ಕೊರೊನಾ ಸಾಂಕ್ರಾಮಿಕದಿಂದಾಗಿ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ಹೋಗಲು ನಿರ್ಬಂಧವಿರುವ ಕಾರಣ ಆನ್ಲೈನ್ ತರಗತಿಗಳನ್ನು ಜಾರಿ ಮಾಡಲಾಗಿದೆ. ನಗರ ಪ್ರದೇಶಗಳಿಂದ ಅನತಿ ದೂರದಲ್ಲಿರುವ ವಿದ್ಯಾರ್ಥಿಗಳಿಗೆ ಇದು ಉಪಯೋಗವಾದರೂ, ಹಳ್ಳಿಗಳಲ್ಲಿ ವಾಸಿಸುವವರಿಗೆ, ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿರುವವರಿಗೆ, ನೆಟ್ವರ್ಕ್ ಸಿಗದ ಪ್ರದೇಶಗಳಲ್ಲಿ ವಾಸಿಸುವವರಿಗೆ ಶಾಪವಾಗಿ ಪರಿಣಮಿಸಿದೆ.
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಗೆ, ಶಿರ್ವೆ, ಹಾಗೂ ಕೋವೆ ಗ್ರಾಮಗಳ ವಿದ್ಯಾರ್ಥಿಗಳು ನಿತ್ಯವೂ ಆನ್ಲೈನ್ ತರಗತಿಗಳಿ ಹಾಜರಾಗಲು 5 ಕಿಲೋಮೀಟರ್ ನಡೆಯಬೇಕಾಗಿದೆ.
ಈ ಹಳ್ಳಿಗಳಲ್ಲಿ ಮೊಬೈಲ್ ನೆಟ್ವರ್ಕ್ ಸಿಗದ ಕಾರಣ ಇಲ್ಲಿನ ವಿದ್ಯಾರ್ಥಿಗಳು ತಮ್ಮ ಊರಿನಿಂದ ಐದಾರು ಕಿ.ಮೀ ನಡೆದುಕೊಂಡು ಬರುತ್ತಾರೆ. ಕೆಲವರು ಸೈಕಲ್ನಲ್ಲಿ ಬರುತ್ತಾರೆ. ನೆಟ್ವರ್ಕ್ ಸಿಗುವ ದೇವಳಮಕ್ಕಿ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದ ತಂಗುದಾಣ, ಅಂಗಡಿ, ತಮ್ಮ ಸ್ನೇಹಿತರ ಮನೆಯಲ್ಲಿ ಕುಳಿತು ಪಾಠ ಕೇಳಿಸಿಕೊಳ್ಳುತ್ತಾರೆ.
ಇದನ್ನೂ ಓದಿ: ಆನ್ಲೈನ್ ತರಗತಿಗೆ ಹಾಜರಾಗಲು ಅಸಾಧ್ಯ: 10 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ
ಕಾರವಾರದಲ್ಲಿರುವ ಕಾಮಧೇನು ಕಾಲೇಜಿನಲ್ಲಿ ಬಿಸಿಎ (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್) ಓದುತ್ತಿರುವ ಪವಿತ್ರಾ ಹೇಳುವಂತೆ, ’ಕಾಲೇಜು ಆಡಳಿತ ಮಂಡಳಿ ಆನ್ಲೈನ್ ತರಗತಿಗಳಿಗೆ ಹಾಜರಾಗುವಂತೆ ಹೇಳಿದಾಗ ನಾವು ಗೊಂದಲಕ್ಕೆ ಒಳಗಾದೆವು. ಏಕೆಂದರೆ ನಮ್ಮ ಊರಿನಲ್ಲಿ ಯಾವುದೇ ಮೋಬೈಲ್ ನೆಟ್ವರ್ಕ್ ಇಲ್ಲ. ನಂತರ ನಾವು ದೇವಳಮಕ್ಕಿ ಬಸ್ ನಿಲ್ದಾಣದಲ್ಲಿ ಕುಳಿತು ಆನ್ಲೈನ್ ತರಗತಿಗಳಿಗೆ ಹಾಜರಾಗುತ್ತೇವೆ. ಅಲ್ಲಿ ಬೇರೆ ಸ್ಥಳಗಳಿಗಿಂತ ನೆಟ್ವರ್ಕ್ ಉತ್ತಮವಾಗಿದೆ ಮತ್ತು ನಮಗೆ ಕುಳಿತುಕೊಳ್ಳಲು ಸ್ಥಳವಿದೆ’ ಎನ್ನುತ್ತಾರೆ.
“ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ರವರೆಗೆ ಅಧ್ಯಯನ ಮಾಡುತ್ತೇವೆ ಮತ್ತು ಉಪನ್ಯಾಸಕರು ಟಿಪ್ಪಣಿಗಳನ್ನು ಕಳುಹಿಸಿದ್ದರೆ, ಅದನ್ನು ಅಲ್ಲಿ ಡೌನ್ಲೋಡ್ ಮಾಡಿಕೊಂಡು ನಂತರ ಮನೆಗೆ ಹಿಂತಿರುಗುತ್ತೆವೆ” ಎಂದು ವಿದ್ಯಾರ್ಥಿನಿ ಪವಿತ್ರಾ ಹೇಳಿದ್ದಾರೆ.
ಈ ಮೂರು ಗ್ರಾಮಗಳಲ್ಲಿ 1,500 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇಲ್ಲಿ ಪ್ರಸ್ತುತ ಆನ್ಲೈನ್ ತರಗತಿಗಳಿಗೆ ಹಾಜರಾಗುತ್ತಿರುವ 15 ವಿದ್ಯಾರ್ಥಿಗಳಿದ್ದಾರೆ.
ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಂಟು ಗ್ರಾಮಗಳಿದ್ದು, ಅವುಗಳಲ್ಲಿ ಐದು ಗ್ರಾಮಗಳಿಗೆ ನೆಟ್ವರ್ಕ್ ಸಂಪರ್ಕವಿದೆ. ಆದರೆ, ದೇವಳಮಕ್ಕಿ ಸಮೀಪವೇ ಇರುವ ನಗೆ, ಶಿರ್ವೆ, ಕೋವೆ ಗ್ರಾಮಗಳಿಗೆ ಈವರೆಗೆ ನೆಟ್ವರ್ಕ್ ಸಂಪರ್ಕ ಏರ್ಪಟ್ಟಿಲ್ಲ. ದೇವಳಮಕ್ಕಿಯಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ನ ಒಂದೇ ಒಂದು ಮೊಬೈಲ್ ಟವರ್ ಇದೆ.
ಇದನ್ನೂ ಓದಿ: LKG ಯಿಂದ 7 ನೇ ತರಗತಿಯವರೆಗೆ ಆನ್ಲೈನ್ ಕ್ಲಾಸ್ ರದ್ದು: ಸಚಿವ ಸಂಪುಟ ತೀರ್ಮಾನ
ಕಠಿಣ ತುರ್ತು ಪರಿಸ್ಥಿತಿಯಲ್ಲಿಯೂ ಸಹ, ನಾವು ಮೊಬೈಲ್ ಸಿಗ್ನಲ್ಗಾಗಿ ಕಿಲೋಮೀಟರ್ಗಟ್ಟಲೆ ಪ್ರಯಾಣಿಸಬೇಕಾಗಿದೆ. ಇಲ್ಲೂ ಬಿಎಸ್ಎನ್ಎಲ್ ನೆಟ್ವರ್ಕ್ ಮಾತ್ರ ಲಭ್ಯವಿದೆ. ಪವರ್ ಕಟ್ ಇದ್ದಾಗ ಯಾವುದೇ ನೆಟ್ವರ್ಕ್ ದೊರೆಯುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಅಭ್ಯಸಿಸುತ್ತಿರುವ ದೇವಳಮಕ್ಕಿ ಗ್ರಾಮದ ವಿದ್ಯಾರ್ಥಿ ಪ್ರಜ್ವಲ್ ಹೇಳುವಂತೆ ’ ನನಗೆ ಆನ್ಲೈನ್ ತರಗತಿಗಳಿಲ್ಲ. ಆದರೆ ನೆಟ್ವರ್ಕ್ ಸಿಗದೆ ಸಮಸ್ಯೆ ಅನುಭವಿಸುತ್ತಯಿರುವ ವಿದ್ಯಾರ್ಥಿಗಳನ್ನು ನೋಡುತ್ತಿದ್ದೇನೆ. ಆನ್ಲೈನ್ ತರಗತಿಗಳು ನಡೆಯಲೇಬೇಕೆಂಬ ನಿಯಮಗಳಿದ್ದರೇ, ನಮ್ಮ ಹಳ್ಳಿಗಳಲ್ಲಿ ಸಂಪರ್ಕವು ಸುಧಾರಿಸಬೇಕು’ ಎಂದಿದ್ದಾರೆ ಎಂದು ಟಿಎನ್ಎಂ ವರದಿ ಮಾಡಿದೆ.
ಶಿಕ್ಷಣದ 2017-18ರ ರಾಷ್ಟ್ರೀಯ ಮಾದರಿ ಸಮೀಕ್ಷೆಯ ವರದಿಯ ಪ್ರಕಾರ, ಕೇವಲ 24% ಭಾರತೀಯ ಕುಟುಂಬಗಳು ಮಾತ್ರ ಇಂಟರ್ನೆಟ್ ಸೌಲಭ್ಯವನ್ನು ಹೊಂದಿದ್ದರೆ, ಕೇವಲ 15% ರಷ್ಟು ಗ್ರಾಮೀಣ ಕುಟುಂಬಗಳು ಮಾತ್ರ ಇಂಟರ್ನೆಟ್ ಸೇವೆಗಳನ್ನು ಹೊಂದಿದ್ದಾರೆ. ಖಾಸಗಿ ನೆಟ್ವರ್ಕ್ ಪೂರೈಕೆದಾರರು ಚಂದಾದಾರರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕವನ್ನು ಖಾತರಿಪಡಿಸಿಲ್ಲ ಎಂದು ಶಿಕ್ಷಣ ಸಂಸ್ಥೆಗಳಿಗೆ ಜಾಗತಿಕ ಶ್ರೇಯಾಂಕವನ್ನು ಪ್ರಕಟಿಸುವ ಕ್ಯೂಎಸ್(Quacquarelli Symonds) ವರದಿ ಮಾಡಿದೆ.
ರಾಜ್ಯದ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಕರ್ನಾಟಕ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಶಾಲೆ ತೆರೆಯುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.