ಪ್ರತಿ ಪಕ್ಷವು ಅಧಿಕಾರ ಹೇಗೆ ಹಿಡಿಯಬೇಕು ಎಂಬುದನ್ನ ನೋಡುತ್ತವೆ. ಈ ದೇಶದಲ್ಲಿ ಯಾವ ಪಕ್ಷಕ್ಕೂ ಯಾವ ಸಿದ್ಧಾಂತವೂ ಇಲ್ಲ. ಡಿಎಂಕೆ ಮತ್ತು ನಿತೀಶ್ ಕುಮಾರ್ ಕೂಡಾ ಕಾಂಗ್ರೆಸ್ ಹಾಗೂ ಬಿಜೆಪಿ ಎರಡರ ಜೊತೆ ಮೈತ್ರಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಬಿಜೆಪಿ ಜೊತೆಗೆ ವಿಲೀನಗೊಳ್ಳಲಿದೆ ಎಂಬ ಸುದ್ದಿಯ ಬಗ್ಗೆ ಬೆಂಗಳೂರಿನ ಜೆಪಿ ಭವನ ಕಚೇರಿಯಲ್ಲಿ ಸ್ಫಷ್ಟನೆ ನೀಡಿದ ಕುಮಾರಸ್ವಾಮಿ, “ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದ ಊಹಾಪೋಹಗಳನ್ನ ಗಮನಿಸಿದ್ದೇನೆ. ಜೆಡಿಎಸ್ನ್ನು ಯಾವ ಪಕ್ಷದ ಜೊತೆ ವಿಲೀನ ಮಾಡುವುದು ನಾವು ಬದುಕಿರುವವರೆಗೆ ಆಗೊಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯರನ್ನು ಸೋಲಿಸಲು JDS-BJP ನಡುವೆ ಒಳಒಪ್ಪಂದ ಆಗಿತ್ತು- ಜೆಡಿಎಸ್ ಶಾಸಕ
“ಕಾಂಗ್ರೆಸ್ ನಿರಂತರವಾಗಿ ಜೆಡಿಎಸ್ ಕತ್ತು ಹಿಸುಕುವ ಪ್ರಯತ್ನಕ್ಕೆ ಮುಂದಾಗಿದೆ. ಆ ಕಾರಣಕ್ಕೆ ಅನಿವಾರ್ಯವಾಗಿ ಕೆಲವು ನಿರ್ಧಾರ ಮಾಡಿದ್ದೇವೆ. ಜೆಡಿಎಸ್ನಿಂದ ಹೋದ ಕಾಂಗ್ರೆಸ್ನ ಕೆಲವು ನಾಯಕರು ಜೆಡಿಎಸ್ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಿ ಪಕ್ಷವು ಅಧಿಕಾರ ಹೇಗೆ ಹಿಡಿಯಬೇಕು ಎಂಬುದನ್ನ ನೋಡುತ್ತವೆ. ಈ ದೇಶದಲ್ಲಿ ಯಾವ ಪಕ್ಷಕ್ಕೂ ಯಾವ ಸಿದ್ಧಾಂತವೂ ಇಲ್ಲ. ಡಿಎಂಕೆ ಮತ್ತು ನಿತೀಶ್ ಕುಮಾರ್ ಕೂಡಾ ಕಾಂಗ್ರೆಸ್ ಹಾಗೂ ಬಿಜೆಪಿ ಎರಡರ ಮೈತ್ರಿ ಮಾಡಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಉಪಚುನಾವಣೆ ಯಾವುದೇ ಮಾನದಂಡ ಅಲ್ಲ. 2023 ರ ಚುನಾವಣೆ ನಮಗೆ ಮುಖ್ಯ. ಸಂಕ್ರಾಂತಿ ನಂತರ ಪಕ್ಷ ಸಂಘಟನೆ ಕಾರ್ಯ ಶುರುಮಾಡುತ್ತೇವೆ. ಕಾಂಗ್ರೆಸ್ನ ಕೆಲವು ನಾಯಕರಿಂದ ನಮಗೆ ಹಿನ್ನಡೆಯಾಗಿದೆ. ಪಕ್ಷದಿಂದ ಕಾಲು ಹೊರಗಿಟ್ಟವರು ಕೆಲವು ಹೇಳಿಕೆ ಕೊಡುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳುವುದು ಬೇಡ. ನನ್ನ ಇದುವರೆಗಿನ ರಾಜಕಾರಣ ತಾತ್ಕಾಲಿಕ, ನಿಜವಾದ ರಾಜಕಾರಣ ಶುರುವಾಗುವುದು 2023 ಕ್ಕೆ. 2023 ಕ್ಕೆ ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದು ನನ್ನ ಗುರಿ” ಎಂದರು.
ಇದನ್ನೂ ಓದಿ: ರಾಜ್ಯ ಬಿಜೆಪಿ ಸರ್ಕಾರ ಖಾಸಗಿ ಶಾಲೆಗಳ ಜೊತೆ ಷಾಮೀಲಾಗಿದೆ: ಸಿದ್ದರಾಮಯ್ಯ ಸರಣಿ ಟ್ವೀಟ್
ತಾಜ್ ವೆಸ್ಟ್ಎಂಡ್ನಲ್ಲಿ ಇದ್ದು ಆಡಳಿತ ಮಾಡಿದ್ದಕ್ಕೆ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು ಎಂದಿದ್ದ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ, ಕುಮಾರಸ್ವಾಮಿ “ಸಿದ್ದರಾಮಯ್ಯ ಲಘುವಾಗಿ ಮಾತನಾಡುವುದು ಬೇಡ. ನಾನು ಬಿಜೆಪಿಯ ಬಿ ಟೀಮ್ ಆಗಿದ್ದರೆ ಕಾಂಗ್ರೆಸ್ ಜೊತೆ ಸರ್ಕಾರ ಮಾಡುತ್ತಿರಲಿಲ್ಲ. ಕಾಂಗ್ರೆಸ್ನವರೆ ಸರ್ಕಾರ ಮಾಡಿ ಎಂದು ದೇವೇಗೌಡರು ಸಿದ್ದರಾಮಯ್ಯನವರಿಗೆ ಹೇಳಿದ್ದರು” ಎಂದರು.
“ಸಿದ್ದರಾಮಯ್ಯ ಈ ಸ್ಥಾನಕ್ಕೆ ಬರಲು ನನ್ನ ದುಡಿಮೆ ಇದೆ. ನನ್ನನ್ನು ಸಿಎಂ ಮಾಡುವಲ್ಲಿ ಅವರ ದುಡಿಮೆ ಇಲ್ಲ. 2004 ರಲ್ಲಿ ನನ್ನ ಆರ್ಥಿಕ ಶಕ್ತಿಯನ್ನು ಬಳಸಿ ಅವರನ್ನು ಡಿಸಿಎಂ ಮಾಡಿದ್ದೇನೆ. ಸಿದ್ದರಾಮಯ್ಯ ನನ್ನ ಋಣದಲ್ಲಿದ್ದು, ನಾನು ಸಿದ್ದರಾಮಯ್ಯ ಋಣದಲ್ಲಿ ಇಲ್ಲ. ಅವರ ಇತ್ತೀಚಿನ ರಾಜಕೀಯ ಟೀಕೆಗಳು ಜೆಡಿಎಸ್ ಸುತ್ತಲೇ ಸುತ್ತುತ್ತಿವೆ. ಸಿದ್ದರಾಮಯ್ಯ ಏಕವಚನ ಪದ ಬಳಕೆ ಮಾಡಿದ್ದಾರೆ, ಆದರೆ ಅದಕ್ಕಿಂತ ಹೆಚ್ಚಿನಿದಾಗಿ ನಾನು ಏಕವಚನದಲ್ಲೇ ಪದ ಬಳಕೆ ಮಾಡಬಲ್ಲೇ. ಸಿದ್ದರಾಮಯ್ಯನವರೇ ನಿಮ್ಮ ನಾಲಿಗೆ ಮೇಲೆ ಹಿಡಿತವಿರಲಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಬೀಳಿಸುವುದಾಗಿದ್ದರೆ ಕುಮಾರಸ್ವಾಮಿಯನ್ನು ಸಿಎಂ ಆಗುದಕ್ಕೆ ಬಿಡುತ್ತಿರಲಿಲ್ಲ: ಸಿದ್ದರಾಮಯ್ಯ