2016ರ ಜನವರಿಯಲ್ಲಿ ಪ್ರಾಣತೆತ್ತ ಮತ್ತು ಆ ಮೂಲಕ ವಿವಿಗಳಲ್ಲಿನ ಜಾತಿ ಮನಸ್ಥಿತಿಯನ್ನು ದೇಶಕ್ಕೆ ಸಾರಿದ ಹುತಾತ್ಮ ರೋಹಿತ್ ವೇಮುಲಾರವರ ಸಹೋದರ ರಾಜಾ ವೇಮುಲಾ ವಕೀಲ ಪದವಿ ಪಡೆದಿದ್ದು, ಜನರ ಹಕ್ಕುಗಳಿಗಾಗಿ ಹೋರಾಡಲು ಸಿದ್ದನಾಗಿದ್ದಾನೆ ಎಂದು ರಾಧಿಕ ವೇಮುಲಾ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ನನ್ನ ಕಿರಿಯ ಮಗ ರಾಜಾ ವೇಮುಲಾ ಈಗ ವಕೀಲ. ರೋಹಿತ್ ವೇಮುಲಾ ನಂತರ ಈ 5 ವರ್ಷಗಳಲ್ಲಿ ನಮ್ಮ ಜೀವನದಲ್ಲಿ ಸಂಭವಿಸಿದ ಪ್ರಮುಖ ಬದಲಾವಣೆಗಳಲ್ಲಿ ಇದು ಒಂದು. ವಕೀಲ ರಾಜಾ ವೇಮುಲಾ ಈಗ ನ್ಯಾಯಾಲಯದಲ್ಲಿ ಜನರಿಗೆ ಮತ್ತು ಅವರ ಹಕ್ಕುಗಳಿಗಾಗಿ ಕೆಲಸ ಮಾಡುತ್ತಾನೆ ಮತ್ತು ಹೋರಾಡುತ್ತಾನೆ. ಇದು ಸಮಾಜಕ್ಕೆ ನಾನು ಹಿಂತಿರುಗಿಸುತ್ತಿರುವ ಕೊಡುಗೆ. ಅವನನ್ನು ಆಶೀರ್ವದಿಸಿ. ಜೈ ಭೀಮ್” ಎಂದಿದ್ದಾರೆ.
Raja Vemula, my younger son, is now an Advocate. After 5 yrs, It's one of the major changes happened in our lives since Rohith Vemula. Adv. Raja Vemula will now work/fight for the people & their Rights in the Court of Law and it's my "Pay Back to Society". Bless him.
Jai Bhim ?
— Radhika Vemula (@vemula_radhika) December 18, 2020
“ನಾನು ವಿಜ್ಞಾನದ ಬರಹಗಾರ ಆಗಬೇಕೆಂದುಕೊಂಡಿದ್ದೆ, ವಿಜ್ಞಾನ ಲೇಖಕ ಕಾರ್ಲ್ ಸಗಾನನ ಹಾಗೆ. ಆದರೆ ಕೊನೆಗೆ, ಇದೊಂದು ಪತ್ರವನ್ನಷ್ಟೇ ಬರೆಯಲು ನನ್ನಿಂದಾದದ್ದು” ಎಂದು ಆತ್ಮಹತ್ಯೆ ಪತ್ರ ಬರೆದು ಜನವರಿ 16, 2016ರಂದು ರೋಹಿತ್ ವೇಮುಲಾ ಪ್ರಾಣತೆತ್ತಿದ್ದರು. ಇದನ್ನು ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳು ವಿಶ್ವವಿದ್ಯಾಲಯ, ಸಮಾಜ ಮತ್ತು ಜಾತಿ ವ್ಯವಸ್ಥೆ ಮಾಡಿದ ಸಾಂಸ್ಥಿಕ ಕೊಲೆಯೆಂದು ಕರೆದಿದ್ದರು.
ಅಂದು ರೋಹಿತ್ ವೇಮುಲಾನನ್ನು ಜಾತಿ ತೀವ್ರವಾಗಿ ಕಾಡಿತ್ತು. ಆತ ಪಿಎಚ್ಡಿ ಮಾಡುತ್ತಿದ್ದಾಗ ಎಬಿವಿಪಿ ಗೂಂಡಾಗಳು ಕಾಡಿದರು. ಬ್ರಾಹ್ಮಣವಾದಿ ವಿವಿಯ ಆಡಳಿತ ಮಂಡಳಿ 7 ತಿಂಗಳು ಆತನಿಗೆ ಫೆಲೋಶಿಪ್ ತಡೆ ಹಿಡಿದಿದ್ದಲ್ಲದೇ ಆತನನ್ನು ಕಾಲೇಜು ಮತ್ತು ಹಾಸ್ಟೆಲ್ನಿಂದ ಹೊರಹಾಕಿತ್ತು. ಆತ ಆತ ಅಂಬೇಡ್ಕರ್, ಸಾವಿತ್ರಿ ಬಾಯಿ ಫುಲೆ ಫೋಟೊ ಹಿಡಿದು ಕ್ಯಾಂಪಸ್ಸಿನ ’ವೆಲಿವಾಡ’ದಲ್ಲಿ ಹೋರಾಟ ಆರಂಭಿಸಿದ್ದ. ನಂತರ ಪ್ರಾಣತೆತ್ತಿದ್ದು ಇತಿಹಾಸ.
ಅಂದಿನಿಂದ ಸಾಮಾಜಿಕ ಚಳವಳಿಗಳ ಭಾಗವಾಗಿರುವ ಅವರ ತಾಯಿ ರಾಧಿಕಾ ವೇಮುಲಾ ಗುಜರಾತ್ನಲ್ಲಿ ನಡೆದ ಊನಾ ಚಲೋ ಚಳವಳಿಯಲ್ಲಿ ಭಾಗವಹಿಸಿದ್ದರು. ದೆಹಲಿಯ ವಿದ್ಯಾರ್ಥಿ ನಜೀಬ್ ಕಾಣೆಯಾದಾಗ ಆತನ ತಾಯಿಯೊಂದಿಗೆ ನಿಂತಿದ್ದರು. ನೂರಾರು ಹೋರಾಟಗಳಲ್ಲಿ ಭಾಗವಹಿಸಿದ್ದ ಅವರು ಈಗ ತಮ್ಮ ಇನ್ನೊಬ್ಬ ಮಗನನ್ನು ವಕೀಲನಾಗಿ ಸಮಾಜಕ್ಕೆ ಅರ್ಪಿಸುತ್ತಿದ್ದೇನೆ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: ರೋಹಿತ್ ವೇಮುಲ ಇಂದು ಬದುಕಿದ್ದರೆ……’ : ಅಗಲಿದ ಯುವಚೈತನ್ಯದ ಸ್ಮರಣೆ


