“ಗೋಹತ್ಯೆ ಪ್ರತಿಬಂಧಕ ಕಾಯ್ದೆ 2020” ವಿಧಾನ ಪರಿಷತ್ನಲ್ಲಿ ಮಂಡನೆಯಾಗಿ ಇಡೀ ಪರಿಷತ್ ರಣಾಂಗಣವಾಗಿ ಇಡೀ ದೇಶದ ಜನ ಛೀಮಾರಿ ಹಾಕಿದ ಬೆನ್ನಿಗೆ ಇಂದು ವಿಧಾನ ಪರಿಷತ್ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಸರ್ಕಾರಿ ಬಂಗಲೆಯನ್ನು ತ್ಯಜಿಸಿ ಸ್ವಕ್ಷೇತ್ರಕ್ಕೆ ಮರಳಿದ್ದಾರೆ ಎಂಬ ಮಾಹಿತಿ ನಾನು ಗೌರಿ ಮೀಡಿಯಾ. ಕಾಮ್ಗೆ ಲಭ್ಯವಾಗಿದೆ.
ಇಂದು ಬೆಳಗ್ಗೆಯೇ ಸ್ವಕ್ಷೇತ್ರಕ್ಕೆ ತೆರಳಿರುವ ಪ್ರತಾಪ್ಚಂದ್ರ ಶೆಟ್ಟಿ ಸ್ವತಃ ಲೋಕೋಪಯೋಗಿ ಇಲಾಖೆಗೆ ಕರೆ ಮಾಡಿ ಇಂದು ಸಂಜೆ ಒಳಗೆ ಮನೆಯನ್ನು ಸುಪರ್ದಿಗೆ ಪಡೆಯಿರಿ. ಸರ್ಕಾರಿ ಪೀಠೋಪಕರಣ ಮತ್ತು ಕಾರನ್ನು ತೆಗೆದುಕೊಂಡು ಹೋಗಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಗೋಹತ್ಯೆ ಪ್ರತಿಬಂಧಕ ಕಾಯ್ದೆ ರಾಜ್ಯ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ ಕಾಯ್ದೆ. ಇದನ್ನು ವಿಧಾನಸಭೆಯಲ್ಲಿ ಮಂಡಿಸಿದ್ದ ಬಿಜೆಪಿ ಅಂಗೀಕಾರ ಪಡೆದಿತ್ತು. ಆದರೆ, ವಿಧಾನ ಪರಿಷತ್ನಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಇರಲಿಲ್ಲ. ಅಲ್ಲದೆ ಪರಿಷತ್ ಸಭಾಪತಿ ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪ್ರತಾಪ್ ಚಂದ್ರ ಶೆಟ್ಟಿ. ಹೀಗಾಗಿ ಪ್ರತಾಪ್ ಚಂದ್ರ ಶೆಟ್ಟಿ ಈ ಕಾಯ್ದೆ ಮಂಡನೆಗೆ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂಬುದು ಬಿಜೆಪಿಯವರಿಗೆ ತಿಳಿದಿತ್ತು.
ಇದೇ ಕಾರಣಕ್ಕೆ ಪರಿಷತ್ಗೆ ಸಭಾಪತಿ ಆಗಮಿಸುವ ಮುನ್ನವೇ ಜಿಡಿಎಸ್ ಜೊತೆಗೆ ತಂತ್ರ ರೂಪಿಸಿದ್ದ ಬಿಜೆಪಿ ನಾಯಕರು ಜೆಡಿಎಸ್ ಪಕ್ಷಕ್ಕೆ ಸೇರಿದ ಉಪ ಸಭಾಪತಿ ಧರ್ಮೇಗೌಡ ಅವರನ್ನು ಸಭಾಪತಿ ಪೀಠದಲ್ಲಿ ಕೂರಿಸಿದ್ದರು. ನಂತರ ಈ ಘಟನೆಗೆ ಪರಿಷತ್ನಲ್ಲಿ ದೊಡ್ಡ ಗಲಭೆಗೆ ಕಾರಣವಾಗಿದ್ದು, ಪ್ರಜ್ಞಾವಂತದ ಸದನ ಎಂದು ಗೌರವ ಪಡೆದಿದ್ದ ಪರಿಷತ್ ಜನರಿಂದ ಛೀಮಾರಿಗೆ ಗುರಿಯಾದದ್ದು ಇಂದು ಇತಿಹಾಸ. ಒಟ್ಟಾರೆ ಈ ಎಲ್ಲಾ ಘಟನೆಯಿಂದ ನೊಂದಿರುವ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ತಮ್ಮ ಸರ್ಕಾರಿ ನಿವಾಸವನ್ನೇ ತೊರೆದಿದ್ಧಾರೆ.
ಇದನ್ನೂ ಓದಿ :ಈಗ ಯಾವುದೇ ಚುನಾವಣೆ ಇಲ್ಲ, ಜೆಡಿಎಸ್ ಜೊತೆಗೆ ಮೈತ್ರಿ ಅವಶ್ಯಕತೆ ಇಲ್ಲ; ಬಿ.ಸಿ. ಪಾಟೀಲ್