ಕೇಂದ್ರದ ಹೊಸ ಕೃಷಿ ಕಾನೂನಿನ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಡಿಸೆಂಬರ್ 30 ರಂದು ಸರ್ಕಾರ ಮತ್ತೊಂದು ಸುತ್ತಿನ ಮಾತುಕತೆಗೆ ಕರೆದಿದೆ. ಈ ಹಿನ್ನಲೆಯಲ್ಲಿ ಪ್ರತಿಭಟನಾ ನಿರತ ರೈತರು ಕೇಂದ್ರಕ್ಕೆ ಪತ್ರ ಬರೆದಿದ್ದು, ಮೂರು ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ವಿಧಾನದ ಬಗ್ಗೆ ಮಾತ್ರ ಚರ್ಚೆ ನಡೆಯಬೇಕು ಎಂದು ಹೇಳಿದ್ದಾರೆ.
ಕೇಂದ್ರಕ್ಕೆ ಬರೆದ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ 40 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚ, “ಕೇಂದ್ರ ಸರ್ಕಾರ ನಮ್ಮೊಂದಿಗೆ ನಡೆಸುವ ಮಾತುಕತೆಯಲ್ಲಿ ಮೂರು ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಬಗ್ಗೆ ಚರ್ಚೆ ಕೇಂದ್ರೀಕೃತವಾಗಿಟ್ಟುಕೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಸರ್ಕಾರ ಖಾತರಿ ನೀಡಬೇಕು” ಎಂದು ಹೇಳಿದೆ.
ಇದನ್ನೂ ಓದಿ: ಅಂಬಾನಿಯ ಜಿಯೋ ಸಿಮ್ ಬಳಸುವುದಿಲ್ಲ, ರಿಲೆಯನ್ಸ್ ಪೆಟ್ರೋಲ್ ಹಾಕಿಸುವುದಿಲ್ಲ, ಮಾಲ್ಗೆ ಹೋಗುವುದಿಲ್ಲ: ರೈತರ ಪ್ರತಿಜ್ಞೆ
ಅಷ್ಟೇ ಅಲ್ಲದೆ, ರಾಷ್ಟ್ರೀಯ ರಾಜಧಾನಿ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶದ ವಾಯುಗುಣಮಟ್ಟ ನಿರ್ವಹಣೆ ಸುಗ್ರೀವಾಜ್ಞೆಗೆ 2020ರ ವ್ಯಾಪ್ತಿಯಿಂದ ರೈತರನ್ನು ಹೊರಗಿಡುವ ನಿಟ್ಟಿನಲ್ಲಿ, ಸುಗ್ರೀವಾಜ್ಞೆಗೆ ತಿದ್ದುಪಡಿ ಮಾಡುವ ವಿಷಯವೂ ಚರ್ಚೆಯಾಗಬೇಕು ಎಂದು ಅದು ಒತ್ತಾಯಿಸಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 33 ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾ ನಿರತರೊಂದಿಗೆ ಕೇಂದ್ರ ಸರ್ಕಾರ ಇದುವರೆಗೂ ಹಲವು ಭಾರಿ ಮಾತುಕತೆ ನಡೆಸಿದ್ದರೂ ಅವುಗಳೆಲ್ಲವೂ ಮುರಿದು ಬಿದ್ದಿದೆ. ಕೇಂದ್ರವು ಪದೇ ಪದೇ ಒಂದೇ ರೀತಿಯ ಪ್ರಸ್ತಾಪವನ್ನು ಇಡುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ಕಾರ್ಪೋರೇಟ್ ಪರವಿರುವ ಕಾನೂನನ್ನು ರದ್ದುಮಾಡಬೇಕು ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದು, ಕೇಂದ್ರ ಸರ್ಕಾರ ಮಾತ್ರ ಇದುವರೆಗೂ ಈ ಕಾನೂನುಗಳನ್ನು ಸಮರ್ಥನೆ ಮಾಡುತ್ತಲೇ ಇದೆ. ಪ್ರಧಾನಿ ಮೋದಿ ಕೂಡಾ ಇತ್ತಿಚೆಗೆ ಕಾನೂನನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಾಯ್ಕಾಟ್ ಅಭಿಯಾನ: ಏರ್ಟೆಲ್, ವೊಡಾಫೋನ್ ವಿರುದ್ಧ ದೂರು ನೀಡಿದ ಜಿಯೋ!