ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮತ್ತು ಬೆಂಗಳೂರು ನಗರ ಸಾರಿಗೆ ಸಂಸ್ಥೆ (BMTC) ಸೇರಿದಂತೆ ವಿವಿಧ ನಿಗಮಗಳ ಅಡಿಯಲ್ಲಿ ನೌಕರರಾಗಿ ದುಡಿಯುತ್ತಿರುವ ಸಾವಿರಾರು ಜನರು ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಎಂದು ಒತ್ತಾಯಿಸಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು, ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಸಾರಿಗೆ ನೌಕರರಿಗೂ ನೀಡಬೇಕು ಮತ್ತು ಕೊರೊನಾ ಸಮಯದಲ್ಲಿ ಮೃತಪಟ್ಟ ಸಾರಿಗೆ ನೌಕರರ ಕುಟುಂಬಕ್ಕೆ ಕೊರೊನಾ ವಾರಿಯರ್ಸ್ ಜೀವವಿಮೆ ಮೊತ್ತ ನೀಡಬೇಕೆಂದು ಆಗ್ರಹಿಸಿ ಇಂದು ಬೆಂಗಳೂರಿನಲ್ಲಿ ವಿಧಾನಸೌಧ ಚಲೋ ನಡೆಸಿದರು.

ಈಗ ನಾವು ಸರ್ಕಾರಿ ನೌಕರರೂ ಅಲ್ಲ, ಖಾಸಗಿ ನೌಕರರು ಅಲ್ಲ. ಮಧ್ಯದಲ್ಲಿ ನಿಗಮ, ಸಂಸ್ಥೆಗಳ ಅಡಿಯಲ್ಲಿ ದುಡಿಯುತ್ತಿದ್ದು ಹೆಚ್ಚಿನ ಸೌಲಭ್ಯಗಳು ದೊರಕುತ್ತಿಲ್ಲ. ಸಂಸ್ಥೆಗೆ ನಷ್ಟವಾದರೆ ನಮಗೆ ಸಂಬಳವನ್ನು ಸಕಾಲಕ್ಕೆ ನೀಡುವುದಿಲ್ಲ. ಹಾಗಾಗಿ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ವಿವಿಧ ರಾಜ್ಯಗಳಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಗಣಿಸಲಾಗಿದೆ. ಇತ್ತೀಚೆಗೆ ಆಂದ್ರ ಪ್ರದೇಶ ಸರ್ಕಾರವೂ ಈ ತೀರ್ಮಾನ ತೆಗೆದುಕೊಂಡಿದೆ. ಅದು ಕರ್ನಾಟಕದಲ್ಲಿಯೂ ಜಾರಿಯಾಗಬೇಕೆಂದು ಸಾರಿಗೆ ನೌಕರರು ಒತ್ತಾಯಿಸಿದರು.
ಸಾರಿಗೆ ನೌಕರರು ಸರ್ಕಾರಿ ನೌಕರರಾಗುವ ಹೋರಾಟದ ಒಕ್ಕೂಟ ಬ್ಯಾನರ್ನಡಿ ಒಂದುಗೂಡಿದ ಸಾವಿರಾರು ನೌಕರರು, ಅವರ ಕುಟಂಬ ಸದಸ್ಯರು ‘ಸರ್ಕಾರಿ ನೌಕರರಾಗುವುದು ಬೇಡಿಕೆಯಲ್ಲ, ಅದು ನಮ್ಮ ಹಕ್ಕು; ಸಾರಿಗೆ ನೌಕರರ ನಡಿಗೆ- ಸರ್ಕಾರಿ ನೌಕರರಾಗುವ ಕಡೆಗೆ, ಆಶ್ವಾಸನೆ ಸಾಕು -ಘೋಷಣೆ ಬೇಕು ಎಂದು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

ಕೊರೊನಾ ಸಂಕಷ್ಟದಲ್ಲಿಯೂ ಸಾರಿಗೆ ನೌಕರರು ಕೆಲಸ ನಿರ್ವಹಿಸಿದ್ದಾರೆ. ಸುಮಾರು 50 ಮಂದಿ ಸೋಂಕಿಗೆ ಒಳಪಟ್ಟು ಮೃತಪಟ್ಟಿದ್ದಾರೆ. ಇಂದು ಬಹಳಷ್ಟು ಜನ ದುಡಿಯದೆ ಸರ್ಕಾರಿ ನೌಕರರೆನಿಸಿಕೊಳ್ಳುತ್ತಿದ್ದಾರೆ. ಆದರೆ ನಾವು ಕಷ್ಟಪಟ್ಟು ದುಡಿದರೂ ಸರ್ಕಾರಿ ನೌಕರರಾಗಿಲ್ಲ ಎಂದು ಅಳಲು ವ್ಯಕ್ತಪಡಿಸಿದರು.
ಇದನ್ನೂ ಓದಿ: ರೈತರ ‘ಬಾಯ್ಕಾಟ್ ರಿಲೆಯನ್ಸ್’ ಅಭಿಯಾನಕ್ಕೆ ಭಾರಿ ಬೆಂಬಲ: #BoycottAdaniAmbani, #BoycottJio ಟ್ರೆಂಡಿಂಗ್


