಣಿನ ಮೇಲೆ ಪರಿಣಾಮ ಬೀರಿ ನೋವು ಬರುತ್ತದೆ. ಫಲಿತಾಂಶದಲ್ಲಿ ಕಡಿಮೆಯಾದರೆ ಯಾರು ಹೊಣೆ? ಕಡಿಮೆ ಫಲಿತಾಂಶ ಬಂದರೆ ಅಂತಹ ಶಾಲೆಗಳನ್ನು ಮುಚ್ಚುವ ಭೀತಿಯೂ ಇದೆ.
ಕೋವಿಡ್ ಅವಧಿಯಲ್ಲಿ ಆನ್ಲೈನ್ ಶಿಕ್ಷಣ ಪಡೆಯುವ ಮಕ್ಕಳು ಸರಿಯಾಗಿ ಗ್ರಹಿಸಲು ಸಾಧ್ಯವಾಗದೆ ಕಡಿಮೆ ಅಂಕಗಳನ್ನು ಪಡೆಯುವ ಸಾಧ್ಯತೆ ಇದೆ. ಪಿಯುಸಿ ನಂತರದ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್ನಂತಹ ಕೋರ್ಸ್ಗಳಿಗೆ ಹೋಗಲು ತಡೆದಂತೆ ಆಗುತ್ತದೆ. ಕಡಿಮೆ ಅಂಕ ಗಳಿಸಿದವರ ಮುಂದಿನ ಭವಿಷ್ಯ ಮಂಕಾಗಲಿದೆ. ವಿದ್ಯಾರ್ಥಿಗೆ ಮುಂದಿನ ಆಯ್ಕೆ ಇಲ್ಲದಂತಾಗಿ ಶಿಕ್ಷಣವನ್ನು ಮೊಟುಕುಗೊಳಿಸಬೇಕಾದಂತಹ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಕೇವಲ ಪ್ರತಿಷ್ಠಗಾಗಿ ಆನ್ಲೈನ್ ಶಿಕ್ಷಣದ ಮೂಲಕ ಪಾಠ ಮಾಡಿದರೆ ಅದು ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿಸಿದಂತೆಯೇ ಆಗುತ್ತದೆ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಾಮಾನ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಶಿಕ್ಷಣ ಅಧಿಕಾರಿಗಳಿಗೆ ಆನ್ಲೈನ್ ಶಿಕ್ಷಣ ನಿಲ್ಲಿಸುವಂತೆ ಮನವಿ ಮಾಡಿದ್ದೇವೆ ಎನ್ನುತ್ತಾರೆ ಹನುಮಂತರಾಯಪ್ಪ.
ಇದನ್ನೂ ಓದಿ: ಶಾಲೆಗಳ ಆನ್ಲೈನ್ ತರಗತಿ ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ ದುಷ್ಕರ್ಮಿಗಳು
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆನ್ಲೈನ್ ಶಿಕ್ಷಣದ ಮಾತು ದೂರವೇ ಉಳಿದಿದೆ. ನೆಟ್ವರ್ಕ್ ಮತ್ತು ಸಿಗ್ನಲ್ ಸಿಗದೇ ಇರುವ ಸಮಸ್ಯೆಯಿಂದ ಪಾಠ ಕೇಳಲು ಆಗುವುದಿಲ್ಲ. ನಗರ ಪ್ರದೇಶದ ಕೆಲವೇ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಅನುಕೂಲವಾಗಬಹುದು. ಆದರೆ ಆ ಪಾಠವನ್ನು ಅರ್ಥ ಮಾಡಿಕೊಳ್ಳುವ ಮಂದಿ ಕಡಿಮೆ. ಗ್ರಾಮೀಣ ಬಡ ವಿದ್ಯಾರ್ಥಿಗಳು ನೇರ ತರಗತಿಗಳಿಗೆ ಬರಬೇಕೆಂದರೆ ಬಸ್ ವ್ಯವಸ್ಥೆಯೂ ಇಲ್ಲ. ಇದು ಆ ವಿದ್ಯಾರ್ಥಿಗಳು ಉಭಯ ಸಂಕಟಕ್ಕೆ ಸಿಲುಕುವಂತೆ ಮಾಡಿದೆ. ಆನ್ಲೈನ್ ವ್ಯವಸ್ಥೆ ಶ್ರೀಮಂತ ಖಾಸಗಿ ಶಿಕ್ಷಣ ಸಂಸ್ಥೆಗಳ ಮಕ್ಕಳಿಗೆ ಲಭ್ಯವಾದರೆ ಬಡ ಖಾಸಗಿ ಶಿಕ್ಷಣ ಸಂಸ್ಥೆಗಳ ಮಕ್ಕಳು ಶಿಕ್ಷಣದಿಂದ ದೂರವೇ ಉಳಿಯುವಂತೆ ಮಾಡಿದೆ.
ಸರ್ಕಾರಿ ಶಾಲಾ ಕಾಲೇಜುಗಳ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಬಹುತೇಕ ಮಕ್ಕಳು ಬಡ-ಮಧ್ಯಮ ವರ್ಗದ ಕುಟುಂಬದವರಾಗಿದ್ದು 4ಜಿ ಯಂತಹ ಮೊಬೈಲ್ ಖರೀದಿ ಮಾಡಲು ಶಕ್ತವಾಗಿಲ್ಲ. ಮೊಬೈಲ್ ಇದ್ದವರು ನೆಟ್ವೆರ್ಕ್ ಸಿಗದೆ ಸಮಸ್ಯೆ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶ್ರೀಮಂತ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ ಒಂದು ಕಡೆಯಾದರೆ ಮಧ್ಯಮ ವರ್ಗದ ಖಾಸಗಿ ಶಿಕ್ಷಣ ಸಂಸ್ಥೆಗಳು ಅಸಹಾಯಕತೆಯಿಂದ ಏನೂ ತೋಚದಂತಹ ಸ್ಥಿತಿಗೆ ತಲುಪಿವೆ. ಹೀಗಾಗಿ ವಿದ್ಯಾರ್ಥಿಗಳ ಕಲಿಕೆಯ ನಡುವೆ ಭಾರೀ ಕಂದಕ ನಿರ್ಮಾಣವಾಗಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ವೈಜ್ಞಾನಿಕ ಶಿಕ್ಷಣ ನೀಡುವತ್ತ ದಿಟ್ಟ ನಿರ್ಧಾರ ಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ: ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ತಾಳಿ ಮಾರಿಕೊಂಡ ಘಟನೆ ನನ್ನ ಹೃದಯ ಹಿಂಡುತ್ತಿದೆ: ಎಚ್ಡಿಕೆ



ದಯವಿಟ್ಟು ಆನ್ಲೈನ್ ಶಿಕ್ಷಣವನ್ನು ನಿಲ್ಲಿಸಿ…!!!
ಈ ಆನ್ಲೈನ್ ತರಗತಿಯಿಂದಾಗಿ ಅನೇಕ ಮಕ್ಕಳು ದುರಭ್ಯಾಸ ಗಳಿಗೆ ಬಲಿಯಾಗುತ್ತಿದ್ದಾರೆ.! ಹಾಗೂ ಆನ್ಲೈನ್ ನಲ್ಲಿ ಪಾಠ ಕೇಳುವುದಕ್ಕಿಂತ ಅನ್ಯರ ಜೊತೆಗೆ ಚಾಟಿಂಗ್ ಮಾಡುವುದೇ ಹೆಚ್ಚು…!
ಆನ್ಲೈನ್ ಶಿಕ್ಷಣ ವ್ಯವಸ್ಥೆ ಯಿಂದಾಗಿ ಮಕ್ಕಳು ಹಾಳಾಗುತ್ತಿದ್ದಾರೆ, ಆನ್ಲೈನ್ ಶಿಕ್ಷಣ ದಿಂದ ಯಾವುದೇ ಪ್ರಯೋಜನ ಇಲ್ಲ, ನಿಜವಾಗಿಯೂ ನಮ್ಮ ರಾಜ್ಯದ ಈಗಿನ ಶಿಕ್ಷಣ ನೀತಿಯೇ ಮಕ್ಕಳನ್ನು ಹಾಳು ಮಾಡುತ್ತಿದೆ…!!!
(ಆನ್ಲೈನ್ ಶಿಕ್ಷಣ ಸರಿ ಅನಿಸುವುದೇ ಆದರೆ ನನ್ನ ನಂಬರ್ ಗೆ ಕರೆ ಮಾಡಿ 8496092478)
:- ಅನಿಲ್ ಕುಮಾರ್,
ಹಂಗಳ ಗ್ರಾಮ, ಗುಂಡ್ಲುಪೇಟೆ ತಾಲೂಕು