ದೆಹಲಿ ಚಲೋ ಆರಂಭವಾದ ನಂತರ ರೈತಮುಖಂಡರೊಂದಿಗೆ ಕೇಂದ್ರ ಸಚಿವರು ನಡೆಸಿದ ಸುಧೀರ್ಘ 7 ಗಂಟೆಗಳ ಎರಡನೇ ಮಾತುಕತೆ ಸಹ ವಿಫಲವಾಗಿವೆ. ತಾನು ಅಂಗೀಕರಿಸಿರುವ ಮೂರು ಕೃಷಿ ಕಾಯ್ದೆಗಳಲ್ಲಿ ರೈತರು ಬಯಸಿದ ಅಗತ್ಯ ಬದಲಾವಣೆ ತರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ ಮೂರು ಕಾಯ್ದೆಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳಬೇಕೆಂದು ಎಲ್ಲಾ ರೈತ ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಪಟ್ಟು ಹಿಡಿದಿದ್ದಾರೆ.
ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಮುಂದುವರೆಯುತ್ತದೆ ಎಂದು ಲಿಖಿತ ಭರವಸೆ ನೀಡಲು ಮುಂದಾಗಿದೆ. ಅಲ್ಲದೇ ಗುತ್ತಿಗೆ ಕೃಷಿ ಪದ್ದತಿಯಲ್ಲಿ ಉದ್ಭವಿಸುವ ಸಮಸ್ಯೆಗಳಿಗೆ ರೈತರು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಬಳಿ ಹೋಗುವ ಬದಲು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬಹುದು ಎಂದು ಕಾಯ್ದೆಯಲ್ಲಿ ಬದಲಾವಣೆ ತರುವುದಾಗಿ ಕೇಂದ್ರ ಸಚಿವರು ಹೇಳಿದ್ದಾರೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ ನಮಗೆ ಯಾವುದೇ ಅಹಂಕಾರವಿಲ್ಲ. ರೈತರ ಮಾತುಗಳನ್ನು ಮುಕ್ತವಾಗಿ ಆಲಿಸುತ್ತೇವೆ. ರೈತರ ಪ್ರತಿಭಟನೆ ನಿಲ್ಲಿಸಿದರೆ ಒಳ್ಳೆಯದು ಎಂದಿದ್ದಾರೆ. ಅಲ್ಲದೆ ಮುಂದಿನ ಸಭೆ ಡಿಸೆಂಬರ್ 05ರ ಶನಿವಾರ ನಡೆಯಲಿದೆ ಎಂದಿದ್ದಾರೆ.
ಸಭೆಯ ನಂತರ ಭಾರತೀಯ ಕಿಸಾನ್ ಯೂನಿಯನ್ನ ಪ್ರಧಾನ ಕಾರ್ಯದರ್ಶಿ ಜಗಮೋಹನ್ ಸಿಂಗ್ ಮಾತನಾಡಿ “ಸರ್ಕಾರ ಇಂದೇ ಆ ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಶನಿವಾರದ ಸಭೆಗೆ ರೈತ ಮುಖಂಡರು ಹಾಜರಾಗುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
ನಮ್ಮ ಕಡೆಯಿಂದ ಕೇಂದ್ರ ಸರ್ಕಾರಕ್ಕೆ ಹೇಳಬೇಕಾದುದನ್ನೆಲ್ಲಾ ಹೇಳಿದ್ದೇವೆ. ಶುಕ್ರವಾರವೇ ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ಸಭೆಗಳಿಗೆ ನಾವು ಭಾಗವಹಿಸುವುದಿಲ್ಲ ಎಂದು ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ರೈತರನ್ನು ಸಂಘಟಿಸುತ್ತಿರುವ ಲೋಕ್ ಸಂಘರ್ಷ್ ಮೋರ್ಚಾದ ಪ್ರತಿಭಾ ಶಿಂಧೆ ಹೇಳಿದ್ದಾರೆ.
ಕೇಂದ್ರದ ಈ ಮಾತುಕತೆಗಳಿಂದ ಏನೂ ಪ್ರಯೋಜನವಿಲ್ಲ. ಅದು ನಾವು ರೈತರೊಂದಿಗೆ ಮಾತನಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳಲ್ಲಷ್ಟೇ ಮಾತುಕತೆ ನಡೆಸುತ್ತಿವೆ ವಿನಾಃ ರೈತರ ಬಗ್ಗೆ ಅದಕ್ಕೆ ಕಾಳಜಿಯಿಲ್ಲ. ಹಾಗಾಗಿ ನಾವು ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ ಎಂದು ರೈತರು ಹೇಳಿದ್ದಾರೆ.
ದೆಹಲಿಗೆ ಬರುವ ಹಲವ ರಸ್ತೆಗಳನ್ನು ಇಂದು ಬೆಳಿಗ್ಗೆಯಿಂದ ರೈತರು ಬಂದ್ ಮಾಡಿದ್ದಾರೆ. ಹಾಗಾಗಿ ತೀವ್ರ ಟಾಫಿಕ್ ಉಂಟಾಗಿದೆ.
ಇದನ್ನೂ ಓದಿ: ರೈತ ಮುಖಂಡರು ಸಚಿವರೊಂದಿಗಿನ 7 ಗಂಟೆಗಳ ಮಾತುಕತೆ ಅಂತ್ಯ: ಯಾರು ಏನು ಹೇಳಿದರು?
Super