ಬಿಜೆಪಿಯ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾನೂನುಗಳ ವಿರುದ್ದ ರೈತರು ನಡೆಸುತ್ತಿರುವ ಹೋರಾಟ ಇಂದಿಗೆ 8 ನೇ ದಿನ ತಲುಪಿದೆ. ಹೋರಾಟದ ಆರಂಭದಲ್ಲಿ 73 ವರ್ಷದ ಅಜ್ಜಿಯೊಬ್ಬರು ರೈತ ಸಂಘಟನೆಯೊಂದರ ಹಳದಿ ಧ್ವಜವನ್ನು ಹಿಡಿದು ರೈತ ಹೋರಾಟಕ್ಕೆ ಹೊರಟು ನಿಂತಿರುವ ಸ್ಪೂರ್ತಿದಾಯಕ ಚಿತ್ರವೊಂದು ವೈರಲ್ ಆಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದ ಈ ಚಿತ್ರ ಹಲವರ ಮನಸ್ಸು ಗೆದ್ದಿತ್ತು. ಆದರೆ ಬಿಜೆಪಿ ಬೆಂಬಲಿಗರು ಈ ಅಜ್ಜಿ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ’ಶಾಹಿನ್ ಬಾಗ್ನ ಅಜ್ಜಿ’ ಬಿಲ್ಕೀಸ್ ಬಾನು ಎಂದು ಸುಳ್ಳು ಹರಡಿದ್ದರು. ಸದಾ ವಿವಾದದಲ್ಲಿರುವ ಬಾಲಿವುಡ್ ನಟಿ ಕಂಗನಾ ರಾಣಾವತ್ ಇನ್ನೂ ಒಂದು ಹೆಜ್ಜೆ ಮುಂದು ಹೋಗಿದ್ದರು.
ಇದನ್ನೂ ಓದಿ: ’ಶಾಹೀನ್ ಬಾಗ್ ದಾದಿ’ಯ ಕುರಿತು ಆಕ್ಷೇಪಾರ್ಹ ಹೇಳಿಕೆ- ನಟಿ ಕಂಗನಾಗೆ ಕಾನೂನು ನೋಟಿಸ್
ನಟಿ ಕಂಗನಾ, “ಹಹಹ ಇದು ಅದೇ ದಾದಿ, ಟೈಮ್ ಮ್ಯಾಗಝಿನ್ ಹೇಳಿರುವ ಅತ್ಯಂತ ಪ್ರಭಾವಶಾಲಿ ಇಂಡಿಯನ್… ಮತ್ತು ಅವರು 100 ರುಪಾಯಿಗೆ ಸಿಗುತ್ತಾರೆ. ಭಾರತ ಮುಜುಗರಕ್ಕೀಡಾಗಲು ಅಂತರಾಷ್ಟ್ರೀಯ ಪಿಆರ್ಗಳನ್ನು ಪಾಕಿಸ್ತಾನಿ ಪತ್ರಕರ್ತರು ಹೈಜಾಕ್ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮಗಾಗಿ ಮಾತನಾಡಲು ನಮ್ಮದೇ ಜನರು ಬೇಕು” ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ನಟಿ ಇದೀಗ ಆ ಟ್ವೀಟನ್ನು ಅಳಿಸಿದ್ದು, ಶಾಹಿನ್ ಭಾಗ್ ಅಜ್ಜಿಯ ಕುರಿತು ಸುಳ್ಳು ಹಾಗೂ ಅವಮಾನಕರ ಹೇಳಿಕೆಗೆ ಕ್ಷಮೆ ಕೋರುವಂತೆ ನಟಿಗೆ ನಿನ್ನೆ ಪಂಜಾಬ್ನ ವಕೀಲರೊಬ್ಬರು ಕಾನೂನು ನೋಟಿಸ್ ಕಳುಹಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೋ: ರೈತರ ಪ್ರತಿಭಟನೆಗೆ ಧುಮುಕಿದ ಭೀಮ್ ಆರ್ಮಿ ಚಂದ್ರಶೇಖರ್ ಆಜಾದ್
ಯಾರು ಈ ರೈತ ಹೋರಾಟದ ಅಜ್ಜಿ?
ಪಂಜಾಬ್ನ ಬಟಿಂಡಾ ಜಿಲ್ಲೆಯ ಬಹದ್ದೂರ್ ಗಡ್ ಜಂಡಿಯಾನ್ ಗ್ರಾಮದ 73 ವರ್ಷದ ಈ ಅಜ್ಜಿಯ ಹೆಸರು ಮಹಿಂದರ್ ಕೌರ್. 13 ಎಕರೆ ಭೂಮಿಯನ್ನು ಹೊಂದಿರುವ ಇವರು ಕೃಷಿಯಲ್ಲೇ ತಮ್ಮ ಇಡೀ ಜೀವನವನ್ನು ಕಳೆದಿದ್ದಾರೆ. ಜೊತೆಗೆ ರೈತ ಚಳುವಳಿಯಲ್ಲಿ ಕೂಡಾ ತೊಡಗಿಸಿಕೊಂಡಿದ್ದಾರೆ.
ಇವರಿಗೆ ಮೂವರು ಹೆಣ್ಣು ಮಕ್ಕಳಿದ್ದು ಅವರೆಲ್ಲರಿಗೂ ಮದುವೆಯಾಗಿದೆ. ಪ್ರಸ್ತುತ ತಮ್ಮ ಮಗನೊಂದಿಗೆ ಜಂಡಿಯಾನ್ ಗ್ರಾಮದಲ್ಲಿ ವಾಸವಿರುವ ಮಹಿಂದರ್ ಅವರು ತಮ್ಮ ಮನೆಗೆ ಬೇಕಾದ ತರಕಾರಿಯನ್ನು ತಮ್ಮದೆ ಭೂಮಿಯಲ್ಲಿ ಬೆಳೆಯುತ್ತಾರೆ.
कंगना रनौत ने किसान आंदोलन में शामिल जिस बुज़ुर्ग महिला किसान को 'शाहीन बाग़ वाली दादी' बताया था, उन बुज़ुर्ग किसान ने कंगना को क्या जवाब दिया? pic.twitter.com/W3I96twVnR
— BBC News Hindi (@BBCHindi) December 2, 2020
ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅವರ ಚಿತ್ರವು ಅಕ್ಟೋಬರ್ನದ್ದಾಗಿದೆ. ತಮ್ಮ ಮೇಲಿನ ಅಪಪ್ರಚಾರದ ಬಗ್ಗೆ ಮಾತನಾಡಿದ್ದ ಅವರು, “ತನ್ನ ಬಗ್ಗೆ ನಟಿಯೊಬ್ಬರು ಹೇಳಿಕೆ ನೀಡಿದ್ದಾಗಿ ನನಗೆ ಬೇರೊಬ್ಬರಿಂದ ಮಾಹಿತಿ ಸಿಕ್ಕಿತು. ಅವರೆಂದು ನನ್ನ ಮನೆಗೆ ಬಂದಿಲ್ಲ, ಅದು ತುಂಬಾ ಕೆಟ್ಟ ಹೇಳಿಕೆ. ನನಗೆ 73 ವರ್ಷ ವಯಸ್ಸಾಗಿದ್ದರೂ ಯಾವಾಗ ಬೇಕಿದ್ದರೂ ಪ್ರತಿಭಟನೆಗೆ ಸೇರಲು ಸಿದ್ದ” ಎಂದು ಹೇಳಿದ್ದರು.
ಇನ್ನು ಶಾಹೀನ್ ಭಾಗ್ನಲ್ಲಿ ಪ್ರಖ್ಯಾತರಾಗಿದ್ದ ಬಿಲ್ಕೀಸ್ ಅಜ್ಜಿ ರೈತರ ಪ್ರತಿಭಟನೆಗೆ ಬೆಂಬಲ ನೀಡಬಾರದೆ? ಅವರ್ಯಾರು ಹಣ ಪಡೆದು ಹೋರಾಟ ಮಾಡಿದ್ದಕ್ಕೆ ದಾಖಲೆಗಳಿಲ್ಲ. ಅವರು ನಿರಂತರವಾಗಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ್ದರು. ನೀವು ಸಿಎಎ ಪರ ಇರುವ ಕಾರಣಕ್ಕೆ ಸಿಎಎ ವಿರುದ್ಧ ಹೋರಾಡುವುವರನ್ನು ಹಣಿಯುವುದು ಸರಿಯಲ್ಲ. ಇನ್ನು ಬಿಲ್ಕೀಸ್ ಅಜ್ಜಿ ರೈತರ ಪ್ರತಿಭಟನೆಗೆ ಬೆಂಬಲ ನೀಡಲು ಬಂದಾಗ ಅವರನ್ನು ಪೊಲೀಸರು ಬಂಧಿಸಿದ್ದೇಕೆ? ಒಬ್ಬ ಮಹಿಳೆಗೆ ಎದುರುವಷ್ಟು ಪುಕ್ಕಲು ಸರ್ಕಾರವೇ ಎಂದು ಹಲವರು ಕಂಗನಾ ಮತ್ತು ಬಿಜೆಪಿ ಬೆಂಬಲಿಗರ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೋ: ಹೋರಾಟದಲ್ಲಿ ತಮ್ಮದೆ ಛಾಪು ಮೂಡಿಸಿದ ರೈತ ಮಹಿಳೆಯರು!